Site icon Vistara News

Tumkur News: ಕೇವಲ 15 ಸಾವಿರಕ್ಕೆ ಬಾಲಕಿಯನ್ನು ಮಾರಾಟ ಮಾಡಿದ ಚಿಕ್ಕಮ್ಮ; ಅಧಿಕಾರಿಗಳಿಂದ ರಕ್ಷಣೆ!

Tumkur News

ತುಮಕೂರು: ಸಾಲ ತೀರಿಸಲಾಗದೆ ಜೀತಕ್ಕಾಗಿ 11 ವರ್ಷದ ಬಾಲಕಿಯನ್ನು ಚಿಕ್ಕಮ್ಮ ಮಾರಾಟ ಮಾಡಿರುವ ಘಟನೆ ಆಂಧ್ರದ ಹಿಂದೂಪುರದಲ್ಲಿ ನಡೆದಿದ್ದು, ತಾಯಿಯ ಸಮಯಪ್ರಜ್ಞೆಯಿಂದ ಬಾಲಕಿ ಬಚಾವ್‌ ಆಗಿದ್ದಾಳೆ. ಕೇವಲ 15 ಸಾವಿರ ಸಾಲದ ಬದಲಿಗೆ ತುಮಕೂರು ಮೂಲದ ಬಾಲಕಿಯನ್ನು ಜೀತಕ್ಕಾಗಿ ಚಿಕ್ಕಮ್ಮ ಮಾರಾಟ ಮಾಡಿದ್ದಳು. ಈ ಬಗ್ಗೆ ಮಾಹಿತಿ ಪಡೆದ ಕಾರ್ಮಿಕ ಇಲಾಖೆ ಅಧಿಕಾರಿಗಳು, ಬಾಲಕಿಯನ್ನು ರಕ್ಷಣೆ ಮಾಡಿದ್ದಾರೆ.

ತುಮಕೂರು ನಗರದ ದಿಬ್ಬೂರು ನಿವಾಸಿ‌ಯಾದ ಚೌಡಮ್ಮ ಎಂಬಾಕೆ ತನ್ನ ಪುತ್ರಿಯನ್ನು, ತಂಗಿ ಸುಜಾತ ಬಾಣಂತನಕ್ಕೆಂದು ಹಿಂದೂಪುರಕ್ಕೆ ಕಳುಹಿದ್ದಳು‌‌. ಮತ್ತೆ ಬಾಲಕಿಯನ್ನು ದಿಬ್ಬೂರಿಗೆ‌ ಕರೆತರಲು ಹಿಂದೂಪುರದ ತಂಗಿ ಸುಜಾತ ಮನೆಗೆ ತೆರಳಿದ್ದಾಗ ಮಗಳು ಕಾಣಿಸಿರಲಿಲ್ಲ. ಈ ಬಗ್ಗೆ ಗಾಬರಿಗೊಂಡು ಕೇಳಿದಾಗ ಅಸಲಿ ಕತೆಯನ್ನು ತಂಗಿ ಸುಜಾತ ಬಿಚ್ಚಿಟ್ಟಿದ್ದಾಳೆ.

ಶ್ರೀರಾಮುಲು ಎಂಬಾತನಿಗೆ ಬಾಲಕಿಯನ್ನು ಮಾರಾಟ ಮಾಡಿರುವ ಬಗ್ಗೆ ಸುಜಾತ ಹೇಳಿಕೊಂಡಿದ್ದಳು. ಬಾಲಕಿಯನ್ನ ಖರೀದಿಸಿದ್ದ ಶ್ರೀರಾಮುಲು ಬಾತುಕೋಳಿ ಮೇಯಿಸಲು ಒತ್ತೆಯಾಳಾಗಿ ಇರಿಸಿಕೊಂಡಿದ್ದ. ವಿಷಯ ತಿಳಿದ ಚೌಡಮ್ಮ, ಮಗಳನ್ನು ತನ್ನೊಂದಿಗೆ ಕಳುಹಿಸುವಂತೆ ಬೇಡಿಕೊಂಡಿದ್ದಳು. ಇದಕ್ಕೆ ಶ್ರೀರಾಮುಲು ಒಪ್ಪಿರಲಿಲ್ಲ. ಬಾಲಕಿಯನ್ನು ತಾನು ಖರೀದಿಸಿದ್ದು, ಸಾಲದ ಹಣ ಕೊಟ್ಟು ಕರೆದುಕೊಂಡು ಹೋಗುವಂತೆ ಹೇಳಿದ್ದ. ಹೀಗಾಗಿ ತುಮಕೂರಿಗೆ ಬಂದಿದ್ದ ಚೌಡಮ್ಮ ಮಗಳ ಸ್ಥಿತಿಯ ಬಗ್ಗೆ ಕಾರ್ಮಿಕ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರು.

ಬಾಲಕಿ ತಾಯಿಯ ದೂರು ಆಧರಿಸಿ ಕಾರ್ಮಿಕ ಇಲಾಖೆ ಅಧಿಕಾರಿಗಳು ಪೊಲೀಸರಿಗೆ ಮಾಹಿತಿ ನೀಡಿದ್ದರು. ಇದರಿಂದ ತಕ್ಷಣ ಎಚ್ಚೆತ್ತ ಪೊಲೀಸರು ಬಾಲಕಿಯ ರಕ್ಷಣೆ ಮಾಡಿದ್ದು, ಸದ್ಯ ಬಾಲಕಿಯನ್ನು ಜಿಲ್ಲಾ ಬಾಲ‌ ಮಂದಿರದಲ್ಲಿ ಇರಿಸಲಾಗಿದೆ. ಈ ಬಗ್ಗೆ ತುಮಕೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಎಸ್ಕೇಪ್‌ ಆಗಿರುವ ಆರೋಪಿಗಳಿಗಾಗಿ ಪೊಲೀಸರರು ಹುಡುಕಾಟ ನಡೆಸುತ್ತಿದ್ದಾರೆ.

ಕೇವಲ 15 ಸಾವಿರಕ್ಕೆ ಬಾಲಕಿಯ ಮಾರಾಟ ಮಾಡಿದ್ರಾ ಸಂಬಂಧಿಕರು?

ರಕ್ಷಣೆ ಮಾಡಿದ ಬಳಿಕ ಬಾಲಕಿ ಹಾಗೂ ಬಾಲಕಿಯ ಪೋಷಕರು ಕರಾಳ ಸತ್ಯ ಬಿಚ್ಚಿಟ್ಟಿದ್ದಾರೆ. ಕೇವಲ 15 ಸಾವಿರಕ್ಕೆ ಚಿಕ್ಕಮ್ಮನೇ ಬಾಲಕಿಯನ್ನು ಮಾರಾಟ ಮಾಡಿದ್ದಳು ಎನ್ನಲಾಗಿದೆ. ಚೀಟಿ ಹಣಕ್ಕಾಗಿ ಪುಟ್ಟ ಬಾಲಕಿಯನ್ನೇ ಚಿಕ್ಕಮ್ಮನ ಮನೆಯವರು ಜೀತಕ್ಕೆ ತಳ್ಳಿದ್ದರು ಎಂಬ ವಿಷಯ ತಿಳಿದುಬಂದಿದೆ.

ಇದನ್ನೂ ಓದಿ | Viral Video: ಬೆಂಗಳೂರಿನ ಹೋಟೆಲ್‌ನಲ್ಲಿ ಫ್ಯಾನ್‌ ಬದಲು ಪುರಾತನ ಕಾಲದ ಬೀಸಣಿಕೆ! ವಿಡಿಯೊ ನೋಡಿ

ತುಮಕೂರಿನ ದಿಬ್ಬೂರಿನ ನಿವಾಸಿ ಕುಮಾರ್ ಹಾಗೂ ಚೌಡಮ್ಮ ದಂಪತಿಯ ಪುತ್ರಿ ಶಿವಮ್ಮಳನ್ನು ಬಾಣಂತನಕ್ಕೆಂದು ಚೌಡಮ್ಮ ತಂಗಿ ಸುಜಾತ ಕರೆದುಕೊಂಡು ಹೋಗಿದ್ದಳು. ಮನೆಗೆ ಕರೆತಂದಿದ್ದ ಬಾಲಕಿಯನ್ನು ಚೀಟಿ ಹಣಕ್ಕಾಗಿ ಬಾತುಕೋಳಿ ವ್ಯಾಪಾರಿ ಬಳಿ ಸುಜಾತ ಅತ್ತೆ-ಮಾವ ಜೀತಕ್ಕಿಟ್ಟಿದ್ದರು. ಮಗಳ ಬಗ್ಗೆ ಕೇಳಲು ಹಲವು ಬಾರಿ ಸುಜಾತ ಮನೆಗೆ ಬಾಲಕಿ ತಂದೆ-ತಾಯಿ ಕರೆ ಮಾಡಿದ್ದರು. ಈ ವೇಳೆ ಅಲ್ಲಿದ್ದಾಳೆ, ಇಲ್ಲಿದ್ದಾಳೆ ಅಂತ ಸುಜಾತ ಮನೆಯವರು ಸುಳ್ಳು ಹೇಳಿದ್ದರು. ಆದರೆ ಮಗಳನ್ನ ಜೀತಕ್ಕಿಟ್ಟಿರುವ ಬಗ್ಗೆ ಪೋಷಕರಿಗೆ ಸಂಬಂಧಿ ಯುವಕ ಮಾಹಿತಿ ನೀಡಿದ್ದ. ಇದರಿಂದ ಬಾಲಕಿಯನ್ನು ಮಾರಾಟ ಮಾಡಿದ್ದ ವಿಷಯ ಬೆಳಕಿಗೆ ಬಂದಿತ್ತು.

Exit mobile version