Site icon Vistara News

Road Accident : ಕೆಕೆಆರ್‌ಟಿಸಿ ಬಸ್‌ ಹತ್ತುವಾಗ ಜಾರಿ ಬಿದ್ದ ವೃದ್ಧನ ಕಾಲು ಕಟ್‌

road accident kkrtc

ವಿಜಯನಗರ: ಕೆಕೆಆರ್‌ಟಿಸಿ ಬಸ್‌ ಹರಿದು ವೃದ್ಧ ಪ್ರಯಾಣಿಕರೊಬ್ಬರ ಕಾಲುಗಳು ತುಂಡಾಗಿವೆ. ವಿಜಯನಗರ ಜಿಲ್ಲೆಯ ಕೊಟ್ಟೂರು ಪಟ್ಟಣದ ಬಸ್ ನಿಲ್ದಾಣದಲ್ಲಿ (Road Accident) ಘಟನೆ ನಡೆದಿದೆ. ಓಂಕಾರಪ್ಪ (52) ಕಾಲು ಕಳೆದುಕೊಂಡವರು.

ಹರಪನಹಳ್ಳಿ ತಾಲೂಕಿನ ಆಲದಹಳ್ಳಿ ಗ್ರಾಮದ ಓಂಕಾರಪ್ಪ, ಮನೆಗೆ ರೇಷನ್ ತರಲು ಕೊಟ್ಟೂರು ಪಟ್ಟಣಕ್ಕೆ ಆಗಮಿಸಿದ್ದರು. ಈ ವೇಳೆ ಬಸ್ ಹತ್ತುವ ಬರದಲ್ಲಿ ಕಾಲು ಜಾರಿ ಕೆಳಗೆ ಬಿದ್ದಿದ್ದಾರೆ. ಈ ವೇಳೆ ಓಂಕಾರಪ್ಪ ಕಾಲುಗಳು ಬಸ್‌ ಚಕ್ರಕ್ಕೆ ಸಿಲುಕಿದೆ. ಬಸ್‌ ಮುಂದಕ್ಕೆ ಹೋದಾಗ ಎರಡು ಕಾಲು ಮುರಿದಿದೆ. ಕೂಡಲೇ ಅವರನ್ನು ಸ್ಥಳೀಯರು ಕೊಟ್ಟೂರು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ.

ಈ ಸಂಬಂಧ ವೃದ್ಧನ ಅಣ್ಣನ ಮಗ ಅಶೋಕ್ ನೀಡಿದ ದೂರಿನ ಮೇಲೆ ಬಸ್ ಚಾಲಕ ಚಂದ್ರಕಾಂತ್ ಮೇಲೆ ಎಫ್‌ಐಆರ್‌ ದಾಖಲಾಗಿದೆ. ಕೊಟ್ಟೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆಯನ್ನು ನಡೆಸುತ್ತಿದ್ದಾರೆ.

ಬೈಕ್‌ ಚಲಾಯಿಸುತ್ತಿದ್ದ ತಂದೆ- ಮಗ ಅಪಘಾತದಲ್ಲಿ ಸಾವು

ಚಿಕ್ಕಬಳ್ಳಾಪುರ: ಬೈಕ್‌ನಲ್ಲಿ ಸಂಚರಿಸುತ್ತಿದ್ದ ತಂದೆ ಹಾಗೂ ಮಗ ಇಬ್ಬರೂ ರಸ್ತೆ ಅಪಘಾತದಲ್ಲಿ (Road Accident) ಸಾವಿಗೀಡಾಗಿದ್ದಾರೆ. ಬೆಂಗಳೂರು- ಹೈದರಾಬಾದ್ ರಾಷ್ಟ್ರೀಯ ಹೆದ್ದಾರಿ 44ರಲ್ಲಿ ಘಟನೆ ನಡೆದಿದೆ.

ಚಿಕ್ಕಬಳ್ಳಾಪುರ (Chikkaballapur news) ತಾಲೂಕಿನ ಹುನೇಗಲ್ ಗ್ರಾಮದ ಬಳಿ ಘಟನೆ ನಡೆದಿದೆ. ಮುಂದೆ ಹೋಗುತ್ತಿದ್ದ ವಾಹನಕ್ಕೆ ತಂದೆ ಮಗ ಪ್ರಯಣಿಸುತ್ತಿದ್ದ ಬೈಕು ಡಿಕ್ಕಿ ಹೊಡೆದಿದೆ. ಇಬ್ಬರೂ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಬಹುಶಃ ಬೈಕ್‌ ನಿಯಂತ್ರಣ ಕಳೆದುಕೊಂಡಿರಬಹುದು ಎಂದು ಶಂಕಿಸಲಾಗಿದೆ. ತಂದೆ ಗಂಗಿರೆಡ್ಡಿ, ಮಗ ಆದರ್ಶ ಮೃತ ದುರ್ದೈವಿಗಳು. ಸ್ಥಳಕ್ಕೆ ಚಿಕ್ಕಬಳ್ಳಾಪುರ ಪೊಲೀಸ್ ಉಪಾಧೀಕ್ಷಕ ಶಿವಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಇದನ್ನೂ ಓದಿ: Road Accident : ಯುಗಾದಿ ಅಮಾವಾಸ್ಯೆ ದಿನ ರಸ್ತೆ ಅಪಘಾತಕ್ಕೆ 9 ಮಂದಿ ಬಲಿ

ದ್ವಿಚಕ್ರ ವಾಹನ ಡಿಕ್ಕಿ ಹೊಡೆದು ಜಿಂಕೆ ದಾರುಣ ಸಾವು

ಶಿರಾ: ದ್ವಿಚಕ್ರ ವಾಹನವೊಂದು ಡಿಕ್ಕಿ ಹೊಡೆದ ಪರಿಣಾಮ ತೀವ್ರ ಗಾಯಗೊಂಡಿದ್ದ ಜಿಂಕೆಯೊಂದು ಸ್ಥಳದಲ್ಲೇ (Deer Death) ಮೃತಪಟ್ಟಿದೆ. ಈ ಘಟನೆಯಲ್ಲಿ ಬೈಕ್‌ ಸವಾರ ಗಂಭೀರವಾಗಿ ಗಾಯಗೊಂಡಿದ್ದಾನೆ. ತಾಲೂಕಿನ ಅಮರಾಪುರ ರಸ್ತೆಯ ಬಡಕನಹಳ್ಳಿ ಕ್ರಾಸ್‌ ಬಳಿ ಸೋಮವಾರ (Road Accident) ಈ ಘಟನೆ ನಡೆದಿದೆ.

ದ್ವಿಚಕ್ರ ವಾಹನ ಸವಾರ ಬಡಕನಹಳ್ಳಿಯ ಮಂಜುನಾಥ (35) ಎಂಬುವವರ ತಲೆಗೆ ತೀವ್ರ ಸ್ವರೂಪದ ಗಾಯಗಳಾಗಿದ್ದು, ಶಿರಾ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ, ಹಚ್ಚಿನ ಚಿಕಿತ್ಸೆಗಾಗಿ ತುಮಕೂರಿನ ಆಸ್ಪತ್ರೆಗೆ ಕಳುಹಿಸಲಾಗಿದೆ.

ಇದನ್ನೂ ಓದಿ: ಹಡಗು ಮುಳುಗಿ 94 ಜನರ ದುರ್ಮರಣ, 26 ಮಂದಿ ನಾಪತ್ತೆ; ಕಾಲರಾ ಭೀತಿ ತೆಗೆಯಿತು ಪ್ರಾಣ!

ರಸ್ತೆಯಲ್ಲಿ ಹೋಗುವ ಮಾರ್ಗದಲ್ಲಿ ರಸ್ತೆ ದಾಟುತ್ತಿದ್ದ ಜಿಂಕೆಯು ವಾಹನಕ್ಕೆ ಅಡ್ಡ ಬಂತು. ಆಗ ದ್ವಿಚಕ್ರ ವಾಹನ ಸವಾರ ನಿಯಂತ್ರಣ ತಪ್ಪಿ ಜಿಂಕೆಗೆ ಡಿಕ್ಕಿ ಹೊಡೆದರು. ಡಿಕ್ಕಿಯ ರಭಸಕ್ಕೆ ಜಿಂಕೆ ಮೃತಪಟ್ಟಿದೆ.

ವಿಷಯ ತಿಳಿದ ಅರಣ್ಯ ಇಲಾಖೆಯ ವಲಯ ಅರಣ್ಯಾಧಿಕಾರಿ ನವನೀತ, ಪಶು ಆಸ್ಪತ್ರೆಯ ವೈದ್ಯಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದರು. ಘಟನೆಯು ಶಿರಾ ತಾಲೂಕಿನ ಪಟ್ಟನಾಯಕನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version