Site icon Vistara News

Self Harming : ಮತ್ತೊಬ್ಬಳನ್ನು ಮೋಹಿಸಿದ ಪತಿರಾಯ; ಬೇಸತ್ತು ವಿಷ ಸೇವಿಸಿದಳು

Self Harming by women

ಮೈಸೂರು: ಇಲ್ಲಿನ ತಿ.ನರಸೀಪುರ ತಾಲೂಕಿನ ಹನುಮನಹಾಳು ಗ್ರಾಮದಲ್ಲಿ ಪತಿಯ ಅನೈತಿಕ ಸಂಬಂಧಕ್ಕೆ (Illicit relationship) ಬೇಸತ್ತು ಗೃಹಿಣಿ ಆತ್ಮಹತ್ಯೆ (Self Harming) ಮಾಡಿಕೊಂಡಿದ್ದಾರೆ. ಮನುರಾಣಿ (24) ಮೃತ ದುರ್ದೈವಿ.

ಮೃತ ದುರ್ದೈವಿ ಮನುರಾಣಿ

ಪತಿ ಮಂಜು ಅದೇ ಗ್ರಾಮದ ವಿವಾಹಿತ ಮಹಿಳೆ ಜತೆ ಅನೈತಿಕ ಸಂಬಂಧ ಹೊಂದಿದ್ದ. ಕದ್ದು ಮುಚ್ಚಿ ನಡೆಯುತ್ತಿದ್ದ ಇವರ ಸಂಬಂಧ ಮನುರಾಣಿಗೆ ತಿಳಿದಿತ್ತು. ಬಳಿಕ ಈ ವಿಚಾರವಾಗಿ ಪ್ರಶ್ನೆ ಮಾಡಿದ್ದಕ್ಕೆ ಇಬ್ಬರ ನಡುವೆ ಗಲಾಟೆ ನಡೆಯುತ್ತಲೇ ಇತ್ತು ಎನ್ನಲಾಗಿದೆ.

ಮೃತ ಮನುರಾಣಿ ಹಾಗೂ ಪತಿ ಮಂಜು

ಗಲಾಟೆಯು ಅನಂತರ ಗ್ರಾಮದಲ್ಲಿ ರಾಜಿ ಪಂಚಾಯ್ತಿಯನ್ನು ಮಾಡಲಾಗಿತ್ತು. ಆದರೂ ಮಂಜು ತನ್ನ ಚಾಳಿಯನ್ನು ಮುಂದುವರಿಸಿದ್ದ ಎನ್ನಲಾಗಿದೆ. ಅನೈತಿಕ ಸಂಬಂಧ ಪ್ರಶ್ನೆ ಮಾಡಿದ ನಂತರ ಮಂಜ ವರದಕ್ಷಿಣೆಗಾಗಿ ಬೇಡಿಕೆ ಇಡಲಾರಂಭಿಸಿದ್ದ ಎನ್ನಲಾಗಿದೆ. ಈತನ ನಿರಂತರ ಕಾಟಕ್ಕೆ ಬೇಸತ್ತ ಮನುರಾಣಿ ನಿನ್ನೆ ಸೋಮವಾರ ಸಂಜೆ ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಅನಾಥವಾದ ಮಕ್ಕಳು

ಮನುರಾಣಿ ಹಾಗೂ ಮಂಜ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ತಾಯಿಯನ್ನು ಕಳೆದುಕೊಂಡು ಮಕ್ಕಳು ಅನಾಥರಾಗಿದ್ದಾರೆ. ಇತ್ತ ಮನುರಾಣಿ ಪೋಷಕರು ನಮ್ಮ ಮಗಳು ಆತ್ಮಹತ್ಯೆ ಮಾಡಿಕೊಳ್ಳುವ ಮನಸ್ಥಿತಿ ಹೊಂದಿಲ್ಲ. ಆಕೆಯ ಗಂಡನೇ ವಿಷ ಕುಡಿಸಿ ಹತ್ಯೆ‌ ಮಾಡಿದ್ದಾನೆ ಎಂದು ಆರೋಪಿಸಿದ್ದಾರೆ. ಸದ್ಯ ಈ ಸಂಬಂಧ ಬನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ.

ಡಿಪೋ ಮ್ಯಾನೇಜರ್ ಕೊಠಡಿ ಎದುರೇ ಚಾಲಕ ಸೂಸೈಡ್‌! ಬಿಎಂಟಿಸಿಯಲ್ಲಿ ಹೆಚ್ಚಾಯ್ತಾ ಕಿರುಕುಳ?

ದೇವನಹಳ್ಳಿ: ದೇವನಹಳ್ಳಿಯ ಬಿಎಂಟಿಸಿ ಡಿಪೋದಲ್ಲಿ (Bmtc Depot) ನೇಣು ಬಿಗಿದುಕೊಂಡು ಬಿಎಂಟಿಸಿ ಚಾಲಕ ಆತ್ಮಹತ್ಯೆ (Self Harming) ಮಾಡಿಕೊಂಡಿರುವ ಘಟನೆ ನಡೆದಿದೆ. ತಾಲೂಕಿನ‌ ಆವತಿ ಮೂಲದ ನಾಗೇಶ್ ( 45 ) ಆತ್ಮಹತ್ಯೆಗೆ ಶರಣಾದ ಚಾಲಕ.

ನಾಗೇಶ್ ಚಾಲಕ‌ ಕಂ ನಿರ್ವಾಹಕನಾಗಿ‌ ಬಿಎಂಟಿಸಿಯಲ್ಲಿ ಕೆಲಸ ಮಾಡುತ್ತಿದ್ದರು. ಕಳೆದ ಕೆಲ ದಿನಗಳಿಂದ ಮಾನಸಿಕವಾಗಿ ನೊಂದಿದ್ದರು. ಜತೆಗೆ ಕೆಲಸದ ಸ್ಥಳದಲ್ಲಿ ಕಿರುಕುಳ ಹೆಚ್ಚಾಗಿತ್ತು ಎನ್ನಲಾಗಿದೆ. ನಿನ್ನೆ ಕೆಲಸ ಮುಗಿಸಿ ಮನೆಗೆ ತೆರಳಿದ್ದ ನಾಗೇಶ್‌, ಪುನಃ ಮಧ್ಯರಾತ್ರಿ ಡಿಪೋಗೆ ಬಂದಿದ್ದಾರೆ. ಡಿಪೋ ಮ್ಯಾನೇಜರ್ ಕೊಠಡಿ ಎದುರಿಗೆ ಕಾಂಪೌಂಡ್‌ನ ಮೇಲಿದ್ದ ಕಂಬಿಗೆ ಹಗ್ಗದಿಂದ ನೇಣು ಬೀಗಿದುಕೊಂಡಿದ್ದಾರೆ.

ಡಿಪೋ ಮ್ಯಾನೇಜರ್‌ ಕೊಠಡಿ ಎದುರಿಗೆ ನೇಣಿಗೆ ಶರಣಾದ ನಾಗೇಶ್‌

ಮಂಗಳವಾರ ಬೆಳಗ್ಗೆ ಇತರೆ ಸಿಬ್ಬಂದಿ ಇದನ್ನೂ ನೋಡಿ ದೇವನಹಳ್ಳಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ದೇವನಹಳ್ಳಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಆಸ್ಪತ್ರೆಗೆ ರವಾನಿಸಿದ್ದಾರೆ. ಬೆಂಗಳೂರು ಗ್ರಾಮಾಂತರ ಜಿಲ್ಲೆ‌ಯ ದೇವನಹಳ್ಳಿ ಪಟ್ಟಣದ ಡಿಪೋದಲ್ಲಿ ಈ ದುರ್ಘಟನೆ ನಡೆದಿದ್ದು, ಪೊಲೀಸರು ತನಿಖೆಯನ್ನು ಮುಂದುವರಿಸಿದ್ದಾರೆ.

ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version