Site icon Vistara News

ಅತ್ತೆ- ಸೊಸೆ ಜಗಳ | ಮನೆ ಬಿಟ್ಟು ಹೋಗದ ಅತ್ತೆಯ ಬುರುಡೆ ಸೀಳಿದ ಸೊಸೆ

assault case

ತುಮಕೂರು: ಅತ್ತೆ ಸೊಸೆ ಜಗಳ ಉಲ್ಬಣಾವಸ್ಥೆಗೆ ಹೋಗಿ, ಅತ್ತೆಯ ಮೇಲೆ ಸೊಸೆ ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ತುಮಕೂರು ಜಿಲ್ಲೆ ಕುಣಿಗಲ್ ಪಟ್ಟಣದ ಕೆಆರ್‌ಎಸ್ ಅಗ್ರಹಾರದಲ್ಲಿ ನಡೆದಿದೆ. ಮನೆ ಬಿಟ್ಟು ತೆರಳದ ಅತ್ತೆಯ ಬುರುಡೆಯನ್ನು ಸೊಸೆ ಸೀಳಿಹಾಕಿದ್ದು, ಹಲ್ಲೆಗೊಳಗಾದ ಅತ್ತೆ ಸಾವು ಬದುಕಿನ‌ ನಡುವೆ ಆಸ್ಪತ್ರೆಯಲ್ಲಿ ನರಳಾಡುತ್ತಿದ್ದಾರೆ.

ಚಿಕ್ಕತಾಯಮ್ಮ ಹಲ್ಲೆಗೆ ಒಳಗಾದ ಅತ್ತೆ. ಸೊಸೆ ಸೌಮ್ಯ ಕಬ್ಬಿಣದ ಪೈಪ್‌ನಿಂದ ಅತ್ತೆ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ಚಿಕ್ಕತಾಯಮ್ಮಗೆ ಇಬ್ಬರು ಗಂಡು ಮಕ್ಕಳಿದ್ದು, ಶಂಕರ್‌ ಎಂಬವರ ಕುಟುಂಬ ಬೆಂಗಳೂರಿನಲ್ಲಿ ನೆಲೆಸಿದೆ. ಸೌಮ್ಯ ಹಾಗೂ ಪತಿ ಶಿವಕುಮಾರ್ ಕುಣಿಗಲ್‌ನಲ್ಲಿ ಚಿಕ್ಕತಾಯಮ್ಮನ ಜೊತೆ ವಾಸವಾಗಿದ್ದಾರೆ. ಪದೇ ಪದೆ ಅತ್ತೆ ಚಿಕ್ಕತಾಯಮ್ಮ ಹಾಗೂ ಸೊಸೆ ಸೌಮ್ಯಗೆ ಜಗಳವಾಗುತ್ತಿದ್ದು, ಮನೆ ಬಿಟ್ಟು ಬೆಂಗಳೂರಿನಲ್ಲಿರುವ ಮತ್ತೊಬ್ಬ ಮಗನ ಮನೆಗೆ ಹೋಗುವಂತೆ ಸೌಮ್ಯ ಗಲಾಟೆ ಮಾಡುತ್ತಿದ್ದಳು.

ಸೊಸೆ ವರ್ತನೆಯ‌ ಬಗ್ಗೆ ಅಕ್ಕಪಕ್ಕದವರು ಬುದ್ಧಿವಾದ ಹೇಳಿದ್ದರು. ಆದರೂ ಸುಮ್ಮನಾಗದ ಸೌಮ್ಯ ಪದೇ ಪದೆ ಅತ್ತೆ ಜೊತೆ ಇದೇ ವಿಚಾರಕ್ಕೆ ಕಿರಿಕ್ ಮಾಡುತ್ತಿದ್ದು, ನಿನ್ನೆ ಇದೇ ವಿಚಾರಕ್ಕೆ ಗಲಾಟೆ ಮಾಡಿ ಚಿಕ್ಕತಾಯಮ್ಮನ ತಲೆಗೆ ರಾಡ್‌ನಿಂದ ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದಾಳೆ. ಅಡುಗೆ ಮನೆಯಲ್ಲಿ ರಕ್ತದ ಮಡುವಿನಲ್ಲಿ ಬಿದ್ದಿದ್ದ ಚಿಕ್ಕತಾಯಮ್ಮನನ್ನು ಸ್ಥಳೀಯರು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಕುಣಿಗಲ್ ತಾಲೂಕು ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ‌ ನೀಡಿ, ಹೆಚ್ಚಿನ ಚಿಕಿತ್ಸೆಗಾಗಿ ಆದಿಚುಂಚನಗಿರಿ ಆಸ್ಪತ್ರೆಗೆ ರವಾನಿಸಲಾಗಿದೆ. ಘಟನೆ ಸಂಬಂಧ ಕುಣಿಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ | ತಾಯಿಗೆ ಬೈದಿದ್ದನ್ನು ಪ್ರಶ್ನಿಸಿದ್ದಕ್ಕೆ ನಡು ರಸ್ತೆಯಲ್ಲಿ ತಲೆಗೆ ಪಿಸ್ತೂಲ್‌ ಇಟ್ಟು ಮಾರಣಾಂತಿಕ ಹಲ್ಲೆ

Exit mobile version