Site icon Vistara News

HD Kumaraswamy: ತರೀಕೆರೆ ಅರಣ್ಯದಲ್ಲಿ ಕಡಿದ ಮರಗಳು ಯಾವ ಶಾಸಕನ ಮನೆಗೆ ಹೋದವು? ಎಚ್‌ಡಿಕೆ

HD Kumaraswamy and Ishwar Khandre

ಬೆಂಗಳೂರು: ರಾಜ್ಯದಲ್ಲಿ ಅರಣ್ಯ ಇಲಾಖೆಯಲ್ಲಿ (Forest Department) ನಡೆದಿರುವ ಅಕ್ರಮಗಳ ಬಗ್ಗೆ ಮಾಹಿತಿ, ದಾಖಲೆಗಳನ್ನು ಕೊಡುತ್ತೇನೆ. ತನಿಖೆ ಮಾಡುವ ಧಮ್ಮು, ತಾಕತ್ತು ಅರಣ್ಯ ಸಚಿವ ಈಶ್ವರ ಖಂಡ್ರೆ (Forest Minister Ishwar Khandre) ಅವರಿಗೆ ಇದೆಯಾ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ (HD Kumaraswamy) ಸವಾಲು ಹಾಕಿದರು.

ಪಕ್ಷದ ಕಚೇರಿ ಜೆಪಿ ಭವನದಲ್ಲಿ ಮಾಧ್ಯಮಗಳ ಜತೆ ಮಾತನಾಡಿದ ಎಚ್.ಡಿ. ಕುಮಾರಸ್ವಾಮಿ, ತರೀಕೆರೆಯಲ್ಲಿನ ಅರಣ್ಯದಲ್ಲಿ ಮರಗಳನ್ನು ಕಡಿದ ಪ್ರಕರಣದಲ್ಲಿ ನಿಮ್ಮ ಸರ್ಕಾರದ ಅಧಿಕಾರಿಗಳೇ ಎಷ್ಟು ಜನ ಶಾಮೀಲಾಗಿದ್ದಾರೆ? ಕಡಿದ ಆ ಮರಗಳಲ್ಲಿ ಅರ್ಧ ಭಾಗದಷ್ಟು ಮರಗಳು ಯಾವ ಶಾಸಕನ ಮನೆಗೆ ಹೋಯಿತು? ಮನೆ ಕಟ್ಟುತ್ತಿದ್ದ ಶಾಸಕನ ಮನೆಗೆ ಮರಗಳು ಹೋಗಿವೆ. ಈ ಬಗ್ಗೆ ನಿಮಗೆ ಗೊತ್ತಿಲ್ಲವಾ‌ ಈಶ್ವರ ಖಂಡ್ರೆ ಅವರೇ? ಎಂದು ಪ್ರಶ್ನಿಸಿದರು.

ನಾನು ದಾಖಲೆ ಇಲ್ಲದೆ ಮಾತನಾಡಲ್ಲ. ಆ ಶಾಸಕ ಯಾರು ಎಂದು ಈಶ್ವರ್ ಖಂಡ್ರೆ ಅವರನ್ನೇ ಕೇಳಿ ಎಂದು ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಎಚ್.ಡಿ. ಕುಮಾರಸ್ವಾಮಿ ಉತ್ತರ ನೀಡಿದರು.

ತರೀಕೆರೆಯಲ್ಲಿ ಮರಗಳು ಯಾವ ಶಾಸಕನ ಮನೆಗೆ ಹೋದವು?

ಆ ಮರಗಳು ತರೀಕೆರೆಯಲ್ಲಿ ಯಾವ ಶಾಸಕನ ಮನೆಗೆ ಹೋದವು? ನೀವು ಕ್ರಮ ತೆಗೆದುಕೊಂಡಿದ್ದೀರಾ? ಈವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ ಯಾಕೆ? ಮರ ಕಡಿಯುವವರಿಗೆ ಕುಮಾರಸ್ವಾಮಿ ಬೆಂಬಲ ಕೊಡುತ್ತಿದ್ದಾರೆ ಎಂದು ಸಚಿವರು ಹೇಳಿದ್ದಾರೆ. ನಾನು ಮರ ಕಡಿಯುವವರಿಗಾಗಲಿ, ಅಕ್ರಮ ಚಟುವಟಿಕೆ ಮಾಡುವವರಿಗಾಗಲಿ ಬೆಂಬಲ ಕೊಡುವವನಲ್ಲ. ಬಹುಶಃ ಈಶ್ವರ್ ಖಂಡ್ರೆಗೆ ಅವರಿಗೆ ಮಾಹಿತಿ ಸರಿಯಾಗಿ ಇಲ್ಲ ಎಂದು ಕುಮಾರಸ್ವಾಮಿ ಅವರು ತರಾಟೆಗೆ ತೆಗೆದುಕೊಂಡರು.

ಖಂಡ್ರೆಗೆ ಎಚ್‌ಡಿಕೆ ಸವಾಲು

ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸಚಿವರೇ ಕರೆದ ಸಭೆಯಲ್ಲಿ 40 ಜನ ಅಧಿಕಾರಿಗಳು ಇದ್ದರು. 5 ಜನ ಅಧಿಕಾರಿಗಳನ್ನು ಅಮಾನತು ಮಾಡಿರುವ ವಿಚಾರವಾಗಿ ಹಿರಿಯ ಅಧಿಕಾರಿಗಳು ಏನು ಸಲಹೆ ಕೊಟ್ಟರು? ಎ1, ಎ2 ಆರೋಪಿಗಳೇ ಬೇರೆ. ವಿಕ್ರಮ್ ಸಿಂಹ ಮೇಲೆ ಎಫ್‌ಐಆರ್‌ ಹಾಕೇ ಇಲ್ಲ. ಎ1, ಎ2 ಆರೋಪಿಗಳಿಗೆ ಅರಣ್ಯಾಧಿಕಾರಿ ಕಚೇರಿಯಲ್ಲಿ ಜಾಮೀನು ಕೊಟ್ಟು ಕಳಿಸಿದ್ದಾರೆ. ವಿಕ್ರಮ್ ಸಿಂಹರನ್ನು ಯಾಕೆ ಅರೆಸ್ಟ್ ಮಾಡಿದಿರಿ? ಯಾಕೆ ಮ್ಯಾಜಿಸ್ಟ್ರೇಟ್ ಮುಂದೆ ನಿಲ್ಲಿಸಿದಿರಿ? ನಿಮಗೆ ಕೋರ್ಟ್ ಏನು ಹೇಳಿತು? ಇದಕ್ಕಿಂತಲೂ ಅತ್ಯಂತ ಗಂಭೀರ ಪ್ರಕರಣ ನಿಮಗೆ ಕೊಡಲು ನಾನು ಸಿದ್ಧ. ಈಶ್ವರ್ ಖಂಡ್ರೆ ಅವರೇ ಕ್ರಮ ತೆಗೋತೀರಾ? ಎಂದು ಎಚ್.ಡಿ. ಕುಮಾರಸ್ವಾಮಿ ಸವಾಲು ಹಾಕಿದರು.

ದಾಖಲೆಗಳೇ ಕಾಣೆ!

ವಿರಾಜಪೇಟೆಯಲ್ಲಿ ರೋಸ್ ವುಡ್, ಟೀಕ್ ವುಡ್ ಕದ್ದು ಎರಡು ವರ್ಷಗಳಿಂದ ಸಾಗಾಣಿಕೆ ಮಾಡಲಾಗುತ್ತಿದೆ. ಕಳೆದ ಆಗಸ್ಟ್‌ನಲ್ಲಿ ಹಿರಿಯ ಅಧಿಕಾರಿಗಳು ಈ ಪ್ರಕರಣದ ಬಗ್ಗೆ ಮಾಹಿತಿ ಕೊಟ್ಟಿದ್ದರು. ಆ ಪ್ರಕರಣದಲ್ಲಿ ಇದ್ದ ಎಲ್ಲ ದಾಖಲೆಗಳು ಕಾಣೆಯಾಗಿವೆ. ಇದರ ಬಗ್ಗೆ ಸರ್ಕಾರ ಗಂಭೀರವಾಗಿ ಕ್ರಮ ಕೈಗೊಳ್ಳಬೇಕು ಎಂದು ಹೇಳಿದ್ದರು. ಈ ಪ್ರಕರಣದ ಬಗ್ಗೆ ಈಶ್ವರ್ ಖಂಡ್ರೆ ಅವರು ಯಾಕೆ ಕ್ರಮ ತೆಗೆದುಕೊಂಡಿಲ್ಲ? ಕೋಟ್ಯಂತರ ರೂಪಾಯಿ ಬೆಲೆಬಾಳುವ ಮರಗಳು ಅವು. ಏನೂ ಕ್ರಮ ಆಗಿಲ್ಲ. ಯಾಕೆ ಖಂಡ್ರೆ ಅವರೇ ಎಂದು ಎಚ್.ಡಿ. ಕುಮಾರಸ್ವಾಮಿ ಕಿಡಿಕಾರಿದರು.

ವಿಕ್ರಮ್ ಸಿಂಹ ಪ್ರಕರಣದಲ್ಲಿ 12 ದಿನಗಳಲ್ಲಿ ಕ್ರಮ ಆಗಿದೆ. ಶರವೇಗದಲ್ಲಿ ಕ್ರಮ ಆಗಿದೆ. ವಿರಾಜಪೇಟೆ ಪ್ರಕರಣದ ಬಗ್ಗೆ ಮೌನ ಯಾಕೆ? ಆಗಸ್ಟ್‌ನಲ್ಲಿ ನಿಮ್ಮ ಮುಂದೆ ‌ಮಾಹಿತಿ ಬಂದಿದೆ. ಎಷ್ಟು ಮರ ಕದಿಯುತ್ತಿದ್ದಾರೆ ಅಂತ ನಿಮಗೆ ಮಾಹಿತಿ ಇದೆ. ಯಾಕೆ ಇದುವರೆಗೂ ಕ್ರಮ ಆಗಿಲ್ಲ? ಎಂದು ಎಚ್.ಡಿ. ಕುಮಾರಸ್ವಾಮಿ ಪ್ರಶ್ನೆ ಮಾಡಿದರು.

ಇದನ್ನೂ ಓದಿ: Fire Station: ರಾಜ್ಯದ 17 ಕಡೆ 329 ಕೋಟಿ ರೂ. ವೆಚ್ಚದಲ್ಲಿ ಅಗ್ನಿಶಾಮಕ ಠಾಣೆ ನಿರ್ಮಾಣ: ಕೃಷ್ಣ ಬೈರೇಗೌಡ

ಮಾಜಿ ಸಚಿವ ಬಂಡೆಪ್ಪ ಕಾಶೇಂಪೂರ್, ಮಾಜಿ ಶಾಸಕ ರಾಜಾ ವೆಂಕಟಪ್ಪ ನಾಯಕ, ಜೆಡಿಎಸ್ ನಗರ ಘಟಕದ ಅಧ್ಯಕ್ಷ ಹೆಚ್. ಎಂ. ರಮೇಶ್ ಗೌಡ ಸೇರಿದಂತೆ ಅನೇಕ ಮುಖಂಡರು ಹಾಜರಿದ್ದರು.

Exit mobile version