Site icon Vistara News

Modi in Shivamogga : ಶಕ್ತಿಸ್ವರೂಪಿಣಿ ಮಹಿಳೆಯರ ನಾಶಕ್ಕೆ ಅವಕಾಶ ಕೊಡಲ್ಲ: ರಾಹುಲ್‌ ವಿರುದ್ಧ ಮೋದಿ ವಾಗ್ದಾಳಿ

Modi in Shivamogga Rahul Gandhi Shakti

ಬೆಂಗಳೂರು: ಮೋದಿ ಅವರು ರಾಜಕೀಯ ಶಕ್ತಿಯನ್ನು (Modi Shakti) ತಮ್ಮ ಕೈ ವಶ ಮಾಡಿಕೊಂಡಿದ್ದಾರೆ. ಅದರ ಮೂಲಕ ಎಲ್ಲವನ್ನೂ ನಿಯಂತ್ರಿಸುತ್ತಿದ್ದಾರೆ. ನಾವು ಆ ಶಕ್ತಿಯನ್ನು ನಾಶಪಡಿಸಬೇಕು ಎಂದು ಭಾರತ್‌ ಜೋಡೋ ನ್ಯಾಯ ಯಾತ್ರೆಯ (Bharat Jodo Nyaya Yatre) ಸಮಾರೋಪ ಸಮಾರಂಭದಲ್ಲಿ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಆಡಿದ ಮಾತುಗಳಿಗೆ ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ಬಿಗ್‌ ಟ್ವಿಸ್ಟ್‌ ನೀಡಿದ್ದು, ಹಿಂದೂ ಧರ್ಮದ ಅಸ್ಮಿತೆಯಾಗಿರುವ (Identity of Hindu Dharma) ʻಶಕ್ತಿʼಯ ನಾಶಕ್ಕೆ ಅವಕಾಶ ಕೊಡುವುದಿಲ್ಲ ಎಂದು ಘೋಷಿಸಿದ್ದಾರೆ.

ಶಿವಮೊಗ್ಗದಲ್ಲಿ ನಡೆದ (Modi in Shivamogga) ಬಿಜೆಪಿಯ ಲೋಕಸಭಾ ಚುನಾವಣಾ ಪ್ರಚಾರ (Lok Sabha Election 2024) ಸಭೆಯಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಅವರು ರಾಹುಲ್‌ ಗಾಂಧಿ ಅವರ ಹೆಸರು ಹೇಳದೆಯೇ ಕಾಂಗ್ರೆಸ್‌ ವಿರುದ್ಧ ಮುಗಿಬಿದ್ದರು.

ಮುಂಬಯಿಯ ಶಿವಾಜಿ ಪಾರ್ಕ್‌ನಲ್ಲಿ ನಿಂತು ಒಬ್ಬ ಕಾಂಗ್ರೆಸ್‌ ನಾಯಕ ಹಿಂದೂ ಧರ್ಮದ ʻಶಕ್ತಿʼಯನ್ನು ನಾಶ ಮಾಡಬೇಕು ಎಂದು ಕರೆ ಕೊಟ್ಟಿದ್ದಾರೆ. ಅವರು ಯಾವ ಶಕ್ತಿಯನ್ನು ನಾಶ ಮಾಡಲು ಹೊರಟಿದ್ದಾರೋ, ನಾವು ಶಕ್ತಿಯ ಉಪಾಸನೆ ಮಾಡುತ್ತಿದ್ದೇವೆ. ನಾನು ಇವತ್ತಿಗೂ ಶಕ್ತಿಯ ಉಪಾಸನೆ ಮಾಡುತ್ತಿದ್ದೇನೆ. ದೇಶದ ಕೋಟಿ ಕೋಟಿ ಜನರು ಶಕ್ತಿಯ ಉಪಾಸಕರಾಗಿದ್ದಾರೆ. ಅಂಥ ಶಕ್ತಿಯನ್ನು ನಾಶ ಮಾಡಲು ಬಿಡುವುದಿಲ್ಲ ಎಂದು ಹೇಳಿದರು.

ನನ್ನ ಪಾಲಿಗೆ ದೇಶದ ಮಹಿಳೆಯರೂ ಶಕ್ತಿಯೇ. ತಾಯಿ ಭಾರತಿಯೂ ಶಕ್ತಿ. ಅದಕ್ಕಾಗಿಯೇ ನಾವು ನಾರಿಶಕ್ತಿಗೆ ಬಲ ನೀಡಿದ್ದೇವೆ. ಚಂದ್ರಯಾನ ಯಶಸ್ವಿಯಾದಾಗ ಆ ಜಾಗಕ್ಕೆ ಶಿವ ಶಕ್ತಿ ಎಂಬ ಹೆಸರನ್ನು ಇಟ್ಟಿದ್ದೇವೆ. ನಾವು ಶಕ್ತಿಗೆ ಅಷ್ಟೊಂದು ಗೌರವ ನೀಡುತ್ತೇವೆ. ಆದರೆ, ಕೆಲವರು ಆ ಶಕ್ತಿಯನ್ನು ನಾಶ ಮಾಡಲು ಹೊರಟಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಯಾವ ಜಾಗದಲ್ಲಿ ಮಕ್ಕಳು ಜೈ ಭವಾನಿ, ಜೈ ಶಿವಾಜಿ ಎಂಬ ಘೋಷ ವಾಕ್ಯ ಕೇಳುತ್ತಿದ್ದರೋ ಅದೇ ಶಿವಾಜಿ ಪಾರ್ಕ್‌ನಲ್ಲಿ ಹಿಂದು ಶಕ್ತಿಯನ್ನು ನಾಶಗೊಳಿಸಲು ಕರೆ ಕೊಡುತಿದ್ದಾರೆ ಎಂದರೆ ಬಾಳಾ ಸಾಹೇಬ್‌ ಠಾಕ್ರೆ ಅವರ ಆತ್ಮಕ್ಕೆ ಎಷ್ಟೊಂದು ನೋವಾಗಿರಬಹುದು ಎಂದು ಮೋದಿ ಪ್ರಶ್ನಿಸಿದರು.

ಇದನ್ನೂ ಓದಿ : Modi in Shivamogga : ಕರ್ನಾಟಕದಲ್ಲಿ ಎಷ್ಟು ಸಿಎಂಗಳಿದ್ದಾರೆ ಗೊತ್ತಾ? ಇದು ಮೋದಿ ಲೆಕ್ಕ!

ಮಹಿಳೆಯರು ಕಾಂಗ್ರೆಸ್‌ ವಿರುದ್ಧ ಸಿಡಿದೇಳಬೇಕು ಎಂದ ಮೋದಿ

ಕೆಲವರು ನಾರಿ ಶಕ್ತಿ ಮೋದಿಯ ಮೌನ ಮತದಾರರು ಎಂದು ಹೇಳಿದ್ದರು. ಆದರೆ, ನನ್ನ ಪಾಲಿಗೆ ಮಹಿಳೆಯರೆಂದರೆ ತಾಯಿಯ ಶಕ್ತಿ. ಅವರು ಸಿಡಿದು ನಿಲ್ಲುವ ಶಕ್ತಿಯನ್ನು ಹೊಂದಿದ್ದಾರೆ. ಕಾಂಗ್ರೆಸ್‌ನವರಿಗೆ ಭಾರತೀಯ ನಾರಿಯರ ಸಬಲೀಕರಣ ಇಷ್ಟವಾಗುತ್ತಿಲ್ಲ, ಅವರು ಉದ್ದಾರವಾಗುವುದು ಬೇಕಾಗಿಲ್ಲ. ಸ್ತ್ರೀ ಶಕ್ತಿಯ ಅವತರಣದಿಂದಲೇ ಅತ್ಯಾಚಾರ ಅಂತ್ಯವಾಗುತ್ತದೆ. ಕಾಂಗ್ರೆಸ್‌ ಇದನ್ನೇ ಗೇಲಿ ಮಾಡಿದೆ. ಕಾಂಗ್ರೆಸ್‌ಗೆ ಈ ದೇಶದ ಮಹಿಳೆಯರು ಉತ್ತರ ನೀಡಬೇಕು ಎಂದು ಮೋದಿ ಹೇಳಿದರು.

ಇದೇ ವೇಳೆ ರಾಷ್ಟ್ರಕವಿ ಕುವೆಂಪು ಅವರ ಕವಿ ʻಮಂತ್ರ ಕಣಾ ಶಕ್ತಿ ಕಣಾ ತಾಯಿ ಕಣಾ ದೇವಿ ಕಣಾʼ ಎಂದು ಕನ್ನಡವನ್ನು ಕನ್ನಡದ ನೆಲವನ್ನು ಕೊಂಡಾಡಿದ ಬಗೆಯನ್ನು ನೆನಪಿಸಿದರು.

ಡಿ.ಕೆ ಸುರೇಶ್‌ ವಿರುದ್ಧ ಕೆಂಡ ಕಾರಿದ ನರೇಂದ್ರ ಮೋದಿ

ದೇಶದಿಂದ ಇಂಗ್ಲಿಷರನ್ನು ಹೊರಗೆ ಕಳುಹಿಸಲಾಗಿದೆ. ಆದರೆ, ಮಾನಸಿಕತೆ ಮಾತ್ರ ಕಾಂಗ್ರೆಸ್‌ನಲ್ಲಿ ಉಳಿದುಕೊಂಡಿದೆ. ದೇಶವನ್ನು ಜಾತಿ, ಧರ್ಮದ ಆಧಾರದಲ್ಲಿ ಒಡೆದಿದೆ. ಈಗಲೂ ಅದು ಮುಂದುವರಿದಿದೆ. ಕರ್ನಾಟಕದಲ್ಲಿ ಒಬ್ಬ ಸಂಸದ ದೇಶ ವಿಭಜನೆ ಮಾಡುವ ಮಾತನಾಡಿದ್ದಾರೆ. ಅವರನ್ನು ಪಕ್ಷದಿಂದ ಹೊರಹಾಕುವ ಬದಲು ರಕ್ಷಣೆ ಮಾಡುತ್ತಿದೆ. ಕಾಂಗ್ರೆಸ್‌ನ ಈ ಪ್ರಯತ್ನಗಳನ್ನು ನಾವು ಸಫಲವಾಗಲು ಬಿಡಬಾರದು. ಕಾಂಗ್ರೆಸ್‌ನ್ನು ಆರಿಸಿ ಆರಿಸಿ ಸೋಲಿಸಬೇಕು. ಎಂದು ಕರೆ ನೀಡಿದರು.

ರಾಹುಲ್‌ ಗಾಂಧಿ ಹೇಳಿಕೆಯ ವಿವಾದವೇನು?

ಭಾರತ್‌ ಜೋಡೋ ನ್ಯಾಯ ಯಾತ್ರೆಯ ಕೊನೆಯ ದಿನದಂದು ಮುಂಬಯಿಯ ಶಿವಾಜಿ ಪಾರ್ಕ್‌ನಲ್ಲಿ ಸಮಾರೋಪ ಸಮಾರಂಭ ಆಯೋಜಿಸಲಾಗಿತ್ತು. ಅದರಲ್ಲಿ ಮಾತನಾಡಿದ ರಾಹುಲ್‌ ಗಾಂಧಿಅ ವರು, ಇಲೆಕ್ಟ್ರಾನಿಕ್‌ ಮತ ಯಂತ್ರಗಳ ಬಗ್ಗೆ ತಮ್ಮ ಆಕ್ಷೇಪ ವ್ಯಕ್ತಪಡಿಸಿದರು. ಇವಿಎಂಗಳ ನಂಬಲರ್ಹತೆಯನ್ನು ರಾಜನಿಗೆ (ಪ್ರಧಾನಿ ಮೋದಿ) ಒತ್ತೆ ಇಡಲಾಗಿದೆ ಎಂದರು. ಅದರ ಜತೆಗೆ ಹೀಗಾಗಿ ವಿರೋಧ ಪಕ್ಷಗಳು ಆಡಳಿತದ ʻಶಕ್ತಿʼಯ ವಿರುದ್ಧ ಹೋರಾಡಬೇಕಾಗಿದೆ ಎಂದು ಹೇಳಿದ್ದರು.

ಹಿಂದು ಧರ್ಮದಲ್ಲಿ ಶಕ್ತಿ ಎಂಬ ಪದವಿದೆ. ನಾವೀಗ ಸರ್ಕಾರದ ಶಕ್ತಿ ವಿರುದ್ಧ ಹೋರಾಡಬೇಕಾಗಿದೆ. ಹಾಗಿದ್ದರೆ ನಮ್ಮ ಪಾಲಿಗೆ ಶಕ್ತಿ ಅಂದರೆ ಏನು? ಅದು ರಾಜನಿಗೆ ಮಾರಲ್ಪಟ್ಟ ಇವಿಎಂಗಳ ಆತ್ಮ ಮತ್ತು ವಿಶ್ವಾಸಾರ್ಹತೆ ಎಂದು ರಾಹುಲ್‌ ಗಾಂಧಿ ವಿವರಿಸಿದ್ದರು. ರಾಹುಲ್‌ ಗಾಂಧಿ ಹಿಂದು ಧರ್ಮದ ಶಕ್ತಿಯನ್ನು ಎಳೆದು ತಂದಿದ್ದೇ ಬಿಜೆಪಿ ಅವರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿತು.

Exit mobile version