Site icon Vistara News

Shivamogga terror : ಫೋಟೊ ಮುಂದಿಟ್ಟುಕೊಂಡು ಬಿಜೆಪಿ ಸ್ನೇಹಿತರು ಬಾಯಿಯಿಂದ ಭೇದಿ ಮಾಡುತ್ತಿದ್ದಾರೆ: ಯು.ಟಿ. ಖಾದರ್‌

UT Khadar tweet ಶಿವಮೊಗ್ಗ ಟೆರರ್‌ ಬ್ಲಾಸ್ಟ್‌

ಮಂಗಳೂರು: ಶಿವಮೊಗ್ಗ ಟ್ರಯಲ್‌ ಬಾಂಬ್‌ ಬ್ಲಾಸ್ಟ್‌ (Shivamogga terror) ಪ್ರಕರಣಕ್ಕೆ ಸಂಬಂಧಪಟ್ಟಂತೆ ಎನ್‌ಐಎ ವಶಕ್ಕೆ ತೆಗೆದುಕೊಂಡಿರುವ ವಿದ್ಯಾರ್ಥಿಯ ತಂದೆ ತಾಜುದ್ದೀನ್ ಹಾಗೂ ಕಾಂಗ್ರೆಸ್‌ ನಾಯಕರು ಜತೆಗಿರುವ ಫೋಟೋ ಬಗ್ಗೆ ಪ್ರತಿಕ್ರಿಯೆ ನೀಡಿರುವ ಶಾಸಕ ಯು.ಟಿ. ಖಾದರ್‌, “ಫೋಟೋ ಮುಂದಿಟ್ಟುಕೊಂಡು ಬಿಜೆಪಿ ಸ್ನೇಹಿತರು ಬಾಯಿಯಿಂದ ಭೇದಿ ಮಾಡುತ್ತಿದ್ದಾರೆ ಎಂದು ಹರಿಹಾಯ್ದಿದ್ದಾರೆ.

ಮಂಗಳೂರಿನ ಪಿಎ ಎಂಜಿನಿಯರಿಂಗ್‌ ಕಾಲೇಜಿಗೆ ದಾಳಿ ನಡೆಸಿದ್ದ ಎನ್‌ಐಎ ಉಡುಪಿ ಮೂಲದ ವಿದ್ಯಾರ್ಥಿ ರೇಶಾನ್‌ ತಾಜುದ್ದೀನ್‌ ಶೇಖ್‌ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಇದೇ ವೇಳೆ ಬಂಧಿತ ರೇಶಾನ್‌ ತಂದೆಯು ಕಾಂಗ್ರೆಸ್‌ ಕಾರ್ಯಕರ್ತರಾಗಿದ್ದು, ತಾಜುದ್ದೀನ್‌ ಕರಾವಳಿಯ ಕಾಂಗ್ರೆಸ್‌ ನಾಯಕರು ಸೇರಿದಂತೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಸೇರಿದಂತೆ ಮತ್ತಿತರ ನಾಯಕರ ಜತೆಗಿರುವ ಫೋಟೊ ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿದೆ. ಅಲ್ಲದೆ, ಈ ಬಗ್ಗೆ ಬಿಜೆಪಿಯ ಕೆಲವರು ಸಹ ಪೋಸ್ಟ್‌ ಮಾಡಿ ಟೀಕಿಸಿದ್ದರು ಎಂದು ಹೇಳಲಾಗಿದೆ. ಇದರಿಂದ ಆಕ್ರೋಶಗೊಂಡಿರುವ ಯು.ಟಿ. ಖಾದರ್‌, ಈ ಬಗ್ಗೆ ಟ್ವೀಟ್‌ ಮೂಲಕ ಪ್ರತಿಕ್ರಿಯೆ ನೀಡಿ ಟ್ರೋಲ್‌ ಮಾಡುತ್ತಿರುವವರಿಗೆ ತಿರುಗೇಟು ನೀಡಿದ್ದಾರೆ.

ಫೋಟೋ ಮುಂದಿಟ್ಟುಕೊಂಡು ಬಿಜೆಪಿ ಸ್ನೇಹಿತರು ಬಾಯಿಯಿಂದ ಭೇದಿ ಮಾಡುತ್ತಿದ್ದಾರೆ. ನಮಗೂ‌ ಆತನಿಗೂ ಯಾವುದೇ ಸಂಬಂಧ ಇಲ್ಲ. ಬಿಜೆಪಿ ಅಧೀನದಲ್ಲಿರುವ ಎನ್‌ಐಎ ಈ ಬಗ್ಗೆ ನಿಷ್ಪಕ್ಷಪಾತ ತನಿಖೆಯನ್ನು ನಡೆಸಲಿ. “ತಪ್ಪು ಮಾಡಿದ್ದರೆ ಕಠಿಣ ಕ್ರಮ ಕೈಗೊಳ್ಳಲಿ ಎಂದು ಖಾದರ್‌ ಟ್ವೀಟ್‌ ಮೂಲಕ ಕಿಡಿಕಾರಿದ್ದಾರೆ.

ಇದನ್ನೂ ಓದಿ | Illegal cash found : ಕಾಂಗ್ರೆಸ್‌ ವಿಧಾನಸೌಧವನ್ನು ಬ್ಯಾಂಕ್ ಮಾಡಿಕೊಂಡಿತ್ತು; ಸಿಎಂ ಬಸವರಾಜ ಬೊಮ್ಮಾಯಿ

ಕಂತೆ ಕಂತೆ ನೋಟುಗಳನ್ನು ಹರಡಿ ಸೆಲ್ಫಿ ತೆಗೆದುಕೊಂಡು ಹಲ್ಲು ಕಿರಿಯುವ ವಿವಿಧ ದಂಧೆಯ ಕಿಂಗ್ ಪಿನ್ ಸ್ಯಾಂಟ್ರೋ ರವಿ ಬಿಜೆಪಿ ಸಚಿವರ, ನಾಯಕರ ಹಾಗೂ ಕುಟುಂಬಸ್ಥರ ಜತೆ ತೆಗೆಸಿಕೊಂಡಿರುವ ಫೋಟೋ ಬಗ್ಗೆ ಏಕೆ ಮಾತನಾಡುತ್ತಿಲ್ಲ ಎಂದೂ ಖಾದರ್‌ ಪ್ರಶ್ನಿಸಿದ್ದಾರೆ.

ಭಯೋತ್ಪಾದನೆಯನ್ನು ಬಿಜೆಪಿ ಬುಡ ಸಮೇತ ಮಟ್ಟ ಹಾಕುವ ಬದಲು, ಚುನಾವಣೆಗಾಗಿ ಫೋಟೊ ರಾಜಕೀಯ ಮಾಡುತ್ತಿರುವುದನ್ನು ಜನ ಗಮನಿಸಿ‌ ಸೂಕ್ತ ಉತ್ತರ ನೀಡಲಿದ್ದಾರೆ. ಸತ್ಯಮೇವ ಜಯತೆ ಎಂದು ಖಾದರ್‌ ಟ್ವೀಟ್‌ನಲ್ಲಿ ಹೇಳಿದ್ದಾರೆ.

ಇದನ್ನೂ ಓದಿ | Killer wife | ಪ್ರಿಯಕರನ ಜತೆ ಸೇರಿ ಪತಿಯನ್ನೇ ಕೊಂದಿದ್ದ ಪತ್ನಿ: 6 ತಿಂಗಳ ಬಳಿಕ ಸತ್ಯ ಬಾಯಿಬಿಟ್ಟ ಮಕ್ಕಳು!

Exit mobile version