Site icon Vistara News

Shakti Scheme: ಉಚಿತ ಬಸ್ ಪ್ರಯಾಣ ಯೋಜನೆ ನಿಲ್ಲಲ್ಲ ಎಂದ ಸಚಿವ ಚಲುವರಾಯಸ್ವಾಮಿ

Minister Chaluvarayaswamy

ಹಾಸನ: ರಾಜ್ಯದಲ್ಲಿ ಮಹಿಳೆಯರ ಉಚಿತ ಬಸ್ ಪ್ರಯಾಣದ ಶಕ್ತಿ ಯೋಜನೆ (Shakti Scheme) ಸ್ಥಗಿತಗೊಳ್ಳುವುದಿಲ್ಲ. ವಿರೋಧ ಪಕ್ಷದವರೋ ಅಥವಾ ಯಾರು ಈ ರೀತಿಯಲ್ಲಿ ಸುಳ್ಳು ಸುದ್ದಿ ಹಬ್ಬಿಸಿದ್ದಾರೋ ಗೊತ್ತಿಲ್ಲ. ಯಾವುದೇ ಕಾರಣದಿಂದ ಈ ಯೋಜನೆ ಸ್ಥಗಿತವಾಗುವುದಿಲ್ಲ ಎಂದು ಕೃಷಿ ಸಚಿವ ಚಲುವರಾಯಸ್ವಾಮಿ ಹೇಳಿದರು.

ಶಕ್ತಿ ಯೋಜನೆ ಬಂದ್‌ ಆಗಲಿದೆ ಎಂಬ ವದಂತಿ ಬಗ್ಗೆ ಅರಸೀಕೆರೆ ತಾಲೂಕಿನ ಕೋಡಿ ಮಠದಲ್ಲಿ ಸಚಿವರು ಪ್ರತಿಕ್ರಿಯಿಸಿದ್ದಾರೆ. ಇದೇ ವೇಳೆ ಎರಡು ವರ್ಷದ ಬಳಿಕ ಹಿರಿಯ ಸಚಿವರು ಬದಲಾವಣೆಗೆ ಸಿದ್ಧರಾಗಬೇಕು ಎಂಬ ಸಚಿವ ಕೆ.ಎಚ್‌.ಮುನಿಯಪ್ಪ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಅದು ಅವರ ವೈಯಕ್ತಿಕ ಅಭಿಪ್ರಾಯ, ಅದರಲ್ಲಿ ತಪ್ಪೇನಿದೆ. ಅಧಿಕಾರ ಹಂಚಿಕೆ ಬಗ್ಗೆ ಈವರೆಗೆ ಚರ್ಚೆ ಆಗಿಲ್ಲ. ಆದರೆ, ಬೇರೆಯವರಿಗೂ ಅಧಿಕಾರ ಕೊಡುವುದು ತಪ್ಪೇನಲ್ಲವಲ್ಲ ಎಂದು ತಿಳಿಸಿದರು.

ಶಿವಲಿಂಗೇಗೌಡ ಮುಂದೆ ಸಚಿವರಾಗುತ್ತಾರಾ ಎಂಬ ಚರ್ಚೆ ವಿಚಾರಕ್ಕೆ ಸ್ಪಂದಿಸಿ, ಅವರಿಗೆ ಮುಂದೆ ಒಳ್ಳೆಯದಾಗುತ್ತದೆ ಎಂದು ಹೇಳಿದ್ದೇನೆ. ಆದರೆ ಎಲ್ಲವನ್ನೂ ಪಕ್ಷ ತೀರ್ಮಾನ ಮಾಡುತ್ತದೆ ಎಂದು ಹೇಳಿದರು.

ಇದನ್ನೂ ಓದಿ | Karnataka Politics : ನಿಗಮ-ಮಂಡಳಿ ಮಾನದಂಡ ಅರ್ಜಿ ಹೊರಬಿಟ್ಟ ಕೆಪಿಸಿಸಿ; ಹಿಂದಿದೆ ದೊಡ್ಡ ಲೆಕ್ಕಾಚಾರ!

ಸಚಿವದ್ವಯರಾದ ಚಲುವರಾಯಸ್ವಾಮಿ ಹಾಗೂ ಜಮೀರ್ ಅಹಮದ್ ನಡುವೆ ಬಿರುಕು ಮೂಡಿದೆ ಎಂಬ ಮಾಗಮಂಗಲ ಮಾಜಿ ಶಾಸಕ ಸುರೇಶ್‌ ಗೌಡ ಹೇಳಿಕೆಗೆ ಪ್ರತಿಕ್ರಿಯಿಸಿ, ಅದನ್ನು ಹೇಳೋಕೆ ಅವರ‍್ಯಾರು? ಜಮೀರ್‌ ಮತ್ತು ನಾನು ದೂರ ಆಗುತ್ತೀವೋ ಹತ್ತಿರವಾಗುತ್ತೀವೋ ಅದು ನಮ್ಮಿಬ್ಬರ ವಿಚಾರ. ಬೇರೆಯವರು ಇದರ ಮಧ್ಯೆ ಬಾಯಿ ಹಾಕುವ ಅಗತ್ಯವೇನಿದೆ. ಇಲ್ಲ ಸಲ್ಲದ್ದು ಮಾತಾಡಿ ಏನೋ ಒಂದು ಪ್ರಚಾರ ಪಡೆಯೋದು ಯಾಕೆ ಎಂದು ಆಕ್ರೋಶ ಹೊರಹಾಕಿದರು.

ಮಾಟ, ಮಂತ್ರ, ವಾಮಚಾರ ಮಾಡಿಸುವುದೇ ಚಲುವರಾಯಸ್ವಾಮಿ ಕೆಲಸ: ಸುರೇಶ್‌ ಗೌಡ ಕಿಡಿ

ಸಚಿವ ಎನ್. ಚಲುವರಾಯಸ್ವಾಮಿ‌ ಮತ್ತು ನಾಗಮಂಗಲ ಮಾಜಿ ಶಾಸಕ ಸುರೇಶ್‌ ಗೌಡ

ಮಂಡ್ಯ: ಚಲುವರಾಯಸ್ವಾಮಿಯ ಅದೃಷ್ಟ ಚೆನ್ನಾಗಿದೆ ಆತ ಗೆದ್ದಾಗೆಲ್ಲ ಅಧಿಕಾರ ಸಿಕ್ಕಿ, ದುಡ್ಡು ಮಾಡುತ್ತಾನೆ. ಮಾಟ, ಮಂತ್ರ, ವಾಮಚಾರ ಮಾಡಿಸುವುದೆ ಈತನ ಕೆಲಸ ಎಂದು ಸಚಿವ ಚಲುವರಾಯಸ್ವಾಮಿ ವಿರುದ್ಧ ನಾಗಮಂಗಲ ಮಾಜಿ ಶಾಸಕ ಸುರೇಶ್‌ ಗೌಡ ಏಕವಚನದಲ್ಲಿ ಆಕ್ರೋಶ ಹೊರಹಾಕಿದ್ದಾರೆ.

ನಾಗಮಂಗಲದ ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಸತ್ಯವನ್ನ ಸುಳ್ಳು ಸುಳ್ಳು ಎಂದು ಹತ್ತು ಬಾರಿ ಹೇಳಿ ಸುಳ್ಳು ಮಾಡುತ್ತಾನೆ. ನಾವು ಗೆದ್ದಾಗ ವಿರೋಧ ಪಕ್ಷದಲ್ಲಿ ಕೂತು ಬಾಯಿ ಬಡಿದುಕೊಳ್ಳುತ್ತೇವೆ. ಜನಸಾಮಾನ್ಯರು ಚಲುವರಾಯಸ್ವಾಮಿ ವಿರುದ್ಧ ರೊಚ್ಚಿಗೆದ್ದಿದ್ದಾರೆ. ನಮ್ಮ ಕಾರ್ಯಕರ್ತರನ್ನು ಟಾರ್ಗೆಟ್ ಮಾಡಿದರೆ ನಾವು ಸುಮ್ಮನಿರಲ್ಲ. ಪುಟ್ಟೇಗೌಡರಿಗೆ ಈತ ಬಿಡಿ, ಸಿಗರೇಟ್ ತಂದು ಕೊಡುತ್ತಿದ್ದದ್ದು ಸುಳ್ಳಾ? ಶಿವರಾಮೇಗೌಡ ಬಳಿ 5 ಸಾವಿರಕ್ಕೆ ಬಂದಿದ್ದದ್ದು ಸುಳ್ಳಾ? ಈತನನ್ನ ಜಿ.ಪಂನಲ್ಲಿ ಗೆಲ್ಲಿಸಿ, ಉಪಾಧ್ಯಕ್ಷ, ಶಾಸಕ, ಸಚಿವ, ಎಂಪಿಯನ್ನಾಗಿಸಿದ್ದು ಜೆಡಿಎಸ್‌. ಚಲುವರಾಯಸ್ವಾಮಿಗೆ ನಿಯತ್ತಿಲ್ಲ, ಹಿಟ್ಟಿಕ್ಕಿದವಳನ್ನೇ ಇಟ್ಟುಕೊಳ್ಳುವವರನ್ನು ಏನು ಅಂತ ಕರಿಯೋದು ಎಂದು ಕಿಡಿಕಾರಿದರು.

ನನ್ನ ಚರಿತ್ರೆ ಬಗ್ಗೆ ಮಾತನಾಡುತ್ತಾನೆ. ಇವನ ಚರಿತ್ರೆ ಹಳಸಿ ಹೋಗಿದೆ. ಇವನ ತಟ್ಟೆಯಲ್ಲಿ ಹೆಗ್ಗಣ ಬಿದ್ದಿದೆ, ನೊಣ ಬಿದ್ದ ನಮ್ಮ ತಟ್ಟೆ ನೋಡುತ್ತಾನೆ. ನಾನು ಸೋತಿದ್ದೇನಿ, ಸತ್ತಿಲ್ಲ. 30-40 ಸಾವಿರ ಓಟುಗಳ ಅಂತರದಲ್ಲಿ ಸೋತಿದ್ದರೆ ರಾಜಕಾರಣವನ್ನೇ ಬಿಟ್ಟು ಬಿಟ್ಟುಬಿಡುತ್ತಿದ್ದೆ. 47 ಸಾವಿರ ಅಂತರದಲ್ಲಿ ಸೋತವನೆ ತಲೆ ಎತ್ತಿಕೊಂಡು ಬಂದಿದ್ದಾನೆ. ನಾನು 4 ಸಾವಿರದಲ್ಲಿ ಸೋತವನು, ನಾನ್ಯಾಕೆ ತಲೆ ಕೆಡಿಸಿಕೊಳ್ಳಬೇಕು. ನಾನು ಎಲ್ಲರಿಗೂ ಗೌರವ ಕೊಡುತ್ತೇನೆ. ಆದರೆ ಚಲುವರಾಯಸ್ವಾಮಿ ಬಗ್ಗೆ ನನಗೆ ಭಯವೂ ಇಲ್ಲ, ಗೌರವವೂ ಇಲ್ಲ ಎಂದು ಹರಿಹಾಯ್ದರು.

ಚಲುವರಾಯಸ್ವಾಮಿಗೆ ಬ್ರೈನ್ ಮ್ಯಾಪಿಂಗ್ ಮಾಡಬೇಕು

ಚಲುವರಾಯಸ್ವಾಮಿಗೆ ಬ್ರೈನ್ ಮ್ಯಾಪಿಂಗ್ ಮಾಡಬೇಕು. ಆಗ ಎಲ್ಲೆಲ್ಲಿ ಎಷ್ಟೆಷ್ಟು ತಿಂದಿದ್ದಾನೆ ಗೊತ್ತಾಗುತ್ತದೆ. ಬೆಂಗಳೂರಿನಲ್ಲಿ ಸೌಹಾರ್ದ ಕೋ ಆಪರೇಟಿವ್ ಸೊಸೈಟಿ ಇದೆ. ಅದು ಕಾಂಗ್ರೆಸ್ ಪಕ್ಷದ ಯುವ ಅಧ್ಯಕ್ಷನದು. ಅಲ್ಲಿ ಚಲುವರಾಯಸ್ವಾಮಿ ಎಷ್ಟು ಬ್ಲಾಕ್‌ ಮನಿ ವೈಟ್ ಮಾಡಿದ್ದಾನೋ ಅದೆಲ್ಲವೂ ಹೊರಗೆ ಬರುತ್ತದೆ, ಇ.ಡಿ. ತನಿಖೆ ಮಾಡಲಿದೆ ಎಂದು ಮಾಜಿ ಶಾಸಕ ಸುರೇಶ್‌ ಗೌಡ ಹೇಳಿದ್ದಾರೆ.

ಬೆಳ್ಳೂರು ಕ್ರಾಸ್‌ನಲ್ಲಿ ಪೆಟ್ರೋಲ್ ಬ್ಯಾಂಕ್ ಮಾಲೀಕರ ಬಳಿ ಎಷ್ಟು ಕಲೆಕ್ಷನ್ ಮಾಡುತ್ತಿದ್ದಾನೆ ಎಂಬುವುದು ಜನರಿಗೆ ಗೊತ್ತಿದೆ. ಮೆಜೆಸ್ಟಿಕ್‌ನಲ್ಲಿರುವ ಕೋ ಆಪರೇಟಿವ್ ಸೊಸೈಟಿ ಸರಿಯಾಗಿ ತನಿಖೆ ನಡೆಸಿದರೆ ಸಾಕು. ಬ್ಲಾಕ್ ಹೇಗೆ ವೈಟ್ ಆಗುತ್ತಿದೆ ಎಂಬುವುದು ತಿಳಿಯುತ್ತದೆ. ಯಾವ ಯಾವ ಥಿಯೇಟರ್‌ ತೆಗೆದುಕೊಳ್ಳಲು ಸಹಾಯ ಆಗಿದೆ ಗೊತ್ತಾಗುತ್ತದೆ. ತಿಂದವನು ಕಕ್ಕಲೇ ಬೇಕು, ಎಲ್ಲ ಮುಂದೆ ಗೊತ್ತಾಗುತ್ತದೆ ಎಂದು ತಿಳಿಸಿದ್ದಾರೆ.

ಅಧಿಕಾರಿಗಳು ಪತ್ರ ಬರೆದದ್ದು ಸತ್ಯ

ಬೆಂಗಳೂರಿ‌ನ 37 ಕ್ರೆಸೆಂಟ್ ಹೋಟೆಲ್‌ಗೆ ಕರೆಸಿಕೊಂಡು ಅಧಿಕಾರಿಗಳ ಮೇಲೆ ಚಲುವರಾಯಸ್ವಾಮಿ ಒತ್ತಡ ಹೇರಿದ್ದಾರೆ. ಎಲ್ಲಾ ಬಿಗಿ ಭದ್ರತೆ ಮಾಡಿಕೊಂಡು, ಅಧಿಕಾರಿಗಳ ಬಳಿ ಪತ್ರ ಬರೆದಿಲ್ಲ ಎಂದು ಸುಳ್ಳು ಹೇಳಿದ್ದಾರೆ.
ಹೋಟೆಲ್ ಹಾಗೂ ಆ ರಸ್ತೆಯ ಸಿಸಿಟಿವಿ ದೃಶ್ಯ ತೆಗೆಸಿ. ಆಗ ಯಾವ ಎಡಿ, ಜೆಡಿ ಯಾರೆಲ್ಲಾ ಹೋಗಿದ್ದರು ಎಂಬುವುದು ತಿಳಿಯುತ್ತದೆ. ಪೊಲೀಸರು ಇವರನ್ನು ಕೇಳಿ ತನಿಖೆ ಮಾಡುತ್ತಾರೆ. ಅಮಾಯಕರನ್ನು ಸಿಲುಕಿಸುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಸಚಿವರ ವಿರುದ್ಧದ ಲಂಚಕ್ಕೆ ಬೇಡಿಕೆ ಆರೋಪದ ಬಗ್ಗೆ ಸುರೇಶ್‌ ಗೌಡ ಆರೋಪಿಸಿದರು.

ಭ್ರಷ್ಟಾಚಾರದಲ್ಲಿ ಚಲುವರಾಯಸ್ವಾಮಿಗೆ ಮೊದಲ ಸ್ಥಾನ

ಭ್ರಷ್ಟಾಚಾರದಲ್ಲಿ ಚಲುವರಾಯಸ್ವಾಮಿಗೆ ಮೊದಲ ಸ್ಥಾನ. ಆತ 300-400 ಕೋಟಿ ರೂ. ಲೂಟಿ ಹೊಡೆದಿದ್ದಾನೆ. ಕಾಂಗ್ರೆಸ್ ಸರ್ಕಾರ ಭ್ರಷ್ಟಾಚಾರ ಮಾಡಿ ದುಡ್ಡನ್ನು ಏರ್‌ಲಿಫ್ಟ್ ಮಾಡುತ್ತಿದೆ. ಹಿಂದಿನ ಸರ್ಕಾರದಲ್ಲಿ ಜೆಸಿಬಿಯಲ್ಲಿ ಹಣ ತುಂಬುತ್ತಿದ್ದಾರೆ ಎನ್ನುತ್ತಿದ್ದರು. ಆದರೆ ಈ ಸರ್ಕಾರ ಭ್ರಷ್ಟ ಹಣವನ್ನು ಏರ್‌ಲಿಫ್ಟ್ ಮಾಡುತ್ತಿದೆ. ರಾಜ್ಯವನ್ನೇ ಲೂಟಿ ಹೊಡೆಯುತ್ತಿದ್ದಾರೆ ಮಂಡ್ಯದಲ್ಲಿ ಚಲುವರಾಯಸ್ವಾಮಿ ವಿರುದ್ಧ ಸುರೇಶ್ ಗೌಡ ವಾಗ್ದಾಳಿ ನಡೆಸಿದರು.

ಅಧಿಕಾರ ಸಿಕ್ಕಾಗ ಜನರಿಗೆ ಒಳ್ಳೆಯದು ಮಾಡಬೇಕು. ಕಡಿಮೆ ಎಂದರೂ ಇಲ್ಲಿವರೆಗೆ 300-400 ಕೋಟಿ ಲೂಟಿ ಹೊಡೆದಿದ್ದಾನೆ. ಟ್ರಾನ್ಸ್‌ಫರ್‌ನಲ್ಲಿ 150 ಕೋಟಿ, ಜಲಧಾರೆ ಯೋಜನೆ 100 ಕೋಟಿ, ಅಧಿಕಾರಿಗಳ ಬಳಿ ಲೂಟಿ ಸೇರಿ
300 ಕೋಟಿ ರೂ.ಗಳನ್ನು ಚಲುವರಾಯಸ್ವಾಮಿ ಒಬ್ಬರೇ ಮಾಡಿದ್ದಾರೆ. ಲೋಕಸಭೆ ಚುನಾವಣೆಗೆ ಕಾಂಗ್ರೆಸ್‌ ಪಕ್ಷಕ್ಕೆ ಕರ್ನಾಟಕದಿಂದ ಫಂಡ್ ಹೋಗುತ್ತಿದೆ. ಬಿಜೆಪಿ ಸರ್ಕಾರವೇ ಪರವಾಗಿರಲಿಲ್ಲ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ ಎಂದು ತಿಳಿಸಿದರು.

ಇದನ್ನೂ ಓದಿ | Gruha Lakshmi : ಗೃಹಲಕ್ಷ್ಮಿ ಅಡಿ ಹಾಕಿಕೊಂಡಿದ್ದ ಸ್ಕೀಂ ಫ್ಲಾಪ್!‌ ಡಿ.ಕೆ. ಶಿವಕುಮಾರ್‌ ಅಸಮಾಧಾನ

ಕುಮಾರಸ್ವಾಮಿ ವಿದೇಶ ಪ್ರವಾಸದ ಬಗ್ಗೆ ಚಲುವರಾಯಸ್ವಾಮಿ ಮಾತನಾಡುತ್ತಾನೆ. ಕುಮಾರಣ್ಣ ಯಾವುದಾದರೂ ಕ್ಯಾಸಿನೋಗೆ ಇಸ್ಪೀಟ್ ಆಡಲು ಹೋಗಿದ್ದರೇ? ಆದರೆ ಚಲುವರಾಯಸ್ವಾಮಿ ಆ ಕೆಲಸ ಮಾಡುತ್ತಾನೆ. ಎಲ್ಲೆಲ್ಲಿ ಜಮೀರ್ ಹೆಸರು ದುರ್ಬಳಕೆ ಆಗಿತ್ತು, ಏನೇನಾಗಿತ್ತು ಮುಂದಿನ ದಿನಗಳಲ್ಲಿ ತಿಳಿಸುತ್ತೇನೆ. ಜತೆಯಲ್ಲಿ ವ್ಯಾಪಾರ ಮಾಡಿಕೊಂಡು ಹೋದ ಜಮೀರ್, ಚಲುವರಾಯಸ್ವಾಮಿ ದೋಸ್ತಿಗಳು, ಆಪ್ತಮಿತ್ತರು. ಆದರೆ ಅವರು ಈಗ್ಯಾಕೆ ಮಾತನಾಡುತ್ತಿಲ್ಲ. ಒಂದು ಕಾಲದಲ್ಲಿ ಜಮೀರ್ ಸಾಹೇಬರು ಆತನಿಗೆ ನೆಂಟರಲ್ಲವಾ? ಈಗ್ಯಾಕೆ ಇಲ್ಲ. ಈತ ಮಿತ್ರದೋಹಿ ಕೆಲಸವನ್ನು ಕರಗತ ಮಾಡಿಕೊಂಡಿರುವವನು. ಇವನು ಕುಮಾರಣ್ಣನ ಬಗ್ಗೆ ಮಾತನಾಡುತ್ತಾನೆ ಎಂದು ಸುರೇಶಗೌಡ ವಾಗ್ದಾಳಿ ನಡೆಸಿದ್ದಾರೆ.

Exit mobile version