Site icon Vistara News

Road Accident: ಕ್ರೂಸರ್‌- ಬೈಕ್ ಡಿಕ್ಕಿಯಾಗಿ ಇಬ್ಬರ ಸಾವು, ಐವರಿಗೆ ಗಾಯ

Bike accident

ಧಾರವಾಡ: ಕ್ರೂಸರ್ ಹಾಗೂ ಬೈಕ್ ನಡುವೆ ಡಿಕ್ಕಿಯಾಗಿ ಇಬ್ಬರು ಮೃತಪಟ್ಟು, ಐವರಿಗೆ ಗಾಯಗಳಾಗಿರುವ ಘಟನೆ ಜಿಲ್ಲೆಯ ನವಲಗುಂದ ತಾಲೂಕಿನ ಶಿವಳ್ಳಿ ಬಳಿ ನಡೆದಿದೆ. ದೀಪಾವಳಿ ಹಬ್ಬಕ್ಕೆಂದು ಪಟಾಕಿ ತೆಗೆದುಕೊಂಡು ಹೋಗುತ್ತಿದ್ದ ಇಬ್ಬರು ಯುವಕರು ಅಪಘಾತದಲ್ಲಿ ಕೊನೆಯುಸಿರೆಳೆದಿದ್ದಾರೆ.

ಧಾರವಾಡದ ಇಬ್ಬರು ಯುವಕರು ಮೃತಪಟ್ಟಿದ್ದಾರೆ. ನವಲಗುಂದದಿಂದ ಮೂವರು ಯುವಕರು ಹಬ್ಬಕ್ಕೆಂದು ಪಟಾಕಿ ತೆಗೆದುಕೊಂಡು ಬೈಕ್‌ನಲ್ಲಿ ಧಾರವಾಡಕ್ಕೆ ಬರುತ್ತಿದ್ದರು. ಈ ವೇಳೆ ಬೈಕ್‌ ಹಾಗೂ ಕ್ರೂಸರ್ ಡಿಕ್ಕಿಯಾಗಿ ಇಬ್ಬರು ಸವಾರರು ಮೃತಪಟ್ಟಿದ್ದು, ಕ್ರೂಸರ್‌ನಲ್ಲಿದ್ದ 5 ಜನರಿಗೆ ಗಾಯಗಳಾಗಿವೆ. ಸದ್ಯ ನವಲಗುಂದ ತಾಲೂಕು ಆಸ್ಪತ್ರೆಯಲ್ಲಿ ಗಾಯಾಳುಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ನವಲಗುಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ | Shivamogga News: ಸಿಗಂದೂರು ಸೇತುವೆ ಕಾಮಗಾರಿ ವೇಳೆ ಬಿದ್ದು ಕಾರ್ಮಿಕ ಸಾವು

ಮಾರಕಾಸ್ತ್ರಗಳಿಂದ ಕೊಚ್ಚಿ ಯುವಕನ ಬರ್ಬರ ಹತ್ಯೆ

ಬೆಳಗಾವಿ: ಹಳೆ ವೈಷಮ್ಯದ ಹಿನ್ನೆಲೆಯಲ್ಲಿ ಮಾರಕಾಸ್ತ್ರಗಳಿಂದ ಕೊಚ್ಚಿ ಯುವಕನ ಬರ್ಬರ ಹತ್ಯೆ ಮಾಡಿರುವ ಘಟನೆ ಜಿಲ್ಲೆಯ ಗೋಕಾಕ್‌ ಪಟ್ಟಣದಲ್ಲಿ ನಡೆದಿದೆ. ಶಾನೂರ್ ಪೂಜಾರಿ (27) ಕೊಲೆಯಾದ ದುರ್ದೈವಿ. ಹಳೆ ವೈಷಮ್ಯದ ಹಿನ್ನೆಲೆಯಲ್ಲಿ ಯುವಕನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ದುಷ್ಕರ್ಮಿಗಳ ತಂಡ ಪರಾರಿಯಾಗಿದೆ.

ಗೋಕಾಕ ನಗರದ ಆದಿಜಾಂಬವ ನಗರದಲ್ಲಿ ಘಟನೆ ನಡೆದಿದ್ದು, ಹತ್ಯೆಯಿಂದ ಸ್ಥಳೀಯ ನಿವಾಸಿಗಳು ಬೆಚ್ಚಿಬಿದ್ದಿದ್ದಾರೆ. ಸ್ಥಳಕ್ಕೆ ಗೋಕಾಕ್ ನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

ಪೋಟೊ ಶೂಟ್ ವಿಚಾರಕ್ಕೆ ಚಾಕು ಇರಿದು ಯುವಕನ ಕೊಲೆ

ದೊಡ್ಡಬಳ್ಳಾಪುರ: ಪೋಟೊ ಶೂಟ್ ವಿಚಾರಕ್ಕೆ ಯುವಕನ ಕೊಲೆ ಮಾಡಿರುವ ಘಟನೆ ದೊಡ್ಡಬಳ್ಳಾಪುರದ ಕೂಗೇನಹಳ್ಳಿ ಬಳಿಯ ಡಾರ್ಕ್ ನೈಟ್ ಡಾಬಾದಲ್ಲಿ ನಡೆದಿದೆ. ಯುವಕರ ನಡುವೆ ಪೋಟೊ ತೆಗೆಯುವ ವಿಚಾರದಲ್ಲಿ ಆರಂಭವಾದ ಗಲಾಟೆ ಕೊಲೆಯಲ್ಲಿ ಅಂತ್ಯವಾಗಿದೆ.

ಸೂರ್ಯ (22) ಮೃತ ಯುವಕ. ದೊಡ್ಡಬಳ್ಳಾಪುರದ ಕೂಗೇನಹಳ್ಳಿ ಬಳಿಯ ಡಾರ್ಕ್ ನೈಟ್ ಡಾಬಾದಲ್ಲಿ ಸ್ನೇಹಿತರ ಜತೆ ಸೂರ್ಯ ಫೋಟೋ ತೆಗೆಯುತ್ತಿದ್ದ. ಈ ವೇಳೆ ನಮ್ಮದೂ ಫೋಟೊ ತೆಗೆಯಿರಿ ಎಂದು ಕೆಲವರು ಗಲಭೆ ಮಾಡಿದ್ದಾರೆ. ಆಗ ಒಂದು ಫೊಟೊ ತೆಗೆದರೂ ಮತ್ತೆ ಗಲಾಟೆ ಮುಂದುವರಿದಿದೆ. ಮಾತಿಗೆ ಮಾತು ಬೆಳೆದು ಸೂರ್ಯ ಎದೆ ಭಾಗಕ್ಕೆ ಯುವಕನೊಬ್ಬ ಚಾಕು ಇರಿದಿದ್ದರಿಂದ, ತೀವ್ರ ರಕ್ತಸ್ರಾವವಾಗಿತ್ತು.

ಗಾಯಾಳು ಯುವಕನನ್ನು ದೊಡ್ಡಬಳ್ಳಾಪುರದ‌ ಸರ್ಕಾರಿ ಆಸ್ಪತ್ರೆಗೆ ರವಾನೆ ಮಾಡಲಾಯಿತು. ಆದರೆ, ಅತಿಯಾದ ರಕ್ತ ಸ್ರಾವದಿಂದ ಯುವಕ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾನೆ. ಆಸ್ಪತ್ರೆ ಬಳಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version