Site icon Vistara News

Road Accident : ಬೈಕ್‌ಗೆ ಟಿಪ್ಪರ್‌ ಲಾರಿ ಡಿಕ್ಕಿ; ಶಿಕ್ಷಕ ಸಾವು, ಬಿಕ್ಕಿ ಬಿಕ್ಕಿ ಅತ್ತ ಮಕ್ಕಳು

Tipper lorry collides with bike Teacher death

ವಿಜಯನಗರ: ವೇಗವಾಗಿ ಬಂದ ಟಿಪ್ಪರ್‌ ಲಾರಿಯೊಂದು ಬೈಕ್‌ಗೆ ಡಿಕ್ಕಿ (Road Accident) ಹೊಡೆದಿದೆ. ಪರಿಣಾಮ ಸವಾರನ ತಲೆಯೇ ಪೀಸ್‌ ಪೀಸ್‌ ಆಗಿದೆ. ವಿಜಯನಗರದ ಹಡಗಲಿ ತಾಲೂಕಿನ ಹೊಳಲು ಸಮೀಪದ ಗಿರಿಯಾಪುರ ಗ್ರಾಮದ ಸಮೀಪ ಅಪಘಾತ ಸಂಭವಿಸಿದೆ. ಹಾವೇರಿ ಜಿಲ್ಲೆಯ ಬೆಂಚಿಹಳ್ಳಿ ಗ್ರಾಮದ ಮಹಾಂತೇಶಗೌಡ (37) ಮೃತ ದುರ್ದೈವಿ.

ಮಹಾಂತೇಶಗೌಡ ಹಡಗಲಿಯ ಮಕರಬ್ಬಿ ಗ್ರಾಮದಲ್ಲಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರಾಗಿದ್ದರು. ಮಹಾಂತೇಶಗೌಡರು ಎಂದಿನಂತೆ ಶಾಲೆಗೆ ಹೊರಟಿದ್ದರು. ಈ ವೇಳೆ ಎದುರಿಗೆ ವೇಗವಾಗಿ ಬಂದ ಟಿಪ್ಪರ್ ಲಾರಿಯು ಬೈಕ್‌ಗೆ ಗುದ್ದಿದೆ. ಡಿಕ್ಕಿ ರಭಸಕ್ಕೆ ಹಾರಿ ಬಿದ್ದ ಮಹಾಂತೇಶಗೌಡರ ಮೆದುಳೇ ಕಿತ್ತು ಬಿದ್ದಿದ್ದು, ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಮಹಾಂತೇಶಗೌಡಗೆ ಪತ್ನಿ ಹಾಗೂ 4 ವರ್ಷದ ಗಂಡು ಮಗು ಇದ್ದು, ನೆಚ್ಚಿನ ಶಿಕ್ಷಕರು ಮೃತರಾಗಿರುವ ಸುದ್ದಿ ಕೇಳಿ ವಿದ್ಯಾರ್ಥಿಗಳು ಕಣ್ಣೀರು ಹಾಕಿದ್ದರು. ಹಿರೇಹಡಗಲಿ ಠಾಣೆಯಲ್ಲಿ ಈ ಸಂಬಂಧ ದೂರು ದಾಖಲಾಗಿದ್ದು, ಪೊಲೀಸರು ತನಿಖೆಯನ್ನು ನಡೆಸುತ್ತಿದ್ದಾರೆ.

ನಿಯಂತ್ರಣ ತಪ್ಪಿ ಗುಂಡಿಗೆ ಬಿದ್ದ ಕ್ಯಾಂಟರ್‌ ; ಮೂವರು ಯುವಕರ ದುರ್ಮರಣ

ಗದಗ : ವೇಗವಾಗಿ ಸಾಗುತ್ತಿದ್ದ ಕ್ಯಾಂಟರ್ ಒಂದು ನಿಯಂತ್ರಣ ತಪ್ಪಿ ಪಲ್ಟಿಯಾಗಿ (Canter Overturns) ಗುಂಡಿಗೆ ಬಿದ್ದ ಹಿನ್ನೆಲೆಯಲ್ಲಿ ಮೂವರು ಯುವಕರು ಪ್ರಾಣ ಬಿಟ್ಟಿದ್ದಾರೆ (Three youths dead). ಮೂವರಿಗೆ ಗಾಯಗಳಾಗಿವೆ.

ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಹಳ್ಳಿಗುಡಿ ಗ್ರಾಮದ ಬಳಿ ಘಟನೆ (Road Accident) ನಡೆದಿದ್ದು, ಒಬ್ಬರು ಸ್ಥಳದಲ್ಲೇ ಸಾವು ಕಂಡರೆ ಇನ್ನಿಬ್ಬರು ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು. ಘಟನೆ ನಡೆಯುತ್ತಿದ್ದಂತೆಯೇ ಚಾಲಕ ಪರಾರಿಯಾಗಿದ್ದಾನೆ.

ನವೀನ್ ಕುಂಬಾರ್ (23) ಸ್ಥಳದಲ್ಲೇ ಮೃತಪಟ್ಟರೆ, ನಾಗಪ್ಪ ಕಾಳಿ (23), ಗಂಗಪ್ಪ ಅಕ್ಕಿ (22) ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಯಲ್ಲಿ ಮೃತಪಟ್ಟರು. ಮೂವರು ಗಾಯಾಳುಗಳಿಗೆ ಗದಗ ಜಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಮೃತರು ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ಹಿರೇನರ್ತಿ ಗ್ರಾಮದವರಾಗಿದ್ದು, ಕುಂದಗೋಳ ದಿಂದ ಕೊಪ್ಪಳ ಜಿಲ್ಲೆಯ ಕನಕಗಿರಿ ಹೋಗುತ್ತಿದ್ದಾಗ ಘಟನೆ ನಡೆದಿದೆ. ಅವರು ಯಾವ ಕಾರಣಕ್ಕಾಗಿ ಈ ವಾಹನದಲ್ಲಿ ಹೋಗುತ್ತಿದ್ದರು. ಯಾವುದಾದರೂ ಕೆಲಸದ ಹಿನ್ನೆಲೆಯಲ್ಲಿ ಪ್ರಯಾಣ ಬೆಳೆಸುತ್ತಿದ್ದರೇ ಎನ್ನುವುದು ಸ್ಪಷ್ಟವಾಗಿಲ್ಲ. ಮೂವರು ಯುವಕರ ದಾರುಣ ಸಾವು ಜನ ಮನಸು ಕಲಕಿದೆ.

ಮುಂಡರಗಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪ್ರಕರಣ ದಾಖಲಾಗಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version