Site icon Vistara News

Road Accident: ಬೈಕ್‌ಗೆ ಟ್ಯಾಂಕರ್‌ ಡಿಕ್ಕಿಯಾಗಿ ಜೀವಬಿಟ್ಟ ಪಶುವೈದ್ಯ; ಪರಾರಿಯಾದ ಚಾಲಕ

Terrible accident between cruiser and lorry

ಹುಬ್ಬಳ್ಳಿ/ಮಂಗಳೂರು: ಇಲ್ಲಿನ ರಾಷ್ಟ್ರೀಯ ಹೆದ್ದಾರಿ 63ರ ದೇವಿಕೊಪ್ಪ ಕ್ರಾಸ್ ಬಳಿ ಟ್ಯಾಂಕರ್‌ವೊಂದು ಬೈಕ್‌ಗೆ ಡಿಕ್ಕಿ (Road Accident) ಹೊಡೆದಿದೆ. ಡಿಕ್ಕಿ ಹೊಡೆದ ರಭಸಕ್ಕೆ ಬೈಕ್‌ ಸವಾರ ಗಂಭೀರ ಗಾಯಗೊಂಡು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಡಾ. ಚಾಂದ್‌ಸಾಬ್ ಕಿರೇಸೂರು (42) ಮೃತ ದುರ್ದೈವಿ.

ಹುಬ್ಬಳ್ಳಿಯ ಹೊಸೂರು ನಿವಾಸಿ ಚಾಂದ್‌ಸಾಬ್ ಕಿರೇಸೂರು ಅವರು, ದೇವಿಕೊಪ್ಪ ಗ್ರಾಮದ ಪಶುಚಿಕಿತ್ಸಾ ಕೇಂದ್ರದಲ್ಲಿ ವೈದ್ಯರಾಗಿ ಸೇವೆ ಸಲ್ಲಿಸುತ್ತಿದ್ದರು. ಬೈಕ್‌ನಲ್ಲಿ ಆಸ್ಪತ್ರೆಗೆ ತೆರಳುತ್ತಿದ್ದಾಗ ಟ್ಯಾಂಕರ್‌ ಗುದ್ದಿದೆ. ಕೆಳಗೆ ಬಿದ್ದ ಚಾಂದ್‌ಸಾಬ್‌ ಅವರ ತಲೆಗೆ ತೀವ್ರ ಪೆಟ್ಟಾಗಿದ್ದು, ರಕ್ತಸ್ರಾವವಾಗಿ ಮೃತಪಟ್ಟಿದ್ದಾರೆ.

ಇನ್ನು ಅಪಘಾತವಾಗುತ್ತಿದ್ದಂತೆ ಟ್ಯಾಂಕರ್‌ ಚಾಲಕ ಪರಾರಿ ಆಗಿದ್ದಾನೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾರವಾಡ ಜಿಲ್ಲೆಯ ಕಲಘಟಗಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿ, ಪ್ರಕರಣವನ್ನು ದಾಖಲಿಸಿಕೊಂಡಿದ್ದು, ಆರೋಪಿಗಾಗಿ ಹುಡುಕಾಟ ನಡೆಸಿದ್ದಾರೆ.

ಲಾರಿಗೆ ಸ್ಕೂಟರ್‌ ಡಿಕ್ಕಿಯಾಗಿ ಸವಾರ ಸಾವು

ಉಳ್ಳಾಲ ಸಮೀಪದ ನೇತ್ರಾವತಿ ನದಿ ಸೇತುವೆಯಲ್ಲಿ ಕೆಟ್ಟು ನಿಂತ ಲಾರಿಗೆ ಸ್ಕೂಟರ್‌ ಒಂದು ಡಿಕ್ಕಿ ಹೊಡೆದು (Road Accident) ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಬುಧವಾರ ರಾತ್ರಿ ನಡೆದ ಘಟನೆಯಲ್ಲಿ ಮೃತಪಟ್ಟ ಸವಾರನನ್ನು ಮಹಮ್ಮದ್ ನೌಫಾಲ್ (26) ಎಂದು ಗುರುತಿಸಲಾಗಿದೆ. ಸಹ ಸವಾರ ಫಾರೂಕ್ ಗೆ ಗಂಭೀರ ಗಾಯಗಳಾಗಿವೆ.

ನಸುಕಿನ ಜಾವದಲ್ಲಿ ನಡೆದಿರುವ ಅಪಘಾತ ಇದಾಗಿದ್ದು, ಸೇತುವೆ ನಡುವೆ ಮರ ಸಾಗಾಟದ ಲಾರಿ ಕೆಟ್ಟು ನಿಂತಿತ್ತು. ಮಹಮ್ಮದ್ ನೌಫಾಲ್ (26) ಮತ್ತು ಫಾರೂಕ್ ಎಂದಿನಂತೆ ತರಕಾರಿ ವ್ಯಾಪಾರಕ್ಕಾಗಿ ಕಲ್ಲಾಪುಗೆ ಬರುತ್ತಿದ್ದರು. ಪಂಪ್‌ವೆಲ್‌ನಿಂದ ಹೊರಟು ಕಲ್ಲಾಪು ಗ್ಲೋಬಲ್ ಮಾರ್ಕೆಟ್‌ಗೆ ಬರುವಾಗ ಎದುರು ಲಾರಿ ನಿಂತಿರುವುದನ್ನು ಗಮನಿಸದೆ ಹೋಗಿ ಹಿಂಬದಿಯಿಂದ ಡಿಕ್ಕಿ ಹೊಡೆದಿದ್ದಾರೆ. ಡಿಕ್ಕಿ ಹೊಡೆದ ರಭಸಕ್ಕೆ ಇಬ್ಬರೂ ರಸ್ತೆಗೆ ಉರುಳಿದ್ದು, ಮಹಮ್ಮದ್‌ ನೌಫಾಲ್‌ ಅಲ್ಲೇ ಪ್ರಾಣ ಕಳೆದುಕೊಂಡಿದ್ದಾರೆ.‌

ಇದನ್ನೂ ಓದಿ: Amit Shah: ಭಾವುಕರಾಗಿ ಇಂದ್ರಮ್ಮ ಎಂದು ವೋಟು ಹಾಕಬೇಡಿ, ಆ ಕಾಲ ಮುಗಿಯಿತು; ಸಚಿವ ಆನಂದ್‌ ಸಿಂಗ್

ನೌಫಾಲ್ ಅವರ ಸ್ಕೂಟರ್ ಡಿಕ್ಕಿ ಹೊಡೆದ ಕೆಲವೇ ಕ್ಷಣದಲ್ಲಿ ಮತ್ತೊಂದು ಸ್ಕೂಟರ್ ಕೂಡಾ ಅದೇ ಲಾರಿಗೆ ಡಿಕ್ಕಿ ಹೊಡೆದಿದೆ. ಅದರ ಸವಾರರಿಗೂ ಗಾಯಗಳಾಗಿವೆ. ಮೂವರು ಗಾಯಾಳುಗಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮಂಗಳೂರು ದಕ್ಷಿಣ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಲೇಟೆಸ್ಟ್‌ ಅಪಡೇಟ್ಸ್‌ಗೆ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version