Site icon Vistara News

Road accident : ಸಿಗ್ನಲ್‌ನಲ್ಲಿ ಸ್ಕೂಟರ್‌ಗೆ ಬಡಿದು ಮುಂದೆ ಸಾಗಿದ ಲಾರಿ, ಇಬ್ಬರು ಸವಾರರು ಸ್ಥಳದಲ್ಲೇ ಮೃತ್ಯು

Mangalore accident

#image_title

ಮಂಗಳೂರು: ಲಾರಿಯೊಂದು ಸ್ಕೂಟರ್‌ಗೆ ಡಿಕ್ಕಿ ಹೊಡೆದು ಸಂಭವಿಸಿದ ಭೀಕರ ಅಪಘಾತದಲ್ಲಿ (Road accident) ಇಬ್ಬರು ಸ್ಥಳದಲ್ಲೇ ಮೃತಪಟ್ಟ ಘಟನೆ ಮಂಗಳೂರಿನ ನಂತೂರು ಸರ್ಕಲ್‌ನಲ್ಲಿ ಸಂಭವಿಸಿದೆ. ಸ್ಕೂಟರ್‌ನಲ್ಲಿದ್ದ ಸ್ಯಾಮ್ಯುಯೆಲ್ ಜೇಸುದಾಸ್ (67) ಮತ್ತು 30 ವರ್ಷದ ಯುವತಿ ಮೃತ ದುರ್ದೈವಿಗಳು.

ಸ್ಕೂಟರ್‌ ಮತ್ತು ಲಾರಿ ಎರಡೂ ನಂತೂರು ಸರ್ಕಲ್‌ನ ಸಿಗ್ನಲ್‌ನಲ್ಲಿ ನಿಂತಿದ್ದವು. ಒಮ್ಮೆಗೆ ಸಿಗ್ನಲ್‌ ಬಿಟ್ಟಾಗ ಎರಡೂ ಮುಂದಕ್ಕೆ ಹೊರಟಿದ್ದವು. ಈ ಸಂದರ್ಭ ಲಾರಿಯನ್ನು ವೇಗವಾಗಿ ಚಲಾಯಿಸಿದ್ದರಿಂದ ಅದು ಸ್ಕೂಟರ್‌ಗೆ ಡಿಕ್ಕಿ ಹೊಡೆದಿದೆ. ಸ್ಕೂಟರ್‌ ಲಾರಿಯಡಿಗೆ ಬಿದ್ದು ಇಬ್ಬರೂ ಸವಾರರು ಸ್ಥಳದಲ್ಲೇ ಪ್ರಾಣ ಕಳೆದುಕೊಂಡಿದ್ದಾರೆ.

ಆಕ್ರೋಶಿತರಿಂದ ಲಾರಿ ಚಾಲಕನಿಗೆ ಹಲ್ಲೆ

ಸರ್ಕಲ್‌ನಲ್ಲಿ ಸಿಗ್ನಲ್‌ ಬಿದ್ದಿದ್ದರೂ ಅವಸರ ತೋರಿದ, ಇಬ್ಬರ ಪ್ರಾಣಹಾನಿಗೆ ಕಾರಣನಾದ ಲಾರಿ ಚಾಲಕನ ವಿರುದ್ಧ ಸ್ಥಳೀಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಉದ್ರಿಕ್ತ ಸಾರ್ವಜನಿಕರು ಹೆಲ್ಮೆಟ್ ಸೇರಿದಂತೆ ಕೈಗೆ ಸಿಕ್ಕ ವಸ್ತುವಿನಿಂದ ಹಲ್ಲೆ ನಡೆಸಿದ್ದಾರೆ.

ಕದ್ರಿ ಸಂಚಾರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಸ್ಥಿತಿ ತಿಳಿಗೊಳಿಸಿದರು. ಇದೀಗ ಲಾರಿ ಚಾಲಕನನ್ನು ವಶಕ್ಕೆ ಪಡೆದ ಪೊಲೀಸರು ಕೋರ್ಟ್‌ಗೆ ಹಾಜರುಪಡಿಸಿದ್ದಾರೆ.

ಟಾಟಾ ಏಸ್‌ಗೆ ಡಿಕ್ಕಿ ಹೊಡೆದ ಬಸ್‌; ಇಬ್ಬರು ಸಾವು, ಮತ್ತೊಬ್ಬನಿಗೆ ಗಂಭೀರ ಗಾಯ

ನೆಲಮಂಗಲ: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ಟಿ.ಬೇಗೂರಿನ ರಾಷ್ಟ್ರೀಯ ಹೆದ್ದಾರಿ 48ರ ಬಳಿ ಟಾಟಾ ಏಸ್‌ಗೆ ಬಸ್‌ವೊಂದು ಡಿಕ್ಕಿ (Road Accident) ಹೊಡೆದಿದೆ. ಪರಿಣಾಮವಾಗಿ ತೀವ್ರ ರಕ್ತಸ್ರಾವದಿಂದ ಇಬ್ಬರು ಸ್ಥಳದಲ್ಲಿಯೆ ಮೃತಪಟ್ಟಿದ್ದರೆ, ಮತ್ತೊರ್ವ ಗಂಭೀರ ಗಾಯಗೊಂಡಿದ್ದಾರೆ. ಶಂಕರ್ (34), ವಿಲ್ಸನ್‌ ಗಲ್ಬಟ್ (32) ಮೃತ ದುರ್ದೈವಿಗಳು.

ಮೃತರು ಬೆಂಗಳೂರಿನ ಎಚ್ಎಎಲ್ ನಿವಾಸಿಗಳಾಗಿದ್ದು, ಶ್ರೀವಾಸ್ (35) ಎಂಬಾತ ಗಂಭೀರ ಗಾಯಗೊಂಡಿದ್ದಾರೆ. ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಈ ಮೂವರು ಪೈಂಟರ್ಸ್‌ಗಳಾಗಿದ್ದು, ತುಮಕೂರಿನಲ್ಲಿ ಕೆಲಸ ಮುಗಿಸಿ ಬೆಂಗಳೂರಿಗೆ ಬರುವಾಗ ಈ ದುರ್ಘಟನೆ ನಡೆದಿದೆ. ನೆಲಮಂಗಲ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ : Accidental death : ರಬ್ಬರ್‌ ಟ್ಯಾಪಿಂಗ್‌ಗೆ ಹೋಗಿದ್ದ ವೇಳೆ ಎದೆಗೆ ಕತ್ತಿ ತಾಗಿ ಮಹಿಳೆ ದಾರುಣ ಸಾವು

Exit mobile version