Site icon Vistara News

Siddheshwar Swamiji | ಸಿದ್ದೇಶ್ವರ ಸ್ವಾಮೀಜಿ ನಿರ್ಗಮನಕ್ಕೆ ಗಣ್ಯರ ಕಂಬನಿ

Siddheshwar Swamiji

ವಿಜಯಪುರ: ಜ್ಞಾನಯೋಗಿ, ಬರಿಗಾಲಿನ ಸಂತ ಎಂದೇ ಹೆಸರಾದ ಸಿದ್ದೇಶ್ವರ ಸ್ವಾಮೀಜಿಯವರ ದೇಹಾಂತ್ಯಕ್ಕೆ ಗಣ್ಯರು ಕಂಬನಿ ಮಿಡಿದಿದ್ದಾರೆ.

ದೇಶ ಕಂಡ ಶ್ರೇಷ್ಠ ಸಂತರು, ಆಧ್ಯಾತ್ಮಿಕ ಪ್ರವಚನಕಾರ, ವಿಜಯಪುರದ ಜ್ಞಾನಯೋಗಾಶ್ರಮದ ಶ್ರೀ ಸಿದ್ದೇಶ್ವರ ಸ್ವಾಮೀಜಿಯವರು ಲಿಂಗೈಕ್ಯರಾದ ಸುದ್ದಿ ಮನಸ್ಸಿಗೆ ಅತೀವ ದುಃಖ ಉಂಟುಮಾಡಿದೆ. ನಡೆದಾಡುವ ದೇವರೆಂದೇ ಖ್ಯಾತರಾಗಿದ್ದ ಅವರ ಆತ್ಮಕ್ಕೆ ಚಿರಶಾಂತಿ ದೊರೆಯಲಿ, ಅವರ ಭಕ್ತ ಸಮೂಹಕ್ಕೆ ಈ ದುಃಖ ತಡೆಯುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡ ಹೇಳಿದ್ದಾರೆ.

ಜ್ಞಾನಯೋಗಾಶ್ರಮದ ಪೀಠಾಧೀಶರಾದ ಶ್ರೀ ಸಿದ್ದೇಶ್ವರ ಸ್ವಾಮೀಜಿಯವರು ಲಿಂಗೈಕ್ಯರಾದ ಸುದ್ದಿ ಅತೀವ ನೋವುಂಟುಮಾಡಿದೆ. ಧಾರ್ಮಿಕ ಪ್ರವಚನದ ಮೂಲಕ ಸಮಾಜವನ್ನು ಸನ್ಮಾರ್ಗದಲ್ಲಿ ನಡೆಸುತ್ತಿದ್ದ ದಾರ್ಶನಿಕ ಗುರುವಿನ ಅಗಲಿಕೆ ವೈಯಕ್ತಿಕವಾಗಿ ಮತ್ತು ನಾಡಿಗೆ ತುಂಬಿಬಾರದ ನಷ್ಟ. ಶ್ರೀ ಸಿದ್ದೇಶ್ವರ ಸ್ವಾಮೀಜಿಯವರ ದಿವ್ಯ ಆತ್ಮಕ್ಕೆ ಚಿರಶಾಂತಿ ಸಿಗಲಿ. ಅವರ ಅಗಲಿಕೆಯ ದುಃಖ ಭರಿಸುವ ಶಕ್ತಿಯನ್ನು ಮಠದ ಅನುಯಾಯಿಗಳಿಗೆ ಮತ್ತು ಭಕ್ತವೃಂದಕ್ಕೆ ದೇವರು ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಟ್ವೀಟ್‌ ಮಾಡಿದ್ದಾರೆ.

ನಡೆದಾಡುವ ದೇವರೆಂದೇ ಕರೆಯಲ್ಪಡುವ ಜ್ಞಾನಯೋಗಾಶ್ರಮದ ಜ್ಞಾನಯೋಗಿ ಶ್ರೀ ಸಿದ್ದೇಶ್ವರ ಸ್ವಾಮೀಜಿ ಇಹಲೋಕ ತ್ಯಜಿಸಿದ್ದಾರೆ. ಸ್ವಾಮೀಜಿಗಳು ನೀಡಿರುವ ಜ್ಞಾನದ ಹಾದಿ ನಮಗೆಲ್ಲಾ ಸಾರ್ಥಕ ಬದುಕು ನಡೆಸಲು ಪ್ರೇರಕ ಶಕ್ತಿಯಾಗಿದೆ. ಅವರ ಆಶೀರ್ವಾದ ನಮ್ಮೆಲ್ಲರ ಮೇಲೂ ಇರಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಆರೋಗ್ಯ ಸಚಿವ ಡಾ. ಸುಧಾಕರ್‌ ಟ್ವೀಟ್‌ ಮಾಡಿದ್ದಾರೆ.

ಸಂತ, ಜ್ಞಾನಯೋಗಿ, ಸಮಾಜದ ಹಿತಚಿಂತಕರು, ಖ್ಯಾತ ಪ್ರವಚನಕಾರರಾಗಿದ್ದ ವಿಜಯಪುರದ ಜ್ಞಾನಯೋಗಾಶ್ರಮದ ಪೂಜ್ಯ ಶ್ರೀ ಸಿದ್ದೇಶ್ವರ ಸ್ವಾಮೀಜಿಯವರು ನಿಧನರಾದ ಸುದ್ದಿ ತಿಳಿದು ಅತೀವ ದುಃಖವಾಗಿದೆ. ಉತ್ತಮ ಸಮಾಜ ನಿರ್ಮಾಣ ಮತ್ತು ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳಲು ಸ್ವಾಮೀಜಿಯವರು ನೀಡುತ್ತಿದ್ದ ಸಂದೇಶಗಳು ಸದಾ ದಾರಿದೀಪವಾಗಿರುತ್ತದೆ ಎಂದು ಶಿಕ್ಷಣ ಸಚಿವ ಬಿ.ಸಿ ನಾಗೇಶ್‌ ಹೇಳಿದ್ದಾರೆ.

ಇದನ್ನೂ ಓದಿ | Siddheshwar Swamiji | ಭಾನುವಾರದಿಂದ ಭಕ್ತರಿಗೆ ವರ್ಚುವಲ್‌ ಮೂಲಕವೂ ಕೈಗೂಡದ ದರ್ಶನ!

ತತ್ವಜ್ಞಾನಿ, ಸಮಾಜ‌ ಸುಧಾರಕ, ತಮ್ಮ ಉದಾತ್ತ ಚಿಂತನೆಗಳ ಮೂಲಕ‌ ಜನರಲ್ಲಿ ಶಾಂತಿ, ‌ನೆಮ್ಮದಿ ನೆಲೆಸಲು ಕಾರಣರಾಗಿದ್ದ, ಅಪಾರ ಭಕ್ತ ಸಮೂಹದ ಪ್ರೇರಕ ಶಕ್ತಿಯಾಗಿದ್ದ ಶ್ರೀ ಸಿದ್ದೇಶ್ವರ ಸ್ವಾಮೀಜಿ ಇನ್ನಿಲ್ಲ ಎನ್ನುವುದು ಅತ್ಯಂತ ದುಃಖದ ಸಂಗತಿ. ಅವರು ಹಾಕಿಕೊಟ್ಟ ಸಚ್ಛಾರಿತ್ರ್ಯದ ಮಾರ್ಗದಲ್ಲಿ‌ ಮುನ್ನಡೆಯುವ ಮೂಲಕ ಅವರ ಆದರ್ಶ ಪಾಲಿಸೋಣ ಎಂದು ಸಚಿವ ಆರ್‌. ಅಶೋಕ್‌ ಹೇಳಿದ್ದಾರೆ.

ನಡೆದಾಡುವ ದೇವರು ಶ್ರೀ ಸಿದ್ದೇಶ್ವರ ಸ್ವಾಮೀಜಿ ಕಣ್ಣೆದುರಿಲ್ಲ ಅಷ್ಟೇ, ಜಂಗಮರಿಗೆಂದೂ ಅಳಿವಿಲ್ಲ. ಅಪಾರ ಜ್ಞಾನಯೋಗಿ ಅವರ ಜ್ಞಾನವನ್ನು ಹಂಚಿ ಹೊರಟಿದ್ದಾರೆ. ವೈಕುಂಠ ಏಕಾದಶಿಯಂದೇ ಶಿವನತ್ತ ಹೊರಟ್ಟಿದ್ದಾರೆ. ಓಂ ಶಾಂತಿ ಎಂದು ಶಾಸಕ ಸಿ.ಟಿ ರವಿ ಟ್ವೀಟ್‌ ಮಾಡಿದ್ದಾರೆ.

ಇದನ್ನೂ ಓದಿ | Siddheshwar Swamiji | ಸೈನಿಕ ಶಾಲೆಯಲ್ಲಿ ಶ್ರೀಗಳ ಅಂತಿಮ ದರ್ಶನ ಆರಂಭ

Exit mobile version