Site icon Vistara News

ಹುಡುಗಿಯ ಜತೆ ಆಟವಾಡಿದ್ದಕ್ಕೆ ನಾಯಿಮರಿಯನ್ನೇ ಕೊಂದ ಪಾಪಿಗಳು; ವಿಡಿಯೊ ವೈರಲ್‌ ಬಳಿಕ ಬಿತ್ತು ಕೇಸ್‌

dog murder in udupi

ಉಡುಪಿ: ಹುಡುಗಿಯ ಜತೆ ನಾಯಿ ಮರಿಯೊಂದು ಆಟವಾಡಿದ್ದಕ್ಕೆ ನಾಯಿ ಮರಿಯನ್ನೇ ವಾರ್ಡನ್‌ನೊಬ್ಬ ಇನ್ನೊಬ್ಬನ ಜತೆ ಸೇರಿ ಕೊಂದಿದ್ದಾನೆ. ಈ ಕೃತ್ಯದ ವಿಡಿಯೊ ಮೊಬೈಲ್‌ನಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಕಾಪು ತಾಲೂಕಿನ ಬಂಟಕಲ್ ಮಧ್ವ ವಾದಿರಾಜ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಆ್ಯಂಡ್ ಮ್ಯಾನೇಜ್ಮೆಂಟ್ ಕಾಲೇಜಿನಲ್ಲಿ ಈ ಪ್ರಕರಣ ನಡೆದಿದೆ. ನಾಗರಾಜ್‌ ಹಾಗೂ ರಾಜೇಶ್ ಎಂಬುವವರೇ ವಿಕೃತಿ ಮೆರೆದಿದ್ದಾರೆ ಎಂದು ಹೇಳಲಾಗಿದೆ.

ಪಾಪಿ ವಾರ್ಡನ್ ಕೃತ್ಯಕ್ಕೆ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತವಾಗಿದೆ. ಈ ವಿಷಯ ತಿಳಿಯುತ್ತಿದ್ದಂತೆ ಮಂಜುಳಾ ಕರ್ಕೇರ ಎಂಬುವವರು ಶಿರ್ವ ಠಾಣೆಗೆ ದೂರು ನೀಡಿದ್ದು, ವಾರ್ಡನ್ ಮೇಲೆ ಪ್ರಕರಣ ದಾಖಲಾಗಿದೆ.

ಇದೊಂದು ಅಮಾನವೀಯ ಕೃತ್ಯ ಬಬಿತಾ ಮಧ್ವರಾಜ್‌

ವಾರ್ಡನ್ ನಾಗರಾಜ್ ಹಾಗೂ ರಾಜೇಶ್ ಸೇರಿ ಆ ನಾಯಿ ಮರಿಯನ್ನು ಗೋಣಿ ಚೀಲದಲ್ಲಿ ಹಾಕಿ ದೊಣ್ಣೆಯಿಂದ ಹೊಡೆದು ಕೊಲೆ ಮಾಡಿದ್ದಾರೆ. ಬಳಿಕ ಕಾಲೇಜಿನ ವಾಹನದಲ್ಲಿ ಅದನ್ನು ತೆಗೆದುಕೊಂಡು ಹೋಗಿ ವಿಲೇವಾರಿ ಮಾಡಿದ್ದಾರೆ. ಇದೊಂದು ಅಮಾನವೀಯ, ಕ್ರೂರ ಕೃತ್ಯ ಎಂದು ಮಧ್ವರಾಜ್ ಅನಿಮಲ್ ಕೇರ್ ಟ್ರಸ್ಟ್ ಮುಖ್ಯಸ್ಥೆ ಬಬಿತಾ ಮಧ್ವರಾಜ್ ಹೇಳಿಕೆ ನೀಡಿದ್ದಾರೆ.

ಇದನ್ನೂ ಓದಿ: Basavaraj Bommai Birthday Special : ಬೆರಳ ತುದಿಯಲ್ಲೇ ಕಾನೂನು, ನೀರಾವರಿ, ಗಡಿ ಮಾಹಿತಿ ಹೊಂದಿದ ಗಣಿ ಬೊಮ್ಮಾಯಿ

ಮಂಜುಳಾ ಕರ್ಕೇರ ಶಿರ್ವ ಪೊಲೀಸ್‌ ಠಾಣೆಗೆ ದೂರು ನೀಡಿದ್ದು, ಎಫ್ಐಆರ್ ದಾಖಲಾಗಿದೆ. ಐಪಿಸಿ ಸೆಕ್ಷನ್ 428-429 ಮತ್ತು ಪಿಸಿಎ ಆ್ಯಕ್ಟ್ 11ರ ಪ್ರಕಾರ ಪ್ರಕರಣ ದಾಖಲಾಗಿದೆ. ಈ ಘಟನೆಗೆ ಸಂಬಂಧಿಸಿದಂತೆ ಆರೋಪಿಗಳಿಗೆ ಶಿಕ್ಷೆ ಆಗಬೇಕು. ಇದು ಯಾರೂ ಸಹಿಸುವಂತಹ ಪ್ರಕರಣವಲ್ಲ. ನಾಯಿಯ ಸಾವಿಗೆ ನ್ಯಾಯ ಸಿಗಬೇಕು ಎಂದು ಆಗ್ರಹಿಸಿದ್ದಾರೆ.

Exit mobile version