Site icon Vistara News

Sexual harrassement | ಬಾಲಕಿಯ ಮುಂದೆ ಖಾಸಗಿ ಭಾಗಗಳ ಪ್ರದರ್ಶನ ಮಾಡಿದವನಿಗೆ ಠಾಣೆಯಲ್ಲೇ ಜಾಮೀನು!

harrassement

ಮಂಡ್ಯ: ಮಳವಳ್ಳಿಯಲ್ಲಿ ಖಾಸಗಿ ಟ್ಯೂಷನ್‌ ಶಿಕ್ಷಕನೊಬ್ಬ ಬಾಲಕಿಯೊಬ್ಬಳ ಮೇಲೆ ಅತ್ಯಾಚಾರ ಮಾಡಿ ಕೊಲೆ ಮಾಡಿದ ಘಟನೆ ಇನ್ನೂ ಹಸಿಯಾಗಿರುವಾಗಲೇ ಶ್ರೀರಂಗಪಟ್ಟಣದಲ್ಲಿ ಕುರಿ ಕಾಯುತ್ತಿದ್ದ ವ್ಯಕ್ತಿಯೊಬ್ಬ ಬಾಲಕಿಯ ಮುಂದೆ ಅಸಭ್ಯವಾಗಿ ನಡೆದುಕೊಂಡಿದ್ದಾನೆ. ಈ ಬಗ್ಗೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರಾದರೂ ಠಾಣೆಯಲ್ಲೇ ಜಾಮೀನು ನೀಡಿ ಕಳುಹಿಸಿಕೊಟ್ಟಿರುವುದು ಭಾರಿ ಚರ್ಚೆಗೆ ಕಾರಣವಾಗಿದೆ.

ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನ‌ ಕೆ ಆರ್ ಎಸ್ ಪೊಲೀಸ್‌ ಠಾಣೆ ವ್ಯಾಪ್ತಿಗೆ ಬರುವ ಹೊಂಗಳ್ಳಿ ಗ್ರಾಮದ ನಿವಾಸಿ ಕುರಿಗಾಹಿ ನಾಗೇಶ್ (55) ಎಂಬಾತನೇ ಈ ರೀತಿ ಅಸಭ್ಯವಾಗಿ ವರ್ತಿಸಿದವನು. ಈತ ಕುರಿ ಕಾಯುತ್ತಿದ್ದ ವೇಳೆ ಕ್ವಾರ್ಟರ್ಸ್‌ನ ಒಂದರ ಮುಂದೆ ಹೋಗುತ್ತಿದ್ದಾಗ, ಮನೆ ಮುಂದೆ ಕುಳಿತಿದ್ದ ೧೧ ವರ್ಷದ ಬಾಲಕಿಗೆ ತನ್ನ ಖಾಸಗಿ ಭಾಗವನ್ನು ತೋರಿಸಿ ಸನ್ನೆ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ.

ಬಟ್ಟೆ ಬಿಚ್ಚಿ ಈ ರೀತಿ ಅಸಭ್ಯವಾಗಿ ವರ್ತಿಸಿದ್ದನ್ನು ಬಾಲಕಿ ಕೂಡಲೇ ತನ್ನ ಅಮ್ಮನಿಗೆ ತಿಳಿಸಿದ್ದಾಳೆ. ಆಗ ಆಕೆಯ ತಾಯಿ ಮೊಬೈಲ್‌ನಲ್ಲಿ ವಿಡಿಯೊ ಮಾಡುವಂತೆ ಹೇಳಿದ್ದಾರೆ. ಇದಾದ ಬಳಿಕ ಈ ವಿಡಿಯೊದ ಆಧಾರದಲ್ಲೇ ಪೊಲೀಸರಿಗೆ ದೂರು ನೀಡಲಾಗಿತ್ತು.

ಪೊಲೀಸರು ತಾವು ಪೋಕ್ಸೊ ಕಾಯಿದೆಯಡಿ ಪ್ರಕರಣ ದಾಖಲಿಸುತ್ತಿರುವುದಾಗಿ ತಿಳಿಸಿದ್ದಾರಾದರೂ ಆರೋಪಿ ನಾಗೇಶ್‌ಗೆ ಠಾಣೆಯಲ್ಲೇ ಜಾಮೀನು ನೀಡಿ ನೋಟಿಸ್‌ ನೀಡಿ ಕಳುಹಿಸಿದ್ದಾರೆ ಎನ್ನಲಾಗಿದೆ. ಇದು ಸಾರ್ವಜನಿಕರನ್ನು ಕೆರಳಿಸಿದೆ.

ಸೂಕ್ತ ಕ್ರಮಕ್ಕೆ ಆಗ್ರಹಿಸಿದ ಶಾಸಕ ಶ್ರೀಕಂಠಯ್ಯ
ಆರೋಪಿಗೆ ಠಾಣೆಯಲ್ಲೇ ಜಾಮೀನು ನೀಡಿ ಕಳುಹಿಸಿದ ಪೊಲೀಸರ ಕ್ರಮದ ವಿರುದ್ಧ ಗ್ರಾಮಸ್ಥರು ಸಿಟ್ಟಿಗೆದ್ದಿದ್ದು, ವಿಷಯವನ್ನು ಶ್ರೀರಂಗಪಟ್ಟಣ ಶಾಸಕ ರವೀಂದ್ರ ಶ್ರೀಕಂಠಯ್ಯ ಅವರಿಗೆ ತಲುಪಿಸಿದ್ದಾರೆ. ರವೀಂದ್ರ ಅವರು ಎಸ್ ಪಿ ಅವರಿಗೆ ಕರೆ ಮಾಡಿ ಸೂಕ್ತ ಕ್ರಮ ವಹಿಸುವಂತೆ ಸೂಚಿಸಿದ್ದಾರೆ. ಮಳವಳ್ಳಿಯಲ್ಲಿ ನಡೆದಿರುವ ಘಟನೆಯನ್ನು ನೆನಪಿನಲ್ಲಿಟ್ಟುಕೊಂಡು ಇಂಥ ಕಾಮುಕರಿಗೆ ಸರಿಯಾದ ಶಿಕ್ಷೆ ನೀಡಬೇಕು ಎಂದು ಅವರು ಮನವಿ ಮಾಡಿದ್ದಾರೆ.

ಇದನ್ನೂ ಓದಿ | ಮಳವಳ್ಳಿ ಬಾಲಕಿ ಕೊಲೆ | ಅತ್ಯಾಚಾರ ಎಸಗಿದವನಿಗೆ ಊಟ-ತಿಂಡಿ ಕೊಡಬೇಡಿ, ಗಲ್ಲು ಶಿಕ್ಷೆಯಾಗಲಿ; ಪೋಷಕರ ಆಕ್ರೋಶ

Exit mobile version