Site icon Vistara News

Self Harming: 3 ತಿಂಗಳ ಹಿಂದೆ ಪ್ರೀತಿಸಿ ಮದುವೆ ಆಗಿದ್ದ ನವದಂಪತಿ ಕೃಷಿ ಹೊಂಡದಲ್ಲಿ ಶವವಾಗಿ ಪತ್ತೆ

Newly wed couple dead

ದೇವನಹಳ್ಳಿ: ಕೇವಲ ಮೂರು ತಿಂಗಳ ಹಿಂದೆ ಮದುವೆಯಾಗಿದ್ದ ನವ ದಂಪತಿಯ (Newly wedded couple) ಶವ ಕೃಷಿ ಹೊಂಡದಲ್ಲಿ ಪತ್ತೆಯಾಗಿದೆ. ಇದು ಆತ್ಮಹತ್ಯೆಯೇ (Self harming) ಅಥವಾ ಬೇರೆ ಏನಾದರೂ ಅನಾಹುತವೇ ಎನ್ನುವ ಬಗ್ಗೆ ಇನ್ನೂ ಸ್ಪಷ್ಟತೆ ಸಿಕ್ಕಿಲ್ಲ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ (Bangalore rural) ದೇವನಹಳ್ಳಿ ತಾಲೂಕಿನ ಬಿಜ್ಜವಾರ ಗ್ರಾಮದಲ್ಲಿ ನಡೆದ ಈ ಘಟನೆಯಲ್ಲಿ ಮೃತಪಟ್ಟವರನ್ನು ವಿಜಯಪುರ ಪಟ್ಟಣದ ನಿವಾಸಿ ರಮೇಶ್ (28), ಸಹನಾ (26) ಎಂದು ಗುರುತಿಸಲಾಗಿದೆ.

ಕೆರೆಯಲ್ಲಿ ಶವವಾಗಿ ಪತ್ತೆಯಾದ ರಮೇಶ್‌ ಮತ್ತು ಸಹನಾ. ಘಟನಾ ಸ್ಥಳದಲ್ಲಿ ಸೇರಿದ ಜನರು

ರಮೇಶ್‌ ಮತ್ತು ಸಹನಾ ಕಳೆದ ಕೆಲವು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಅವರು ಮೂರು ತಿಂಗಳ ಹಿಂದಷ್ಟೇ ಮನೆಯವರ ವಿರೋಧದ ನಡುವೆ ಮದುವೆಯಾಗಿದ್ದರು. ಮನೆಯಲ್ಲಿ ವಿರೋಧವಿದ್ದ ಹಿನ್ನೆಲೆಯಲ್ಲಿ ಅವರು ಯಾರ ಕಿರಿಕಿರಿಯೂ ಬೇಡ ಎಂದು ಪ್ರತ್ಯೇಕವಾಗಿ ಬಾಡಿಗೆ ಮನೆ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು.

ಎರಡು ದಿನದ ಹಿಂದೆ ಸಹನಾ ಮತ್ತು ರಮೇಶ್‌ ಅವರು ಬಿಜ್ಜವಾರ ಗ್ರಾಮದ ಸಂಬಂಧಿಕರ ಮನೆಗೆ ಬಂದಿದ್ದರು. ಅಲ್ಲಿ ಮನೆಯವರ ಜತೆ ಚೆನ್ನಾಗಿಯೇ ಇದ್ದರು. ತಮ್ಮ ಮದುವೆ ವಿಚಾರದ, ನಂತರ ಎದುರಿಸಿದ ಸಮಸ್ಯೆಗಳ ಬಗ್ಗೆ ಸಹಜವಾಗಿ ಮಾತನಾಡಿದ್ದರು.

ಇದೆಲ್ಲ ಆಗಿ ಅವರು ರಾತ್ರಿಯೇ ಮನೆಯಿಂದ ಹೊರಟಿದ್ದರು. ತಮ್ಮ ಮನೆಗೆ ಹೋಗುವುದಾಗಿ ಹೇಳಿದ್ದರು. ಆದರೆ, ಸೋಮವಾರ ಮುಂಜಾನೆ ಅವರ ಶವ ಕೃಷಿ ಹೊಂಡದಲ್ಲಿ ಪತ್ತೆಯಾಗಿದೆ.

ಸ್ಥಳೀಯರು ಮತ್ತು ಪೊಲೀಸರಿಂದ ನೀರಿ‌ನಲ್ಲಿದ್ದ ಮೃತದೇಹ ಹೊರತೆಗೆಯಲಾಗಿದೆ. ಇವರ ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ. ವಿಜಯಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪೊಲೀಸರು ಇದರ ಕಾರಣಗಳ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.

ತಂಗಿಯ ಚುಡಾವಣೆ ಪ್ರಶ್ನಿಸಿದ ಅಣ್ಣನ ಕಲ್ಲು ಎತ್ತಿಹಾಕಿ ಕೊಂದರು

ಕಲಬುರಗಿ: ಜಿಲ್ಲೆಯ ಅಫಜಲಪುರ ತಾಲ್ಲೂಕಿನ ಚೌಡಾಪುರ ಗ್ರಾಮದಲ್ಲಿ ಯುವಕನೊಬ್ಬನನ್ನು ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಲಾಗಿದೆ. ಮಹಾಂತಪ್ಪ ಗಂಡೋಲಿ (26) ಕೊಲೆಯಾದ ಯುವಕ. ಮಹಾಂತಪ್ಪನ ತಂಗಿಯನ್ನು ಆತನದೇ ಕೆಲವು ಗೆಳೆಯರು ಚುಡಾಯಿಸುತ್ತಿದ್ದರು. ಇದನ್ನು ಪ್ರಶ್ನಿಸಿದ್ದೇ ಕೊಲೆಗೆ ಕಾರಣ ಎಂದು ಹೇಳಲಾಗಿದೆ.

ಭಾನುವಾರ ಸಂಜೆ ಚೌಡಾಪುರದಲ್ಲಿ ಮಹಾಂತೇಶ್‌ ತನ್ನ ಗೆಳೆಯರೊಂದಿಗೆ ಬಾರ್‌ನಲ್ಲಿ ಕುಡಿಯಲು ಕೂತಾಗ ಚುಡಾವಣೆಯ ವಿಷಯ ಚರ್ಚೆಗೆ ಬಂದಿದೆ. ತಂಗಿಯನ್ನು ಚುಡಾಯಿಸಿದರೆ ಸರಿ ಇರುವುದಿಲ್ಲ ಎಂದು ಮಹಾಂತೇಶ್‌ ಎಚ್ಚರಿಕೆ ನೀಡಿದ್ದ ಎನ್ನಲಾಗಿದೆ. ಅಲ್ಲೇ ಸಣ್ಣ ಮಟ್ಟದ ಜಗಳ ನಡೆದಿತ್ತು.

ಈ ನಡುವೆ, ಮಹಾಂತೇಶ್‌ ಬಾರ್‌ನಿಂದ ಹೊರಗೆ ಬರುವಾಗ ಆತನನ್ನು ತಡೆದು ನಿಲ್ಲಿಸಿ ಆತನ ಮೇಲೆ ಹಲ್ಲೆ ಮಾಡಿ ಕೊಲೆ ಮಾಡಲಾಗಿದೆ. ಪರಶುರಾಮ ದಶರಥ ಎಂಬಾತ ಒಳಗಡೆ ಏನು ಮಾತನಾಡಿದ್ದು ಎಂದು ಪ್ರಶ್ನಿಸಿ ಮಹಾಂತೇಶನ ಮೇಲೆ ಎರಗಿದ್ದಾನೆ. ಮತ್ತು ಮಹಾಂತೇಶನ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿದ್ದಾನೆ.

ಗಾಣಗಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತಂಗಿಯನ್ನು ಚುಡಾಯಿಸಿದ್ದನ್ನು ಪ್ರಶ್ನಿಸಿದ್ದಕ್ಕೆ ನಡೆದಿರುವ ಈ ಕೊಲೆ ಪ್ರದೇಶದಲ್ಲಿ ಆತಂಕಕ್ಕೆ ಕಾರಣವಾಗಿದೆ. ಆರೋಪಿ ವಿರುದ್ಧ ಮತ್ತು ಆತನಿಗೆ ಕುಮ್ಮಕ್ಕು ನೀಡಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂಬ ಒತ್ತಡ ಕೇಳಿಬಂದಿದೆ.

ಇದನ್ನೂ ಓದಿ: Student death : ಅಮ್ಮಾ ಬಕೆಟ್‌ ಇದ್ಯಾ? ಎಂದು ಬಾಲ್ಕನಿಯಿಂದ ಬಾಗಿ ಕೇಳಿದ ಮೆಡಿಕಲ್‌ ವಿದ್ಯಾರ್ಥಿ ಕೆಳಗೆ ಬಿದ್ದು ಸಾವು

Exit mobile version