Site icon Vistara News

Beef Smuggling: ಗೋಮಾಂಸ ಸಾಗಾಟಗಾರರ ಮೇಲೆ ಹಲ್ಲೆ ವಿಡಿಯೋ ಶೇರ್‌; 6 ಸೋಶಿಯಲ್‌ ಮೀಡಿಯಾ ಗ್ರೂಪ್‌ ವಿರುದ್ಧ ಕೇಸ್‌

assault on beef transporters

ಬೆಂ. ಗ್ರಾಮಾಂತರ: ದೊಡ್ಡಬಳ್ಳಾಪುರದಲ್ಲಿ ಅಕ್ರಮ ಗೋಮಾಂಸ ಸಾಗಾಟಗಾರರ ಮೇಲೆ ಹಲ್ಲೆಯ (Beef Smuggling) ವಿಡಿಯೊವನ್ನು ಸಾಮಾಜಿಕ ಜಾಲತಾಣಗಳಲ್ಲಿ ಶೇರ್‌ ಮಾಡಿದ ಹಿನ್ನೆಲೆಯಲ್ಲಿ 6 ಫೇಸ್‌ಬುಕ್‌ ಹಾಗೂ ಟೆಲಿಗ್ರಾಪ್‌ ಗ್ರೂಪ್‌ಗಳ ಮೇಲೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಸೆ.24ರಂದು ದೊಡ್ಡಬಳ್ಳಾಪುರದ ಐಬಿ‌ ವೃತ್ತದಲ್ಲಿ ಅಕ್ರಮವಾಗಿ 18 ಟನ್‌ ಗೋಮಾಂಸ ಸಾಗಾಟ ಮಾಡುತ್ತಿದ್ದ ವಾಹನಗಳನ್ನು ಶ್ರೀರಾಮಸೇನೆ ಕಾರ್ಯಕರ್ತರು ತಡೆದಿದ್ದರು. ಈ ವೇಳೆ ವಾಹನ ಚಾಲಕರು ಹಲ್ಲೆಗೆ ಯತ್ನಿಸಿದರು ಎಂದು ರೊಚ್ಚಿಗೆದ್ದ ಶ್ರೀರಾಮಸೇನೆ ಕಾರ್ಯಕರ್ತರು, ಗೋಮಾಂಸ ಸಾಗಾಟ ಮಾಡುತ್ತಿದ್ದವರ ಮೇಲೆ ಹಲ್ಲೆ ನಡೆಸಿ, ಕಾರಿಗೆ ಬೆಂಕಿ ಹಚ್ಚಿ ಆಕ್ರೋಶವನ್ನು ಹೊರಹಾಕಿದ್ದರು. ಈ ಸಂಬಂಧ 23 ಮಂದಿಯನ್ನು ಪೊಲೀಸರು ಈಗಾಗಾಲೇ ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.

ಗೋಮಾಂಸ ಸಾಗಾಟಗಾರರ ಮೇಲೆ ಹಲ್ಲೆಗೆ ಸಂಬಂಧಿಸಿದಂತೆ 2 ಕೇಸ್‌ ದಾಖಲಿಸಿ, 19 ಮಂದಿಯನ್ನು ಪೊಲೀಸರು ಬಂಧಿಸಿದ್ದರು. ನಂತರ ನಾಲ್ವರನ್ನು ವಶಕ್ಕೆ ಪಡೆಯಲಾಗಿತ್ತು. ಇನ್ನು ಘಟನೆಗೆ ಸಂಬಂಧಿಸಿದಂತೆ ಎರಡು ಸಮುದಾಯಗಳ ನಡುವೆ ದ್ವೇಷ ಹುಟ್ಟುಹಾಕುವಂತಹ ಹಲ್ಲೆಯ ವಿಡಿಯೊ ಶೇರ್‌ ಮಾಡಿದ ಹಿನ್ನೆಲೆಯಲ್ಲಿ ಸೆನ್‌ ಠಾಣೆ (CEN) ಪೊಲೀಸರು 6 ಸೋಶಿಯಲ್‌ ಮೀಡಿಯಾ ಗ್ರೂಪ್‌ಗಳ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಇದನ್ನೂ ಓದಿ | Cauvery water dispute : ಕನ್ನಡಿಗರಿಗೆ ನೀರಿಲ್ಲ, ತಮಿಳುನಾಡಿಗೆ ನೀರು ಬಿಡಲು ಡಿಸಿಎಂಗೆ ಸಂತೋಷವಾಗುತ್ತಿದೆ!

ಸೋಶಿಯಲ್‌ ಮೀಡಿಯಾ ಮಾನಿಟರಿಂಗ್‌ ಸೆಲ್‌ನ ಮಲ್ಲಿಕಾರ್ಜುನ್‌ ಎಂಬುವವರು ನೀಡಿದ ದೂರಿನ ಮೇರೆಗೆ 6 ಸೋಶಿಯಲ್‌ ಮೀಡಿಯಾ ಗ್ರೂಪ್‌ಗಳ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ದೊಡ್ಡಬಳ್ಳಾಪುರ ಟುಡೇ ನ್ಯೂಸ್, ಕೇಸರಿ ರಾಷ್ಟ್ರ, ವಾರ್ತಾಗುರು ಮತ್ತು ಸಾರ್ವಜನಿಕ ಸಮಸ್ಯೆ ಎಂಬ ನಾಲ್ಕು ಫೇಸ್‌ಬುಕ್ ಗ್ರೂಪ್‌ಗಳು ಹಾಗೂ ಎರಡು ಟೆಲಿಗ್ರಾಮ್ ಗ್ರೂಪ್​ಗಳಾದ ಥಗ್ಸ್ ಆಫ್ ದೊಡ್ಡಬಳ್ಳಾಪುರ ಮತ್ತು ಶಿವು ಹಿಂದು ಹುಲಿ_2.0 ಗ್ರೂಪ್‌ಗಳಲ್ಲಿ ವಿಡಿಯೊಗಳನ್ನು ಶೇರ್‌ ಮಾಡಲಾಗಿತ್ತು.

ಅನ್ಯಕೋಮಿನ 7 ಮಂದಿ ಮೇಲೆ ಶ್ರೀರಾಮ ಸೇನೆ ಕಾರ್ಯಕರ್ತರು ಹಲ್ಲೆ ನಡೆಸಿದ್ದಾರೆ. ಹಾಗೆಯೇ ಚಾಲಕರ ತಲೆ ಮೇಲೆ ಕಡಿದ ಜಾನುವಾರುಗಳ ತಲೆಯನ್ನು ಇಟ್ಟುಕೊಟ್ಟು ಮೆರವಣಿಗೆ ಮಾಡುವಂತೆ ಹೇಳಿ ಥಳಿಸಿದ್ದಾರೆ. ಈ ಮೂಲಕ ಎರಡು ಸಮುದಾಯಗಳ ನಡುವೆ ದ್ವೇಷ ಹುಟ್ಟುಹಾಕಲು ಯತ್ನಿಸಿದ್ದಾರೆ ಎಂದು ದೂರುದಾರ ಮಲ್ಲಿಕಾರ್ಜುನ್‌ ಆರೋಪಿಸಿದ್ದಾರೆ.

Exit mobile version