Site icon Vistara News

Self Harming: ಮೆಸೇಜ್ ಮಾಡಿ ಅವಮಾನಿಸಿದ ಶಿಕ್ಷಕ; ನೊಂದ ವಿದ್ಯಾರ್ಥಿನಿ ವಿಷ ಸೇವಿಸಿ ಆತ್ಮಹತ್ಯೆ

self harming

ಬೆಳ್ತಂಗಡಿ: ತನ್ನ ಬಗ್ಗೆ ಇಲ್ಲಸಲ್ಲದ ಆರೋಪ ಮಾಡಿ ಚಿತ್ರಕಲಾ ಶಿಕ್ಷಕ ಮೆಸೇಜ್ ಮಾಡಿ ಅವಮಾನಿಸಿದ್ದರಿಂದ ಮನನೊಂದ ವಿದ್ಯಾರ್ಥಿನಿಯೊಬ್ಬಳು ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ (Self Harming) ತಾಲೂಕಿನಲ್ಲಿ ನಡೆದಿದೆ. ವಿಷ ಸೇವಿಸಿ ಅಸ್ವಸ್ಥಗೊಂಡು ಗಂಭೀರ ಸ್ಥಿತಿಯಲ್ಲಿದ್ದ ವಿದ್ಯಾರ್ಥಿನಿ ಚಿಕಿತ್ಸೆ ಫಲಕಾರಿಯಾಗದೆ ಸೋಮವಾರ ಬೆಳಗ್ಗೆ ಮೃತಪಟ್ಟಿದ್ದಾಳೆ.

ಧರ್ಮಸ್ಥಳದ ನಿವಾಸಿ, ಖಾಸಗಿ ಶಿಕ್ಷಣ ಸಂಸ್ಥೆಯ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿನಿ (16) ಮೃತಳಾಗಿದ್ದಾಳೆ. ಶಾಲೆಯ ಚಿತ್ರಕಲಾ ಶಿಕ್ಷಕ ರೂಪೇಶ್ ಪೂಜಾರಿ ಎಂಬಾತ ಮೃತಪಟ್ಟ ವಿದ್ಯಾರ್ಥಿನಿಯ ಬಗ್ಗೆ ಮತ್ತೊಬ್ಬ ವಿದ್ಯಾರ್ಥಿನಿಗೆ ಅವಮಾನ ಮಾಡುವ ರೀತಿಯಲ್ಲಿ ಮೆಸೇಜ್ ಮಾಡಿದ್ದರು ಎಂಬ ಆರೋಪ ಕೇಳಿಬಂದಿದೆ. ಈ ವಿಷಯ ತಿಳಿದ ನಂತರ ತಾಯಿಯೊಂದಿಗೆ ವಿದ್ಯಾರ್ಥಿನಿ ಶಾಲೆಗೆ ತೆರಳಿ ವಿಚಾರಿಸಿದ್ದಾಳೆ.

ಬಳಿಕ ಫೆ.7ರಂದು ವಿದ್ಯಾರ್ಥಿನಿ ಶಾಲೆಗೆ ಬರುವಾಗ ಬಿಸ್ಕೆಟ್ ಪ್ಯಾಕೆಟ್ ಜೊತೆ ಇಲಿ ಪಾಷಾಣವನ್ನು ಅಂಗಡಿಯಿಂದ ಖರೀದಿ ಮಾಡಿ ತಂದಿದ್ದಾಳೆ. ನಂತರ ಶಾಲೆಯಲ್ಲಿ ಇಲಿ ಪಾಷಾಣ ಸೇವಿಸಿದ್ದಳು. ಇದರಿಂದ ಅಸ್ವಸ್ಥಳಾದ ಆಕೆಯನ್ನು ತಕ್ಷಣ ಶಾಲೆಯ ಶಿಕ್ಷಕರು ಆಂಬ್ಯುಲೆನ್ಸ್ ಮೂಲಕ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ಎರಡು ದಿನಗಳ ಹಿಂದೆ ಸ್ಥಳಾಂತರಿಸಲಾಗಿತ್ತು. ವಿದ್ಯಾರ್ಥಿನಿ ಲಿವರ್ ಮತ್ತು ಕಿಡ್ನಿ ನಿಷ್ಕ್ರಿಯವಾಗಿ ಫೆ.12 ರಂದು ಮುಂಜಾನೆ 5:30 ರ ಸುಮಾರಿಗೆ ಚಿಕಿತ್ಸೆ ಫಲಿಸದೆ ಕೊನೆಯುಸಿರೆಳೆದಿದ್ದಾಳೆ.

ಇದನ್ನೂ ಓದಿ | Road Accident : BMTC ಬಳಿಕ ಈಗ KSRTC ಸರದಿ; ಬಸ್‌ ಧಾವಂತಕ್ಕೆ ಬೈಕ್‌ ಸವಾರ ದಾರುಣ ಬಲಿ

ಧರ್ಮಸ್ಥಳ ಪೊಲೀಸ್‌ ಠಾಣೆಯಲ್ಲಿ ಶಿಕ್ಷಕ ರೂಪೇಶ್ ಪೂಜಾರಿ ವಿರುದ್ಧ ವಿದ್ಯಾರ್ಥಿನಿಯ ತಾಯಿ ನೀಡಿದ ದೂರಿನ ಮೇರೆಗೆ IPC 354D,509,POSO Act 12 ,75JJ Act ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ಹೀಗಾಗಿ ಶಿಕ್ಷಕ ರೂಪೇಶ್ ಪೂಜಾರಿಯನ್ನು ಬಂಧಿಸಿ ಮಂಗಳೂರು ನ್ಯಾಯಾಲಯಕ್ಕೆ ಧರ್ಮಸ್ಥಳ ಪೊಲೀಸರು ಹಾಜರುಪಡಿಸಿದ್ದು, ನ್ಯಾಯಾಲಯ ಮಧ್ಯಂತರ ಜಾಮೀನು ನೀಡಿದೆ. ಆರೋಪಿ ಶಿಕ್ಷಕ ರೂಪೇಶ್ ಪೂಜಾರಿಗೆ ಶಾಲೆಯ ಆಡಳಿತ ಮಂಡಳಿ ಶಿಸ್ತು ಕ್ರಮ ಕೈಗೊಂಡಿದೆ.

ಅಪಘಾತದಲ್ಲಿ ಯುವಕ ಸಾವು; ಡಿಕ್ಕಿ ಹೊಡೆದ ಸವಾರ ಪಶ್ಚಾತ್ತಾಪದಿಂದ ಆತ್ಮಹತ್ಯೆ

ಮಡಿಕೇರಿ: ಸಾಮಾನ್ಯವಾಗಿ ಅಪಘಾತಗಳು (Road Accident) ನಡೆದಾಗ ಇನ್ನೊಬ್ಬರ ಮೇಲೆ ಆರೋಪ ಹೊರಿಸಿ ತಾವೇ ಸರಿ ಎಂದು ವಾದಿಸುವವರು ಹೆಚ್ಚು. ಆದರೆ, ಇಲ್ಲೊಬ್ಬರು ತನ್ನಿಂದಾದ ಪ್ರಮಾದದಿಂದ ಯುವಕನೊಬ್ಬನ ಬಾಳು ಹಾಳಾಯಿತಲ್ಲ ಎಂಬ ಪಶ್ಚಾತ್ತಾಪದಿಂದ ತಾವೇ ಪ್ರಾಣ ಕಳೆದುಕೊಂಡಿದ್ದಾರೆ (Man ends life after accident). ದುರಂತವೆಂದರೆ, ಈ ಅಪಘಾತದಲ್ಲಿ ಗಾಯಗೊಂಡ ಯುವಕನೂ ಮೃತಪಟ್ಟಿದ್ದಾನೆ (Young man dies in Accident). ಅಲ್ಲಿಗೆ ಒಂದು ಅಪಘಾತ ಇಬ್ಬರನ್ನು ಬಲಿ ಪಡೆದಂತಾಗಿದೆ. ಈ ಘಟನೆ ನಡೆದಿರುವುದು ಕೊಡಗು ಜಿಲ್ಲೆಯ ಮಡಿಕೇರಿಯಲ್ಲಿ.

ಶುಕ್ರವಾರ ಮಡಿಕೇರಿಯ (Madikeri news) ಚೈನ್‌ ಗೇಟ್‌ ಬಳಿ ಒಂದು ಅಪಘಾತ ನಡೆದಿತ್ತು. ವಿದ್ಯಾರ್ಥಿಯೊಬ್ಬ ಬೈಕ್‌ನಲ್ಲಿ ಬರುತ್ತಿದ್ದ. ಮೂರು ರಸ್ತೆ ಸೇರುವಲ್ಲಿ ಸವಾರರೊಬ್ಬರು ಸ್ಕೂಟಿಯಲ್ಲಿ ಬಂದರು. ಆಗ ಸ್ಕೂಟಿ ಬೈಕ್‌ಗೆ ಡಿಕ್ಕಿ ಹೊಡೆದು ಬೈಕ್‌ ಸವಾರ ರಸ್ತೆಗೆ ಬಿದ್ದ. ಅಷ್ಟೇ ಹೊತ್ತಿಗೆ ಒಂದು ಲಾರಿ ಆತನ ಪಕ್ಕದಲ್ಲೇ ಹಾದು ಹೋಗಿದೆ. ರಸ್ತೆಗೆ ತಲೆ ಬಡಿದ ಹೊಡೆತ ಮತ್ತು ಲಾರಿಗೂ ದೇಹ ತಾಗಿದ್ದರಿಂದ ಆತ ತೀವ್ರವಾಗಿ ಗಾಯಗೊಂಡ. ಆತನನ್ನು ಮೊದಲು ಮಡಿಕೇರಿ ಬಳಿಕ ಮೈಸೂರಿನ ಆಸ್ಪತ್ರೆಗೆ ಸಾಗಿಸಲಾಯಿತು. ಅಲ್ಲಿ ಆತನ ಮೆದುಳು ನಿಷ್ಕ್ರಿಯಗೊಂಡಿದೆ ಎಂದು ತಿಳಿಸಲಾಯಿತು.

ಇತ್ತ ಡಿಕ್ಕಿ ಹೊಡೆದ ವ್ಯಕ್ತಿ ಸಣ್ಣಪುಟ್ಟ ಗಾಯಗಳೊಂದಿಗೆ ಬಚಾವಾಗಿದ್ದರು. ಅವರು ಆಸ್ಪತ್ರೆಯಿಂದ ಬಿಡುಗಡೆಯಾಗಿ ಮನೆಗೆ ಹೋಗಿ ಆ ಹುಡುಗನಿಗೆ ಏನಾಗಿದೆ ಎಂದು ಕೇಳಿಕೊಂಡಿದ್ದಾರೆ. ಆ ಯುವಕನಿಗೆ ತಲೆಗೆ ತೀವ್ರ ಪೆಟ್ಟಾಗಿದೆ ಎಂದು ಕೇಳುತ್ತಲೇ ಅವರಿಗೆ ಪಶ್ಚಾತ್ತಾಪವಾಗಿದೆ. ನನ್ನಿಂದಾಗಿ ಒಬ್ಬ ಯುವಕನ ಬಾಳು ಹೀಗಾಯಿತಲ್ಲ ಎಂದು ತೀವ್ರವಾಗಿ ನೊಂದ ಅವರು ಬದುಕನ್ನೇ ಅಂತ್ಯ ಮಾಡಿಕೊಳ್ಳಲು ಮುಂದಾಗಿದ್ದಾರೆ. ಮನೆಯಲ್ಲಿ ನೇಣು ಬಿಗಿದುಕೊಂಡಿದ್ದಾರೆ. ಇತ್ತ ಅದೇ ಹೊತ್ತಿಗೆ ಮೆದುಳು ನಿಷ್ಕ್ರಿಯಗೊಂಡು ಜೀವಚ್ಛವವಾಗಿದ್ದ ಹುಡುಗನೂ ಕೊನೆಯುಸಿರೆಳೆದಿದ್ದಾನೆ.

ಹೀಗೆ ರಸ್ತೆ ಅಪಘಾತಕ್ಕೆ ನಾನೇ ಕಾರಣ, ಯುವಕನ ಸಂಕಷ್ಟಕ್ಕೆ ಕಾರಣನಾದೆನಲ್ಲ ಎಂದು ಪಶ್ಚಾತ್ತಾಪದಿಂದ ನೊಂದು ಪ್ರಾಣ ಕಳೆದುಕೊಂಡವರ ಹೆಸರು ಹೆಚ್.ಡಿ.ತಮ್ಮಯ್ಯ. ವಯಸ್ಸು 57. ಅವರ ಸ್ಕೂಟರ್‌ ಡಿಕ್ಕಿ ಹೊಡೆದು ‌ ರಸ್ತೆಗೆ ಬಿದ್ದು ಬಳಿಕ ಆಸ್ಪತ್ರೆಯಲ್ಲಿ ಮೃತಪಟ್ಟವನು ವಿದ್ಯಾರ್ಥಿ ಧನಲ್ ಸುಬ್ಬಯ್ಯ (24).

ಶುಕ್ರವಾರ ಸಂಜೆಯ ಹೊತ್ತು ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಕಾಲೇಜಿನ ಮಾಸ್ಟರ್ ಡಿಗ್ರಿ ವಿದ್ಯಾರ್ಥಿ ಧನಲ್‌ ಸುಬ್ಬಯ್ಯ ಬೈಕ್‌ನಲ್ಲಿ ಮಡಿಕೇರಿ ಕಡೆಗೆ ಹೋಗುತ್ತಿದ್ದರು. ಮಡಿಕೇರಿಯ ಚೈನ್‌ ಗೇಟ್‌ ಬಳಿ ಬರುತ್ತಿದ್ದಾಗ ಇನ್ನೊಂದು ರಸ್ತೆಯಿಂದ ಬಂದ ಹೆಚ್‌ಡಿ ತಮ್ಮಯ್ಯ ಅವರ ದ್ವಿಚಕ್ರ ವಾಹನ ಬೈಕ್‌ಗೆ ಡಿಕ್ಕಿ ಹೊಡೆದಿದೆ. ಆಗ ಧನಲ್‌ ರಸ್ತೆಗೆ ಬಿದ್ದಿದ್ದಾರೆ. ಅಷ್ಟು ಹೊತ್ತಿಗೆ ಎದುರಿನಿಂದ ಬಂದ ಲಾರಿ ಕೂಡಾ ಅವರಿಗೆ ಬಡಿದಿದೆ. ತೀವ್ರ ಪ್ರಮಾಣದ ಗಾಯಗಳಾಗಿವೆ. ಈ ದೃಶ್ಯಗಳು ಸಿಸಿ ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿವೆ. ಅಪಘಾತದ ಬಗ್ಗೆ ಮಡಿಕೇರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಇದನ್ನೂ ಓದಿ : Elephant Attack : ಟಾಟಾ ಎಸ್ಟೇಟ್‌ ಬಳಿ ಮತ್ತೆ ಒಂಟಿ ಸಲಗ ದಾಂಧಲೆ, ಹುಷಾರ್‌ ಎಂದ ಅರಣ್ಯ ಇಲಾಖೆ

ಇತ್ತ ಯುವಕನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಆತನ ಸ್ಥಿತಿ ಜಿಂತಾಜನಕವಾಗಿತ್ತು. ಮತ್ತೊಂದು ಕಡೆ ತಮ್ಮಯ್ಯ ಅವರು ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದರು. ಆದರೆ ಅವನ ಮನಸ್ಸಿನಲ್ಲಿ ಅಪಘಾತದ ವಿಚಾರವೇ ಕೊರೆಯುತ್ತಿತ್ತು. ಅಪಘಾತಕ್ಕೆ ನಾನೇ ಕಾರಣ, ಹುಡುಗನ ದುರಂತಕ್ಕೆ ಕಾರಣವಾದೆ ಎಂದೆಲ್ಲ ಯೋಚಿಸಿದ ಅವರು ಕೊನೆಗೆ ಪ್ರಾಣವನ್ನೇ ಕಳೆದುಕೊಳ್ಳುವ ನಿರ್ಧಾರಕ್ಕೆ ಬಂದರು. ಭಾನುವಾರ ಬೆಳಗ್ಗೆ ಮನೆಯಲ್ಲಿ ಯಾರಿಗೂ ಗೊತ್ತಾಗದಂತೆ ನೇಣಿಗೆ ಕೊರಳೊಡ್ಡಿದರು. ಇತ್ತ ಅದೇ ಹೊತ್ತಿಗೆ ಗಾಯಗಳಿಂದ ಜರ್ಜರಿತವಾಗಿದ್ದ ಧನಲ್‌ ಕೂಡಾ ಪ್ರಾಣ ಕಳೆದುಕೊಂಡಿದ್ದ.

ಮಡಿಕೇರಿ ಸಮೀಪದ ಹೆರವನಾಡಿನ ನಿವಾಸಿಯಾಗಿರುವ ಎಚ್.ಡಿ.ತಮ್ಮಯ್ಯ ಅವರು ವೃತ್ತಿಯಲ್ಲಿ ಕಾರ್ಮಿಕರಾಗಿದ್ದಾರೆ. ಎಲ್ಲರಿಗೂ ಬೇಕಾದವರಾಗಿ ಜನಾನುರಾಗಿಯಾಗಿದ್ದರು. ಒಬ್ಬ ಪುತ್ರನನ್ನು ಸಿಆರ್‌ಪಿಎಫ್‌ ಯೋಧನಾಗಿ ಮಾಡಿದ್ದಾರೆ. ಅಂಥ ತಮ್ಮಯ್ಯ ಅವರಿಗೆ ಮಗನ ವಯಸ್ಸಿನ ಹುಡುಗನ ಬದುಕಿಗೇ ಕೊಳ್ಳಿ ಇಟ್ಟೆನಲ್ಲಾ ಎನ್ನುವ ಪಶ್ಚಾತ್ತಾಪದ ಉರಿ ಜೀವವನ್ನೇ ಕಳೆದುಕೊಳ್ಳುವಂತೆ ಮಾಡಿತು.

Exit mobile version