Site icon Vistara News

Legislative Assembly: ಬಜೆಟ್‌ ಅಂದ್ರೆ ಬಿ.ವೈ. ವಿಜಯೇಂದ್ರಗೆ ಗೊತ್ತಿರಬಹುದು; ಹೊಸ ಶಾಸಕರು ತಿಳ್ಕೊಬೇಕು ಎಂದ ಸಿಎಂ ಸಿದ್ದರಾಮಯ್ಯ

Siddaramaiah in MLA Training camp

#image_title

ಬೆಂಗಳೂರು: ನೂತನವಾಗಿ ಆಯ್ಕೆಯಾಗಿರುವ ಶಾಸಕರು (Legislative Assembly) ಬಜೆಟ್‌ ಸೇರಿದಂತೆ ಸಂಸದೀಯ ನಡವಳಿಕೆಗಳನ್ನು ಚೆನ್ನಾಗಿ ತಿಳಿದುಕೊಳ್ಳಬೇಕು ಎಂದು ಸಿಎಂ ಸಿದ್ದರಾಮಯ್ಯ ಕಿವಿಮಾತು ಹೇಳಿದ್ದಾರೆ. ಹೊಸ ಶಾಸಕರಿಗೆ ವಿಧಾನಸಭೆ ಸಚಿವಾಲಯದಿಂದ ನೆಲಮಂಗಲದ ಕ್ಷೇಮವನದಲ್ಲಿ ಆಯೋಜಿಸಿರುವ ಮೂರು ದಿನಗಳ ತರಬೇತಿ ಶಿಬಿರ ಉದ್ಘಾಟಿಸಿ ಮಾತನಾಡಿದರು.

ಸಂಸದೀಯ ಪ್ರಜಾಪ್ರಭುತ್ವದ ದೇಗುಲ ವಿಧಾನಸಭೆ. ಇಲ್ಲಿ ಜನರ ಸಮಸ್ಯೆಗಳನ್ನು ಪರಿಣಾಮಕಾರಿಯಾಗಿ ಪ್ರಸ್ತಾಪಿಸಿ ಪರಿಹಾರ ಪಡೆದುಕೊಳ್ಳುವ ಮನಸ್ಥಿತಿ ಬೆಳೆಸಿಕೊಳ್ಳಿ. ಯಾರು ಸಂವಿಧಾನವನ್ನು ಓದಿ ಅರ್ಥ ಮಾಡಿಕೊಳ್ಳುವುದಿಲ್ಲವೋ ಅವರು ಉತ್ತಮ ಶಾಸಕರಾಗಲು, ಸಂಸದರಾಗಲು ಸಾಧ್ಯವಿಲ್ಲ. ಮೊದಲು ಸಂವಿಧಾನವನ್ನು ಓದಿ ಅದರ ಮೂಲಭೂತ ತತ್ವ ಮತ್ತು ಉದ್ದೇಶಗಳನ್ನು ಅರಿತುಕೊಳ್ಳಿ. ಸದನದ ನಿಯಮಾವಳಿಗಳನ್ನು ನಾವೇ ಮಾಡಿದ್ದೇವೆ. ಅದನ್ನು ಸರಿಯಾಗಿ ಓದಿ ಅರ್ಥ ಮಾಡಿಕೊಂಡರೆ ಜನರ ಸಮಸ್ಯೆಗಳನ್ನು ನಿಯಮಬದ್ದವಾಗಿ ಸದನದ ಮುಂದೆ ಮಂಡಿಸಬಹುದು.

ಸಂವಿಧಾನಕ್ಕೆ ವಿರುದ್ಧವಾದ ಕಾನೂನು-ಕಾಯ್ದೆಗಳನ್ನು ಮಾಡಲು ಸಾಧ್ಯವಿಲ್ಲ. ಆದ್ದರಿಂದ ಸಂವಿಧಾನದ ಓದು ಅತ್ಯಗತ್ಯ. ಭಾರತದಲ್ಲಿ ಸಂವಿಧಾನ ಇಲ್ಲದೆ ಇದ್ದರೆ ನಾವು ಶಾಸಕರು ಆಗೋಕೆ ಆಗುತ್ತಿರಲಿಲ್ಲ. ಇದನ್ನ ಈಶ್ವರಪ್ಪ, ಸಿ.ಟಿ. ರವಿಗೆ ಈ ಹಿಂದೆ ಸದನದಲ್ಲಿ ಹೇಳಿದ್ದೆ. ಸಂವಿಧಾನ ಇಲ್ಲದೆ ಹೋಗಿದ್ರೆ ನಾನು ಕುರಿ ಮೇಯಿಸಬೇಕಿತ್ತು‌. ಈಶ್ವರಪ್ಪ ಕುರಿ ಮೇಯಿಸಬೇಕಿತ್ತು‌. ಸಿ.ಟಿ. ರವಿ ಹಸು ಮೇಯಿಸಬೇಕಿತ್ತು. ಸಂವಿಧಾನ ಇದ್ದರೆ ನಾವು ಇರ್ತೀವಿ. ಇಲ್ಲದೆ ಇದ್ದರೆ ನಾವು ಇರೋಲ್ಲ. ಸಂವಿಧಾನವನ್ನ ಪ್ರತಿಯೊಬ್ಬರೂ ಓದಬೇಕು, ಅರ್ಥ ಮಾಡಿಕೊಳ್ಳಬೇಕು. ಇಲ್ಲದೆ ಹೊದ್ರೆ ಹಿಟ್ಲರ್ ಸಂವಿಧಾನ ಆಗುತ್ತೆ. ಹಿಟ್ಲರ್ ಲಕ್ಷಾಂತರ ಜನರನ್ನ ಸಾಯಿಸಿದ. ಅವನ‌ ಸಂವಿಧಾನ ಉಳೀತಾ?

ಬಜೆಟ್ ಅಂದ್ರೆ ಏನು ಅಂತ ತಿಳಿದುಕೊಳ್ಳಬೇಕು. ವಿಜಯೇಂದ್ರಗೆ ಬಜೆಟ್‌ ಅಂದರೆ ಗೊತ್ತಿರಬಹುದು ಎಂದು ಎದುರಿಗೆ ಕುಳಿತಿದ್ದ ಬಿ.ವೈ. ವಿಜಯೇಂದ್ರ ಅವರನ್ನು ಉದ್ದೇಶಿಸಿ ಸಂಬೋಧಿಸಿದ ಸಿಎಂ, ಶಾಸಕರು ಸಂಸದರು ಬಜೆಟ್ ಅಂದರೆ ಏನೆಂದು ಅರ್ಥ ಮಾಡಿಕೊಳ್ಳಬೇಕು. 12ನೇ ಶತಮಾನದಲ್ಲಿ ಕಾಯಕಯೋಗಿ ಬಸವಣ್ಣನವರು ಬಜೆಟ್ ಬಗ್ಗೆ ಹೇಳಿದ್ದಾರೆ. ಕಾಯಕ ಮತ್ತು ದಾಸೋಹ ಬಜೆಟ್ ನ ಪ್ರಮುಖ ಸಂಗತಿಗಳು. ಕಾಯಕ ಅಂದರೆ ಉತ್ಪಾದನೆ, ದಾಸೋಹ ಅಂದರೆ ಹಂಚಿಕೆ. ಬಜೆಟ್ ಅಂದರೆ ಇಷ್ಟೆ, ಎಲ್ಲಿಂದ ಉತ್ಪಾದನೆ ಬರುತ್ತದೆ ಅದನ್ನು ಸಮಾಜದ ಯಾರಿಗೆ ಹಂಚುತ್ತೇವೆ ಎನ್ನುವುದೇ ಬಜೆಟ್ ನ ಮೌಲ್ಯ ಎಂದು ವಿವರಿಸಿದರು.

ನೂರು ಕುರಿ ಎಣಿಸಕ್ಕೆ ಬಾರದವನು
ದೇವೇಗೌಡರು ಮೊದಲಿಗೆ 1994ರಲ್ಲಿ ನನ್ನನ್ನು ಹಣಕಾಸು ಸಚಿವನನ್ನಾಗಿ ಮಾಡಿದರು. ನಾನು ಓದಿರುವುದು ಕಾನೂನು, ಆರ್ಥಿಕತೆ ಗೊತ್ತಿಲ್ಲ ಎಂದು ದೇವೇಗೌಡರಿಗೆ ಹೇಳಿದ್ದೆ. ನಮಗೆ ನಂಬಿಗಸ್ತ ಬೇಕು ಅಂತ ದೇವೇಗೌಡರು ಹೇಳಿದ್ದರು. “ನೂರು ಕುರಿ ಎಣಿಸಲು ಬಾರದವನು ಬಜೆಟ್ ಹೇಗೆ ಮಾಡ್ತಾರೆ?” ಎಂದು ಲಂಕೇಶ್‌ ಪತ್ರಿಕೆ ಟೀಕಿಸಿತ್ತು. ಟೀಕೆಯನ್ನು ನಾನು ಸವಾಲಾಗಿ ಸ್ವೀಕರಿಸಿ ನಿರಂತರ ವಿಷಯ ತಜ್ಞರ ಜತೆ ಚರ್ಚಿಸಿ ಬಜೆಟ್ ಮಂಡಿಸಿದೆ. ಮರುದಿನ ದಿ ಹಿಂದು ಪತ್ರಿಕೆ ನನ್ನ ಬಜೆಟ್ ಅನ್ನು ಅತ್ಯುತ್ತಮ ಎಂದು ಶ್ಲಾಘಿಸಿ ಸಂಪಾದಕೀಯ ಬರೆಯಿತು. ಹೀಗಾಗಿ ಜ್ಞಾನ ದಾಹ ಮತ್ತು ಅಧ್ಯಯನಶೀಲತೆಯನ್ನು ಬೆಳೆಸಿಕೊಳ್ಳಿ ಎಂದು ತಮ್ಮದೇ ಉದಾಹರಣೆ ಮೂಲಕ ಶಾಸಕರಿಗೆ ತಿಳಿ ಹೇಳಿದರು.

ವಾಟಾಳ್ ಮಾಡೆಲ್
ವಾಟಾಳ್ ನಾಗರಾಜ್ ಅವರು ಒಬ್ಬ ಮಾದರಿ ಶಾಸಕರಾಗಿದ್ದರು. ಅಧಿವೇಶನದ ಬೆಲ್ ಆಗುತ್ತಿದ್ದಂತೆ ಸದನದ ಒಳಗೆ ಬಂದು ಕೂರುತ್ತಿದ್ದರು. ಅಧಿವೇಶನ ಮುಗಿಯುವವರೆಗೂ ಅಲುಗಾಡದೆ ಕೂರುತ್ತಿದ್ದರು. ಇದನ್ನು ಪ್ರತಿಯೊಬ್ಬರೂ ಪಾಲಿಸಿ ಎಂದು ಸೂಚಿಸಿದರು.

ಭಾಷಣದ ಹೈಲೈಟ್ಸ್

Exit mobile version