Site icon Vistara News

Tumkur News : ತುಮಕೂರಿನಲ್ಲಿ ಮತ್ತೆ ದುರಂತ; ಬೆಂಕಿ ಕೊಂಡ ಹಾಯುವಾಗ ಕಾಲು ಜಾರಿ ಬಿದ್ದ ಅರ್ಚಕ

tumkur News Kondothsava in Temple

ತುಮಕೂರು: ದೇವರನ್ನು ಹೊತ್ತು ಕೊಂಡ ಹಾಯುವಾಗ (Kondothsava in Temple) ಅರ್ಚಕ ಕಾಲು ಜಾರಿ (Fire Accident) ಬಿದ್ದಿದ್ದಾರೆ. ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿನ ಹುಲಿಯೂರುದುರ್ಗ ಗ್ರಾಮದಲ್ಲಿ ಘಟನೆ (Tumkur News) ನಡೆದಿದೆ.

ಗ್ರಾಮದಲ್ಲಿ ಶ್ರೀ ಹುಲಿಯೂರಮ್ಮ ದೇವಿ ಜಾತ್ರಾ ಪ್ರಯುಕ್ತ ಬೆಂಕಿ‌ಕೊಂಡ ಹಾಯುವ ಕಾರ್ಯಕ್ರಮ ಆಯೋಜಿಸಲಾಗಿತ್ತು. ಅರ್ಚಕ ಮಧು ತಲೆ ಮೇಲೆ ದೇವರನ್ನು ಹೊತ್ತುಕೊಂಡು ಕೊಂಡ ಹಾಯಲು ಓಡಿ ಬಂದಿದ್ದಾರೆ. ಆದರೆ ಈ ವೇಳೆ ಕಾಲು ಜಾರಿ ಬಿದ್ದಿದ್ದಾರೆ. ಅದೃಷ್ಟವಶಾತ್‌ ಬೆಂಕಿ ಕೆಂಡದ ಮೇಲೆ ಬೀಳದೇ ಪಕ್ಕಕ್ಕೆ ಎಗರಿದ್ದಾರೆ.

ಇದೇ ವೇಳೆ ಕೈಯಲ್ಲಿ ಹಿಡಿದುಕೊಂಡಿದ್ದ ದೇವರ ಮೂರ್ತಿಯನ್ನು ಕೊಂಡಕ್ಕೆ ಬೀಳಿಸಿದ್ದಾರೆ. ಅರ್ಚಕ ಮಧುಗೆ ಸಣ್ಣ ಪುಟ್ಟ ಗಾಯವಾಗಿದ್ದು, ಪ್ರಾಣಪಾಯದಿಂದ ಪಾರಾಗಿದ್ದಾರೆ. ಕೊಂಡದೊಳಗೆ ಬಿದ್ದ ದೇವಿಯ ಮೂರ್ತಿಯನ್ನು ಅಲ್ಲಿದ್ದ ಸ್ಥಳೀಯರು ಮೇಲೆತ್ತಿದ್ದಾರೆ.

ಸುಟ್ಟಗಾಯಗಳಾದ ಹಿನ್ನೆಲೆಯಲ್ಲಿ ಅರ್ಚಕ ಮಧುನನ್ನು ಕುಣಿಗಲ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಹುಲಿಯೂರುದುರ್ಗ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಇದನ್ನೂ ಓದಿ: Water Crisis: ಇನ್ನೆರಡು ತಿಂಗಳು ಕಾವೇರಿ ನೀರು ಹೊಸ ಕನೆಕ್ಷನ್‌ ಇಲ್ಲ; 11 ಸಾವಿರ ಮಂದಿ ಕಂಗಾಲು

ದೇವರನ್ನು ಹೊತ್ತು ಕೊಂಡ ಹಾಯುವಾಗ ಕಾಲು ಜಾರಿ ಬಿದ್ದ ಅರ್ಚಕ, ಮಗ

ತುಮಕೂರು: ರಥೋತ್ಸವದ ಸಂದರ್ಭದಲ್ಲಿ ದೇವಸ್ಥಾನಗಳಲ್ಲಿ ನಡೆಯುವ ಕೊಂಡೋತ್ಸವದ (Kondothsava in Temple) ವೇಳೆ ಬೆಂಕಿ ಕೊಂಡಕ್ಕೆ ಬಿದ್ದು ಗಾಯಗೊಳ್ಳುವ ಘಟನೆಗಳು (Fire accident) ಹೆಚ್ಚುತ್ತಿವೆ. ಎರಡು ದಿನದ ಹಿಂದಷ್ಟೇ ಮಂಡ್ಯದಲ್ಲಿ ವೀರಗಾಸೆ ಕಲಾವಿದರೊಬ್ಬರು ಕೊಂಡಕ್ಕೆ ಬಿದ್ದು ಗಾಯಗೊಂಡಿದ್ದರು. ಇದೀಗ ತುಮಕೂರಿನಲ್ಲಿ ಅಂಥಹುದೇ ಇನ್ನೊಂದು ಘಟನೆ ನಡೆದು ಅರ್ಚಕರು ಮತ್ತು ಅವರ ಮಗ ಗಾಯಗೊಂಡಿದ್ದಾರೆ.

ತುಮಕೂರು ಜಿಲ್ಲೆಯ (Tumkur News) ಕುಣಿಗಲ್ ತಾಲೂಕಿನ ಕಗ್ಗೆರೆ ಗ್ರಾಮದಲ್ಲಿ ಶ್ರೀ ದಂಡಿನಮಾರಮ್ಮ ದೇವಿ ಜಾತ್ರಾ ಪ್ರಯುಕ್ತ ನಡೆದ ಬೆಂಕಿ‌ಕೊಂಡ ಹಾಯುವ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕೆಂಡವನ್ನು ಸಿದ್ಧಪಡಿಸಿ ಅದರ ಮೇಲೆ ಒದ್ದೆ ಬಟ್ಟೆಯನ್ನು ಹಾಕಿ ಅದರ ಮೇಲೆ ದೇವರನ್ನು ಹೊತ್ತ ಅರ್ಚಕರು ಓಡುವುದು ಕ್ರಮವಾಗಿದೆ.

ಈ ವೇಳೆ ದೇವರನ್ನು ಹೊತ್ತ ಅರ್ಚಕ ವೆಂಕಟಪ್ಪ ಅವರು ಕೆಂಡದ ಮೇಲೆ ಓಡುತ್ತಿದ್ದಂತೆಯೇ ಮುಗ್ಗರಿಸಿ ಬಿದ್ದರು. ಅವರ ಮಗ ಕೃಷ್ಣಮೂರ್ತಿ ಬೆಂಕಿಯ ಮೇಲೆ ಬಿದ್ದರು. ಕೂಡಲೇ ಸ್ಥಳೀಯರು ಅವರನ್ನು ರಕ್ಷಿಸಿದರು. ತೀವ್ರ ಸುಟ್ಟ ಗಾಯಗಳಾದ ಹಿನ್ನೆಲೆಯಲ್ಲಿ ಬೆಳ್ಳೂರು ಕ್ರಾಸ್ ಆದಿಚುಂಚನಗಿರಿ ಬಿಜಿಎಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಕುಣಿಗಲ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಕೊಂಡ ಹಾಯುವಾಗ ಮುಗ್ಗರಿಸಿ ಬಿದ್ದ ಪೂಜಾರಿ; ಮತ್ತೊಬ್ಬ ಅರ್ಚಕ ಜಸ್ಟ್‌ ಮಿಸ್‌

ಮಂಡ್ಯ: ಬಸವೇಶ್ವರ ಕೊಂಡೋತ್ಸವದ ವೇಳೆ ಕೊಂಡ ಹಾಯುವಾಗ ವೀರಗಾಸೆ ಪೂಜಾರಿಯೊಬ್ಬರು ಎಡವಿ ಬಿದ್ದ ಘಟನೆ (Fire Accident) ನಡೆದಿದೆ. ಕೊಂಡ ಹಾಯುವ ವೇಳೆ ಬಿದ್ದರಿಂದ ಮೈ-ಕೈ ಸುಟ್ಟುಕೊಂಡಿದ್ದಾರೆ. ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಹುಳಗನಹಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದೆ.

ಗ್ರಾಮದ ಬಸವೇಶ್ವರ ಜಾತ್ರಾಮಹೋತ್ಸವದ ಅಗ್ನಿ ಕೊಂಡೋತ್ಸವದಲ್ಲಿ ಈ ಅವಘಡ (Fire Accident) ನಡೆದಿದೆ. ಹುಳಗನಹಳ್ಳಿ ಗ್ರಾಮದಲ್ಲಿ ಬಸವೇಶ್ವರನ ಕೊಂಡೋತ್ಸವ ನಡೆಯುತ್ತಿತ್ತು. ಈ ವೇಳೆ ಕೊಂಡ ಹಾಯಲು ಓಡಿ ಬರುವಾಗ ವೀರಗಾಸೆ ಪೂಜಾರಿ ಮುಗ್ಗರಿಸಿ ಬಿದ್ದಿದ್ದಾರೆ. ಕೂಡಲೇ ಅಲ್ಲಿದ್ದವರು ಬೆಂಕಿದಿಂದ ಮೇಲೆತ್ತಿದ್ದಾರೆ.

ಇದಾದ ಮೇಲೂ ಮುಂಜಾಗ್ರತಾ ವಹಿಸಿದೇ ಮತ್ತೊಬ್ಬ ಪೂಜಾರಿ ದೇವರನ್ನು ಹೊತ್ತುಕೊಂಡು ಕೊಂಡ ಹಾಯಲು ಮುಂದಾಗಿದ್ದಾರೆ. ಈ ವೇಳೆ ಆತನೂ ಕೆಂಡಕ್ಕೆ ಬೀಳುವಾಗ ಕೈಯಲ್ಲಿದ್ದ ದೇವರನ್ನೆ ಬಿಟ್ಟು ಪಾರಾಗಿದ್ದಾರೆ. ಕೂದಲೆಳೆ ಅಂತರದಲ್ಲಿ ಪೂಜಾರಿ ಪಾರಾಗಿದ್ದಾರೆ. ಇನ್ನೂ ಗಾಯಗೊಂಡಿರುವ ವೀರಗಾಸೆ ಪೂಜಾರಿಯನ್ನು ಮಂಡ್ಯ ಮಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version