Site icon Vistara News

Suicide Case : ಪಾರ್ಶ್ವವಾಯುಪೀಡಿತ ಮಗನೊಂದಿಗೆ ತಂದೆ-ತಾಯಿ ವಿಷ ಸೇವಿಸಿ ಆತ್ಮಹತ್ಯೆ; ಸಾಲ ಬಾಧೆ ಶಂಕೆ

shivamogga suicide case

ಶಿವಮೊಗ್ಗ: ಮಿಳಘಟ್ಟ ಮೊದಲನೇ ತಿರುವಿನಲ್ಲಿ ವಾಸವಿರುವ ಒಂದೇ ಕುಟುಂಬದ ಮೂವರು ವಿಷ ಸೇವಿಸಿ ಆತ್ಮಹತ್ಯೆ (Suicide Case) ಮಾಡಿಕೊಂಡಿದ್ದಾರೆ. ಸಾಲ ಬಾಧೆಗೆ ಹೆದರಿ ಈ ನಿರ್ಧಾರಕ್ಕೆ ಬಂದಿದ್ದಾರೆಂದು ಹೇಳಲಾಗುತ್ತಿದೆ.

ಪರಂದಯ್ಯ (70), ದಾನಮ್ಮ (60), ಮಂಜುನಾಥ್ (25) ಮೃತ ದುರ್ದೈವಿಗಳು. ದಾನಮ್ಮ ಮತ್ತು ಪರಂದಯ್ಯ 40 ವರ್ಷಗಳ ಹಿಂದೆ ವಿವಾಹವಾಗಿದ್ದರು. ಕೆಲ ವರ್ಷಗಳ ಹಿಂದೆ ಶಿವಮೊಗ್ಗದಿಂದ ಹೊಸಪೇಟೆಗೆ ಹೋಗಿ ನೆಲಸಿದ್ದರು. ಹೊಸಪೇಟೆಯಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದರು ಎನ್ನಲಾಗಿದೆ.

ಆತ್ಮಹತ್ಯೆ ಮಾಡಿಕೊಂಡವರ ಕುಟುಂದವರು ವಾಸಿಸುತ್ತಿದ್ದ ಮನೆ

4 ವರ್ಷಗಳ ಹಿಂದೆ ಹೊಸಪೇಟೆಯಿಂದ ಪುನಃ ಶಿವಮೊಗ್ಗಕ್ಕೆ ಬಂದು ನೆಲೆಸಿದ್ದರು. ಮಿಳಗಟ್ಟ ಕೆರೆ ಅಂಗಳದಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದರು. ಪರಂದಯ್ಯ ಕೂಲಿ ಕೆಲಸ ಮಾಡಿಕೊಂಡಿದ್ದರೆ, ದಾನಮ್ಮ ಪೇಪರ್ ಫ್ಯಾಕ್ಟರಿಯಲ್ಲಿ ಕೆಲಸಕ್ಕೆ ಹೋಗುತ್ತಿದ್ದರು. ಮಕ್ಕಳಿಲ್ಲದ ಕಾರಣ 20 ವರ್ಷದ ಹಿಂದೆ ಮಂಜುನಾಥನನ್ನು ದತ್ತು ಪಡೆದಿದ್ದರು. ದತ್ತು ಮಗ ಮಂಜುನಾಥ್‌ಗೆ ಪಾರ್ಶ್ವವಾಯು ಹೊಡೆದಿತ್ತು.

ಪಾರ್ಶ್ವವಾಯುಪೀಡಿತ ಮಗನಿಗೆ ಚಿಕಿತ್ಸೆ ಕೊಡಿಸುವುದು ಹಾಗೂ ಆರೈಕೆ ಮಾಡುವುದು ಇವರಿಗೆ ಕಷ್ಟವಾಗುತ್ತಿತ್ತು. ಈ ಹಿನ್ನೆಲೆಯಲ್ಲಿ ಹಲವು ಕಡೆ ಸಾಲ ಮಾಡಿಕೊಂಡಿದ್ದರು ಎನ್ನಲಾಗಿದೆ. ತಾವು ತೀರಿಹೋದರೆ ಆತನ ಮುಂದಿನ ಗತಿಯೇನು ಎಂಬ ಹಿನ್ನೆಲೆಯಲ್ಲಿ ಈ ನಿರ್ಧಾರಕ್ಕೆ ಬರಲಾಗಿದೆಯೇ ಎಂಬ ಬಗ್ಗೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಇದನ್ನೂ ಓದಿ | Monkey shot dead : ಸಿಕ್ಕ ಸಿಕ್ಕವರ ಮೇಲೆ ದಾಳಿ ನಡೆಸಿ ಕಚ್ಚುತ್ತಿದ್ದ ಹುಚ್ಚು ಕೋತಿಗೆ ಗುಂಡಿಕ್ಕಿ ಹತ್ಯೆ

Exit mobile version