Site icon Vistara News

DK Shivakumar | ಕುಕ್ಕರ್‌ ಬ್ಲಾಸ್ಟ್‌: ಡಿಕೆಶಿ ಹೇಳಿಕೆಗೆ ಸಿದ್ದರಾಮಯ್ಯ ಸಮರ್ಥನೆ: ತಪ್ಪೇನಿದೆ ಎಂದು ಕೇಳಿದ ಮಾಜಿ ಸಿಎಂ

congress leaders upset over DK shivakumar and siddaramaiah

ಮಂಗಳೂರು: ಕುಕ್ಕರ್‌ ಬ್ಲಾಸ್ಟ್‌ಗೆ ಸಂಬಂಧಿಸಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ (DK Shivakumar) ಹೇಳಿದ್ದರಲ್ಲಿ ತಪ್ಪೇನಿದೆ ಎಂದು ಕೇಳುವ ಮೂಲಕ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆಯನ್ನು ಸಮರ್ಥಿಸಿದ್ದಾರೆ. ಆರಂಭದಲ್ಲಿ ಕಾಂಗ್ರೆಸ್‌ ನಾಯಕರು ಡಿಕೆಶಿ ಹೇಳಿಕೆಯಿಂದ ಅಂತರ ಕಾಯ್ದುಕೊಂಡರೂ ಬಳಿಕ ಸ್ವಲ್ಪ ಮಟ್ಟಿಗೆ ಬೆಂಬಲ ದೊರಕಿದೆ. ಶುಕ್ರವಾರ ಕಾಂಗ್ರೆಸ್‌ ಶಾಸಕ ಪ್ರಿಯಾಂಕ್‌ ಖರ್ಗೆ ಅವರು ಬೆಂಬಲ ನೀಡಿದರೆ, ಶನಿವಾರ ಸಿದ್ದರಾಮಯ್ಯ ಅವರೂ ಸಮರ್ಥಿಸಿದ್ದಾರೆ.

ಬೆಳ್ತಂಗಡಿಯಲ್ಲಿ ನಡೆಯುವ ಮಾಜಿ ಶಾಸಕ ವಸಂತ ಬಂಗೇರ ಅಭಿನಂದನಾ ಕಾರ್ಯಕ್ರಮ ಮತ್ತು ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗವಹಿಸುವುದಕ್ಕಾಗಿ ತೆರಳುವ ದಾರಿಯಲ್ಲಿ ಮಂಗಳೂರು ವಿಮಾನ ನಿಲ್ದಾಣದಲ್ಲಿ ಅವರು ಮಾತನಾಡಿದರು.

ಕುಕ್ಕರ್‌ ಬ್ಲಾಸ್ಟ್‌ ಸಂಬಂಧ ಡಿ.ಕೆ. ಶಿವಕುಮಾರ್‌ ನೀಡಿದ ಹೇಳಿಕೆಯನ್ನು ಸಮರ್ಥಿಸಿದ ಅವರು, ʻʻಕುಕ್ಕರ್ ಬ್ಲಾಸ್ಟ್ ರಾಜಕೀಯಕ್ಕೆ ಬಳಸಿದ್ದಾರೆ ಅಂತ ಕೆಪಿಸಿಸಿ ಅಧ್ಯಕ್ಷರು ಹೇಳಿದ್ದಾರೆ ಅಷ್ಟೇ. ಅವರು ಟೆರರಿಸಂ ಸಪೋರ್ಟ್ ಮಾಡ್ತೀನಿ ಅಂತ ಹೇಳಿದರಾ? ಬಿಜೆಪಿಯವರು ತಿರುಚಿ ಜನರಿಗೆ ತಪ್ಪು ಮಾಹಿತಿ ನೀಡ್ತಾ ಇದಾರೆʼʼ ಎಂದರು.

ʻʻಬಿಜೆಪಿಯ ಡಬಲ್ ಎಂಜಿನ್ ಸರ್ಕಾರ ಭಯೋತ್ಪಾದನೆ ಹತ್ತಿಕ್ಕಿದೆಯಾ? ದೇಶದಲ್ಲಿ ಉಗ್ರಗಾಮಿ ಚಟುವಟಿಕೆ ಹತ್ತಿಕ್ಕಲಿ ಮೊದಲು. ಈ ಬಿಜೆಪಿ ಬರೀ ಜನರನ್ನು ಪ್ರಚೋದನೆ ಮಾಡಿ, ಭಾವನಾತ್ಮಕ ವಿಚಾರ ಮಾತನಾಡುವುದರಲ್ಲೇ ಕಾಲ ಕಳೆಯುತ್ತಿದೆʼʼ ಎಂದು ಹೇಳಿದರು.

ನೈತಿಕ ಪೊಲೀಸ್‌ಗಿರಿಗೆ ಸಿಎಂ ಅವರಿಂದಲೇ ಬೆಂಬಲ
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಿರಂತರವಾಗಿ ನೈತಿಕ ಪೊಲೀಸ್‌ಗಿರಿ (Moral policing) ನಡೆಯುತ್ತಿದೆ. ಇದಕ್ಕೆ ಸ್ವತಃ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೇ ಕುಮ್ಮಕ್ಕು ನೀಡುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆರೋಪಿಸಿದರು.

ʻʻಕಳೆದ ಎರಡು ತಿಂಗಳಲ್ಲಿ ಏಳೆಂಟು ನೈತಿಕ ಪೊಲೀಸ್‌ ಗಿರಿ ಪ್ರಕರಣಗಳು ನಡೆದಿದೆ ಎಂದು ನನಗೆ ಹೇಳಿದರು. ನಾನು ಇದನ್ನು ಖಂಡಿಸುತ್ತೇನೆ. ಹಾಗೂ ಅವರ ಮೇಲೆ ಕಠಿಣ ಕಾನೂನು ಕ್ರಮ ತೆಗೆದುಕೊಳ್ಳಬೇಕು ಆಗ್ರಹಿಸುತ್ತೇನೆʼʼ ಎಂದ ಸಿದ್ದರಾಮಯ್ಯ, ʻʻನೈತಿಕ ಪೊಲೀಸ್ ಗಿರಿ ನಡೆಸಲು ಕಾನೂನಿನಲ್ಲಿ ಅವಕಾಶ ಇಲ್ಲ. ಮುಖ್ಯಮಂತ್ರಿಯೇ ನೈತಿಕ ಪೊಲೀಸ್ ಗಿರಿ ಪ್ರೇರೇಪಿಸುವ ಕೆಲಸ ಮಾಡ್ತಿದಾರೆ. ಆಕ್ಷನ್ ಗೆ ರಿಯಾಕ್ಷನ್ ಇದ್ದೇ ಇರುತ್ತದೆ ಅಂದರೆ ಏನರ್ಥ? ಕೊಲೆ ಮಾಡಿದ್ರೆ ಮತ್ತೊಂದು ಕೊಲೆ ಮಾಡಬೇಕು ಅಂತ ಅರ್ಥನಾ?ʼʼ ಎಂದು ಪ್ರಶ್ನಿಸಿದರು.

ʻʻಮುಖ್ಯಮಂತ್ರಿಗೆ ಕಾನೂನು ಗೊತ್ತಿದ್ಯಾ ಗೊತ್ತಿಲ್ಲ. ಸಂವಿಧಾನ ಮತ್ತು ಐಪಿಸಿಯಲ್ಲಿ ನೈತಿಕ ಪೊಲೀಸ್ ಗಿರಿಗೆ ಅವಕಾಶ ಇದ್ಯಾ? ಪೊಲೀಸ್ ಇರೋದು ಕಾನೂನು ಸುವ್ಯವಸ್ಥೆ ಕಾಪಾಡಲು. ಅನಗತ್ಯವಾಗಿ ಕಾನೂನು ಸುವ್ಯವಸ್ಥೆ ಹಾಳು ಮಾಡೋದು ಖಂಡನೀಯ. ಸರ್ಕಾರ ಇದಕ್ಕೆ ಯಾವುದೇ ಕಾರಣಕ್ಕೆ ಅವಕಾಶ ಕೊಡಬಾರದು. ಮುಖ್ಯಮಂತ್ರಿಯೇ ಪ್ರೇರಣೆ ನೀಡುವ ಕೆಲಸ ಮಾಡಿದ್ರೆ ಏನಾಗುತ್ತದೆʼʼ ಎಂದು ಕೇಳಿದರು.

ಇದನ್ನೂ ಓದಿ | DK Shivakumar | ಉಗ್ರರಿಗೆ ಬೆಂಬಲ ನೀಡುವ ಕಾಂಗ್ರೆಸ್‌ ವಿರುದ್ಧ ಡಿ.19, 20, 21ರಂದು ಬಿಜೆಪಿ ಪ್ರತಿಭಟನೆ

Exit mobile version