Site icon Vistara News

Udupi Toilet case : ಉಡುಪಿ ವಿಡಿಯೊ ಪ್ರಕರಣ ಸಿಐಡಿಗೆ ಹಸ್ತಾಂತರ; ನಡೆಯಲಿದೆ ಉನ್ನತ ಮಟ್ಟದ ತನಿಖೆ

Udupi Toilet case transferred to CID

ಉಡುಪಿ: ಉಡುಪಿ ನೇತ್ರಜ್ಯೋತಿ ಪ್ಯಾರಾಮೆಡಿಕಲ್ ಕಾಲೇಜು (Nethrajyothi Paramedical college) ವಿಡಿಯೋ ಪ್ರಕರಣದ ತನಿಖೆಯನ್ನು ಸರ್ಕಾರ ಸಿಐಡಿಗೆ ಹಸ್ತಾಂತರ (Case transferred to CID) ಮಾಡಿದೆ. ಈ ಮೂಲಕ ಉನ್ನತ ಮಟ್ಟದ ತನಿಖೆಗೆ ಮುಂದಾಗಿದೆ. ಆದರೆ, ಈ ಬಗ್ಗೆ ವಿಶೇಷ ತನಿಖಾ ತಂಡ (Special Investigation Team- SIT) ದಿಂದ ತನಿಖೆ ನಡೆಸಬೇಕು ಎಂಬ ಬೇಡಿಕೆಯನ್ನು ಒಪ್ಪಿಲ್ಲ.

ನೇತ್ರಜ್ಯೋತಿ ಪ್ಯಾರಾಮೆಡಿಕಲ್‌ ಕಾಲೇಜಿನ ದ್ವಿತೀಯ ಪಿಯುಸಿಯ ಮೂವರು ಮುಸ್ಲಿಂ ವಿದ್ಯಾರ್ಥಿನಿಯರು (Three Muslim Students) ಪ್ರಥಮ ಪಿಯುಸಿಯ ಹಿಂದು ವಿದ್ಯಾರ್ಥಿನಿಯೊಬ್ಬಳ (Hindu student) ಟಾಯ್ಲೆಟ್‌ ಬಳಕೆಯ ದೃಶ್ಯವನ್ನು (Udupi Toilet case) ಚಿತ್ರೀಕರಿಸಿಕೊಂಡಿದ್ದಾರೆ ಎಂಬ ವಿವಾದ ಹಲವು ತಿರುವುಗಳನ್ನು ಪಡೆದುಕೊಂಡು ಈ ಹಂತಕ್ಕೆ ಬಂದಿದೆ.

ಜುಲೈ 18ರಂದು ನಡೆದ ಈ ಘಟನೆಯ ಆಗಲೇ ಕಾಲೇಜು ಮಟ್ಟದಲ್ಲಿ ಸುದ್ದಿಯಾಗಿತ್ತು. ವಿಷಯವನ್ನು ತಿಳಿದ ಆಡಳಿತ ಮಂಡಳಿ ಮೂವರು ಮುಸ್ಲಿಂ ವಿದ್ಯಾರ್ಥಿನಿಯರು ಮತ್ತು ಸಂತ್ರಸ್ತೆಯನ್ನು ಕರೆಸಿ ವಿಚಾರಣೆ ನಡೆಸಲಾಗಿತ್ತು. ಆದರೆ ಸಂತ್ರಸ್ತ ವಿದ್ಯಾರ್ಥಿನಿ ತಾನು ಕೂಡಲೇ ಮೊಬೈಲ್‌ ತೆಗೆದುಕೊಂಡು ವಿಡಿಯೊ ಡಿಲೀಟ್‌ ಮಾಡಿದ್ದಾಗಿ ಹೇಳಿದ್ದಳು. ಮತ್ತು ಇದು ತಮಾಷೆಗೆ ಮಾಡಿದ ರ‍್ಯಾಗಿಂಗ್‌ ಆಗಿರುವುದರಿಂದ ಬೆಳೆಸುವುದು ಬೇಡ ಎಂಬ ಅಭಿಪ್ರಾಯಕ್ಕೆ ಒಪ್ಪಿಗೆ ಸೂಚಿಸಿದ್ದಳು. ಆದರೂ ಆಡಳಿತ ಮಂಡಳಿ ಈ ಮೂವರು ವಿದ್ಯಾರ್ಥಿನಿಯರನ್ನು ಕಾಲೇಜಿನಿಂದ ಅಮಾನತು ಮಾಡಲಾಗಿತ್ತು. ಹಾಗೂ ನಡೆದ ಘಟನಾವಳಿಗಳ ವಿವರವನ್ನು ಮಲ್ಪೆ ಪೊಲೀಸರಿಗೆ ನೀಡಿದ್ದರು. ಜತೆಗೆ ಮೊಬೈಲ್‌ ಕೂಡಾ ಹಸ್ತಾಂತರಿಸಲಾಗಿತ್ತು. ಆದರೆ, ಇದು ಕಾಲೇಜು ಮಟ್ಟದಲ್ಲೇ ಇತ್ಯರ್ಥಗೊಂಡ ವಿಷಯವಾಗಿದ್ದರಿಂದ ಪೊಲೀಸರು ಹೆಚ್ಚು ತಲೆ ಕೆಡಿಸಿಕೊಂಡಿರಲಿಲ್ಲ.

ಆದರೆ, ಯಾವಾಗ ಉಡುಪಿ ಮೂಲದ ಹಿಂದು ಮಾನವ ಹಕ್ಕುಗಳ ಪರ ಕಾರ್ಯಕರ್ತೆ ರಶ್ಮಿ ಸಾಮಂತ್‌ ಅವರು ಧ್ವನಿ ಎತ್ತಿದರೋ ಆಗ ಈ ವಿಷಯ ಮತ್ತೆ ಹೊಸ ತಿರುವನ್ನು ಪಡೆದುಕೊಂಡಿತು. ಅದುವರೆಗೆ ಪ್ರಕರಣದ ಬಗ್ಗೆ ಅಲ್ಪಸ್ವಲ್ಪ ತಿಳಿದಿದ್ದ ಬಿಜೆಪಿ ಬಳಿಕ ರೊಚ್ಚಿಗೆದ್ದು ಪ್ರತಿಭಟನೆಗಳನ್ನು ನಡೆಸಿತು. ಈ ಹುಡುಗಿಯರಿಗೆ ಬೇರೆ ಬೇರೆ ಸಂಘಟನೆಗಳ ಜತೆಗೆ ಸಂಪರ್ಕವಿದೆ. ಅವರು ಇದೇ ರೀತಿ ಫೋಟೊಗಳನ್ನು ತೆಗದು ಈ ಹಿಂದೆಯೂ ಕಳುಹಿಸಿದ್ದಾರೆ. ಫೋಟೊ ತೆಗೆದ ಬಳಿಕ ಮೊಬೈಲ್‌ಗಳೇ ಎಕ್ಸ್‌ಚೇಂಜ್‌ ಆಗುತ್ತವೆ ಎಂಬ ಸುದ್ದಿಗಳು ಹರಡಿದ್ದವು. ಅದರೆ, ಉಡುಪಿ ಪೊಲೀಸರು ಆ ರೀತಿಯಾಗಿ ವಿಡಿಯೊ ಹಂಚಿಕೆ ನಡೆದಿಲ್ಲ. ಎಲ್ಲಾದರೂ ಇದ್ದರೆ ಪೊಲೀಸರ ಗಮನಕ್ಕೆ ತರಬಹುದು ಎಂದು ಹೇಳಿದ್ದರು. ಅದಕ್ಕೆ ಯಾರೂ ಸ್ಪಂದಿಸಿರಲಿಲ್ಲ.

ಈ ನಡುವೆ, ಪ್ರಕರಣದ ತನಿಖೆಯನ್ನು ಮಲ್ಪೆ ಇನ್ಸ್‌ಪೆಕ್ಟರ್‌ ಮಂಜುನಾಥ್‌ ಶೆಟ್ಟಿ ಅವರ ಹೆಗಲಿನಿಂದ ಕುಂದಾಪುರ ಡಿವೈಎಸ್‌ಪಿ ಚೆಲುವರಾಜು ಅವರಿಗೆ ಹಸ್ತಾಂತರಿಸಲಾಗಿತ್ತು. ಆದರೆ, ಬಿಜೆಪಿ ಮತ್ತು ಸಂಘ ಪರಿವಾರದ ನಾಯಕರು ಪ್ರಕರಣವನ್ನು ಎಸ್‌ಐಟಿಗೆ ಕೊಡಬೇಕು ಎಂದು ಪಟ್ಟು ಹಿಡಿದಿದ್ದರು. ಸಿಎಂ ಮುಖ್ಯಮಂತ್ರಿ ಆದಿಯಾಗಿ ಸರ್ಕಾರದ ಸಚಿವರು ಒಪ್ಪಿರಲಿಲ್ಲ. ಇತ್ತ ಬಿಜೆಪಿ ಪ್ರಕರಣದ ಎಸ್‌ಐಟಿ ತನಿಖೆ ಆಗ್ರಹಿಸಿ ರಾಜ್ಯಪಾಲರಿಗೂ ಮನವಿ ಸಲ್ಲಿಸಿತ್ತು.

ಇದೀಗ ಭಾರಿ ಚರ್ಚೆಗೆ ಕಾರಣವಾಗಿರುವ ಈ ಪ್ರಕರಣವನ್ನು ಸಿಐಡಿ ತನಿಖೆಗೆ ಒಪ್ಪಿಸಲು ಸರ್ಕಾರ ಮುಂದಾಗಿದೆ. ಸಿಐಡಿ ಪೊಲೀಸರ ವಿಶೇಷ ತಂಡ ಈ ಪ್ರಕರಣವನ್ನು ಕೈಗೆತ್ತಿಕೊಳ್ಳಲಿದ್ದು, ಸಂತ್ರಸ್ತೆ ಮತ್ತು ಆರೋಪಿಗಳ ವಿಚಾರಣೆ ನಡೆಸಲಿದೆ. ಬೇರೆ ಬೇರೆ ಆಯಾಮಗಳ ವಿವರ ಪಡೆಯಲಿದೆ. ಸಂತ್ರಸ್ತೆ ವಿದ್ಯಾರ್ಥಿನಿ ಈಗಾಗಲೇ ನ್ಯಾಯಾಧೀಶರ ಮುಂದೆ ತಮ್ಮ ಹೇಳಿಕೆಯನ್ನು ದಾಖಲಿಸಿದ್ದಾರೆ. ಜತೆಗೆ ಮೂವರು ವಿದ್ಯಾರ್ಥಿನಿಯರು ಕೂಡಾ ಕೋರ್ಟ್‌ ಮುಂದೆ ತಾವು ವಿಡಿಯೊ ಚಿತ್ರೀಕರಣ ಮಾಡಿದ್ದಾಗಿ ಒಪ್ಪಿಕೊಂಡಿದ್ದರು.

ಇದನ್ನೂ ಓದಿ: Udupi Toilet Case: ಉಡುಪಿ ಕೇಸ್;‌ ವಿಡಿಯೊ ಮಾಡಿದ ತಪ್ಪನ್ನು ಒಪ್ಪಿಕೊಂಡ ವಿದ್ಯಾರ್ಥಿನಿಯರು; ತನಿಖೆ ವೇಳೆ ಹೇಳಿದ್ದೇನು?

Exit mobile version