Site icon Vistara News

Road Accident : ಪಂಕ್ಚರ್‌ ಆಗಿ ನಿಂತಿದ್ದ ಕಾರಿಗೆ ಲಾರಿ ಡಿಕ್ಕಿ; ಇಬ್ಬರು ಸ್ಥಳದಲ್ಲೇ ಸಾವು

tumkur accident two people dead

ತುಮಕೂರು: ನಿಂತಿದ್ದ ಕ್ರೂಸರ್‌ ಕಾರಿಗೆ ಲಾರಿಯೊಂದು ಡಿಕ್ಕಿ ಹೊಡೆದು (Lorry rams into car) ಇಬ್ಬರು ಸ್ಥಳದಲ್ಲೇ ಮೃತಪಟ್ಟ (Two people died on spot) ದಾರುಣ ಘಟನೆ ತುಮಕೂರಿನ ಕೋರಾ ಬಳಿಯ ರಾಷ್ಟ್ರೀಯ ಹೆದ್ದಾರಿ 4ರಲ್ಲಿ ನಡೆದಿದೆ. ಗುರುವಾರ ಬೆಳಗ್ಗಿನ ಜಾವ ಈ ದುರಂತ (Road Accident) ಸಂಭವಿಸಿದೆ.

ಮೃತರಿಬ್ಬರೂ ಗಂಗಾವತಿ ಮೂಲದವರು. ಗಂಗಾವತಿಯಲ್ಲಿ ಖಾಸಗಿ ಪಡಿತರ ವಿತರಣಾ ಕೇಂದ್ರ (Private PDS Centre) ನಡೆಸುತ್ತಿರುವ ಸತೀಶ್ (40) ಮತ್ತು ಕಾರಿನ ಚಾಲಕ ಶಂಕರ್ (35) ಮೃತ ದುರ್ದೈವಿಗಳು. ಅಪಘಾತದಲ್ಲಿ ಇನ್ನೊರ್ವನಿಗೆ ಸಣ್ಣಪುಟ್ಟ ಗಾಯವಾಗಿದ್ದು, ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.

ಪ್ರತಿಭಟನೆಗೆ ತೆರಳುತ್ತಿದ್ದಾಗ ಟೈರ್‌ ಪಂಕ್ಚರ್

ಖಾಸಗಿ ಪಡಿತರ ವಿತರಣಾ ಕೇಂದ್ರದ ಮಾಲೀಕರಿಗೆ ಕಮಿಷನ್‌ ಹಣ ಹೆಚ್ಚಳ ಸೇರಿದಂತೆ ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಗುರುವಾರ ಪ್ರತಿಭಟನೆಯೊಂದು ಆಯೋಜನೆಗೊಂಡಿದೆ. ಇದರಲ್ಲಿ ಭಾಗವಹಿಸುವುದಕ್ಕಾಗಿ ಸತೀಶ್‌ ಅವರು ಕಾರಿನಲ್ಲಿ ಗಂಗಾವತಿಯಿಂದ ಬೆಂಗಳೂರಿಗೆ ಬರುತ್ತಿದ್ದರು. ಈ ವೇಳೆ ಕೋರ ಸಮೀಪ ಕ್ರೂಸರ್‌ ಕಾರಿನ ಹಿಂಬದಿಯ ಟೈಯರ್‌ ಪಂಚ್ಚರ್‌ ಆಗಿತ್ತು. ಹೀಗಾಗಿ ಹೆದ್ದಾರಿ ಬದಿಯಲ್ಲಿ ಕಾರು ನಿಲ್ಲಿಸಿ ಟೈರ್‌ ಬದಲಿಸುತ್ತಿದ್ದ ವೇಳೆ ಅಪಘಾತ ಸಂಭವಿಸಿದೆ.

ಹಿಂಬದಿಯಿಂದ ಬಂದು ಡಿಕ್ಕಿ ಹೊಡೆದ ಲಾರಿಯ ಚಾಲಕ ಘಟನೆ ನಡೆಯುತ್ತಿದ್ದಂತೆಯೇ ಅಲ್ಲಿಂದ ತಲೆಮರೆಸಿಕೊಂಡಿದ್ದಾನೆ. ಮೃತದೇಹಗಳನ್ನು ತುಮಕೂರು ಜಿಲ್ಲಾಸ್ಪತ್ರೆಯ ಶವಾಗಾರಕ್ಕೆ ರವಾನೆ ಮಾಡಲಾಗಿದೆ. ಕೋರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: Attention divert : ಹಣ ಬಿದ್ದಿದೆ ಎಂದು ಯಾಮಾರಿಸಿ 2 ಲಕ್ಷ ರೂ. ಲಪಟಾಯಿಸಿದ ಖದೀಮರು!

ಚಿಂತಾಮಣಿಯಲ್ಲಿ ಬಸ್-‌ ಮಿನಿಬಸ್ ಅಪಘಾತ, ಒಬ್ಬನ ಸಾವು

ಚಿಕ್ಕಬಳ್ಳಾಪುರ: KSRTC ಬಸ್ ಹಾಗೂ ಮಿನಿ ಬಸ್ ನಡುವೆ ಭೀಕರ ಅಪಘಾತ (Road accident) ಸಂಭವಿಸಿದ್ದು, ಒಬ್ಬ ಸಾವಿಗೀಡಾಗಿದ್ದಾನೆ. ಮೂವರ ಸ್ಥಿತಿ ಚಿಂತಾಜನಕವಾಗಿದೆ.

ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲೂಕು ಚಿನ್ನಸಂದ್ರ ಗೇಟ್ ಬಳಿ ಘಟನೆ ನಡೆದಿದೆ. ಮಿನಿ ಬಸ್‌ನಲ್ಲಿದ್ದ ಒಬ್ಬ ಮೃತಪಟ್ಟಿದ್ದು, ಮೂವರ ಸ್ಥಿತಿ ಚಿಂತಾಜನಕವಾಗಿದೆ. ಗಾಯಾಳುಗಳನ್ನು ಚಿಂತಾಮಣಿಯ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ.

ಅಪಘಾತದ ರಭಸಕ್ಕೆ ಮಿನಿ ಬಸ್ ನಜ್ಜುಗುಜ್ಜಾಗಿ ಛಿದ್ರ ಛಿದ್ರವಾಗಿದೆ. ಕೈವಾರ ಮೂಲದ ಇಲ್ಲು (40) ಮೃತ ವ್ಯಕ್ತಿ. ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. ಅಪಘಾತದಿಂದಾಗಿ ಚಿಂತಾಮಣಿ – ಬೆಂಗಳೂರು ಮಾರ್ಗದಲ್ಲಿ ಟ್ರಾಫಿಕ್ ಜಾಮ್ ಉಂಟಾಯಿತು.

Exit mobile version