Site icon Vistara News

Murder Case: ಬಾರ್‌ ಮುಚ್ಚಲು ಸಮಯವಾಯ್ತು ಎಂದಿದ್ದಕ್ಕೆ ಕ್ಯಾಶಿಯರ್‌ನ ಕೊಲೆ, ಪೊಲೀಸರ ಎದುರೇ ಇರಿದರು!

shimogga bar murder

ಶಿವಮೊಗ್ಗ: ಬಾರ್‌ ಮುಚ್ಚಲು ಸಮಯವಾಯ್ತು, ಹೊರಗೆ ಹೋಗಿ ಎಂದದ್ದಕ್ಕೆ ಬಾರ್ ಕ್ಯಾಶಿಯರ್ ತಲೆ ಮೇಲೆ ಬಾಟಲಿಯಿಂದ ಹಲ್ಲೆ ನಡೆಸಿ, ಚಾಕುವಿನಿಂದ ಚುಚ್ಚಿ ಕೊಲೆ ಮಾಡಿದ ಘಟನೆ ಶಿವಮೊಗ್ಗದಲ್ಲಿ ನಡೆದಿದೆ.

ಶಿವಮೊಗ್ಗದ ಆಯನೂರಿನ ನವರತ್ನ ಬಾರ್ ಅಂಡ್ ರೆಸ್ಟೋರೆಂಟ್‌ನಲ್ಲಿ ನಿನ್ನೆ ತಡರಾತ್ರಿ ಘಟನೆ ನಡೆದಿದೆ. ರಾತ್ರಿ 11.30 ಆಗಿದೆ, ಬಾಗಿಲು ಮುಚ್ಚುವ ಸಮಯವಾಯ್ತು ಹೊರಡಿ ಎಂದು ಕ್ಯಾಶಿಯರ್‌, ಸೊರಬ ಮೂಲದ ಸಚಿನ್ (27) ಹೇಳಿದ್ದು, ಅಷ್ಟಕ್ಕೇ ಕೊಲೆಯಾಗಿದ್ದಾರೆ.

ಆಯನೂರು ಕೋಟೆ ತಾಂಡದ ನಿರಂಜನ, ಸತೀಶ್, ಅಶೋಕ್ ನಾಯ್ಕ್ ಎಂಬವರು ಹಲ್ಲೆ ನಡೆಸಿ ಕೊಲೆ ಮಾಡಿದ್ದಾರೆ. ಇನ್ನೂ ಕುಡಿಯಬೇಕು ಎಂದು ನಿರಂಜನ್ ಹಾಗೂ ಸ್ನೇಹಿತರು ಕಿರಿಕ್ ತೆಗೆದಿದ್ದರು. ಈ ವೇಳೆ 112ಕ್ಕೆ ಕರೆ ಮಾಡಿ ಪೊಲೀಸರಿಗೆ ಸಚಿನ್ ಮಾಹಿತಿ ನೀಡಿ ಕರೆಸಿದ್ದರು.

ಅಷ್ಟಕ್ಕೂ ಬಿಡದ ದುರುಳರು, ಪೊಲೀಸರನ್ನು ಕರೆಸುತ್ತೀಯಾ ಎಂದು ಹೇಳಿ ಬಿಯರ್ ಬಾಟಲಿಯಿಂದ ಸಚಿನ್‌ಗೆ ಹಲ್ಲೆ ನಡೆಸಿದ್ದಾರೆ. ಪೊಲೀಸರು ಮಧ್ಯೆ ಪ್ರವೇಶಿಸಿದರೂ ಬಿಡದೆ ಪೊಲೀಸರೆದುರೇ ಚಾಕುವಿನಿಂದ ಚುಚ್ಚಿದ್ದಾರೆ. ಎದೆ, ಹೊಟ್ಟೆ, ಪಕ್ಕೆ ಭಾಗಕ್ಕೆ ನಿರಂಜನ ಚುಚ್ಚಿದ್ದಾನೆ. ಬಳಿಕ ಆಯನೂರು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲು ಸಚಿನ್‌ನನ್ನು ಸ್ನೇಹಿತರು ಕರೆದುಕೊಂಡು ಬಂದಿದ್ದಾರೆ. ಆಸ್ಪತ್ರೆಗೆ ಬಂದು ಅಲ್ಲಿಯೂ ಕೂಡ ನಿರಂಜನ್ ಹಾಗೂ ಸ್ನೇಹಿತರು ಹಲ್ಲೆ ಮಾಡಿದ್ದರು. ಬಳಿಕ ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ಸಚಿನ್‌ನನ್ನು ಸ್ಥಳಾಂತರಿಸಲಾಗಿದ್ದು, ಅಲ್ಲಿ ಸಚಿನ್ ಸಾವಿಗೀಡಾಗಿದ್ದಾರೆ. ಕುಂಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬೆಂಗಳೂರಿನಲ್ಲಿ ಗಂಡನಿಂದಲೇ ಹೆಂಡತಿಯ ಬರ್ಬರ ಕೊಲೆ

ಬೆಂಗಳೂರು: ಮಹಿಳೆಯೊಬ್ಬರನ್ನು ಆಕೆಯ ಗಂಡನೇ ಚಾಕುವಿನಿಂದ ಚುಚ್ಚಿ ಬರ್ಬರವಾಗಿ ಕೊಲೆ ಮಾಡಿದ ಘಟನೆ ನಡೆದಿದೆ. ಬಸವೇಶ್ವನಗರದ ಮಂಜುನಾಥನಗರದಲ್ಲಿ ದುರ್ಘಟನೆ ನಡೆದಿದ್ದು, ನಾಗರತ್ನ (32) ಎಂಬವರು ಕೊಲೆಯಾದ ಮಹಿಳೆ. ನಾಗರತ್ನ ಅವರ ಗಂಡ ಅಯ್ಯಪ್ಪ ಎಂಬಾತ ಚಾಕುವಿನಿಂದ ಮನಸೋ ಇಚ್ಛೆ ಚುಚ್ಚಿ ಕೊಲೆ ಮಾಡಿದ್ದಾನೆ.

ಅನೈತಿಕ ಸಂಬಂಧದ ಅನುಮಾನದ ಹಿನ್ನೆಲೆಯಲ್ಲಿ ಕೊಲೆ ನಡೆದಿರುವ ಶಂಕೆ ಇದೆ. ಅಪ್ಪ ಅಮ್ಮ‌ ಇಲ್ಲದೆ ಅನಾಥಾಶ್ರಮದಲ್ಲಿದ್ದ ನಾಗರತ್ನ ಅವರನ್ನು 12 ವರ್ಷಗಳ ಹಿಂದೆ ಅಯ್ಯಪ್ಪ ಮದುವೆಯಾಗಿದ್ದ. ದಂಪತಿಗೆ 11 ವರ್ಷದ ಮಗ ಹಾಗೂ 7 ವರ್ಷದ ಮಗಳು ಇದ್ದಾರೆ. ತನ್ನ ಅಕ್ಕನ ಮನೆಯಲ್ಲಿ ಅಯ್ಯಪ್ಪ ಮಕ್ಕಳನ್ನು ಬಿಟ್ಟಿದ್ದ.

ಇತ್ತೀಚೆಗೆ ಹೆಂಡತಿಯ ನಡತೆ ಮೇಲೆ ಅಯ್ಯಪ್ಪ ಅನುಮಾನ ಪಡುತ್ತಾ ಇದ್ದ. ಮೂರು ದಿನಗಳಿಂದ ದಂಪತಿ ಮಧ್ಯೆ ಗಲಾಟೆ ನಡೆಯುತ್ತಿತ್ತು. ಗಲಾಟೆ ಉಲ್ಬಣಗೊಂಡು ಕೊಲೆ ಮಾಡಿದ್ದಾನೆ. ಸದ್ಯ ಮೃತದೇಹವನ್ನು ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದೆ. ಬಸವೇಶ್ವರ ನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಕೊಲೆ ಮಾಡಿ ಪರಾರಿಯಾಗಿದ್ದ ಅಯ್ಯಪ್ಪನನ್ನು ಪೊಲೀಸರು ಬಂಧಿಸಿದ್ದಾರೆ.

ಇದನ್ನೂ ಓದಿ: ಚಿಕ್ಕಮಗಳೂರಲ್ಲಿ ಶಾಸಕರ ಅಭಿನಂದನಾ ಸಮಾರಂಭದಲ್ಲಿ ಮಾರಾಮಾರಿ ಜಗಳ; ಕಾರ್ಯಕ್ರಮದ ಬಳಿಕ ಕೊಲೆ

Exit mobile version