Site icon Vistara News

Self Harming : ನೇಣಿಗೆ ಶರಣಾದ ಗುಡಿಬಂಡೆ ಪಟ್ಟಣ ಪಂಚಾಯತಿ ಉಪಾಧ್ಯಕ್ಷ

Self Harming

ಚಿಕ್ಕಬಳ್ಳಾಪುರ/ಮಂಡ್ಯ: ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ಪಟ್ಟಣದ ಪಂಚಾಯತಿ ಉಪಾಧ್ಯಕ್ಷ (town panchayat vice president) ನೇಣಿಗೆ (Self Harming) ಶರಣಾಗಿದ್ದಾರೆ. ಉಪಾಧ್ಯಕ್ಷ ಹಾಗೂ ವಕೀಲರಾಗಿರುವ ಜಿ.ಎಂ.ಅನಿಲಕುಮಾರ್‌ ಮೃತ ದುರ್ದೈವಿ.

ಅನಿಲಕುಮಾರ್‌ ಸಾವಿಗೆ ಸಾಲವೇ ಕಾರಣ ಎಂದು ತಿಳಿದು ಬಂದಿದೆ. ಗುಡಿಬಂಡೆಯ ಸ್ವಂತ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಅನಿಲಕುಮಾರ್‌ ಪಕ್ಷೇತರ ಅಭ್ಯರ್ಥಿಯಾಗಿ ಪಟ್ಟಣ ಪಂಚಾಯತಿ ಸದಸ್ಯರಾಗಿ ನಂತರ ಉಪಾಧ್ಯಕ್ಷರಾಗಿದ್ದರು. ಸುಮಾರು ಇಪ್ಪತ್ತು ಲಕ್ಷಕ್ಕೂ ಹೆಚ್ಚು ಸಾಲ ಮಾಡಿಕೊಂಡಿದ್ದ ಅನಿಲಕುಮಾರ್‌ ಸಾಲ ತೀರಿಸಲು ಆಗದೆ ಮನನೊಂದಿದ್ದರು.

ಹೀಗಾಗಿ ಡೆತ್ ನೋಟ್ ಬರೆದಿಟ್ಟು ಗುಡಿಬಂಡೆ ಪಟ್ಟಣದ ಕೆ.ಎಚ್.ಬಿ ಕಾಲೋನಿಯಲ್ಲಿರುವ ಮನೆಯಲ್ಲಿ ನೇಣಿಗೆ ಶರಣಾಗಿದ್ದಾರೆ. ಸ್ಥಳಕ್ಕೆ ಗುಡಿಬಂಡೆ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ.

ಡಬಲ್ ಡಿಗ್ರಿ ಮಾಡಿದ್ರೂ ಸಿಗದ ಕೆಲಸ; ಜಿಗುಪ್ಸೆಗೊಂಡ ಮಹಿಳೆ ಆತ್ಮಹತ್ಯೆ

ಮಂಡ್ಯದ ಶ್ರೀರಂಗಪಟ್ಟಣ ತಾಲೂಕಿನ ಕೆಆರ್‌ಎಸ್ ಬೃಂದಾವನದ ದೋಣಿ ವಿಹಾರ ಕೇಂದ್ರದಲ್ಲಿ ಬಿದ್ದು ಮಹಿಳೆ ಆತ್ಮಹತ್ಯೆಗೆ ಶರಣಾಗಿದ್ದಾರೆ. ನಂಜನಗೂಡಿನ ಮರಳಿಪುರ ಗ್ರಾಮದ ಚೇತಾನಕುಮಾರಿ (40) ಆತ್ಮಹತ್ಯೆ ಮಾಡಿಕೊಂಡವರು. ಡಬಲ್ ಡಿಗ್ರಿ ಮಾಡಿದ್ದರೂ ಕೆಲಸ ಸಿಗದೆ ಜಿಗುಪ್ಸೆಗೊಂಡ ಚೇತನಾಕುಮಾರಿ ದೋಣಿ ವಿಹಾರಕ್ಕೆಂದು ಬಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೆಆರ್‌ಎಸ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: Viral Video : ಅಪ್ಪ ನಾನೀಗ ಡಾಕ್ಟರ್‌ ಎಂದ ಮಗಳು! ಭಾವುಕರಾದ ತಂದೆ!

ಸೆಲ್ಫಿ ಸಂಭ್ರಮದಲ್ಲಿ ಕೊಚ್ಚಿಹೋದ ಯುವಕ

ಸೆಲ್ಫಿ ತೆಗೆಯಲು ಹೋದ ಯುವಕನೊಬ್ಬ (Selfie Craze) ಸಮುದ್ರ ಪಾಲಾದ ಘಟನೆ ಉಡುಪಿ ಜಿಲ್ಲೆ ಕುಂದಾಪುರ ಬಳಿ ತ್ರಾಸಿ ಬೀಚ್‌ನಲ್ಲಿ (Trasi Beach in Kundapura) ನಡೆದಿದೆ. ಗದಗ ಜಿಲ್ಲೆ (Gadaga News) ಮುಂಡರಗಿ ತಾಲೂಕಿನ ಮೇವುಂಡಿ ಗ್ರಾಮದ ಪೀರಸಾಬ ನದಾಫ್ (22) ಎಂಬವರೇ ಮೃತಪಟ್ಟ ಯುವಕ.

ಮುಂಡರಗಿ ತಾಲೂಕಿನ ಮೇವುಂಡಿ ಗ್ರಾಮದಿಂದ ಕೂಲಿ‌ ಕೆಲಸಕ್ಕೆಂದು ಉಡುಪಿಗೆ ಬಂದು ಉಳಿದುಕೊಂಡಿದ್ದರು ಪೀರಸಾಬ ನದಾಫ್‌. ಕೆಲಸಗಳ ನಡುವೆ ಬಿಡುವು ಮಾಡಿಕೊಂಡ ಪೀರಸಾಬ ಮಂಗಳವಾರ ಮಧ್ಯಾಹ್ನ ತ್ರಾಸಿ ಸಮುದ್ರ ತೀರಕ್ಕೆ ಹೋಗಿದ್ದರು. ಅಲ್ಲಿ ಅವರು ಸೆಲ್ಫಿ ತೆಗೆದುಕೊಳ್ಳುತ್ತಿದ್ದಾಗ ದೊಡ್ಡದೊಂದು ಅಲೆ ಅಪ್ಪಳಿಸಿ ನೀರಿನಲ್ಲಿ ಕೊಚ್ಚಿ ಹೋಗಿದ್ದರು. ಆವತ್ತು ಎಷ್ಟು ಹುಡುಕಿದರೂ ಅವರಾಗಲೀ, ಅವರ ಶವವಾಗಲೀ ಸಿಕ್ಕಿರಲಿಲ್ಲ. ಇದೀಗ ಬುಧವಾರ ಶೋಧ ಕಾರ್ಯಾಚರಣೆ ವೇಳೆ ಪೀರಸಾಬ್‌ ಮೃತದೇಹ ಪತ್ತೆಯಾಗಿದೆ.

ಪೀರಸಾಬ್‌ ಅವರದು ಬಡ ಕುಟುಂಬ. ಅವರ ತಂದೆ ಎರಡು ವರ್ಷಗಳ ಹಿಂದೆ ತೀರಿಕೊಂಡಿದ್ದರು. ಹೀಗಾಗಿ ಮನೆಗೆ ಆಧಾರವಾಗುವ ಹೊಣೆಗಾರಿಗೆ 22 ವರ್ಷದ ಪೀರಸಾಬ್‌ ಮೇಲೆ ಬಿದ್ದಿತ್ತು. ಇದನ್ನೆಲ್ಲ ನಿಭಾಯಿಸುವುದಕ್ಕಾಗಿ ಕೆಲಸ ಹುಡುಕಿಕೊಂಡು ಉಡುಪಿಗೆ ಬಂದಿದ್ದ. ಅಲ್ಲಿ ಒಳ್ಳೆಯದು ಎನ್ನಬಹುದಾದ ಕೆಲಸವೊಂದು ಸಿಕ್ಕಿತ್ತು.

ಈ ನಡುವೆ, ಅಕ್ಕನ ಮದುವೆಯನ್ನೂ ನಿಶ್ಚಯ ಮಾಡಿಕೊಂಡಿದ್ದರು. ಅಕ್ಕನ ಮದುವೆ ಮಾಡಿ ಅದಕ್ಕೆ ಮಾಡುವ ಸಾಲವನ್ನು ಹೇಗಾದರೂ ಕಟ್ಟಿಕೊಂಡು ಬಳಿಕ ತಾನೂ ಒಂದು ಮದುವೆ ಮಾಡಿಕೊಂಡು ಅಮ್ಮನನ್ನು ಚೆನ್ನಾಗಿ ನೋಡಿಕೊಂಡಿರಬೇಕು ಎನ್ನುವ ಸಾವಿರ ಕನಸುಗಳನ್ನು ಹೊತ್ತುಕೊಂಡಿದ್ದರು ಪೀರಸಾಬ. ಆದರೆ, ಅವೆಲ್ಲ ಕನಸುಗಳನ್ನು ಆ ಒಂದು ಹೆದ್ದೆರೆ ಕೊಚ್ಚಿಕೊಂಡು ಹೋಗಿತ್ತು. ಅಕ್ಕನನ್ನು ಮದುವೆ ಮಾಡಿ ಗಂಡನ ಮನೆಗೆ ಕಳುಹಿಸುವ ಸಡಗರದಲ್ಲಿ ಹುಡುಗ, ಸಮುದ್ರದ ಅಲೆಗಳ ಹೊಡೆತಕ್ಕೆ ಸಿಲುಕಿ ಮೃತಪಟ್ಟಿದ್ದಾನೆ. ಇದರೊಂದಿಗೆ ಇಡೀ ಕುಟುಂಬದ ಕನಸುಗಳಿಗೆ ಹೊಡೆತ ಬಿದ್ದಿದೆ.

ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version