Site icon Vistara News

Blast in Bus : ತುಮಕೂರು ಬಳಿ ಗಣಪತಿ ಬಸ್ಸಿನಲ್ಲಿ ನಿಗೂಢ ಸ್ಫೋಟ; ಮುಸ್ಲಿಂ ಮಹಿಳೆ ವಿಚಾರಣೆ

Blast in Bus1

ತುಮಕೂರು: ತುಮಕೂರಿನ (Tumkur News) ಗೂಳೂರು ಎಂಬಲ್ಲಿ ಕುಣಿಗಲ್‌ನಿಂದ ತುಮಕೂರಿಗೆ ಬರುತ್ತಿದ್ದ ಶ್ರೀ ಗಣಪತಿ (Sri Ganapati Bus) ಎಂಬ ಹೆಸರಿನ ಖಾಸಗಿ ಬಸ್‌ನಲ್ಲಿ ಬುಧವಾರ ಸಂಜೆ ನಿಗೂಢ ಸ್ಫೋಟವೊಂದು (Blast in Bus) ಸಂಭವಿಸಿದ್ದು ಭಾರಿ ಆತಂಕಕ್ಕೆ ಕಾರಣವಾಗಿದೆ. ಘಟನೆಯಲ್ಲಿ ಕೆಲವರಿಗೆ ಸಣ್ಣಪುಟ್ಟ ಗಾಯಗಳಾಗಿವೆ.

ಮುಸ್ಲಿಂ ಮಹಿಳೆಯೊಬ್ಬರ (Muslim woman) ಕೈಯಲ್ಲಿದ್ದ ಆ್ಯಸಿಡ್ ಬಾಟಲ್ ಸ್ಫೋಟಗೊಂಡು (Acid Bottle Blast) ಈ ಅವಘಡ ಸಂಭವಿಸಿದೆ ಎಂದು ಹೇಳಲಾಗಿದೆ. ತುಮಕೂರು ತಾಲೂಕಿನ ಹೊನ್ನುಡಿಕೆ ಹ್ಯಾಂಡ್ ಪೋಸ್ಟ್ ನಿಂದ ಬರ್ತಿದ್ದ ಮಹಿಳೆ ಶಕೀಲಾ ಬಾನು (48) ಕೈಯಲ್ಲಿ ಟಾಯ್ಲೆಟ್‌ಗೆ ಬಳಸುವ ಆ್ಯಸಿಡ್ ತುಂಬಿದ್ದ ಬಾಟಲನ್ನು ‌ ಹಿಡಿದುಕೊಂಡಿದ್ದರು ಎನ್ನಲಾಗಿದೆ. ಅದು ಒಮ್ಮೆಗೇ ಸ್ಫೋಟಗೊಂಡು ಸದ್ದಿನೊಂದಿಗೆ ಸಿಡಿದಿದೆ. ಘಟನೆಯಿಂದಾಗಿ ಖಾಸಗಿ ಬಸ್‌ನಲ್ಲಿದ್ದ ಪ್ರಯಾಣಿಕರು ಶಾಕ್‌ಗೆ ಒಳಗಾಗಿದ್ದಾರೆ. ಸಣ್ಣ ಪುಟ್ಟ ಗಾಯವಾದವರನ್ನು ತುಮಕೂರು ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಯಾರಿಗೂ ಪ್ರಾಣಾಪಾಯವಿಲ್ಲ.

ಮೇಲ್ನೋಟಕ್ಕೆ ಇದು ಆಸಿಡ್‌ ಒತ್ತಡಕ್ಕೆ ಒಳಗಾಗಿ ಸ್ಫೋಟಿಸಿದೆ ಎಂದು ನಂಬಲಾಗಿದೆ. ಸದ್ಯ ಜಿಲ್ಲೆಯಲ್ಲಿ ಆಸಿಡ್‌ ಮಾರಾಟಕ್ಕೆ ನಿಷೇಧವಿದೆ. ಈ ಮಹಿಳೆ ತಾನು ಕೆಲಸ ಮಾಡುತ್ತಿದ್ದ ಗುಜರಿ ಅಂಗಡಿಯಿಂದ ಆ್ಯಸಿಡ್ ತಂದಿರುವುದಾಗಿ ಹೇಳಿದ್ದಾರೆ. ಸ್ಥಳಕ್ಕೆ ತುಮಕೂರು ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಇದನ್ನೂ ಓದಿ : LPG Cylinder Blast: ವಿಜಯಪುರದಲ್ಲಿ ಗ್ಯಾಸ್ ಸಿಲಿಂಡರ್ ಸ್ಫೋಟ; ನಾಲ್ವರಿಗೆ ಗಂಭೀರ ಗಾಯ

ಗುಜರಿ ಅಂಗಡಿಯಲ್ಲಿ ಕೆಲಸಕ್ಕೆ ಇರುವ ಮಹಿಳೆಯ ವಿಚಾರಣೆ ಎಂದ ಎಸ್ಪಿ

ʻʻಇವತ್ತು ಸಂಜೆ 6.30ಕ್ಕೆ ನಮಗೆ ಒಂದು ಮಾಹಿತಿ ಬಂತು. ಒಂದು ಖಾಸಗಿ ಬಸ್ ಕುಣಿಗಲ್ ನಿಂದ ತುಮಕೂರಿಗೆ ಬರುತ್ತಿರುವಾಗ ಗೂಳೂರು ಬಸ್ ಸ್ಟಾಂಡ್ ಹತ್ತಿರ ಒಬ್ಬ ಮಹಿಳೆಯ ಬಳಿ ಇದ್ದ ಆ್ಯಸಿಡ್ ಬಾಟಲಿ ಚೆಲ್ಲಿ ಅಕ್ಕಪಕ್ಕದಲ್ಲಿದ್ದವರಿಗೆ ಗಾಯಗಳಾಗಿವೆ ಅನ್ನೋ ಮಾಹಿತಿ ಬಂತು. ತಕ್ಷಣವೇ ನಮ್ಮ ಪೊಲೀಸರು ಸ್ಥಳಕ್ಕೆ ಬಂದಿದ್ದಾರೆ. ಶಕೀಲಾ ಬಾನು ಎಂಬ ಸುಮಾರು 48 ವರ್ಷ ವಯಸ್ಸಿನ ಮಹಿಳೆ ಗುಜರಿ ಅಂಗಡಿಯಲ್ಲಿ ಕೆಲಸ ಮಾಡ್ತಾ ಇದ್ದರು. ಅಲ್ಲಿಂದ ತುಮಕೂರಿಗೆ ಹೋಗುವಾಗ ಕೂಲ್ ಡ್ರಿಂಕ್ ಬಾಟಲಿಯಲ್ಲಿ ಆ್ಯಸಿಡ್ ತರುತ್ತಿದ್ದರು. ಘಟನೆಯಲ್ಲಿ ಯಾರಿಗೂ ಗಂಭೀರ ಗಾಯಗಳಾಗಿಲ್ಲ. ಎಲ್ಲರನ್ನೂ ಆಸ್ಪತ್ರೆಗೆ ದಾಖಲಿಸಲಾಗಿದೆ. ಆ ಮಹಿಳೆಯನ್ನು ವಶಕ್ಕೆ ಪಡೆಯಲಾಗಿದೆ ಎಂದು ಘಟನೆಯ ಬಗ್ಗೆ ತುಮಕೂರು ಎಸ್ ಪಿ ಅಶೋಕ್ ಕೆ.ವಿ ವಿಸ್ತಾರ ನ್ಯೂಸ್‌ಗೆ ಹೇಳಿಕೆ ನೀಡಿದ್ದಾರೆ.

ಎಫ್ಐಆರ್ ದಾಖಲಿಸಿ ಮಹಿಳೆಯ ವಿಚಾರಣೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುತ್ತೇವೆ. ಇಂಡಸ್ಟ್ರೀಯಲ್ ಉದ್ದೇಶಕ್ಕೆ ಗುಜರಿ ಅಂಗಡಿಗಳಲ್ಲಿ ಆ್ಯಸಿಡ್ ಬಳಸಲು ಅನುಮತಿ ಇದೆ. ಆ ಅಂಗಡಿಯ ಲೈಸನ್ಸ್ ಕೂಡ ಚೆಕ್ ಮಾಡ್ತೀವಿ. ಒಂದು ವೇಳೆ ಸೂಕ್ತ ದಾಖಲಾತಿ ಇಲ್ಲದೇ ಇದ್ದರೆ ಅವರ ವಿರುದ್ಧವೂ ಕ್ರಮ ಕೈಗೊಳ್ಳುತ್ತೇವೆ ಎಂದು ಎಸ್‌ಪಿ ತಿಳಿಸಿದರು.

ಈ ನಡುವೆ ಬಸ್‌ನಲ್ಲಿ ಆ್ಯಸಿಡ್ ಸ್ಫೋಟಗೊಂಡ ಸ್ಥಳಕ್ಕೆ ಎಫ್ಎಸ್ ಎಲ್ ಸಿಬ್ಬಂದಿ ಆಗಮಿಸಿ ಪರಿಶೀಲನೆ ನಡೆಸುತ್ತಿದ್ದಾರೆ. ಬಸ್ ನೊಳಗೆ ಬಿದ್ದಿದ್ದ ಆ್ಯಸಿಡ್ ಮಾದರಿ ಕಲೆಹಾಕಿ ಪರಿಶೀಲನೆ ನಡೆದಿದೆ. ಆ್ಯಸಿಡ್ ಕೊಂಡೊಯ್ಯುತ್ತಿದ್ದ ಮಹಿಳೆಯ ಮೇಲೆ ಎಫ್ಐಆರ್ ದಾಖಲಿಸಲು ಪೊಲೀಸರು ಸಜ್ಜಾಗಿದ್ದಾರೆ.

ಮರಳೂರು ದಿಣ್ಣೆ ಮೂಲದ ಶಕೀಲಾ ಬಾನು ವಿರುದ್ಧ ಐಪಿಸಿ ಸೆಕ್ಷನ್ 285, 337 ಅಡಿಯಲ್ಲಿ ಪ್ರಕರಣ ದಾಖಲಿಸುವ ಸಾಧ್ಯತೆ ಇದೆ. ಇದು ಬೆಂಕಿ ಅಥವಾ ದಹನಕಾರಿ ವಸ್ತುಗಳಿಗೆ ಸಂಬಂಧಿಸಿದಂತೆ ನಿರ್ಲಕ್ಷ್ಯದ ನಡವಳಿಕೆ ಎಂಬ ಸೆಕ್ಷನ್‌ ಆಗಿದೆ. ಇತರರ ಜೀವ ಅಥವಾ ವೈಯಕ್ತಿಕ ಸುರಕ್ಷತೆಗೆ ಅಪಾಯವನ್ನುಂಟು ಮಾಡುವ ಕ್ರಿಯೆ ಆರೋಪದಡಿ ಪ್ರಕರಣ ದಾಖಲಿಸಲು ಪೊಲೀಸರು ಚಿಂತನೆ ನಡೆಸುತ್ತಿದ್ದಾರೆ.

Exit mobile version