Site icon Vistara News

Road Accident : ಅಮಾವಾಸ್ಯೆಗೆಂದು ದೇವಸ್ಥಾನಕ್ಕೆ ತೆರಳುತ್ತಿದ್ದ ಬೈಕ್‌ ಸವಾರ ಅಪಘಾತಕ್ಕೆ ಬಲಿ

Road Accident

ವಿಜಯಪುರ: ಕಾರಿಗೆ ಹಿಂಬದಿಯಿಂದ ಬೈಕ್ ಡಿಕ್ಕಿಯಾಗಿ ಬೈಕ್ ಸವಾರ (Road Accident) ಸ್ಥಳದಲ್ಲೇ ಮೃತಪಟ್ಟಿದ್ದಾರೆ. ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ಯರಗಲ್ ಕೆ ಡಿ ಗ್ರಾಮದ ಎನ್ 50 ರಲ್ಲಿ ಘಟನೆ ನಡೆದಿದೆ. ಬೈಕ್ ಸವಾರ ಹನುಮಂತ ಹಿರೇಕುರುಬರ (43) ಸ್ಥಳದಲ್ಲೇ ಮೃತಪಟ್ಟವರು.

ಸಿಂದಗಿ ತಾಲೂಕಿನ ಬಂದಾಳ ಗ್ರಾಮದ ವಾಸಿ ಹನುಮಂತ ಅವರು ಭಾನುವಾರ ಅಮಾವಾಸ್ಯೆ ಹಿನ್ನೆಲೆಯಲ್ಲಿ ಕಲಬುರಗಿ ಜಿಲ್ಲೆ ಜೀವರ್ಗಿ ತಾಲೂಕಿನ ಯಾತನೂರು ಗ್ರಾಮದ ದೇವಸ್ಥಾನಕ್ಕೆ ಬೈಕ್‌ನಲ್ಲಿ ತೆರಳುತ್ತಿದ್ದರು. ಈ ವೇಳೆ ಬೈಕ್‌ ಕಾರಿಗೆ ಗುದ್ದಿದೆ. ಗುದ್ದ ರಭಸಕ್ಕೆ ಕೆಳಗೆ ಬಿದ್ದ ಹನುಮಂತ ಅವರಿಗೆ ಗಂಭೀರ ಗಾಯಗೊಂಡಿದ್ದರು. ತೀವ್ರ ರಕ್ತಸ್ರಾವವಾಗಿ ಮೃತಪಟ್ಟಿದ್ದಾರೆ.

ಸ್ಥಳಕ್ಕೆ ಸಿಂದಗಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಈ ಸಂಬಂಧ ಸಿಂದಗಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆಯನ್ನು ಮುಂದುವರಿಸಿದ್ದಾರೆ.

ಇದನ್ನೂ ಓದಿ: Road Accident : ಚಲಿಸುತ್ತಿದ್ದ ಬೈಕ್‌ಗೆ ಲಾರಿ ಡಿಕ್ಕಿ; ಪತಿ ಸಾವು, ಪತ್ನಿ ಕಾಲುಗಳು ಕಟ್‌, ಮಗು ಪಾರು

ಇನ್ನೊಂದು ವಾರದಲ್ಲಿ ಮಗಳ ಮದುವೆ ಅಂತ ಓಡಾಡುತ್ತಿದ್ದ ಅಪ್ಪ.. ಅಪಘಾತದಲ್ಲಿ ಸಾವು

ಬೆಂಗಳೂರು: ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿ ಫ್ಲೈ ಓವರ್ ಮೇಲೆ ತಡರಾತ್ರಿ ಭೀಕರ ಅಪಘಾತ (Road Accident) ಸಂಭವಿಸಿದೆ. ಅಪಘಾತದಲ್ಲಿ ಎಲಿವೇಟೆಡ್ ಫ್ಲೈ ಓವರ್ ಸಿಬ್ಬಂದಿ ದಾರುಣವಾಗಿ ಮೃತಪಟ್ಟಿದ್ದಾರೆ. ಎಲಿವೇಟೆಡ್ ಫ್ಲೈ ಓವರ್ ಸಿಬ್ಬಂದಿ ಮಂಜುನಾಥ್ (42) ಮೃತ ದುರ್ದೈವಿ.

ಕಾರೊಂದು ಎಲೆಕ್ಟ್ರಾನಿಕ್ ಸಿಟಿ ಫ್ಲೈ ಓವರ್ ಮೇಲೆ ಕೆಟ್ಟು ನಿಂತಿತ್ತು. ಹಿಗಾಗಿ ಫ್ಲೈ ಓವರ್ ಸಿಬ್ಬಂದಿ ಟೋಯಿಂಗ್ ವೆಹಿಕಲ್ ಕರೆಸಿ ತೆರವು ಮಾಡಿಸುತ್ತಿದ್ದರು. ಈ ವೇಳೆ ಮಂಜುನಾಥ್‌ ಅವರು ಫ್ಲೈಓವರ್ ಟ್ರಾಫಿಕ್ ನಿಯಂತ್ರಣ ಮಾಡುತ್ತಿದ್ದರು.

ಇನ್ನೇನು ಕಾರು ಟೋಯಿಂಗ್ ಮಾಡಬೇಕು ಎನ್ನುವ ವೇಳೆ ಅತಿವೇಗವಾಗಿ ಬಂದ ಗೂಡ್ಸ್‌ ವಾಹನದಿಂದ ಸರಣಿ ಅಪಘಾತ ಸಂಭವಿಸಿದೆ. ಗೂಡ್ಸ್‌ ಚಾಲಕ ಕುಡಿದ ಮತ್ತಿನಲ್ಲಿ ವಾಹನ ಚಲಾಯಿಸಿದ್ದೆ ಈ ಅಪಘಾತಕ್ಕೆ ಕಾರಣ ಎನ್ನಲಾಗಿದೆ. ಫ್ಲೈ ಓವರ್ ಟೋಲ್ ಸಿಬ್ಬಂದಿ ವಾಹನ ಮತ್ತು ಕಾರಿಗೆ ಗೂಡ್ಸ್‌ ವಾಹನ ಡಿಕ್ಕಿ ಹೊಡೆದು ಬಳಿಕ ಪಲ್ಟಿ ಹೊಡೆದಿದೆ.

ಎರಡು ಕಾರುಗಳು ಸಂಪೂರ್ಣ ನಜ್ಜುಗುಜ್ಜಾಗಿದೆ. ಮಂಜುನಾಥ್ ಸೇರಿದಂತೆ ಮೂವರಿಗೆ ಗಂಭೀರ ಗಾಯವಾಗಿದೆ. ಆಸ್ಪತ್ರೆಗೆ ಸಾಗಿಸುವ ಮಾರ್ಗ ಮದ್ಯೆ ಮಂಜುನಾಥ್ ಕೊನೆಯುಸಿರೆಳೆದಿದ್ದಾರೆ. ಉಳಿದ ಇಬ್ಬರಿಗೆ ನಾರಾಯಣ ಹೆಲ್ತ್ ಸಿಟಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಮರಣೋತ್ತರ ಪರೀಕ್ಷೆ ಬಳಿಕ ಕುಟುಂಬಸ್ಥರಿಗೆ ಮೃತದೇಹವನ್ನು ಹಸ್ತಾಂತರ ಮಾಡಲಾಗಿದೆ. ಎಲೆಕ್ಟ್ರಾನಿಕ್ ಸಿಟಿ ಸಂಚಾರಿ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದ್ದು, ತನಿಖೆಯನ್ನು ನಡೆಸಲಾಗುತ್ತಿದೆ.

Road Accident

ಮಗಳ ಮದುವೆ ಸಿದ್ಧತೆಯಲ್ಲಿದ್ದ ಮಂಜುನಾಥ್‌

ಇದೇ ತಿಂಗಳ 10ರಂದು ಮಗಳ ಮದುವೆ ಇತ್ತು. ಹೀಗಾಗಿ ಮಂಜುನಾಥ್‌ ಅವರು ಮದುವೆ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದರು. ನಿನ್ನೆ ಶನಿವಾರ ಬೆಳಗ್ಗೆಯೂ ಸಹ ಮದುವೆಯ ಆಮಂತ್ರಣ ಪತ್ರಿಕೆ ಹಂಚಿ ಬಂದಿದ್ದರು. ನೈಟ್ ಶಿಫ್ಟ್ ಕೆಲಸಕ್ಕೆ ಹಾಜರಾಗಿದ್ದ ಮಂಜುನಾಥ್ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಮಗಳ ಮದುವೆ ಸಂಭ್ರಮದಲ್ಲಿ ಇರಬೇಕಾದ ಮನೆಯಲ್ಲೀಗ ಸೂತಕದ ಛಾಯೆ ಆವರಿಸಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version