Site icon Vistara News

Kidnap Case : ಸಮುದ್ರದಲ್ಲೇ ಮೀನುಗಾರರ ಮೇಲೆ ದಾಳಿ ಮಾಡಿ ಕಿಡ್ನಾಪ್‌; ಕೊನೆಗೂ ರಕ್ಷಣೆ

Kidnap case Bhatkal News

ಉಡುಪಿ : ಮೀನುಗಾರಿಕೆಗೆ (Fishing Boat) ಹೋಗಿದ್ದವರ ಮೇಲೆ ಸಮುದ್ರ ಮಧ್ಯದಲ್ಲೇ ದಾಳಿ (Attack on Fishing boat) ಮಾಡಿ ಅವರ ಬೋಟ್‌ನಲ್ಲಿದ್ದ ಮೀನು, ಡೀಸೆಲ್‌ ಮತ್ತಿತರ ಸಾಮಗ್ರಿಗಳನ್ನು ಲೂಟಿ ಮಾಡಿದ್ದಲ್ಲದೆ, ಮೀನುಗಾರರನ್ನೂ ಅಪಹರಿಸಿದ (kidnap Case) ಭಯಾನಕ ಘಟನೆಯೊಂದು ಕರಾವಳಿಯಲ್ಲಿ ನಡೆದಿದೆ. ಅಂತಿಮವಾಗಿ ಭಟ್ಕಳ ಮೀನುಗಾರಿಕಾ ಬಂದರು (Bhatkala Fishing port) ತಲುಪಿದ ಮೀನುಗಾರರನ್ನು ರಕ್ಷಿಸಲಾಗಿದೆ. ದುಷ್ಕರ್ಮಿಗಳನ್ನು ಬಂಧಿಸುವ ಪ್ರಯತ್ನ ನಡೆಯುತ್ತಿದೆ.

ಸಿನಿಮೀಯ ರೀತಿಯಲ್ಲಿ ಮೀನುಗಾರರ ಕಿಡ್ನ್ಯಾಪ್‌ ನಡೆದಿದ್ದು ಮಲ್ಪೆ ಪೊಲೀಸರ ಸಾಹಸಿಕ ಕಾರ್ಯಾಚರಣೆಯಲ್ಲಿ ಸಮುದ್ರಗಳ್ಳರಿಂದ ಮೀನುಗಾರರು ಬಿಡುಗಡೆಗೊಂಡು ವಾಪಸ್‌ ಬಂದಿದ್ದಾರೆ.

ಫೆಬ್ರವರಿ 19ರಂದು ಮಲ್ಪೆಯಿಂದ ಆಳ ಸಮುದ್ರ ಮೀನುಗಾರಿಕೆಗಾಗಿ ಒಂದು ತಂಡ ತೆರಳಿತ್ತು. ಕೃಷ್ಣನಂದನ ಹೆಸರಿನ ಬೋಟ್‌ನಲ್ಲಿ ಮೀನುಗಾರಿಕೆಗೆ ತೆರಳಿದ್ದ ಮೀನುಗಾರರು ಮೀನು ಹಿಡಿದು ಮರಳುವ ಹಾದಿಯಲ್ಲಿದ್ದರು. ಫೆಬ್ರವರಿ 27ರಂದು ಮೀನುಗಾರಿಕೆ ಮುಗಿಸಿ ವಾಪಸ್‌ ಆಗುತ್ತಿದ್ದರು. ಏಳು ದಿನದ ಮೀನುಗಾರಿಕೆ ಮುಗಿಸಿ ವಾಪಸ್ಸು ಆಗುವ ವೇಳೆ ತಾಂತ್ರಿಕ ಕಾರಣದಿಂದ ಬೋಟ್‌ ಸಮುದ್ರ ಮಧ್ಯೆ ಕೆಟ್ಟು ನಿಂತಿತು.

ಫೆಬ್ರವರಿ 27ರ ಮುಂಜಾನೆ 3 ಗಂಟೆಗೆ ಆಳ ಸಮುದ್ರದಲ್ಲಿ ಕೃಷ್ಣ ನಂದನ ಬೋಟ್ ಕೆಟ್ಟು ನಿಂತಿತು. ಇದೇ ಸಂದರ್ಭದಲ್ಲಿ ರಾತ್ರಿ ವೇಳೆ ಅಪರಿಚಿತ ಬೋಟ್ ನಲ್ಲಿ ಬಂದಿದ್ದ 25 ಜನರಿದ್ದ ತಂಡ ದಾಳಿ ನಡೆಸಿತು. ಬೋಟ್‌ನಲ್ಲಿದ್ದ 8 ಲಕ್ಷ ಮೌಲ್ಯದ ಮೀನು, 7500 ಲೀಟರ್‌ ಡೀಸೆಲ್‌ ದೋಚಿದ ದುಷ್ಕರ್ಮಿಗಳು ಬಳಿಕ ಬೋಟ್‌ ಅನ್ನೇ ದಡಕ್ಕೆ ಎಳೆದೊಯ್ದು ಮೀನುಗಾರರನ್ನು ಕೂಡಿ ಹಾಕಿ ಚಿತ್ರಹಿಂಸೆ ನೀಡಿದರು.

ಇದನ್ನು ಓದಿ : Kidnap case : ಸೀರಿಯಲ್ ಪ್ರೊಡಕ್ಷನ್ ಹೌಸ್ ಸಿಬ್ಬಂದಿ ಕಿಡ್ನ್ಯಾಪ್; 1 ಕೋಟಿ ರೂ.ಗೆ ಡಿಮ್ಯಾಂಡ್!

ಈ ನಡುವೆ, ಮೀನುಗಾರರ ಕಿಡ್ನಾಪ್‌, ಲೂಟಿಯ ವಿಷಯ ತಿಳಿದ ಮಾಲೀಕರು ಮಲ್ಪೆ ಪೊಲೀಸರಿಗೆ ತಿಳಿಸಿದರು. ಮಲ್ಪೆ ಪೊಲೀಸರು ಮೀನುಗಾರರ ಜಾಡನ್ನು ಹಿಡಿದು ಭಟ್ಕಳ ತಲುಪಿದರು. ಅಲ್ಲಿ ಮೀನುಗಾರರನ್ನು ರಕ್ಷಿಸಲಾಯಿತು.

ದರೋಡೆ, ಕಿಡ್ನ್ಯಾಪ್‌ ಮಾಡಿದ ತಂಡಕ್ಕಾಗಿ ಪೊಲೀಸರು ಶೋಧ ಕಾರ್ಯ ನಡೆಸುತ್ತಿದ್ದಾರೆ.

ಆರೋಪಿಗಳು ಯಾರು?

ಸಾಮಾನ್ಯವಾಗಿ ಕರ್ನಾಟಕ ಕರಾವಳಿಯಲ್ಲಿ‌ ಸಮುದ್ರ ಕಳ್ಳರ ಹಾವಳಿ ಕಡಿಮೆ. ಕೆಲವೇ ಕೆಲವು ಘಟನೆಗಳು ನಡೆದಿವೆ. ಇದು ಯಾರೋ ಗೊತ್ತಿರುವ ದುಷ್ಕರ್ಮಿ ತಂಡಗಳೇ ನಡೆಸಿರುವ ಕೃತ್ಯವಾಗಿರುವ ಸಾಧ್ಯತೆ ಇದೆ. ಕಡಲುಗಳ್ಳರನ್ನು ಹಿಡಿದು ತಕ್ಕ ಶಿಕ್ಷೆ ವಿಧಿಸಬೇಕು ಎಂಬ ಆಗ್ರಹ ಕೇಳಿಬಂದಿದೆ.

Exit mobile version