Site icon Vistara News

Karnataka Election: ದೇಶದ ಉನ್ನತಿಗೆ ಬಿಜೆಪಿ ಸರ್ಕಾರ ಭದ್ರ‌ ಬುನಾದಿ ಹಾಕಿದೆ: ಕೇಂದ್ರ ಸಚಿವ ಶ್ರೀಪಾದ ನಾಯ್ಕ

Union Minister Shripad Naik says BJP government has laid a strong foundation for the country's progress

ಕಾರವಾರ: ಬಿಜೆಪಿ ಸರ್ಕಾರದಿಂದ ದೇಶದ ಮೂಲೆ ಮೂಲೆಗೂ ಯೋಜನೆಗಳು ತಲುಪಿ ನಿರಂತರ ಅಭಿವೃದ್ಧಿಯಾಗುತ್ತಿದೆ. ದೇಶದ ಉನ್ನತಿಗೆ ಬಿಜೆಪಿ ಸರ್ಕಾರ ಭದ್ರ‌ ಬುನಾದಿಯನ್ನು ಹಾಕಿದ್ದು, ಏಳು ದಶಕಗಳ ಕಾಲ ಕಾಂಗ್ರೆಸ್‌ ಅಧಿಕಾರ ನಡೆಸಿದರೂ ಯಾವುದೇ ರೀತಿಯ ಅಭಿವೃದ್ಧಿ ಮಾಡಿಲ್ಲ. 2014ರ ನಂತರ ಮೋದಿ ಸರ್ಕಾರದ (Karnataka Election) ಸಾಧನೆ ವಿಶ್ವವನ್ನೇ ಮೆಚ್ಚಿಸುವಂತಹ ಕಾರ್ಯಮಾಡುತ್ತಿದೆ ಎಂದು ಕೇಂದ್ರ ಪ್ರವಾಸೋದ್ಯಮ ಮತ್ತು ಬಂದರು ಖಾತೆ ಸಹಾಯಕ ಸಚಿವ ಶ್ರೀಪಾದ ನಾಯ್ಕ (Shripad Yesso Naik) ಹೇಳಿದರು.

ಕಾರವಾರದ ಬೈತಕೋಲ್‌ದಲ್ಲಿ ಬಿಜೆಪಿ ಅಭ್ಯರ್ಥಿ ರೂಪಾಲಿ ನಾಯ್ಕ (Roopali Naik) ಪರವಾಗಿ ಮತಯಾಚನೆ ಮಾಡಿದ ಅವರು, ಕಾರವಾರ ಅಂಕೋಲಾ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ರೂಪಾಲಿ ಎಸ್. ನಾಯ್ಕ (Roopali Naik) ಅವರನ್ನು ಭಾರಿ ಬಹುಮತದಿಂದ ಗೆಲ್ಲಿಸುವಂತೆ ಮನವಿ ಮಾಡಿದರು.

ಇದನ್ನೂ ಓದಿ | Jagadish Shettar: ಬಿಜೆಪಿಯ ಏಳು ಜನ ಮಂತ್ರಿಗಳ ಸಿಡಿ ಇವೆ; ಸ್ಟೇ ತಂದಿದ್ದು ಯಾಕೆಂದು ಅವರನ್ನೇ ಕೇಳಿ ಎಂದ ಜಗದೀಶ್‌ ಶೆಟ್ಟರ್‌

Union Minister Sripada Nayka

ಬಿಜೆಪಿ ಅಭ್ಯರ್ಥಿ ರೂಪಾಲಿ ನಾಯ್ಕ ಮಾತನಾಡಿ, ಹಿಂದಿನ ಸರ್ಕಾರಗಳು ಮೀನುಗಾರ, ಹಾಲಕ್ಕಿ ಹೀಗೆ ವಿವಿಧ ಸಮಾಜವನ್ನು ಕಡೆಗಣಿಸಿವೆ. ನಮ್ಮ ಡಬಲ್‌ ಎಂಜಿನ್‌ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಅನೇಕ ಯೋಜನೆಗಳನ್ನು ಜಾರಿಗೆ ತಂದಿದ್ದೇವೆ. ಮೀನುಗಾರ ಸಮಾಜದವರಿಗೆ ಕೂಡ ಕೃಷಿಕರ ಮಾದರಿಯಲ್ಲಿ ಕಿಸಾನ್ ಕಾರ್ಡ್‌ ನೀಡಿದ್ದೇವೆ. ಮೀನುಗಾರರಿಗೆ ಯಾವುದೇ ರೀತಿಯ ಅನ್ಯಾಯ ಮಾಡಿಲ್ಲ. ಬಿಜೆಪಿ ಸರ್ಕಾರ ಬಂದಾಗ ಸಾಲಮನ್ನಾ ಸಂದರ್ಭದಲ್ಲಿ ಬಿ.ಎಸ್.ಯಡಿಯೂರಪ್ಪ ಅವರು ಸಾಲಮನ್ನಾ ಮಾಡಿದ್ದರು. ಅಲ್ಲದೇ, ಮೀನುಗಾರ ಸಮಾಜದವರಿಗೆ ಸಾಲ ಸೌಲಭ್ಯ ಒದಗಿಸುವ ಯೋಜನೆಯನ್ನು ಸರ್ಕಾರ ಜಾರಿಗೆ ತಂದಿದೆ‌ ಎಂದರು.

ಮಾಜಾಳಿಯಲ್ಲಿ ಮೀನುಗಾರರಿಗೆ ಅವಶ್ಯಕವಾಗಿರುವ ಬಂದರು ನಿರ್ಮಾಣ ಮಾಡಲಾಗುತ್ತಿದೆ. ಅಂಕೋಲಾದ ಬೆಳಂಬಾರದಲ್ಲಿ ಬಂದರು ನಿರ್ಮಾಣದಿಂದ ವಿವಿಧ ರೀತಿಯಲ್ಲಿ ಅಭಿವೃದ್ಧಿಯಾಗಲಿದೆ. ತಾವೆಲ್ಲರೂ ಆರ್ಥಿಕವಾಗಿ ಸದೃಢರಾಗಬಹುದಾಗಿದೆ. ಒಣಮೀನು ಪ್ಯಾಕೆಟ್ ಮಾಡುವುದು, ಸಣ್ಣ ಸಣ್ಣ ಉದ್ಯಮ ಸ್ಥಾಪನೆ, ಮೂಲಭೂತ ಸೌಕರ್ಯಗಳನ್ನು ಮಾಡಲು ಅನುದಾನವನ್ನು ಒದಗಿಸಿದ್ದೇನೆ. ನಾನು ಮೀನುಗಾರರ ಪರವಾಗಿಯೇ ಇದ್ದೇನೆ. ಸಾಗರಮಾಲಾ ಯೋಜನೆಯಲ್ಲಿ ಅಮಾಯಕರನ್ನು ಬಳಸಿಕೊಂಡು ನನ್ನ ವಿರುದ್ದ ಅಪಪ್ರಚಾರ ಮಾಡಿದ್ದರು. ಕಾಂಗ್ರೆಸ್ ಸರ್ಕಾರ ಇದ್ದಾಗ ಸಾಗರಮಾಲಾ ಯೋಜನೆಗೆ ಅಡಿಪಾಯ ಹಾಕಿದ್ದರು. ನನ್ನ ಕ್ಷೇತ್ರದ ಜನರಿಗೆ ಯಾವುದು ಅವಶ್ಯಕವೋ ಅದರ ಪರವಾಗಿ ನಾನು ಇರುತ್ತೇನೆ. ಅವರಿಗೆ ಬೇಡವಾದಲ್ಲಿ ನಾನು ಅದನ್ನು ವಿರೋಧಿಸುತ್ತೇನೆ ಎಂದರು.

ಕೋವಿಡ್‌ ಸಂದರ್ಭದಲ್ಲಿ ವ್ಯಾಕ್ಸಿನ್‌ ನೀಡಿ ಜನರ ರಕ್ಷಣೆಗೆ ಮುಂದಾದವರು ನಮ್ಮ ಪ್ರಧಾನಿ ನರೇಂದ್ರ ಮೋದಿ. ಅವರಿಗೆ ನಾವು ಚಿರ‌ ಋಣಿಯಾಗಿದ್ದೇವೆ. ವ್ಯಾಕ್ಸಿನ್‌ ಕುರಿತು ಕೂಡ ವಿರೋಧ, ಅಪಪ್ರಚಾರ ಮಾಡಿದ್ದರು. ಮೀನುಗಾರರಿಗೆ ಮನೆಗಳಿಲ್ಲ, ಸಿಆರ್‌ಝಡ್‌ ನಿಯಮದಿಂದ ಸಮಸ್ಯೆಯಾಗುತ್ತಿದೆ. ಅದನ್ನು ನಿವಾರಣೆ ಮಾಡಲು ಹಿಂದೆ ಪ್ರಯತ್ನಿಸಿದ್ದೇನೆ ಎಂದರು.

ಪ್ರಧಾನಿ ನರೇಂದ್ರ ಮೋದಿ ಅವರು, ಮೀನುಗಾರಿಕೆ ಹಾಗೂ ನೀರಾವರಿಗಾಗಿ ಹೊಸ ಸಚಿವಾಲಯವನ್ನು ಪ್ರಾರಂಭಿಸಿದರು. ಕಿಸಾನ್‌ ಕಾರ್ಡ್‌ ಮೂಲಕ ಎರಡು ಲಕ್ಷ ರೂ.ವರೆಗೆ ಸಾಲವನ್ನು ಒದಗಿಸುವ ಯೋಜನೆಯನ್ನು ಅವರು‌‌ ಜಾರಿಗೆ ತಂದಿದ್ದಾರೆ. ಈ ಸೌಲಭ್ಯಗಳನ್ನು ಎಲ್ಲರೂ ಪಡೆದುಕೊಳ್ಳಬೇಕು. ಕ್ಷೇತ್ರದಲ್ಲಿ ಹಲವು ಅಭಿವೃದ್ಧಿ ಕೆಲಸಗಳು ಆಗಿವೆ. ಆಗುತ್ತಿವೆ. ಜನರಿಗೆ ಅನುಕೂಲವಾಗುವಂತೆ ಅವಶ್ಯ ಕಾಮಗಾರಿಗಳನ್ನು ತಂದಿದ್ದೇನೆ. ಈ ಬಾರಿ ಮತ್ತೊಮ್ಮೆ ಭಾರತೀಯ ಜನತಾ ಪಾರ್ಟಿ ನನಗೆ ಸ್ಪರ್ಧಿಸಲು ಅವಕಾಶವನ್ನು ನೀಡಿದೆ. ನೀವೆಲ್ಲರೂ ನನಗೆ ಮತ ನೀಡಿ ಆಶೀರ್ವದಿಸಬೇಕು ಎಂದು ಮತಯಾಚನೆ ಮಾಡಿದರು.

ಇದನ್ನೂ ಓದಿ | Yogi Adityanath: ಅಯೋಧ್ಯೆಯಲ್ಲಿ ಕರ್ನಾಟಕ ಅತಿಥಿ ಗೃಹಕ್ಕೆ ಭೂಮಿ ಮಂಜೂರು: ಮಂಡ್ಯದಲ್ಲಿ ಯೋಗಿ ಆದಿತ್ಯನಾಥ ಹೇಳಿಕೆ

Union Minister Sripada Nayka

ವಿಧಾನಪರಿಷತ್‌ ಸದಸ್ಯ ಗಣಪತಿ ಉಳ್ವೇಕರ ಮಾತನಾಡಿ, ಶಾಸಕಿ ರೂಪಾಲಿ ನಾಯ್ಕ ಅವರು ಒಬ್ಬ ಮಹಿಳೆಯಾಗಿ ಕಾರವಾರ-ಅಂಕೋಲಾ‌ ಕ್ಷೇತ್ರದ ಚಿತ್ರಣವನ್ನೇ ಬದಲಾಯಿಸಿದ್ದಾರೆ. ಯಾವ ಶಾಸಕರೂ ಮಾಡದ ಕಾರ್ಯವನ್ನು ಅವರು ಮಾಡಿ ತೋರಿಸಿದ್ದಾರೆ. ಅವರನ್ನು ನಾವು ಮತ್ತೊಮ್ಮೆ ಆಯ್ಕೆ ಮಾಡಬೇಕು ಎಂದರು.

ಶಾಸಕರಾದ ಪ್ರೇಮೇಂದ್ರ ಶೇಟ್‌, ಮಂಡಲಾಧ್ಯಕ್ಷರಾದ ನಾಗೇಶ ಕುರ್ಡೇಕರ, ನಗರಸಭಾ ಅಧ್ಯಕ್ಷ ನಿತಿನ್ ಪಿಕಳೆ, ಜಿಲ್ಲಾ ವಕ್ತಾರರಾದ ನಾಗರಾಜ ನಾಯಕ, ಪ್ರಮುಖರಾದ ಮನೋಜ ಭಟ್‌, ನಗರಸಭೆ ಉಪಾಧ್ಯಕ್ಷ ಪಿ.ಪಿ.ನಾಯ್ಕ ಉಪಸ್ಥಿತರಿದ್ದರು.

Exit mobile version