Site icon Vistara News

Student death | ಅಪಾರ್ಟ್‌ಮೆಂಟ್‌ ಮಹಡಿಯಿಂದ ಬಿದ್ದು ವಿದ್ಯಾರ್ಥಿ ಸಾವು, ಆತ್ಮಹತ್ಯೆ ಶಂಕೆ

death1

ಪುತ್ತೂರು (ದಕ್ಷಿಣ ಕನ್ನಡ ಜಿಲ್ಲೆ): ಪುತ್ತೂರು ನಗರದ ಬೊಳುವಾರು ಸಮೀಪದ ಅಪಾರ್ಟ್‌ಮೆಂಟ್‌ ಮಹಡಿಯಿಂದ ಬಿದ್ದು ವಿದ್ಯಾರ್ಥಿಯೊಬ್ಬ ಮೃತಪಟ್ಟಿದ್ದಾನೆ. ಇದು ಆತ್ಮಹತ್ಯೆಯಾಗಿರಬಹುದೇ ಎಂಬ ಸಂಶಯ ಕಾಡಿದೆ.

ಬೊಳುವಾರು ಸಪರಿವಾರ ಶ್ರೀ ದುರ್ಗಾಪರಮೇಶ್ವರೀ ಮಲರಾಯ ದೇವಸ್ಥಾನ ಸಮಿತಿಯ ಅಧ್ಯಕ್ಷರಾಗಿರುವ ಮನೋಹರ್ ರೈ ಎಂಬವರ ಪುತ್ರನಾಗಿರುವ ಸುಶಾನ್‌ ರೈ ಪುತ್ತೂರಿನ ಸುದಾನ ಶಾಲೆಯ 9ನೇ ತರಗತಿ ವಿದ್ಯಾರ್ಥಿ.

ಸುಶಾನ್‌ ರೈ

ಶುಕ್ರವಾರ ಸಂಜೆ ಶಾಲೆ ಬಿಟ್ಟ ಬಳಿಕ ಮನೆಗೆ ತೆರಳದೆ ಈತ ನೇರವಾಗಿ ವಸತಿ ಸಮುಚ್ಚಯವೊಂದಕ್ಕೆ ತೆರಳಿದ್ದಾನೆ. ಕೆಲವೇ ಸಮಯದಲ್ಲಿ ಸಮುಚ್ಚಯದ ಮಹಡಿಯಿಂದ ಕೆಳಕ್ಕೆ ಬಿದ್ದಿದ್ದಾನೆ ಎನ್ನಲಾಗಿದೆ. ಘಟನೆ ನಡೆದ ತಕ್ಷಣ ಅಲ್ಲಿದ್ದ ಸ್ಥಳೀಯರು ಸೇರಿ ಆತನನ್ನು ಪುತ್ತೂರು ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರು. ಆದರೆ ಗಂಭೀರ ಗಾಯಗೊಂಡಿದ್ದ ಆತನನ್ನು ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿಗೆ ಕರೆದು ಕೊಂಡು ಹೋಗುವಂತೆ ಅಲ್ಲಿನ ವೈದ್ಯರು ಸೂಚಿಸಿದರು. ಅದರಂತೆ ತಕ್ಷಣ ಮಂಗಳೂರಿನ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ ರಾತ್ರಿ ವೇಳೆಗೆ ಆತ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾನೆ.

ಯಾವತ್ತೂ ಅಪಾರ್ಟ್‌ಮೆಂಟ್‌ಗೆ ತೆರಳದ ಆತ ನಿನ್ನೆ ಸಂಜೆ ಯಾವ ಕಾರಣಕ್ಕೆ ಅಲ್ಲಿಗೆ ಹೋಗಿದ್ದಾನೆ ಎಂದು ತಿಳಿದು ಬಂದಿಲ್ಲ. ಅಲ್ಲದೆ ಆತ ಯಾವ ಮಹಡಿಯಿಂದ ಬಿದ್ದಿದ್ದಾನೆ ಎಂದೂ ತಿಳಿದುಬಂದಿಲ್ಲ. ಆದರೆ, ಐದನೇ ಮಹಡಿಯಲ್ಲಿ ಆತ ತನ್ನ ಸ್ಕೂಲ್ ಬ್ಯಾಗ್ ಇರಿಸಿದ್ದು ತಿಳಿದುಬಂದಿದೆ. ಮೆಲ್ನೋಟಕ್ಕೆ ಇದು ಆತ್ಮಹತ್ಯೆಯಂತೆ ಕಂಡು ಬಂದಿದ್ದು ಈ ಬಗ್ಗೆ ಪುತ್ತೂರು ನಗರ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಸುಶಾನ್‌ನ ತಂದೆ ಮನೋಹರ ರೈ, ತಾಯಿ ಸುಧಾ ಮತ್ತು ಸೋದರ ಸೊಹಾನ್‌ ಮತ್ತು ಕುಟುಂಬಿಕರು ಬಂಧುಗಳು ದುಃಖದ ಕಡಲಿನಲ್ಲಿ ಮುಳುಗಿದ್ದಾರೆ.

ಇದನ್ನೂ ಓದಿ | ತಮಿಳುನಾಡಲ್ಲಿ ಮುಂದುವರಿದ ವಿದ್ಯಾರ್ಥಿಗಳ ಸಾವಿನ ಸರಣಿ; 12ನೇ ತರಗತಿ ಹುಡುಗನ ಆತ್ಮಹತ್ಯೆ

Exit mobile version