Site icon Vistara News

Road accident : ಕಾರು- ಸ್ಕೂಟರ್‌ ಮಧ್ಯೆ ಅಪಘಾತ: ಇಬ್ಬರು ಯುವಕರು ಸ್ಥಳದಲ್ಲೇ ದುರ್ಮರಣ

tarikere accident

#image_title

ಚಿಕ್ಕಮಗಳೂರು: ಕಾರು ಹಾಗೂ ಸ್ಕೂಟರ್‌ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ (Road accident) ಇಬ್ಬರು ಯುವಕರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ತರೀಕೆರೆ ತಾಲೂಕಿನ ಬೆಟ್ಟದಹಳ್ಳಿ ಗ್ರಾಮದ ಬಳಿ ಘಟನೆ ನಡೆದಿದೆ.

ಚೂರುಚೂರಾಗಿರುವ ಸ್ಕೂಟರ್‌

ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ಪಟ್ಟಣದ ಅಜೀಮ್, ಬಿಲಾಲ್ ಮೃತ ಯುವಕರು. ಇವರು ಸ್ಕೂಟಿಯಲ್ಲಿ ಸಾಗುತ್ತಿದ್ದು ಎದುರಿನಿಂದ ಕಾರಿನ ಜತೆ ಅಪಘಾತ ಸಂಭವಿಸಿದೆ. ಅಪಘಾತ ತೀವ್ರತೆಗೆ ಸ್ಕೂಟರ್‌ ಸಂಪೂರ್ಣ ನಜ್ಜುಗುಜ್ಜಾಗಿದೆ. ಅಲ್ಲೊಂದು ಸ್ಕೂಟರ್‌ ಇದೆ ಎಂದು ನಂಬಲೇ ಸಾಧ್ಯವಾಗುತ್ತಿಲ್ಲ. ಕಾರಿನ ಮುಂಭಾಗಕ್ಕೂ ಹಾನಿಯಾಗಿದೆ.

ನಜ್ಜುಗುಜ್ಜಾಗಿರುವ ಕಾರು

ತೀವ್ರವಾಗಿ ಗಾಯಗೊಂಡ ಯುವಕರನ್ನು ಕೂಡಲೇ ಆಸ್ಪತ್ರೆಗೆ ಸಾಗಿಸಲು ಪ್ರಯತ್ನಿಸಲಾಯಿತಾದರೂ ಅಷ್ಟು ಹೊತ್ತಿಗೆ ಪ್ರಾಣವೇ ಹೋಗಿದೆ. ಸ್ಥಳಕ್ಕೆ ತರೀಕೆರೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಹೂವಿನ ಹಿಪ್ಪರಗಿಯಲ್ಲಿ ಹಿಟ್‌ ಆ್ಯಂಡ್‌ ರನ್‌, ಬೈಕ್‌ ಸವಾರ ಸಾವು

ವಿಜಯಪುರ: ಅಪರಿಚಿತ ವಾಹನವೊಂದು ಡಿಕ್ಕಿ ಹೊಡೆದ ಪರಿಣಾಮ ಬೈಕ್ ಬೈಕ್ ಸವಾರ ಸ್ಥಳದಲ್ಲೇ ಸಾವಿಗೀಡಾದ ದುರ್ಘಟನೆ ವಿಜಯಪುರ ಜಿಲ್ಲೆಯ ಹೂವಿನ ಹಿಪ್ಪರಗಿಯ ಹುನಸ್ಯಾಳ ಪಿಬಿ ಗ್ರಾಮದ ಬಳಿ ನಡೆದಿದೆ.

ಮೃತ ಬೈಕ್ ಸವಾರರನ್ನು ಮುಕಣ್ಣ ನಿಂಗಪ್ಪ (21) ಎಂದು ಗುರುತಿಸಲಾಗಿದೆ. ಯಾದಗಿರಿ ಜಿಲ್ಲೆಯ ಸುರಪುರ ಮೂಲದ ಮುಕಣ್ಣ ಅವರಿಗೆ ಡಿಕ್ಕಿ ಹೊಡೆದ ಬಳಿಕ ಅಪರಿಚಿತ ವಾಹನದ ಸಮೇತ ಚಾಲಕ ಪರಾರಿಯಾಗಿದ್ದಾನೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬಸವನಬಾಗೇವಾಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಫ್ಲೈ ಓವರ್ ಮೇಲೆ ಬೈಕ್ ಅಪಘಾತ, ಗಾಯ

ಬೆಂಗಳೂರು: ಅಪ್ರಾಪ್ತ ವಯಸ್ಸಿನ ಇಬ್ಬರು ಅತಿವೇಗವಾಗಿ ಬೈಕ್‌ ಚಾಲನೆ ಮಾಡಿ ಅಪಘಾತಕ್ಕೀಡಾಗಿದ್ದಾರೆ. ಇದು ನಡೆದಿರುವುದು ರಾಜಧಾನಿಯ ಲಿಂಗರಾಜಪುರ ಫ್ಲೈ ಓವರ್ ಮೇಲೆ.

ಅತಿವೇಗವಾಗಿ ಬಂದು ಫ್ಲೈ ಓವರ್‌ನ ತಡೆಗೋಡೆಗೆ ಗುದ್ದಿದ ಪರಿಣಾಮ ಬೈಕ್ ಸವಾರ ತೀರ ಗಂಭೀರ ಗಾಯಗಳಿಗೀಡಾಗಿದ್ದಾರೆ. ಬೈಕ್‌ನಲ್ಲಿ ಇಬ್ಬರಿದ್ದು, ಅತಿ ವೇಗವಾಗಿ ವಾಹನ ಚಲಾವಣೆ ಮಾಡುತ್ತಿದ್ದರು. ಹೆಲ್ಮೆಟ್ ಧರಿಸದ ಹಿನ್ನೆಲೆಯಲ್ಲಿ ಬೆನ್ನು ಹಾಗೂ ತಲೆಗೆ ಗಂಭೀರ ಗಾಯವಾಗಿದೆ. ಅಪಘಾತದ ಬಳಿಕ ಸ್ಥಳೀಯ ಆಸ್ಪತ್ರೆಗೆ ಯುವಕರನ್ನು ಸ್ಥಳೀಯರು ಕರೆದೊಯ್ದಿದ್ದಾರೆ.

Exit mobile version