Site icon Vistara News

Road Accident: ಬಸ್-ಕಾರು ಡಿಕ್ಕಿಯಾಗಿ ಶಿಕಾರಿಪುರ ಶಾಲೆಯ ಫಾದರ್ ಸಾವು, ಚಾಲಕನ ಸ್ಥಿತಿ ಗಂಭೀರ

ದಾವಣಗೆರೆ: ಕೆಎಸ್‌ಆರ್‌ಟಿಸಿ ಬಸ್ ಹಾಗೂ ಕಾರು ನಡುವೆ ಭೀಕರ ಅಪಘಾತ ಸಂಭವಿಸಿ ಶಿಕಾರಿಪುರದ ಶಾಲೆಯ ಫಾದರ್ ಮೃತಪಟ್ಟು, ಚಾಲಕನಿಗೆ ಗಂಭೀರಗಾಯಗಳಾಗಿರುವ ಘಟನೆ (Road Accident) ಜಿಲ್ಲೆಯ ನ್ಯಾಮತಿ ತಾಲೂಕಿನ ಚಿನ್ನಿಕಟ್ಟೆ ಬಳಿ ನಡೆದಿದೆ.

ಶಿವಮೊಗ್ಗ ಜಿಲ್ಲೆಯ ಶಿಕಾರಿಪುರದ ಪುಷ್ಪ ಶಾಲೆಯ ಫಾದರ್ ಅಂತೋನಿ (60) ಮೃತರು. ಚಾಲಕ ಸ್ಟೀಫನ್ ಗಾಯಾಳು. ಸವಳಂಗ ಕಡೆಯಿಂದ ಶಿಕಾರಿಪುರಕ್ಕೆ ಹುಂಡೈ ಕಾರಿನಲ್ಲಿ ಫಾದರ್ ಪ್ರಯಾಣಿಸುತ್ತಿದ್ದರು. ಎದುರಿಗೆ ಬಂದ ಕೆಎಸ್ಆರ್ಟಿಸಿ ಬಸ್‌ ಡಿಕ್ಕಿಯಾಗಿದ್ದರಿಂದ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಡಿಕ್ಕಿ ರಭಸಕ್ಕೆ ಕಾರು ನುಜ್ಜುಗುಜ್ಜಾಗಿದ್ದು, ಗಂಭೀರವಾಗಿ ಗಾಯಗೊಂಡವರನ್ನು ಶಿವಮೊಗ್ಗದ ಸರ್ಕಾರಿ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.

ಇದನ್ನೂ ಓದಿ | Victoria Hospital: 11ನೇ ಮಹಡಿಯಿಂದ ಬಿದ್ದು ಕಾರ್ಮಿಕನಿಗೆ ಗಂಭೀರ ಗಾಯ

ಮಳೆಯ ಅಬ್ಬರಕ್ಕೆ ಕುಸಿದ ಸರ್ಕಾರಿ ಶಾಲೆ ಗೋಡೆ

ಶಿವಮೊಗ್ಗ: ಮಲೆನಾಡಿನಲ್ಲಿ ಮಳೆಯ ಅಬ್ಬರ ಮುಂದುವರಿದಿದೆ. ಈ ನಡುವೆ ಭಾರಿ ಮಳೆಗೆ ಸರ್ಕಾರಿ ಶಾಲೆಯ ಗೋಡೆ ಕುಸಿದಿದ್ದು, ಮಕ್ಕಳು ಕೊಠಡಿಯಲ್ಲಿ ಇಲ್ಲದ ಕಾರಣ ಭಾರಿ ಅನಾಹುತ ತಪ್ಪಿದೆ. ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನ ಆನವಟ್ಟಿ ಉರ್ದು ಸರ್ಕಾರಿ ಶಾಲೆಯ ಗೋಡೆ ಕುಸಿತಿದೆ.

ವಿದ್ಯಾರ್ಥಿಗಳು ಹೊರಗೆ ತೆರಳಿದ್ದ ಸಮಯದಲ್ಲಿ ಗೋಡೆ ಕುಸಿದಿದೆ. ಇದರಿಂದ ಭಾರಿ ಅನಾಹುತ ತಪ್ಪಿದೆ. ಅನೇಕ ದಿನಗಳಿಂದ ಅಧಿಕಾರಿಗಳಿಗೆ ಕೊಠಡಿ ದುರಸ್ತಿಗೊಳಿಸುವಂತೆ ಮನವಿ ಮಾಡಿದರೂ ಅಧಿಕಾರಿಗಳು ಸ್ಪಂದಿಸಿಲ್ಲ. ಹೀಗಾಗಿ ಅವಘಡ ನಡೆದಿದೆ ಎಂಬ ಆರೋಪ ಕೇಳಿಬಂದಿದೆ.

ಹೋಮ್‌ ವರ್ಕ್‌ ಮಾಡದ್ದಕ್ಕೆ ಬಾಲಕಿಗೆ ಬಾಸುಂಡೆ ಬರುವಂತೆ ಬಾರಿಸಿದ ಮುಖ್ಯ ಶಿಕ್ಷಕಿ

ವಿಜಯನಗರ : ಹೋಮ್‌ ವರ್ಕ್ (Home Work) ಮಾಡದಿದ್ದಕ್ಕೆ ವಿದ್ಯಾರ್ಥಿನಿಗೆ ಕಾಲು ಊತ ಬರುವಂತೆ ಮುಖ್ಯ ಶಿಕ್ಷಕಿ (Assault Case) ಬಾರಿಸಿದ್ದಾರೆ. ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಬಣವಿಕಲ್ಲು ಗ್ರಾಮದಲ್ಲಿರುವ ಕಸ್ತೂರಿ ಬಾ ಗಾಂಧಿ ಬಾಲಕಿಯರ ವಸತಿ ಶಾಲೆಯಲ್ಲಿ ಘಟನೆ ನಡೆದಿದೆ.

ವಿಜ್ಞಾನ ವಿಷಯದ ಹೋಂ ವರ್ಕ್ ಮಾಡದಿದ್ದಕ್ಕೆ ಮುಖ್ಯ ಶಿಕ್ಷಕಿ ವಾಣಿ ಎಂಬುವವರು ವಿದ್ಯಾರ್ಥಿನಿಗೆ ಮನಬಂದಂತೆ ಹೊಡೆದಿದ್ದಾರೆ. ಮಾನಸ ಎಂಬಾಕೆಗೆ ಈ ಮೊದಲು ಅಪಘಾತ ಆಗಿದ್ದರಿಂದ ಕಾಲಿಗೆ ರಾಡ್ ಅಳವಡಿಸಲಾಗಿತ್ತು. ಮತ್ತೆ ಅದೇ ಕಾಲಿಗೆ ಶಿಕ್ಷಕಿ ವಾಣಿ ಸ್ಕೇಲ್‌ನಿಂದ ಜೋರಾಗಿ ಹೊಡೆದಿದ್ದಾರೆ. ಜೋರಾಗಿ ಹೊಡೆತದಿಂದಾಗಿ ಕಾಲು ಊದಿಕೊಂಡು ಬಾಲಕಿಗೆ ನಡೆದಾಡುವುದಕ್ಕೂ ಸಾಧ್ಯವಾಗಿಲ್ಲ.

ಇದನ್ನೂ ಓದಿ: Murder case : ಭೂ ವಿವಾದಕ್ಕಾಗಿ ಪರಸ್ಪರ ಹೊಡೆದಾಡಿಕೊಂಡ ಅಣ್ಣ-ತಮ್ಮ ಮೃತ್ಯು

ಇನ್ನೂ ಮನಸೋ ಇಚ್ಛೆ ಥಳಿಸಿದ ಶಿಕ್ಷಕಿ ವಾಣಿಯೇ ಬಾಲಕಿಯನ್ನು ಚಿತ್ರದುರ್ಗದ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಎಲುಬು ಮತ್ತು ಮೂಳೆ ತಜ್ಞರಿಂದ ತಪಾಸಣೆ ಮಾಡಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಬಾಲಕಿಯ ಕಾಲಿಗೆ ಬ್ಯಾಂಡೇಜ್ ಹಾಕಿ ಸೂಕ್ತ ಚಿಕಿತ್ಸೆ ನೀಡಿ ವೈದ್ಯರು ಕಳಿಸಿದ್ದಾರೆ. ಇತ್ತ ಬಾಲಕಿಯನ್ನು ನೋಡಲೆಂದು ಪಾಲಕರು ಭಾನುವಾರ ಶಾಲೆಗೆ ಬಂದಿದ್ದಾರೆ. ಆಗಲೇ ಮಗಳ ಕಾಲಿನ ಸ್ಥಿತಿ ನೋಡಿ ಪ್ರಕರಣ ಬೆಳಕಿಗೆ ಬಂದಿದೆ. ಬಾಲಕಿ ಪೋಷಕರು ಬಳಿಕ ಮುಖ್ಯ ಶಿಕ್ಷಕಿ ವಾಣಿಗೆ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ.

Exit mobile version