Site icon Vistara News

ಮಹಿಳೆಯ ವಿವಸ್ತ್ರಗೊಳಿಸಿದವರಿಗೆ ಕಠಿಣ ಶಿಕ್ಷೆ; ಪ್ರೀತಿಸಿ ಮದುವೆಯಾಗೋದು ಹೆಚ್ಚಾಗಿದೆ: ಡಾ. ಜಿ. ಪರಮೇಶ್ವರ್

Dr G Parameshwara infront of Belagavi Winter Session

ಬೆಳಗಾವಿ: ಬೆಳಗಾವಿ ತಾಲೂಕಿನ ವಂಟಮೂರಿ ಗ್ರಾಮದಲ್ಲಿ ಸೋಮವಾರ ನಡೆದಿದ್ದ ಮಹಿಳೆಯನ್ನು ಬೆತ್ತಲೆಗೊಳಿಸಿ ಕಂಬಕ್ಕೆ ಕಟ್ಟಿ ಹಾಕಿ ಹಲ್ಲೆ (Assault Case) ನಡೆಸಿದ್ದ ಅಮಾನವೀಯ ಪ್ರಕರಣವು ಬೆಳಗಾವಿ ಅಧಿವೇಶನದಲ್ಲಿ (Belagavi Winter Session) ಪ್ರಸ್ತಾಪವಾಗಿದೆ. ಈ ದುರ್ವರ್ತನೆ ಬಗ್ಗೆ ಪ್ರತಿಪಕ್ಷ ಬಿಜೆಪಿ ಹಾಗೂ ಕಾಂಗ್ರೆಸ್‌ ಸದಸ್ಯರು ಚರ್ಚೆಗೆ ಅವಕಾಶವನ್ನು ಕೇಳಿದ್ದು, ಶೂನ್ಯ ವೇಳೆ ಚರ್ಚೆಗೆ ಅವಕಾಶ ನೀಡುವುದಾಗಿ ಸ್ಪೀಕರ್ ಯು.ಟಿ. ಖಾದರ್ (Dr G Parameshwara) ಹೇಳಿದ್ದಾರೆ. ಇನ್ನು ಈ ಪ್ರಕರಣದ ಬಗ್ಗೆ ಸದನದಲ್ಲಿ ಉತ್ತರಿಸಿರುವ ಗೃಹ ಸಚಿವ ಡಾ. ಜಿ. ಪರಮೇಶ್ವರ್‌, ಇತ್ತೀಚೆಗೆ ಪ್ರೀತಿ ಮಾಡಿ ಮದುವೆ ಆಗುವುದು ಜಾಸ್ತಿ ಆಗಿದೆ. ಅದಕ್ಕೆ ಪೋಷಕರು ವಿರೋಧ ಮಾಡುತ್ತಾರೆ. ಆದರೆ, ಈ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಳ್ಳಲಾಗಿದೆ. ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯನ್ನು (stringent punishment) ನೀಡಲಾಗುತ್ತದೆ ಎಂದು ಹೇಳಿದ್ದಾರೆ.

ಮಹಿಳೆಯ ವಿವಸ್ತ್ರಗೊಳಿಸಿ ಥಳಿಸಿದ ಪ್ರಕರಣ ಸಂಬಂಧ ಶೂನ್ಯ ವೇಳೆಯಲ್ಲಿ ಪ್ರಸ್ತಾಪ ಮಾಡುವ ನಿರ್ಧಾರಕ್ಕೆ ಬಿಜೆಪಿ ಮತ್ತು ಕಾಂಗ್ರೆಸ್ ಸದಸ್ಯರು ಬಂದಿರುವ ಹಿನ್ನೆಲೆಯಲ್ಲಿ ಉತ್ತರ ನೀಡಿದ ಡಾ. ಜಿ. ಪರಮೇಶ್ವರ್‌, ಬೆಳಗಾವಿಯಲ್ಲಿ ಮಹಿಳೆಯನ್ನು ಅರೆಬೆತ್ತಲೆ ಮಾಡಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಘಟನೆಯ ಸ್ಥಳಕ್ಕೆ ಭೇಟಿ ನೀಡಿದ್ದೇನೆ. ಹೆಣ್ಣು ಮಗಳನ್ನು ವಿವಸ್ತ್ರಗೊಳಿಸಿದ ಪ್ರಕರಣ ಖಂಡನೀಯ. ಪ್ರಕರಣದ ಆರೋಪಿಗಳನ್ನು ಈಗಾಗಲೇ ಹಿಡಿಯಲಾಗಿದೆ. ಸಮಾಜದಲ್ಲಿ ಬದಲಾವಣೆ ಆಗದ ಹೊರತು ಈ ಮರ್ಯಾದೆ ಹತ್ಯೆಯನ್ನು ತಡೆಯುವುದು ಕಷ್ಟ. ನಾವು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದೇವೆ ಎಂದು ಹೇಳಿದರು.

ಆರೋಪಿಗಳಿಗೆ ಯಾವುದೇ ರಕ್ಷಣೆ ಕೊಡುವುದಲ್ಲ. ಹುಡುಗನ ಮನೆಯವರಿಗೆ ರಕ್ಷಣೆ ಕೊಡುವ ಕೆಲಸ ಮಾಡುತ್ತೇವೆ. ಇತ್ತೀಚೆಗೆ ಪ್ರೀತಿ ಮಾಡಿ ಮದುವೆ ಆಗೋದು ಜಾಸ್ತಿ ಆಗಿದೆ. ಅದಕ್ಕೆ ಪೋಷಕರು ವಿರೋಧ ಮಾಡ್ತಾರೆ. ಈ ಪ್ರಕರಣದಲ್ಲಿ ಆರೋಪಿಗಳಿಗೆ ಕಠಿಣ ಶಿಕ್ಷೆ ಆಗುವ ರೀತಿ ನೋಡಿಕೊಳ್ಳುತ್ತೇವೆ ಎಂದು ಡಾ .ಜಿ. ಪರಮೇಶ್ವರ್ ಸದನದಲ್ಲಿ ಉತ್ತರ ನೀಡಿದ್ದಾರೆ.

ನಿಯಮ 69ರಡಿ ನಿಲುವಳಿ ಮಂಡಿಸಿರುವ ಬಿಜೆಪಿ

ಹೆಣ್ಣು ಭ್ರೂಣ ಹತ್ಯೆ ಮತ್ತು ಬೆಳಗಾವಿಯಲ್ಲಿ ಮಹಿಳೆಯನ್ನು ವಿವಸ್ತ್ರಗೊಳಿಸಿದ ವಿಚಾರಕ್ಕೆ ಸಂಬಂಧಪಟ್ಟಂತೆ ನಿಯಮ 69ರಡಿ ನಿಲುವಳಿ ಮಂಡನೆ ಮಾಡಿದ್ದೇವೆ. ಅದಕ್ಕೆ ಚರ್ಚೆಗೆ ಅವಕಾಶ ನೀಡಬೇಕು ಎಂದು ಶಾಸಕಿ ಶಶಿಕಲಾ ಜೊಲ್ಲೆ ಸದನದಲ್ಲಿ ಪ್ರಸ್ತಾಪ ಮಾಡಿದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಸ್ಪೀಕರ್‌ ಯು.ಟಿ. ಖಾದರ್‌, ನಿಲುವಳಿ ಮಂಡನೆಯಾಗಿದೆ. ಶೂನ್ಯ ವೇಳೆ ಚರ್ಚೆಗೆ ಅವಕಾಶ ನೀಡುತ್ತೇನೆ ಎಂದು ಹೇಳಿದರು.

ಇದುವರೆಗೆ 9 ಮಂದಿ ಬಂಧನ

ಈ ಪ್ರಕರಣಕ್ಕೆ ಸಂಬಂಧಿಸಿ ಸೋಮವಾರ ಮತ್ತಿಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದರು. ಇವರೊಂದಿಗೆ ಬಂಧಿತರ ಸಂಖ್ಯೆ 9ಕ್ಕೆ ಏರಿಕೆಯಾಗಿದೆ. ಬೆಳಗಾವಿ‌ ಕಾಕತಿ ಪೊಲೀಸರ ಕಾರ್ಯಾಚರಣೆ ನಡೆಸಿ ಕೃತ್ಯ ಎಸಗಿ ಪರಾರಿಯಾಗಿದ್ದ ಅವರನ್ನು ವಶಕ್ಕೆ ಪಡೆದುಕೊಂಂಡಿದ್ದರು.

ಇದೇ ವೇಳೆ ಪ್ರೀತಿಸಿ ಓಡಿಹೋಗಿರುವ ನವಜೋಡಿಗಳ ಹುಡುಕಾಟಕ್ಕೂ‌ ಪೊಲೀಸರು ಮುಂದಾಗಿದ್ದಾರೆ. ನವಜೋಡಿಗಳು ಮೊಬೈಲ್ ಸ್ವಿಚ್ಡ್‌ ಆಫ್ ಮಾಡಿ ತಲೆ ಮರೆಸಿಕೊಂಡಿದ್ದಾರೆ. ವಂಟಮೂರಿ ಗ್ರಾಮದ ದುಂಡಪ್ಪ ನಾಯಕ(ಗಡ್ಕರಿ), ಪ್ರಿಯಾಂಕ ನಾಯಕ ಓಡಿಹೋದ ಜೋಡಿಗಳಾಗಿದ್ದಾರೆ.

ಏನಿದು ಪ್ರಕರಣ?

ಯುವಕನೊಬ್ಬ ಪ್ರೀತಿಸಿದ ಯುವತಿ ಜತೆಗೆ ಮನೆ ಬಿಟ್ಟು ಓಡಿ ಹೋಗಿದ್ದ. ಆ ಯುವಕನ ತಾಯಿಯನ್ನು ಹುಡುಗಿಯ ಕಡೆಯವರು ಬೆತ್ತಲೆಗೊಳಿಸಿ ಕಂಬಕ್ಕೆ ಕಟ್ಟಿ ಹಾಕಿ ಹಲ್ಲೆ (Assault Case) ನಡೆಸಿರುವ ಅಮಾನವೀಯ ಘಟನೆ ಬೆಳಗಾವಿ ತಾಲೂಕಿನ ವಂಟಮೂರಿ ಗ್ರಾಮದಲ್ಲಿ ಸೋಮವಾರ ನಡೆದಿತ್ತು.

ಕಮಲವ್ವ ಹಲ್ಲೆಗೊಳಗಾದವರು. ದುಂಡಪ್ಪ ಅಶೋಕ ನಾಯಕ್ ಎಂಬಾತ ಪ್ರಿಯಾಂಕಾ ಬಸಪ್ಪ ನಾಯಕ್ ಎಂಬಾಕೆಯನ್ನು ಪ್ರೀತಿಸಿದ್ದ. ಆದರೆ ಇದಕ್ಕೆ ಪ್ರಿಯಾಂಕಾ ಕುಟುಂಬಸ್ಥರ ವಿರೋಧ ಇತ್ತು. ಪ್ರಿಯಾಂಕಾ ಕುಟುಂಬಸ್ಥರು ಸೋಮವಾರ ಯಾದಿ ಮೇ ಶಾದಿ ಮಾಡಲು ನಿರ್ಧರಿಸಿದ್ದರು. ಈ ವಿಚಾರ ತಿಳಿದು ಮಧ್ಯರಾತ್ರಿಯೇ ದುಂಡಪ್ಪ ಪ್ರಿಯಾಂಕಾಳನ್ನು ಕರೆದುಕೊಂಡು ಮನೆ ಬಿಟ್ಟು ಹೋಗಿದ್ದ.

ಈ ವಿಷಯ ತಿಳಿಯುತ್ತಿದ್ದಂತೆ ಪ್ರಿಯಾಂಕಾರ ಕುಟುಂಬಸ್ಥರೊಳಗೆ ಇದ್ದ ರಾಕ್ಷಸತ್ವ ಹೊರಬಂದಿತ್ತು. ದುಂಡಪ್ಪ ತಮ್ಮ ಮಗಳನ್ನು ರಾತ್ರೋರಾತ್ರಿ ಕರೆದುಕೊಂಡು ಹೋಗಿದ್ದಾನೆ ಎಂದು ಆಕ್ರೋಶಗೊಂಡಿದ್ದರು. ಹೀಗಾಗಿ ಯುವತಿ ಮನೆಯವರು ಮಧ್ಯರಾತ್ರಿ ದುಂಡಪ್ಪನ ಮನೆಗೆ ನುಗ್ಗಿ, ಕಲ್ಲು ತೂರಾಟ ಮಾಡಿದ್ದಾರೆ. ಇಡೀ ಮನೆಯನ್ನೇ ಧ್ವಂಸ ಮಾಡಿ ಕ್ರೂರವಾಗಿ ವರ್ತಿಸಿದ್ದಾರೆ.

ಇತ್ತ ಮನೆಯೊಳಗೆ ಮಲಗಿದ್ದ ದುಂಡಪ್ಪನ ತಾಯಿ ಕಮಲವ್ವಳನ್ನು ಹೊರಗೆ ಎಳೆದುಕೊಂಡು ಬಂದು ಹೊಡೆದಿದ್ದಾರೆ. ಅಷ್ಟಕ್ಕೆ ಸುಮ್ಮನಾಗದೇ ಆಕೆಯ ಬಟ್ಟೆ ಬಿಚ್ಚಿಸಿ, ಮೆರವಣಿಗೆ ನಡೆಸಿದ್ದಾರೆ. ಬಳಿಕ ಕಂಬಕ್ಕೆ ಕಟ್ಟಿ ಹಾಕಿ ಮನಬಂದಂತೆ ಹಲ್ಲೆ ಮಾಡಿದ್ದಾರೆ. ಮಹಿಳೆಯರು ಸೇರಿ ಒಂಬತ್ತು ಮಂದಿ ಕಮಲವ್ವಳ ಮೇಲೆ ಹಲ್ಲೆ ನಡೆಸಿದ್ದಾರೆ. ಕಾಕತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

ನಗ್ನ ಮಾಡಿಬಿಟ್ಟರು ಸರ್‌! ಗೃಹಸಚಿವರೊಂದಿಗೆ ದುಃಖ ತೊಡಿಕೊಂಡಿರುವ ಸಂತ್ರಸ್ತೆ

ಇನ್ನು ಸೋಮವಾರವೇ ಬೆಳಗಾವಿ ಜಿಲ್ಲಾಸ್ಪತ್ರೆಗೆ ಗೃಹ ಸಚಿವ ಡಾ. ಜಿ. ಪರಮೇಶ್ವರ ಭೇಟಿ ನೀಡಿ, ಹಲ್ಲೆಗೊಳಗಾದ ಸಂತ್ರಸ್ತೆಯಿಂದ ಘಟನೆಯ ಕುರಿತು ಮಾಹಿತಿ ಪಡೆದಿದ್ದರು. ಗೃಹ ಸಚಿವರಿಗೆ ನಗರ ಪೊಲೀಸ್ ಆಯುಕ್ತ ಸಿದ್ದರಾಮಪ್ಪ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ಜತೆಗಿದ್ದರು.

ಇದನ್ನೂ ಓದಿ: Karnataka weather: ಇನ್ನೆರಡು ದಿನ ಭಾರಿ ಮಳೆ; ದಕ್ಷಿಣ ಕನ್ನಡ ಜಿಲ್ಲೆಗೆ ಎಚ್ಚರಿಕೆ

ಬಳಿಕ ಮಾತನಾಡಿದ ಡಾ. ಜಿ. ಪರಮೇಶ್ವರ್‌, ಪೊಲೀಸರು ಈಗಾಗಲೇ 7 ಮಂದಿಯನ್ನು ಬಂಧಿಸಿದ್ದು, ಇನ್ನಿಬ್ಬರು ಆರೋಪಿಗಳು ಪರಾರಿ ಆಗಿದ್ದಾರೆ. ಇನ್ನು ಮನೆಬಿಟ್ಟು ಹೋದ ಹುಡುಗ-ಹುಡುಗಿಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ. ಇಂತಹ ಘಟನೆಗಳು ಆಗಬಾರದು, ಯುವತಿ ಕುಟುಂಬಸ್ಥರು ದೂರು ನೀಡಿದರೆ ಪೊಲೀಸರು ಕ್ರಮ ತೆಗೆದುಕೊಳ್ಳುತಿದ್ದರು. ಅಥವಾ ಊರಲ್ಲಿ ಹಿರಿಯರೊಂದಿಗೆ ಮಾತನಾಡಿ ಸಮಸ್ಯೆಯನ್ನು ಬಗೆಹರಿಸಿಕೊಳ್ಳಬಹುದಿತ್ತು. ಈ ರೀತಿ ಅಮಾನವೀಯ ವರ್ತನೆ ಸರಿಯಲ್ಲ ಎಂದರು.

Exit mobile version