Site icon Vistara News

Karnataka Election 2023: ಚಾಮರಾಜನಗರದಲ್ಲಿ ಸುದೀಪ್‌ ಜತೆ ರೋಡ್‌ ಶೋ; ಕಾರಿನಿಂದ ಕೆಳಗೆ ಬಿದ್ದ ಸೋಮಣ್ಣ

Road show with Sudeep in Chamarajanagar Somanna falls out of the car Karnataka Election 2023 updates

ಚಾಮರಾಜನಗರ: ರಾಜ್ಯ ವಿಧಾನಸಭಾ ಚುನಾವಣೆಗೆ (Karnataka Election 2023) ಇನ್ನು ಐದು ದಿನ ಮಾತ್ರವೇ ಬಾಕಿ ಇದೆ. ಈ ವೇಳೆ ಅಭ್ಯರ್ಥಿಗಳು ಅಬ್ಬರದ ಪ್ರಚಾರದಲ್ಲಿ ನಿರತರಾಗಿದ್ದಾರೆ. ಈಗಾಗಲೇ ಸ್ಯಾಂಡಲ್‌ವುಡ್‌ ತಾರೆಯರನ್ನೂ ಪ್ರಚಾರಕ್ಕೆ ಬಳಸಿಕೊಳ್ಳಲಾಗುತ್ತಿದೆ. ಬಿಜೆಪಿ ಪರ ಕಿಚ್ಚ ಸುದೀಪ್‌ (Kiccha Sudeep) ಸಹ ಪ್ರಚಾರದಲ್ಲಿ ನಿರತರಾಗಿದ್ದಾರೆ. ಈಗ ಚಾಮರಾಜನಗರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ, ಸಚಿವ ವಿ. ಸೋಮಣ್ಣ (V Somanna) ಪರ ನಗರದಲ್ಲಿ ರೋಡ್‌ ಶೋ ನಡೆಸುತ್ತಿದ್ದಾಗ ಕಾರಿನ ಮೇಲೆ ಸುದೀಪ್‌ ಜತೆಗೆ ಹತ್ತಿ ನಿಂತಿದ್ದ ಸೋಮಣ್ಣ ಕೆಳಗೆ ಬಿದ್ದಿದ್ದಾರೆ.

ನಟ ಕಿಚ್ಚ ಸುದೀಪ್‌ ಈಗಾಗಲೇ ರಾಜ್ಯದ ಹಲವು ಕಡೆ ಬಿಜೆಪಿ ಪರ ಪ್ರಚಾರ ನಡೆಸುತ್ತಿದ್ದಾರೆ. ಈ ಬಾರಿ ಪೂರ್ಣ ಬಹುಮತವನ್ನು ಬಿಜೆಪಿಗೆ ನೀಡಿ ಎಂದು ಮನವಿ ಮಾಡುತ್ತಾ ಬರುತ್ತಿದ್ದಾರೆ. ಅವರು ಹೋದಲೆಲ್ಲ ಭಾರಿ ಸಂಖ್ಯೆಯಲ್ಲಿ ಅಭಿಮಾನಿಗಳು, ಜನರು ಸೇರುತ್ತಿದ್ದಾರೆ. ಹೀಗಾಗಿ ಅವರಿಗೆ ಎಲ್ಲ ಕಡೆ ಪ್ರಚಾರಕ್ಕೆ ಬರುವಂತೆ ಬೇಡಿಕೆಗಳು ಹೆಚ್ಚಾಗಿವೆ. ಈ ನಡುವೆ ಸೋಮಣ್ಣ ಅವರು ತಾವು ಸ್ಪರ್ಧೆ ಮಾಡಿರುವ ಚಾಮರಾಜನಗರ ವಿಧಾನಸಭಾ ಕ್ಷೇತ್ರಕ್ಕೆ ಸುದೀಪ್‌ ಅವರನ್ನು ಕರೆಸಿಕೊಂಡಿದ್ದಾರೆ.

ಸುದೀಪ್‌ ಜತೆ ರೋಡ್‌ ಶೋ ನಡೆಸುತ್ತಿದ್ದ ವಿ. ಸೋಮಣ್ಣ ಅವರು ಕಾರಿನಿಂದ ಕೆಳಗೆ ಬಿದ್ದಿರುವುದು

ಇದನ್ನೂ ಓದಿ: Modi in Karnataka : ಮೋದಿ ರೋಡ್‌ ಶೋ ನಡುವೆ ಕಾಂಗ್ರೆಸ್‌ನವರು ಆಂಬ್ಯುಲೆನ್ಸ್‌ ಬಿಟ್ಟು ಸೀನ್‌ ಕ್ರಿಯೇಟ್‌ ಮಾಡ್ತಾರಂತೆ!

ಅಭಿಮಾನಿ ಮಾಡಿದ ಎಡವಟ್ಟು

ಚಾಮರಾಜನಗರದ ಸಂತೇಮರಹಳ್ಳಿಗೆ ವೃತ್ತ, ಗುಂಡ್ಲುಪೇಟೆ ವೃತ್ತದಲ್ಲಿ ರೋಡ್‌ ಶೋ ನಡೆಸಲಾಗುತ್ತಿತ್ತು. ಈ ವೇಳೆ ಸುದೀಪ್‌ ಕಾರಿನ ಮೇಲೆ ನಿಂತು ಜನರತ್ತ ಕೈಬೀಸುತ್ತಿದ್ದರು. ಕಾರಿನ ಸುತ್ತಲೂ ಅಭಿಮಾನಿಗಳ ದಂಡೇ ಸೇರಿತ್ತು. ಈ ವೇಳೆ ಸುದೀಪ್‌ ಜತೆಗೆ ಸಚಿವ ಸೋಮಣ್ಣ ಅವರೂ ನಿಂತಿದ್ದರು. ಸುದೀಪ್‌ ಅವರನ್ನು ತಬ್ಬಿಕೊಂಡು ಶುಭ ಹಾರೈಸುವ ವೇಳೆ ಹಿಂದಿನಿಂದ ಓಡಿ ಬಂದು ಕಾರು ಹತ್ತಿದ ಸುದೀಪ್‌ ಅಭಿಮಾನಿಯೊಬ್ಬ ಸೀದಾ ಕಾರಿನ ಮೇಲೆ ನಿಂತು ಸೋಮಣ್ಣ ಅವರನ್ನು ಗಟ್ಟಿಯಾಗಿ ಹಿಡಿದುಕೊಂಡಿದ್ದಾನೆ. ಬಳಿಕ ಸುದೀಪ್‌ ಅವರನ್ನು ಮಾತನಾಡಿಸಲು ಹೋಗುವ ವೇಳೆ ನಿಯಂತ್ರಣ ತಪ್ಪಿದ್ದಾನೆ. ತಾನು ಕೆಳಗೆ ಬೀಳುವಾಗ ಸೋಮಣ್ಣ ಅವರನ್ನೂ ಹಿಡಿದುಕೊಂಡು ಬಿದ್ದಿದ್ದಾನೆ. ಆದರೆ, ಸೋಮಣ್ಣ ಅವರನ್ನು ಸುದೀಪ್‌ ಗಟ್ಟಿಯಾಗಿ ಹಿಡಿದುಕೊಂಡಿದ್ದರಿಂದ ನಿಧಾನವಾಗಿ ಕಾರಿನ ಮೇಲೆಯೇ ಬಿದ್ದಿದ್ದಾರೆ.

ಚಾಮರಾಜನಗರದಲ್ಲಿ ಕಿಚ್ಚ ಸುದೀಪ್‌ ನೋಡಲು ಮುಗಿಬಿದ್ದ ಜನ

ಅದೇ ವೇಳೆ ಸೋಮಣ್ಣ ಅವರನ್ನು ಬೌನ್ಸರ್‌ ಕೂಡಾ ಹಿಡಿದುಕೊಂಡಿದ್ದಾರೆ. ಇನ್ನೊಂದು ಕಡೆ ಆ ಅಭಿಮಾನಿ ಮೇಲೆ ಪೊಲೀಸರೊಬ್ಬರು ಲಾಠಿ ಬೀಸಿ ಕಳಿಸಿದ್ದಾರೆ.

ಚಾಮರಾಜನಗರದಲ್ಲಿ ಕಿಚ್ಚ ಸುದೀಪ್‌ ಜತೆ ವಿ. ಸೋಮಣ್ಣ ರೋಡ್‌ ಶೋ

ಲಘು ಲಾಠಿ ಪ್ರಹಾರ

ನಟ ಸುದೀಪ್ ಅವರನ್ನು ನೋಡಲು ಸಾವಿರಾರು ಮಂದಿ ಮುಗಿಬಿದ್ದಿದ್ದು, ಜನರನ್ನು ನಿಯಂತ್ರಿಸಲು ಲಘು ಲಾಠಿ ಪ್ರಹಾರ ನಡೆಸಲಾಯಿತು. ಚಾಮರಾಜನಗರದ ಸಂತೇಮರಹಳ್ಳಿಯಲ್ಲಿ ವೃತ್ತದಲ್ಲಿ ಈ ಘಟನೆ ನಡೆದಿದ್ದು, ಸುದೀಪ್ ನೋಡಲು ನೂಕು ನುಗ್ಗಲು ಉಂಟಾಗಿದೆ. ಜನರನ್ನು ನಿಯಂತ್ರಿಸಲು ಪೊಲೀಸರು ಲಾಠಿ ಬೀಸಿದ್ದಾರೆ.

ಕಾರಿನಿಂದ ಕೆಳಗೆ ಬಿದ್ದ ಸೋಮಣ್ಣ ಅವರ ವಿಡಿಯೊ ಇಲ್ಲಿದೆ

ಇದನ್ನೂ ಓದಿ: Karnataka Election 2023: ಶೋಭಾ ಕರಂದ್ಲಾಜೆ ಅವರೇ ನೀವು ಸೀತೆಯಾಗಿ, ಶೂರ್ಪನಖಿ ಆಗಬೇಡಿ: ರಮೇಶ್ ಬಾಬು ತಿರುಗೇಟು

ಕ್ರೇನ್ ಮೂಲಕ ಸೇಬಿನ ಹಾರ

ಚಾಮರಾಜನಗರದ ಸಂತೇಮರಹಳ್ಳಿಗೆ ವೃತ್ತ, ಗುಂಡ್ಲುಪೇಟೆ ವೃತ್ತದಲ್ಲಿ ಪ್ರಚಾರ ಮಾಡುವ ವೇಳೆ ನಟ ಸುದೀಪ್‌ಗೆ ಅವರ ಅಭಿಮಾನಿಗಳು ಸೇರಿ ಸೇಬಿನ ಹಾರ ಹಾಕಿದ್ದಾರೆ. ಸೋಮಣ್ಣ ಜತೆ ಕಾರಿನ ಮೇಲೆ ನಿಂತ ಸುದೀಪ್‌ ಜನರತ್ತ ಕೈ ಬೀಸುತ್ತಾ ಸಾಗಿದರು.

Exit mobile version