Site icon Vistara News

Dead Body Found : ಅರ್ಧಂಬರ್ಧ ಸುಟ್ಟ ಸ್ಥಿತಿಯಲ್ಲಿ ಯುವತಿಯ ಶವ ಪತ್ತೆ

Dead body found

ತುಮಕೂರು: ಸುಟ್ಟ ಸ್ಥಿತಿಯಲ್ಲಿ ಯುವತಿಯೊಬ್ಬಳ ಮೃತದೇಹವು (Dead Body Found) ಪತ್ತೆಯಾಗಿದೆ. ತುಮಕೂರಿನ (Tumkur News) ಗುಬ್ಬಿ ತಾಲೂಕಿನ ದೊಡ್ಡಗುಣಿ ಬಳಿಯ ಶಿವಮೊಗ್ಗ- ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 206ರ (Highway Road) ಪಕ್ಕದಲ್ಲಿ ಘಟನೆ ನಡೆದಿದೆ.

ಸುಮಾರು 25 ವರ್ಷದ ಯುವತಿಯನ್ನು ಕೊಲೆ ಮಾಡಿ ಬಳಿಕ ಗುರುತು ಸಿಗಬಾರೆಂದು ಸುಟ್ಟು ಹಾಕಿರುವ ಶಂಕೆ ವ್ಯಕ್ತವಾಗಿದೆ. ಅರ್ಧಂಬರ್ಧ‌ ಸುಟ್ಟಿರುವ ಯುವತಿ ಶವ ಕಂಡು ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಯುವತಿ ಮುಖವು ಸಂಪೂರ್ಣ ಸುಟ್ಟು ಹೋಗಿದ್ದು, ಗುರುತು ಪತ್ತೆ ಹಚ್ಚಲು ಪೊಲೀಸರು ಹರಸಾಹಸ ಪಡುತ್ತಿದ್ದಾರೆ. ಸದ್ಯ ಚೇಳೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆಯನ್ನು ಮುಂದುವರಿಸಿದ್ದಾರೆ.

ಇದನ್ನೂ ಓದಿ: Road Accident : ಕ್ಯಾಂಟರ್‌ ಡಿಕ್ಕಿ; ಟೈಯರ್‌ ಅಡಿ ಸಿಲುಕಿ 4 ವರ್ಷದ ಬಾಲಕ ದುರ್ಮರಣ

ಅಣ್ಣನನ್ನೇ ಹೊಡೆದು ಕೊಂದ ತಮ್ಮ

ಉಡುಪಿ: ತಮ್ಮನೊಬ್ಬ ಸ್ವಂತ ಅಣ್ಣನನ್ನು ದೊಣ್ಣೆಯಿಂದ ಹೊಡೆದು ಕೊಲೆ ಮಾಡಿದ (Murder Case) ಬರ್ಬರ ಘಟನೆ ಉಡುಪಿ (Udupi news) ಜಿಲ್ಲೆಯಲ್ಲಿ ನಡೆದಿದೆ. ಹೆಬ್ರಿ ತಾಲೂಕಿನ ನಾಲ್ಕೂರು ಗ್ರಾಮದ ಕಜ್ಕೆ ಅರಮನೆ ಜೆಡ್ಡು ಎಂಬಲ್ಲಿ ಘಟನೆ ನಡೆದಿದೆ.

ಅರಮನೆಜೆಡ್ಡು ನಿವಾಸಿ ಮಂಜುನಾಥ (35) ಮೃತ ಅಣ್ಣ. ಕೊಲೆ ಆರೋಪಿ ತಮ್ಮ ವಿಶ್ವನಾಥನನ್ನು (30) ಪೊಲೀಸರು ವಶಕ್ಕೆ ಪಡೆದಿದ್ದಾರೆ. ಕೂಲಿ ಕೆಲಸ ಮಾಡಿಕೊಂಡಿದ್ದ ಮಂಜುನಾಥ ಮತ್ತು ವಿಶ್ವನಾಥ, ಒಂದೇ ಮನೆಯಲ್ಲಿ ವಾಸವಾಗಿದ್ದು, ಇವರಿಬ್ಬರೂ ಆಗಾಗ ಗಲಾಟೆ ಮಾಡುತ್ತಿದ್ದರು.

ಮಧ್ಯರಾತ್ರಿ ವೇಳೆ ಮದ್ಯ ಸೇವಿಸಿ ಬಂದು ಅಣ್ಣತಮ್ಮಂದಿರ ಗಲಾಟೆ ನಡೆಯುತ್ತಿತ್ತು. ಅಣ್ಣನ ಪತ್ನಿ ಮನೆ ಬಿಟ್ಟು ಹೋಗಿದ್ದು, ಅದಕ್ಕೆ ತಮ್ಮ ಕಾರಣವೆಂದು ಅಣ್ಣನಿಗೆ ಸಿಟ್ಟಿತ್ತು. ಜಗಳದ ವೇಳೆ ನನ್ನ ಪತ್ನಿ ಮನೆ ಬಿಟ್ಟು ಹೋಗಲು ನೀನೇ ಕಾರಣವೆಂದು ಅಣ್ಣ ದೂಷಿಸಿದ್ದ. ಇದರಿಂದ ಕೋಪಗೊಂಡ ತಮ್ಮ ವಿಶ್ವನಾಥ ದೊಣ್ಣೆಯಿಂದ ತಲೆಗೆ ಹೊಡೆದು ಅಣ್ಣನ ಕೊಲೆ ಮಾಡಿದ್ದಾನೆ. ತೀವ್ರ ರಕ್ತಸ್ರಾವವಾಗಿ ಮಂಜುನಾಥ ಸ್ಥಳದಲ್ಲಿಯೇ ಸಾವಿಗೀಡಾಗಿದ್ದಾನೆ. ಹೆಬ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: Road Accident: ಸವಾರನ ಮೇಲೆ ಹರಿದ ಖಾಸಗಿ ಬಸ್‌; ಹಂಪ್‌ನಲ್ಲಿ ಸ್ಕೂಟರ್‌ ಪಲ್ಟಿಯಾಗಿ ಯುವಕ ಸಾವು

ಜಯನಗರದಲ್ಲಿ ಪ್ರಿಯತಮೆಯನ್ನೇ ಇರಿದು ಕೊಂದ ಪಾಗಲ್‌ ಪ್ರೇಮಿ!

ಬೆಂಗಳೂರು: ಪಾಗಲ್‌ ಪ್ರೇಮಿಯೊಬ್ಬ ತನ್ನ ಪ್ರಿಯತಮೆಯನ್ನೇ ಚಾಕುವಿನಿಂದ ಇರಿದು ಹತ್ಯೆ ಮಾಡಿರುವ ದಾರುಣ ಘಟನೆ (Murder Case) ಜಯನಗರದಲ್ಲಿ ನಡೆದಿದೆ. ಶನಿವಾರ ಸಂಜೆ ಜಯನಗರ ಬಳಿಯ ಶಾಲಿನಿ ಗ್ರೌಂಡ್‌ ಸಮೀಪದ ಇಬ್ಬರ ನಡುವೆ ಮಾತಿಗೆ ಮಾತು ಬೆಳೆದು ಜಗಳ ನಡೆದಿದ್ದು, ಈ ವೇಳೆ ಪ್ರಿಯತಮೆಗೆ ಪ್ರಿಯಕರ ಚಾಕುವಿನಿಂದ ಇರಿದಿದ್ದಾನೆ.

ಕೋಲ್ಕೊತಾ ಮೂಲದ ಫರೀದಾ ಖಾನ್ (42) ಮೃತ ಮಹಿಳೆ. ಗಿರೀಶ್ ಹತ್ಯೆ ಆರೋಪಿ. ಜಯನಗರದ ಓಯೋ ರೂಮ್‌ನಲ್ಲಿ ತಂಗಿದ್ದ ಗಿರೀಶ್ ಮತ್ತು ಫರೀದಾ, ಸಂಜೆ ಜಯನಗರ ಬಳಿಯ ಶಾಲಿನಿ ಗ್ರೌಂಡ್‌ಗೆ ಬಂದಿದ್ದರು. ಆ‌ ಸಂದರ್ಭದಲ್ಲಿ ಇಬ್ಬರ ಮಧ್ಯೆ ಮಾತಿಗೆ ಮಾತು ಬೆಳೆದು ಜಗಳವಾಗಿದೆ. ಆಗ ಕೈನಲ್ಲಿದ್ದ ಚಾಕುವಿನಿಂದ ಮಹಿಳೆಯನ್ನು ಇರಿದು ಪ್ರಿಯಕರ ಕೊಲೆ ಮಾಡಿದ್ದಾನೆ.

ಸ್ಥಳಕ್ಕೆ ಜಯನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ, ಆರೋಪಿ ಗಿರೀಶ್‌ನನ್ನು ಬಂಧಿಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version