Site icon Vistara News

ನೀರಿನ ಶುಲ್ಕ ಪರಿಷ್ಕರಿಸಲು ಈಶ್ವರಪ್ಪ ಕಚೇರಿ ಎದುರು ಪ್ರತಿಭಟನೆ

ಶಿವಮೊಗ್ಗ: ನಗರದಲ್ಲಿ ಕುಡಿಯುವ ನೀರಿನ ಶುಲ್ಕ ಅವೈಜ್ಞಾನಿಕವಾಗಿದ್ದು, ಇದನ್ನು ಸರಿಪಡಿಸಲು ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ನಾಗರಿಕರ ಸಭೆ ಕರೆಯಬೇಕೆಂದು ಆಗ್ರಹಿಸಿ ಶಿವಮೊಗ್ಗ ನಾಗರಿಕ ಹಿತರಕ್ಷಣಾ ವೇದಿಕೆಗಳ ಒಕ್ಕೂಟದಿಂದ ಶಾಸಕ ಕೆ.ಎಸ್. ಈಶ್ವರಪ್ಪ ಅವರ ಕಚೇರಿ ಎದುರು ಧರಣಿ ನಡೆಯಿತು.

ಸಭೆ ಕರೆಯುವಂತೆ ಶಾಸಕರಿಗೆ ಎರಡು ಬಾರಿ ಮನವಿ ಸಲ್ಲಿಸಿದ್ದು, ಆದಾಗ್ಯೂ ಶಾಸಕರು ಮನವಿಯನ್ನು ಪರಿಗಣಿಸದೇ ಇರುವುದರಿಂದ ಕಚೇರಿ ಮುಂಭಾಗದಲ್ಲಿ ಶಾಂತಿಯುತ ಹಾಗೂ ಕಾನೂನಾತ್ಮಕ ಪ್ರತಿಭಟನೆ ಕೈಗೊಂಡಿರುವುದಾಗಿ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಕೆ.ವಿ. ವಸಂತಕುಮಾರ್ ತಿಳಿಸಿದ್ದಾರೆ.

ಶಿವಮೊಗ್ಗ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ 61 ಸಾವಿರ ನೀರಿನ ತೆರಿಗೆದಾರರಿದ್ದಾರೆ. ಅಹೋರಾತ್ರಿ ಧರಣಿ ನಡೆಸಿದ ನಂತರ ಕೆಲವು ವಾರ್ಡ್‌ಗಳಲ್ಲಿ ಮಾತ್ರ ನೀರಿನ ಸಂಪರ್ಕವನ್ನು ಕಲ್ಪಿಸಲಾಗಿದೆ. ಈ ನೀರಿನ ಶುಲ್ಕ ಅತ್ಯಂತ ದುಬಾರಿಯಾಗಿದೆ ಎಂದರು. ಮೈಸೂರಿನಲ್ಲಿ 25 ಸಾವಿರ ಲೀಟರ್ 150 ರೂ. ಶುಲ್ಕ ಇದ್ದರೆ ಶಿವಮೊಗ್ಗದಲ್ಲಿ 275 ರೂ. ಶುಲ್ಕ ವಿಧಿಸಲಾಗುತ್ತಿದೆ. ಮೈಸೂರಿನಲ್ಲಿ 50 ಸಾವಿರ ಲೀಟರ್ ಗೆ 275 ರೂ. ಶುಲ್ಕ ವಿಧಿಸಿದರೆ ಶಿವಮೊಗ್ಗದಲ್ಲಿ 400 ರೂ. ಶುಲ್ಕ ವಿಧಿಸಲಾಗುತ್ತಿದೆ. ಈಗಾಗಲೇ ವಿಧಿಸಲಾಗಿರುವ ನೀರಿನ ಶುಲ್ಕ ಅವೈಜ್ಞಾನಿಕವಾಗಿದೆ ಎಂದು ಆರೋಪಿಸಿದರು.

ಸಮಾನ ಮಾನದಂಡ ವಿಧಿಸಿ ನೀರಿನ ಶುಲ್ಕ ನಿಗದಿ ಮಾಡಬೇಕು ಎಂದು ಒತ್ತಾಯಿಸದ ಅವರು, ಶಾಸಕರು ಸಂಬಂಧಿಸಿದ ಅಧಿಕಾರಿಗಳು ಹಾಗೂ ನಾಗರಿಕರ ಸಭೆಯನ್ನು ಕೂಡಲೇ ಕರೆಯದಿದ್ದಲ್ಲಿ ಪ್ರತಿವಾರ ಶಾಸಕರ ಕಚೇರಿ ಎದುರು ಧರಣಿ ನಡೆಸಲಾಗುವುದು. ಈ ಹೋರಾಟ ನಿರಂತರವಾಗಿದ್ದು, ಒಂದು ವೇಳೆ ನಮ್ಮ ಹೋರಾಟಕ್ಕೆ ಸ್ಪಂದಿಸದೆ ಸಭೆ ಕರೆಯದಿದ್ದಲ್ಲಿ ಅಮರಣಾಂತ ಉಪವಾಸ ಸತ್ಯಾಗ್ರಹವನ್ನು ಶಾಸಕರ ಕಚೇರಿ ಎದುರು ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಧರಣಿಯಲ್ಲಿ ಒಕ್ಕೂಟದ ಪ್ರಮುಖರಾದ ಡಾ. ಎ. ಸತೀಶ್ ಕುಮಾರ್ ಶೆಟ್ಟಿ, ಎಸ್.ಬಿ.ಅಶೋಕ ಕುಮಾರ್, ಜನಾರ್ಧನ ಪೈ, ಜನಮೇಜಿರಾವ್, ರಾಗರಾಜ್, ರಘುಪತಿ, ಚಂದ್ರಶೇಖರ್ ಗೌಡ ಮತ್ತಿತರರಿದ್ದರು.

ಇದನ್ನೂ ಓದಿ: ರನ್ನ ಸಕ್ಕರೆ ಕಾರ್ಖಾನೆ ಆರಂಭಿಸುವ ಸಿಎಂ ಭರವಸೆ ಹುಸಿ: ಹೋರಾಟದ ಮುನ್ಸೂಚನೆ

Exit mobile version