Site icon Vistara News

Valmiki Corporation Scam: ಸಚಿವ ನಾಗೇಂದ್ರ ರಾಜೀನಾಮೆ ಪಡೆಯುವುದು ಉತ್ತಮ; ಸರ್ಕಾರಕ್ಕೆ ಅಭಿಪ್ರಾಯ ತಿಳಿಸಿದ ಎಸ್‌ಐಟಿ?

SIT feels it would be better for Minister Nagendra to resign

ಬೆಂಗಳೂರು: ವಾಲ್ಮೀಕಿ ನಿಗಮ ಹಗರಣದ ತನಿಖೆ ಸ್ಥಿತಿಗತಿ ಬಗ್ಗೆ ಎಸ್‌ಐಟಿ ಅಧಿಕಾರಿಗಳಿಂದ ರಾಜ್ಯ ಸರ್ಕಾರಕ್ಕೆ ಅಭಿಪ್ರಾಯ ಸಲ್ಲಿಕೆ ಮಾಡಲಾಗಿದೆ. ಪ್ರಕರಣದಲ್ಲಿ ಎಸ್‌ಐಟಿ ತನಿಖೆ ಸರಿಯಾದ ದಿಕ್ಕಿನಲ್ಲಿ ಸಾಗುತ್ತಿದೆ. ಅವ್ಯವಹಾರದಲ್ಲಿ ಭಾಗಿಯಾಗಿದ್ದ ಸಚಿವ ನಾಗೇಂದ್ರ ಅವರ ಆಪ್ತರು ಬಂಧನವಾಗಿದ್ದಾರೆ. ಹೀಗಾಗಿ ಮುಂದಿನ ತನಿಖೆ ನಿಷ್ಪಕ್ಷಪಾತವಾಗಿ ನಡೆಯಬೇಕಾದರೆ ಸಚಿವ ನಾಗೇಂದ್ರ ಅವರ ರಾಜೀನಾಮೆ ಪಡೆಯುವುದು ಉತ್ತಮ ಎಂಬ ಅಭಿಪ್ರಾಯವನ್ನು ಎಸ್‌ಐಟಿ ಅಧಿಕಾರಿಗಳು ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.

ಸಚಿವ ನಾಗೇಂದ್ರ ಅವರು ಪ್ರಕರಣದಲ್ಲಿ ಭಾಗಿಯಾಗಿದ್ದಾರೋ, ಇಲ್ಲವೋ ಎಂಬುವುದು ಗೊತ್ತಿಲ್ಲ. ಆದರೆ, ಸತ್ಯ ಹೊರಬರಬೇಕಾದರೆ, ತನಿಖೆ ಸರಿಯಾಗಿ ನಡೆಯಬೇಕಾದ್ರೆ ಸಚಿವರ ರಾಜೀನಾಮೆ ಪಡೆಯುವುದು ಉತ್ತಮ ಎಂದು ಎಸ್‌ಐಟಿ ಅಧಿಕಾರಿಗಳು ತಿಳಿಸಿದ್ದಾರೆ ಎನ್ನಲಾಗಿದೆ. ಇದೇ ಕಾರಣಕ್ಕೆ ಸಚಿವರ ರಾಜೀನಾಮೆ ಪಡೆಯಲು ಸಿಎಂ ಸಿದ್ದರಾಮಯ್ಯ ಮುಂದಾಗಿದ್ದಾರೆ ಎಂದು ವಿಸ್ತಾರ ನ್ಯೂಸ್‌ಗೆ ಉನ್ನತ ಮೂಲಗಳಿಂದ ಮಾಹಿತಿ ಲಭಿಸಿದೆ.

ಇದನ್ನೂ ಓದಿ | Pradeep Eshwar: ಪ್ರದೀಪ್‌ ಈಶ್ವರ್‌ ರಾಜೀನಾಮೆಗೆ ಒತ್ತಾಯಿಸಿದ ಕಾಂಗ್ರೆಸ್‌ ನಾಯಕ ಪಕ್ಷದಿಂದಲೇ ಉಚ್ಚಾಟನೆ!

ರಾಜೀನಾಮೆ ನೀಡುತ್ತಾರಾ ನಾಗೇಂದ್ರ?

ವಾಲ್ಮೀಕಿ ನಿಗಮದ (Valmiki Corporation Scam) ಹಗರಣಕ್ಕೆ ಸಂಬಂಧಿಸಿ ನಿನ್ನೆ ಸಚಿವ ನಾಗೇಂದ್ರ (Minister B Nagendra) ಜೊತೆಗೆ ಸಿಎಂ ಸಿದ್ದರಾಮಯ್ಯ (CM Siddaramaiah) ಮಾತುಕತೆ ನಡೆಸಿದ್ದು, ರಾಜೀನಾಮೆ (Resignation) ಕೊಡಲು ಸಜ್ಜಾಗಿದ್ದಾರೆ ಎಂದು ತಿಳಿದುಬಂದಿದೆ.

ನಿನ್ನೆ ರಾತ್ರಿ ಭೇಟಿ ವೇಳೆ, ನಾಳೆ ಈ ಕುರಿತು ಇನ್ನಷ್ಟು ಮಾತನಾಡಲು ಬರುವಂತೆ ಸಿಎಂ ತಿಳಿಸಿದ್ದು, ಇಂದು ಬಹುತೇಕ ರಾಜೀನಾಮೆಗೆ ಸೂಚನೆ ನೀಡಲಿದ್ದಾರೆ ಎನ್ನಲಾಗಿದೆ. ಮೂಲಗಳ ಪ್ರಕಾರ ನಿನ್ನೆಯೇ ಸಿಎಂ ರಾಜೀನಾಮೆಗೆ ಸಿಎಂ ಸೂಚಿಸಿದ್ದಾರೆ ಎನ್ನಲಾಗುತ್ತಿದೆ. ಆದರೆ ನಾಗೇಂದ್ರ, ಸಿಎಂ ಇಂದು ಬರೋದಕ್ಕೆ ತಿಳಿಸಿದ್ದಾರೆ ಅನ್ನುತ್ತಿದ್ದಾರೆ. ಬಹುತೇಕ ಇಂದು ಸ್ಪಷ್ಟ ಚಿತ್ರಣ ಸಿಗಲಿದೆ. ಒಂದು ವೇಳೆ ಸಿಎಂ ಸೂಚನೆ ಮೇರೆಗೆ ಇಂದು ರಾಜೀನಾಮೆ ಕೊಟ್ಟರೆ ಸರ್ಕಾರದ ಮೊದಲ ವಿಕೆಟ್ ಪತನವಾಗಲಿದೆ.

ವಾಲ್ಮೀಕಿ ನಿಗಮದ ಅಧೀಕ್ಷಕ ಚಂದ್ರಶೇಖರ್‌ ಆತ್ಮಹತ್ಯೆ ಹಾಗೂ ಅವರ ಡೆತ್‌ನೋಟ್‌ ಬಯಲಾದ ಬಳಿಕ ಬೆಳಕಿಗೆ ಬಂದ ಹಗರಣದ ಬಳಿಕ ಇಷ್ಟು ದಿನ ನಾಗೇಂದ್ರ ಯಾರ ಕೈಗೂ ಸಿಕ್ಕಿರಲಿಲ್ಲ, ಸಾರ್ವಜನಿಕವಾಗಿ ಕಾಣಿಸಿಕೊಂಡಿರಲಿಲ್ಲ. ನಿನ್ನೆ ಬಳ್ಳಾರಿ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯ ಅವರನ್ನು ನಾಗೇಂದ್ರ ಭೇಟಿ ಮಾಡಿದ್ದಾರೆ ಎನ್ನಲಾಗಿದೆ. ಇದೇ ವೇಳೆ ವಾಲ್ಮೀಕಿ ನಿಗಮ ಆಕ್ರಮ ಹಣ ವರ್ಗಾವಣೆ ವಿಚಾರ ಕುರಿತು ಸಿಎಂ ಚರ್ಚಿಸಿದ್ದಾರೆ.

ಸಿಎಂ ಅಧಿಕೃತ ನಿವಾಸ ಕಾವೇರಿಯಲ್ಲಿ ಸಿಎಂ ಅನ್ನು ಸಚಿವ ನಾಗೇಂದ್ರ ಭೇಟಿಯಾಗಿದ್ದು, ಈ ಸಂದರ್ಭದಲ್ಲಿ ಡಿಸಿಎಂ ಡಿಕೆ ಶಿವಕುಮಾರ್‌ ಹಾಗೂ ಸಚಿವ ಜಮೀರ್ ಸಹ ಉಪಸ್ಥಿತರಿದ್ದರು. ವಾಲ್ಮೀಕಿ ನಿಗಮದ 185 ಕೋಟಿ ರೂಪಾಯಿ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಪ್ರತಿಪಕ್ಷಗಳು ಬಿಗಿ ಪಟ್ಟು ಹಿಡಿದಿವೆ. ಬಿಜೆಪಿ ನಾಗೇಂದ್ರ ವಿರುದ್ಧ ರಣಕಹಳೆ ಮೊಳಗಿಸಿದೆ. ಈಗಾಗಲೇ ಈ ಪ್ರಕರಣಕ್ಕೆ ಸಿಬಿಐ ಎಂಟ್ರಿಯಾಗಿದೆ. ಹೀಗಾಗಿ ಏನಾದರೂ ಒಂದು ಕ್ರಮ ತೆಗೆದುಕೊಳ್ಳುವುದು ಸಿಎಂಗೆ ಅನಿವಾರ್ಯವಾಗಿದೆ. ಈ ಹಿನ್ನೆಲೆಯಲ್ಲಿ ಸಿಎಂ ನಾಗೇಂದ್ರರನ್ನು ಕರೆಸಿ ಚರ್ಚೆ ಮಾಡಿರುವುದು ಸಾಕಷ್ಟು ಮಹತ್ವ ಪಡೆದುಕೊಂಡಿದೆ.

ಇದನ್ನೂ ಓದಿ | Chandrababu Naidu: ಆಂಧ್ರ ಮುಖ್ಯಮಂತ್ರಿಯಾಗಿ ಚಂದ್ರಬಾಬು ನಾಯ್ಡು ಪ್ರಮಾಣ ವಚನ ಸ್ವೀಕಾರ ಮುಂದೂಡಿಕೆ

ಈಗಾಗಲೇ ನೈತಿಕ ಹೊಣೆ ಹೊತ್ತು ಸಚಿವ ಬಿ. ನಾಗೇಂದ್ರ ರಾಜೀನಾಮೆ ನೀಡಬೇಕಾಗಿತ್ತು ಎಂದು ಕಾಂಗ್ರೆಸ್‌ನ ಹಲವು ಹಿರಿಯ ನಾಯಕರು ಸೂಚಿಸಿದ್ದಾರೆ. ಸಂಪುಟದ ಸಹೋದ್ಯೋಗಿಗಳೇ ಮುಗುಂ ಆಗಿದ್ದಾರೆ. ಹೀಗಾಗಿ, ಸಿಬಿಐಯಲ್ಲಿ ಎಫ್ಐಆರ್ ದಾಖಲು ಆಗುತ್ತಿದ್ದಂತೆ ರಾಜೀನಾಮೆಗೆ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಸೂಚನೆ ಕೊಟ್ಟಿದ್ದಾರೆ ಎನ್ನಲಾಗಿದೆ.

Exit mobile version