Site icon Vistara News

ಸರ್ಕಾರಿ ಶಾಲೆಗೆ ಪೋಷಕರಿಂದ ₹100 ವಂತಿಗೆ; ಸರ್ಕಾರದ ನಡೆಗೆ ತಿರುಗಿಬಿದ್ದಿದ್ದ ಪ್ರತಿಪಕ್ಷ ನಾಯಕರು, ಶಿಕ್ಷಣ ತಜ್ಞರು

HD kumaraswamy Uniform Civil Code ಕರ್ನಾಟಕ- ಮಹಾರಾಷ್ಟ್ರ ಗಡಿ ವಿವಾದ

ಬೆಂಗಳೂರು: ಸರ್ಕಾರಿ ಶಾಲೆಯಲ್ಲಿ ಪೋಷಕರು ಮಾಸಿಕವಾಗಿ ೧೦೦ ರೂಪಾಯಿ ವಂತಿಗೆ ನೀಡಬೇಕೆಂಬ ನಿಟ್ಟಿನಲ್ಲಿ ಶಿಕ್ಷಣ ಇಲಾಖೆ ಆಯುಕ್ತರು ಹೊರಡಿಸಿರುವ ಸುತ್ತೋಲೆಗೆ ಈಗ ರಾಜ್ಯಾದ್ಯಂತ ವ್ಯಾಪಕ ಟೀಕೆ, ಆಕ್ರೋಶಗಳು ವ್ಯಕ್ತವಾಗಿದ್ದು, ಈ ಸಂಬಂಧ ಶಿಕ್ಷಣ ತಜ್ಞರು ಸೇರಿದಂತೆ ರಾಜಕೀಯ ನಾಯಕರೂ ಸರ್ಕಾರದ ನಡೆಯನ್ನು ವಿರೋಧಿಸಿದ್ದಾರೆ. ಈಗ ಇದರ ಬೆನ್ನಲ್ಲೇ ರಾಜ್ಯ ಸರ್ಕಾರ ಆದೇಶವನ್ನು ವಾಪಸ್‌ ಪಡೆದುಕೊಂಡಿದೆ.

ಸರ್ಕಾರದ ಕೆಟ್ಟ ನಿರ್ಧಾರ
ಸರ್ಕಾರಿ ಶಾಲೆಗಳಲ್ಲಿ ಪೋಷಕರಿಂದ ಹಣ ವಸೂಲಿ ಮಾಡುವ ಬಗ್ಗೆ ಸುತ್ತೋಲೆ ಹೊರಡಿಸಿರುವುದು ಸರ್ಕಾರದ ಅತ್ಯಂತ ಕೆಟ್ಟ ನಿರ್ಧಾರವಾಗಿದೆ. ಈ ಸುತ್ತೋಲೆಯನ್ನು ತಕ್ಷಣವೇ ಹಿಂಪಡೆಯಬೇಕು ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ರಾಮನಗರದಲ್ಲಿ ಆಗ್ರಹಿಸಿದರು.

ಮಕ್ಕಳಿಗೆ ಸರಿಯಾದ ಮೂಲಭೂತ ಸೌಕರ್ಯ ಕೊಟ್ಟಿಲ್ಲ. ಅದನ್ನು ಬಿಟ್ಟು ಪೋಷಕರಿಂದಲೇ ಚಂದಾ ವಸೂಲಿಗೆ ಈ ಸರ್ಕಾರ ಹೊರಟಿದೆ. ಇಂತಹ ತೀರ್ಮಾನ ನೋಡಿದರೆ ಸರ್ಕಾರದ ದಿವಾಳಿತನವನ್ನು ತೋರಿಸಲಿದೆ ಎಂದು ಕಿಡಿಕಾರಿದರು.

ಚಾಮುಂಡೇಶ್ವರಿ ಕ್ಷೇತ್ರದ ಜೆಡಿಎಸ್‌ ಶಾಸಕ ಜಿ.ಟಿ. ದೇವೇಗೌಡ ಅವರ ವಿರುದ್ಧ ಪ್ರಬಲ ಒಕ್ಕಲಿಗ ನಾಯಕನನ್ನು ಸ್ಪರ್ಧೆಗಿಳಿಸುವುದಾಗಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆ ಬಗ್ಗೆ ಪ್ರತಿಕ್ರಿಯೆ ನೀಡಿದ ಎಚ್‌ಡಿಕೆ, ಅವರೆಲ್ಲರೂ ಬರಲೇಬೇಕು ಅಲ್ವಾ? ಆ ಸಮಯದಲ್ಲಿ ಹೇಗೆ ಚುನಾವಣೆ ಮಾಡಬೇಕು ಎಂಬುದು ನನಗೆ ಗೊತ್ತಿದೆ ಎಂದು ಹೇಳಿದರು.

ಇದನ್ನೂ ಓದಿ | ಸರ್ಕಾರಿ ಶಾಲೆಯಲ್ಲಿ ಮಾಸಿಕ ₹100 ವಂತಿಗೆ; ಈ ಆದೇಶಕ್ಕೂ ನನಗೂ, ಸಿಎಂಗೂ ಸಂಬಂಧವಿಲ್ಲ: ಬಿ.ಸಿ. ನಾಗೇಶ್‌

ಶಿಕ್ಷಣ ಹಕ್ಕು ಕಾಯ್ದೆಯ ಸ್ಪಷ್ಟ ಉಲ್ಲಂಘನೆ
ಈ ಬಗ್ಗೆ ಶಿಕ್ಷಣ ತಜ್ಞ ವಿ.ಪಿ. ನಿರಂಜನಾರಾಧ್ಯ ಪ್ರತಿಕ್ರಿಯೆ ನೀಡಿ, ಅಂತಾರಾಷ್ಟ್ರೀಯ ಕಾನೂನು, ಸಂವಿಧಾನ ಮತ್ತು ಶಿಕ್ಷಣ ಹಕ್ಕು ಕಾಯ್ದೆಯ ಸ್ಪಷ್ಟವಾದ ಉಲ್ಲಂಘನೆಯಾಗಿದೆ. ಈ ಮೂಲಕ ಬಡ ವರ್ಗದವರಿಗೆ ಶಾಲೆ ನಿರ್ವಹಣೆ ವೆಚ್ಚವನ್ನು ವಹಿಸಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.

ಶಿಕ್ಷಣ ತಜ್ಞರ ವಿರೋಧ
ಸಂವಿಧಾನದ 21 ಎ ವಿಧಿ ಪ್ರಕಾರ ಮಕ್ಕಳಿಗೆ ಶಿಕ್ಷಣ ನೀಡುವುದು ಆಯಾ ಸರ್ಕಾರಗಳ ಹೊಣೆ. ಆರ್‌ಟಿಇ ಸೆಕ್ಷನ್‌ 3ರ ಪ್ರಕಾರ 8ನೇ ತರಗತಿಯವರೆಗೆ ಯಾವುದೇ ಅಡ್ಡಿ ಆತಂಕ ಇಲ್ಲದೆ ಕಡ್ಡಾಯವಾಗಿ ಶಿಕ್ಷಣ ನೀಡಬೇಕು. ಬಹುತೇಕ ಸರ್ಕಾರಿ ಶಾಲೆಗಳು ಈಗಾಗಲೇ ಮಕ್ಕಳಿಲ್ಲದೆ ಮುಚ್ಚುವ ಹಂತ ತಲುಪಿವೆ. ಪರಿಶಿಷ್ಟರು, ಕೂಲಿ ಕಾರ್ಮಿಕರು, ಬಡವರ ಮಕ್ಕಳಷ್ಟೇ ಸರ್ಕಾರಿ ಶಾಲೆಯಲ್ಲಿ ಕಲಿಯುತ್ತಿದ್ದಾರೆ. ಪರಿಸ್ಥಿತಿ ಹೀಗಿರುವಾಗ ಸರ್ಕಾರ ಇಂತಹ ಆದೇಶ ಹೊರಡಿಸಿದ್ದು ಎಷ್ಟು ಸರಿ? ಮೊದಲೇ ಕಡುಬಡತನದಲ್ಲಿರುವ ಪೋಷಕರು ಸರ್ಕಾರದ ಹಣವಸೂಲಿ ನೀತಿಗೆ ಬೇಸತ್ತು ತಮ್ಮ ಮಕ್ಕಳನ್ನು ಶಾಲೆ ಬಿಡಿಸಿದರೆ ಅದಕ್ಕೆ ಹೊಣೆ ಯಾರು? ಎಂದು ಶಿಕ್ಷಣ ತಜ್ಞರು ಸರ್ಕಾರವನ್ನು ಪ್ರಶ್ನೆ ಮಾಡಿದ್ದರು.

ಏನಿದು ಸುತ್ತೋಲೆ?
ರಾಜ್ಯದ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಿಗೆ ಅಗತ್ಯವಿರುವ ಖರ್ಚುವೆಚ್ಚಗಳಿಗಾಗಿ ಮಕ್ಕಳ ಪೋಷಕರಿಂದ ದೇಣಿಗೆ ರೂಪದಲ್ಲಿ ಪ್ರತಿ ತಿಂಗಳು 100 ರೂಪಾಯಿ ಸಂಗ್ರಹಿಸಲು ಎಸ್‌ಡಿಎಂಸಿಗೆ ಅನುಮತಿ ನೀಡಿ ಶಿಕ್ಷಣ ಇಲಾಖೆ ಸುತ್ತೋಲೆ ಹೊರಡಿಸಿತ್ತು. ಸರ್ಕಾರದ ಈ ನಡೆಗೆ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಇದು ಶಿಕ್ಷಣದ ಮೂಲಭೂತ ಹಕ್ಕಿನ ಉಲ್ಲಂಘನೆ, ಕಡ್ಡಾಯ ಶಿಕ್ಷಣ ಹಕ್ಕು ಮೊಟಕುಗೊಳಿಸುವ ಹುನ್ನಾರ ಎಂದು ಶಿಕ್ಷಣ ತಜ್ಞರು ಸೇರಿದಂತೆ ಪ್ರತಿಪಕ್ಷ ನಾಯಕರು ಆಕ್ಷೇಪ ವ್ಯಕ್ತಪಡಿಸಿದ್ದರು.

ಸುತ್ತೋಲೆಯಲ್ಲಿ ಇರೋದೇನು?
ಎಸ್‌ಡಿಎಂಸಿಯವರು ಪೋಷಕರಿಂದ ಪ್ರತಿ ತಿಂಗಳು ಪಡೆಯುವ ೧೦೦ ರೂಪಾಯಿಯನ್ನು ಅಭಿವೃದ್ಧಿಗೆ ಪೂರಕ ಕಾರ್ಯಗಳಿಗೆ ಬಳಕೆ ಮಾಡಬಹುದು. ಸರ್ಕಾರಿ ಶಾಲೆಗಳಲ್ಲಿ ಮೂಲಭೂತ ಸೌಕರ್ಯಗಳಿಗೆ, ಶಾಲೆಯ ಸಣ್ಣ ಪುಟ್ಟ ದುರಸ್ತಿ ಕಾರ್ಯಗಳಿಗೆ, ಶಾಲಾ ಶುಚಿತ್ವ, ಶೈಕ್ಷಣಿಕ ಚಟುವಟಿಕೆಗೆ ಸೇರಿದಂತೆ ಇತ್ಯಾದಿ ತುರ್ತು ವೆಚ್ಚಗಳಿಗೆ, ಕುಡಿಯುವ ನೀರು, ಶೌಚಾಲಯ, ವಿದ್ಯುತ್ ಬಿಲ್, ಬಿಸಿಯೂಟ ಸೇವಿಸಲು ಮಕ್ಕಳಿಗೆ ಪೂರಕವಾದ ವಸ್ತುಗಳ ಖರೀದಿಗೆ, ಅಗತ್ಯ ಬೋಧನಾ ಉಪಕರಣಗಳ ಖರೀದಿ, ಗಣಕಯಂತ್ರ ಖರೀದಿ ಸೇರಿದಂತೆ ಹೆಚ್ಚುವರಿ ಅತಿಥಿ ಶಿಕ್ಷಕರನ್ನು ನೇಮಿಸಿಕೊಂಡರೆ ಅವರಿಗೆ ಗೌರವ ಸಂಭಾವನೆ ನೀಡಲು ಈ ಹಣವನ್ನು ಬಳಕೆ ಮಾಡಿಕೊಳ್ಳಬಹುದು ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿತ್ತು. ಈ ಆದೇಶಕ್ಕೆ ರಾಜ್ಯಾದ್ಯಂತ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು. ‌

ಇದನ್ನೂ ಓದಿ | ಸರ್ಕಾರಿ ಶಾಲೆಗೆ ಪೋಷಕರಿಂದ ₹100 ವಂತಿಗೆ ಸುತ್ತೋಲೆ ವಾಪಸ್‌; ಶಿಕ್ಷಣ ತಜ್ಞರು, ಪ್ರತಿಪಕ್ಷಗಳ ವಿರೋಧಕ್ಕೆ ಮಣಿದ ಸರ್ಕಾರ

Exit mobile version