Site icon Vistara News

Vijay Merchant Trophy: ಕರ್ನಾಟಕ ತಂಡಕ್ಕೆ ರಾಯಚೂರಿನ ಅನಿಕೇತ್‌ ರೆಡ್ಡಿ ಉಪ ನಾಯಕ

Vijay Merchant Trophy: Raichur Aniketh Reddy selected as vice captain for U 16 Karnataka team

ರಾಯಚೂರು: 2023-24 ನೇ ಸಾಲಿನ ವಿಜಯ್‌ ಮರ್ಚೆಂಟ್‌ ಟ್ರೋಫಿಗೆ (Vijay Merchant Trophy) ಕರ್ನಾಟಕ ಅಂಡರ್ 16 ತಂಡವನ್ನು (U-16 Karnataka Team) ಪ್ರಕಟಿಸಲಾಗಿದ್ದು, ರಾಯಚೂರಿನ ಅನಿಕೇತ್‌ ರೆಡ್ಡಿಗೆ ಉಪ ನಾಯಕ (Vice-Captain) ಸ್ಥಾನ ಲಭಿಸಿದೆ. ರಾಯಚೂರಿನ ಸೈಬರ್ ಕ್ರೈಮ್ ಪೊಲೀಸ್ ಠಾಣೆಯ ಹೆಡ್‌ಕಾನ್‌ಸ್ಟೇಬಲ್‌ ಆಗಿರುವ ವಿಕ್ರಮ್‌ ರೆಡ್ಡಿ ಹಾಗೂ ದಿಪ್ತಿ ದಂಪತಿಯ ಪುತ್ರ‌ನಾದ ಅನಿಕೇತ್‌ ರೆಡ್ಡಿಯ ಸಾಧನೆಗೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ.

2023ರ ಡಿಸೆಂಬರ್‌ 1 ರಿಂದ 23 ರವರೆಗೆ ವಿಜಯವಾಡದಲ್ಲಿ ಟೂರ್ನಿ ನಡೆಯಲಿದೆ. ಭಾರತ ಕ್ರಿಕೆಟ್‌ ತಂಡದ ಕೋಚ್‌ ರಾಹುಲ್‌ ದ್ರಾವಿಡ್‌ ಪುತ್ರ ಅನ್ವಯ್‌ ದ್ರಾವಿಡ್‌ ಈ ತಂಡಕ್ಕೆ ಕ್ಯಾಪ್ಟನ್‌ ಆಗಿ ಆಯ್ಕೆಯಾದರೆ, ಉಪನಾಯಕನಾಗಿ ರಾಯಚೂರಿನ ಹುಡುಗ ಅನಿಕೇತ್‌ ರೆಡ್ಡಿ ಆಯ್ಕೆಯಾಗಿದ್ದಾರೆ.

ಇದನ್ನೂ ಓದಿ: Job Alert: ನಮ್ಮ ಮೆಟ್ರೋದಲ್ಲಿದೆ ಉದ್ಯೋಗಾವಕಾಶ; ಇಂದೇ ಅರ್ಜಿ ಸಲ್ಲಿಸಿ

ಈ ಕುರಿತು ಅನಿಕೇತ್‌ ರೆಡ್ಡಿ ಅವರ ತಂದೆ ವಿಕ್ರಮ್‌ ರೆಡ್ಡಿ ಮಾತನಾಡಿ, ಅನಿಕೇತ್‌ ರೆಡ್ಡಿಯು ರಾಯಚೂರಿನಲ್ಲೇ ವಿದ್ಯಾಭ್ಯಾಸ ಮಾಡುತ್ತಿದ್ದಾನೆ. 07 ವರ್ಷ ವಯಸ್ಸಿರುವಾಗಲೇ ಆತನಿಗೆ ಕ್ರಿಕೆಟ್ ಪ್ರಪಂಚವಾಗಿತ್ತು. ಕ್ರಿಕೆಟ್‌ನಲ್ಲಿ ಏನಾದರೂ ಸಾಧನೆ ಮಾಡುವ ಕನಸಿನ ಜತೆ ಅಂತರಾಷ್ಟ್ರೀಯ ಕ್ರಿಕೆಟ್ ಅಂಗಳದಲ್ಲಿ ಮಿಂಚುವ ಕನಸು ಕಂಡಿದ್ದನು. ಹೀಗಾಗಿ ರಾಯಚೂರು ಸೇರಿದಂತೆ ವಿವಿಧೆಡೆ ಸ್ಥಳೀಯ ಕ್ರಿಕೆಟ್ ಕ್ಲಬ್‌ಗಳಲ್ಲಿ ಅವನಿಗೆ ತರಬೇತಿ ಕೊಡಿಸಲಾಗಿತ್ತು.

ಕರ್ನಾಟಕ ಅಂಡರ್ 16 ತಂಡದ ಪಟ್ಟಿ.

ಕಠಿಣ ತರಬೇತಿ ಪಡೆದಿದ್ದ ಅನಿಕೇತ್‌ರೆಡ್ಡಿಗೆ ಬೆಂಗಳೂರಿನಲ್ಲಿರುವ ರಾಹುಲ್ ದ್ರಾವಿಡ್ ಕ್ರಿಕೆಟ್ ಅಕಾಡೆಮಿ ಕೈಹಿಡಿಯಿತು, ಉಚಿತವಾಗಿ ತರಬೇತಿ ನೀಡುತ್ತಿದ್ದ ಅಕಾಡೆಮಿಯಲ್ಲಿ ಆಲ್ ರೌಂಡರ್ ಆಗಿ ಹೊರಹೊಮ್ಮಿದ್ದನು. ಇದೀಗ ಕರ್ನಾಟಕ ಅಂಡರ್ 16 ತಂಡದ ಉಪನಾಯಕನಾಗಿ ಆಯ್ಕೆಯಾಗಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದು ಅವರು ತಿಳಿಸಿದ್ದಾರೆ.

ಇದನ್ನೂ ಓದಿ: Money Guide: ಬ್ಯಾಂಕ್‌ ದಿವಾಳಿಯಾದರೆ ಠೇವಣಿ ಹಣ ಏನಾಗುತ್ತದೆ? ಹಣ ಮರಳಿ ಪಡೆಯುವುದು ಹೇಗೆ?

ಕುಟುಂಬದಲ್ಲಿ ಸಂತಸ

ಪುತ್ರ ಅನಿಕೇತ್‌ ರೆಡ್ಡಿಯ ಸಾಧನೆಯು ಹೆತ್ತವರ ಬಾಳಲ್ಲಿ ತೀವ್ರ ಸಂತಸ ಮೂಡಿಸಿದೆ, ಈ ಹಿನ್ನಲೆಯಲ್ಲಿ ಪೋಷಕರು ಸಿಹಿ ಹಂಚಿ ಸಂಭ್ರಮಿಸಿದ್ದಾರೆ. ಅನಿಕೇತ್‌ರೆಡ್ಡಿಗೆ ಸಂಬಂಧಿಗಳು ಮತ್ತು ಕ್ರಿಕೆಟ್ ಪ್ರೇಮಿಗಳಿಂದ ಶುಭಾಶಯಗಳ‌‌ ಮಹಾಪೂರವೇ ಹರಿದು ಬಂದಿದೆ.

Exit mobile version