Site icon Vistara News

ಸಿದ್ದರಾಮಯ್ಯ, ಡಿ.ಕೆ ಶಿವಕುಮಾರ್‌ ಇಬ್ಬರೂ ನರಿಗಳು; ಕುರಿಗಳ ಥರ ವೇಷ ಹಾಕ್ಕೊಂಡು ಬರ್ತಾರೆ ಅಷ್ಟೆ ಎಂದ ಶ್ರೀರಾಮುಲು

ಬಿ.ಶ್ರೀರಾಮುಲು

ಬಾಗಲಕೋಟೆ: ಕಾಂಗ್ರೆಸ್‌ ನಾಯಕರಾದ ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್‌ ಇಬ್ಬರೂ ಪಕ್ಕಾ ನರಿಗಳು. ಆದರೆ, ಕುರಿಗಳ ಥರ ವೇಷಾ ಹಾಕಿಕೊಂಡು ಬರ್ತಾರೆ ಅಷ್ಟೆ. ಅವರು ಕುರಿಗಳ ವೇಷ ಹಾಕಿದ್ರೆ ನಾವು ಬಿಡ್ತೀವಾ? ಅವರ ನರಿ ಬುದ್ಧಿ ಬಯಲು ಮಾಡ್ತೇವೆ- ಎಂದಿದ್ದಾರೆ ಸಚಿವ ಶ್ರೀರಾಮುಲು.

ʻʻನರಿಗಳು ಕುರಿಗಳ ವೇಷ ಹಾಕಿದ್ರೆ ಕುರಿಗಳಾಗುತ್ತವೆ ಅಂತ ಅವ್ರು ಅನ್ಕೊಂಡಿದ್ದಾರೆ. ಆದ್ರೆ ಅದು ಸಾಧ್ಯವಿಲ್ಲ, ಹಂಗಾಗೋಕೆ ಬಿಜೆಪಿ ಬಿಡೋದಿಲ್ಲʼʼ ಎಂದು ಬಾಗಲಕೋಟೆಯಲ್ಲಿ ಮಾತನಾಡುತ್ತಾ ಹೇಳಿದರು.

ʻʻನಮ್ಮ ಮುಖ್ಯಮಂತ್ರಿ ವಿಷಯದಲ್ಲಿ ಡಿ.ಕೆ. ಶಿವಕುಮಾರ್‌ ಗಮ್‌ ಹಚ್ಚಿದ್ರೆ, ಸಿದ್ದರಾಮಯ್ಯ ಪೋಸ್ಟರ್‌ ಹಚ್ಚೋ ಕೆಲಸ ಮಾಡುತ್ತಿದ್ದಾರೆ. ಭ್ರಷ್ಟಾಚಾರದಲ್ಲಿ ಕಾಂಗ್ರೆಸ್ ಪಕ್ಷ ಒಂದು ಎಟಿಎಂ ಇದ್ದಂಗೆ. ಪ್ರತಿದಿನ‌ ಸಿದ್ದರಾಮಯ್ಯ ಅವರು ಭ್ರಷ್ಟಾಚಾರದ ಬಗ್ಗೆ ಮಾತನಾಡ್ತಾರೆ. ಅವರು ಮೊದಲು ತಮ್ಮ ಕನ್ನಡಕವನ್ನು ಒರೆಸಿಕೊಂಡು ನೋಡಲಿ. ಯಾರನ್ನು ಪಕ್ಕಕ್ಕಿಟ್ಟುಕೊಂಡು ಭ್ರಷ್ಟಾಚಾರ ಆರೋಪ ಮಾಡ್ತಾ ಇದಾರೆ ಅಂತʼʼ ಎಂದು ಶ್ರೀರಾಮುಲು ತಿವಿದಿದ್ದಾರೆ.

ʻʻನಮ್ಮ ದುರಂತ ಅಂದ್ರೆ ಭ್ರಷ್ಟಾಚಾರದಲ್ಲಿ ಬೇಲ್ ಮೇಲೆ ಹೊರಗಿರುವ ವ್ಯಕ್ತಿ‌ (ಡಿಕೆಶಿ) ಈಗ ಭ್ರಷ್ಟಾಚಾರದ ಬಗ್ಗೆ ಮಾತನಾಡ್ತಾರೆʼʼ ಎಂದು ಲೇವಡಿ ಮಾಡಿದ ಶ್ರೀರಾಮುಲು, ʻʻಕಾಂಗ್ರೆಸ್‌ನವರಿಗೆ ತಾವು ಮಾಡಿದ ಭ್ರಷ್ಟಾಚಾರದ ಬಗ್ಗೆ ಒಂದಕ್ಕೂ ಉತ್ತರ ಕೊಡುವ ತಾಕತ್ತಿಲ್ಲ. ಅರ್ಕಾವತಿ ಹಗರಣದ ಬಗ್ಗೆ ಸಿದ್ದರಾಮಯ್ಯ ಬಹಿರಂಗವಾಗಿ ಉತ್ತರ ಕೊಡಲಿʼʼ ಎಂದು ಸವಾಲು ಹಾಕಿದರು.

ಎಲ್ಲಾ ಕಡೆ ಲೂಟಿ ಮಾಡಿದ ಕಾಂಗ್ರೆಸ್‌
ʻʻಬಡವರಿಗೆ ಕೊಡಬೇಕಾದ ಮನೆಗಳಲ್ಲಿ ಕಾಂಗ್ರೆಸ್ ಪಕ್ಷ ಸಾಕಷ್ಟು ಲೂಟಿ ಮಾಡಿದೆ‌. ಸ್ವಯಂ ಘೋಷಿತ ಅಹಿಂದ ನಾಯಕ ಸಿದ್ದರಾಮಯ್ಯ‌ ಅವರು ತಮ್ಮ ಸರ್ಕಾರದಲ್ಲಿ ಹಿಂದುಳಿದವರಿಗೆ ಕೊಡುವ ಅನುದಾನದಲ್ಲಿ ಮೋಸ ಮಾಡಿದ್ರು. ಬಿಬಿಎಂಪಿ ಕಸ ವಿಲೇವಾರಿ ಮಾಡುವ ವಿಚಾರದಲ್ಲಿ ಸಾಕಷ್ಟು ಹಗರಣ ಮಾಡಿದ್ದಾರೆ. ಬಡವರಿಗೆ ಸಿಗಬೇಕಾದ ಮರಳು ಸಿಗುತ್ತಿಲ್ಲ. ಮರಳನ್ನೇ ಲೂಟಿ ಮಾಡಿ ದೊಡ್ಡ ಶ್ರೀಮಂತರಾಗುವ ಕೆಲಸ ಮಾಡಿದ್ರು. ಕಾಮಗಾರಿಗಳನ್ನೇ ಮಾಡದೇ ಬಿಲ್ ಗಳನ್ನು ಕೊಟ್ಟು ಲೂಟಿ ಮಾಡಿದ್ರುʼʼ ಎಂದು ಆರೋಪ ಪಟ್ಟಿ ಬಿಚ್ಚಿಟ್ಟರು.

ʻʻಬಡವರಿಗೆ ೬-೭ ಕೆಜಿ ಅಕ್ಕಿ ಕೊಟ್ಟಿದ್ದಾಗಿ ಸಿದ್ದರಾಮಯ್ಯ ಹೇಳಿದ್ದಾರೆ. ಆದ್ರೆ ಕೇಂದ್ರ-ರಾಜ್ಯ ಸರ್ಕಾರ ಸೇರಿ ಈಗ ೧೦ ಕೆಜಿ ಕೊಡ್ತಿದೀವಿ. ತಾನು ಬಂದ್ರೆ ೧೦ ಕೆಜಿ ಕೊಡ್ತೀನಿ ಅಂತಿದಾರೆ. ಆದರೆ ನಾವು ಈಗಲೇ ೧೦ ಕೆಜಿ ಕೊಡ್ತಿದಿವಲ್ಲಾʼʼ ಎಂದರು.

ಇದನ್ನೂ ಓದಿ | ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಲಿ ಎಂದು ಆಸೆ ಪಡುತ್ತೇನೆ: ಸಚಿವ ಶ್ರೀರಾಮುಲು ಹೇಳಿಕೆ

Exit mobile version