Site icon Vistara News

ವಿಸ್ತಾರ TOP 10 NEWS | ತ್ರಿವರ್ಣ ಸಂಭ್ರಮದಿಂದ ಪ್ರಿಯಾಂಕ್‌ ಖರ್ಗೆ ವಿವಾದವರೆಗಿನ ಪ್ರಮುಖ ಸುದ್ದಿಗಳಿವು

Vistara TOP 10

ಬೆಂಗಳೂರು: ದೇಶದ ಸ್ವಾತಂತ್ರ್ಯ ಸಂಭ್ರಮಕ್ಕೆ ಎರಡು ದಿನ ಇರುವಂತೆಯೇ ಇಡೀ ದೇಶ ತ್ರಿವರ್ಣದಲ್ಲಿ ಮಿಂದೇಳುತ್ತಿದೆ. 75ನೇ ಸ್ವಾತಂತ್ರೋತ್ಸವವನ್ನು ವಿಜೃಂಭಣೆಯಿಂದ ಆಚರಿಸುವ ಚಿತ್ರಣ ಎಲ್ಲೆಡೆ ಕಾಣುತ್ತಿದೆ. ಕರ್ನಾಟಕದಲ್ಲಿ ಬೆಂಗಳೂರಿನ ಮಾಣೆಕ್‌ ಷಾ ಪರೇಡ್‌ ಮೈದಾನದಲ್ಲಿ ನಡೆಯುವ ಪ್ರಮುಖ ಕಾರ್ಯಕ್ರಮಕ್ಕಿಂತಲೂ ಹೆಚ್ಚಿನ ಗಮನವನ್ನು, ಚಾಮರಾಜಪೇಟೆ ಮೈದಾನದಲ್ಲಿ ನಡೆಯುವ ಧ್ವಜಾರೋಹಣ ಪಡೆಯುತ್ತಿದೆ. ಕಾಂಗ್ರೆಸ್‌ ನಾಯಕ ಪ್ರಿಯಾಂಕ್‌ ಖರ್ಗೆ ನೀಡಿದ ಹೇಳಿಕೆ ಈಗ ವಿವಾದಕ್ಕೆ ಕಾರಣವಾಗಿದೆ ಎನ್ನುವುದೂ ಸೇರಿ ದಿನದ ಪ್ರಮುಖ ಸುದ್ದಿಗಳ ಗುಚ್ಛ ವಿಸ್ತಾರ TOP 10 NEWS.

1. ದೇಶಾದ್ಯಂತ ಸ್ವಾತಂತ್ರ್ಯ ದಿನಾಚರಣೆ ಸಂಭ್ರಮಕ್ಕೆ ಚಾಲನೆ ಮನೆಮನೆಯಲ್ಲೂ ಹಾರುತ್ತಿರುವ ತ್ರಿವರ್ಣ
ದೇಶ ಸ್ವಾತಂತ್ರ್ಯ ಪಡೆದು 75ನೇ ವರ್ಷದದಲ್ಲಿ ಇಡೀ ದೇಶವೇ ಸಂಭ್ರಮಾಚರಣೆಯಲ್ಲಿ ತೊಡಗಿದೆ. ಪ್ರತಿ ಮನೆ, ಕಚೇರಿಗಳ ಮೇಲೆ ಎರಡು ಮೂರು ದಿನ ತ್ರಿವರ್ಣ ಧ್ವಜ ಹಾರಿಸುವ ಕೇಂದ್ರ ಸರ್ಕಾರದ ಕರೆಗೆ ಪಕ್ಷ ಭೇದವಿಲ್ಲದೆ ಎಲ್ಲರೂ ಭಾಗವಹಿಸುತ್ತಿದ್ದಾರೆ. ನವದೆಹಲಿಯಿಂದ ಹಳ್ಳಿಯ ಭತ್ತದ ಗದ್ದೆಯವರೆಗೆ, ಶಾಲಾ ಮಕ್ಕಳಿಂದ ವೃದ್ಧರವರೆಗೆ, ಜನಸಾಮಾನ್ಯರಿಂದ ರಾಜಕೀಯ ಮುಖಂಡರವರೆಗೆ ತ್ರಿವರ್ಣ ಸಂಭ್ರಮದಲ್ಲಿ ತೊಡಗಿದ್ದಾರೆ. ಅಮೃತ ಮಹೋತ್ಸವದ ಕುರಿತು ಸಂಪೂರ್ಣ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್‌ ಮಾಡಿ.

2. Amrit Mahotsav | ಮಾಣೆಕ್‌ ಷಾ ಮೈದಾನಕ್ಕಿಂತ ಚಾಮರಾಜಪೇಟೆ ಮೈದಾನಕ್ಕೇ ಅತಿ ಹೆಚ್ಚು ಖಾಕಿ ಭದ್ರತೆ!
ಪ್ರಸಕ್ತ ವರ್ಷ ಸ್ವಾತಂತ್ರ್ಯ ಅಮೃತ ಮಹೋತ್ಸವದ (Amrit Mahotsav) ಸಂಭ್ರಮದಲ್ಲಿ ದೇಶವೇ ಇದೆ. ಈ ಹೊತ್ತಿನಲ್ಲಿ ರಾಜ್ಯದಲ್ಲೂ ಭರದ ಸಿದ್ಧತೆ ನಡೆಯುತ್ತಿದೆ. ಈ ಮಧ್ಯೆ ಬಹುವಿವಾದಿತ ಚಾಮರಾಜಪೇಟೆ ಮೈದಾನದಲ್ಲಿ ದೊಡ್ಡ ಪ್ರಮಾಣದಲ್ಲಿ ಪೊಲೀಸ್‌ ಭದ್ರತೆಯನ್ನು ನಿಯೋಜಿಸಲಾಗುತ್ತಿದ್ದು, ಇದು ಮಾಣೆಕ್‌ ಷಾ ಮೈದಾನದಲ್ಲಿ ನಿಯೋಜಿಸುವ ಭದ್ರತಾ ಪ್ರಮಾಣಕ್ಕಿಂತ ಹೆಚ್ಚು ಎಂಬ ಸಂಗತಿ ತಿಳಿದುಬಂದಿದೆ. ಸಂಪೂರ್ಣ ಸುದ್ದಿಗಾಗಿ ಇಲ್ಲಿ ಕ್ಲಿಕ್‌ ಮಾಡಿ.

3. ನಾನು ಹೆಣ್ಮಕ್ಕಳನ್ನು ಅಪಮಾನಿಸಿಲ್ಲ, ನಿಜವಾಗಿ ಅಪಮಾನಿಸಿದ್ದು ಬಿಜೆಪಿ, ಅದು ಕ್ಷಮೆ ಕೇಳುತ್ತಾ?: ಪ್ರಿಯಾಂಕ್‌ ಸವಾಲ್‌
ʻಲಂಚ ಮತ್ತು ಮಂಚʼ ಹೇಳಿಕೆಯ ಮೂಲಕ ವಿವಾದಕ್ಕೆ ಒಳಗಾಗಿರುವ ಕಾಂಗ್ರೆಸ್‌ ನಾಯಕ ಪ್ರಿಯಾಂಕ ಖರ್ಗೆ ಅವರು ತಮ್ಮ ಮೇಲಾಗುತ್ತಿರುವ ವಾಗ್ದಾಳಿಗೆ ಪ್ರತಿಕ್ರಿಯೆ ನೀಡಿದ್ದಾರೆ. ʻʻನಾನು ನಾಡಿನ ಹೆಣ್ಣುಮಕ್ಕಳಿಗೆ ಅವಮಾನ ಆಗುವ ರೀತಿಯಲ್ಲಿ ಮಾತನಾಡಿಲ್ಲ. ನನ್ನ ಹೇಳಿಕೆಯಿಂದ ಯಾರಿಗಾದರೂ ನೋವುಂಟಾಗಿದ್ದರೆ ಕ್ಷಮೆ ಕೇಳಲು ಸಿದ್ಧನಿದ್ದೇನೆʼʼ ಎಂದಿರುವ ಪ್ರಿಯಾಂಕ್‌, ಬಿಜೆಪಿಗೂ ಕೆಲವು ಸವಾಲುಗಳನ್ನು ಹಾಕಿದ್ದಾರೆ. ಸಂಪೂರ್ಣ ಸುದ್ದಿಗಾಗಿ ಇಲ್ಲಿ ಕ್ಲಿಕ್‌ ಮಾಡಿ.
ಪ್ರಿಯಾಂಕ್‌ ಖರ್ಗೆ ಹೇಳಿಕೆಗೆ ಸರಣಿ ಟ್ವೀಟ್‌ ಮಾಡಿರುವ ಬಿಜೆಪಿ, ಕಾಂಗ್ರೆಸ್‌ ಸಮಯದ ಕೆಲಸ ಘಟನೆಗಳನ್ನು ನೆನಪಿಸಿದೆ. ಪ್ರಿಯಾಂಕ್‌ ಖರ್ಗೆ ಕ್ಷಮೆ ಯಾಚಿಸಬೇಕು ಎಂದು ಮಾಜಿ ಸಿಎಂ ಬಿ.ಎಸ್‌. ಯಡಿಯೂರಪ್ಪ ಆಗ್ರಹಿಸಿದ್ದಾರೆ.

4. ವಿಸ್ತಾರ Explainer | ಸಲ್ಮಾನ್‌ ರಶ್ದಿಗೇಕೆ ಇರಿತ? 6 ತಿಂಗಳಲ್ಲಿ 56 ಬಾರಿ ಮನೆ ಬದಲಿಸಿದ್ದ ಅಜ್ಞಾತವಾಸಿ ಲೇಖಕ
ಕಾದಂಬರಿಗಳಲ್ಲಿ ಮ್ಯಾಜಿಕ್‌ ರಿಯಲಿಸಂ ಅನ್ನು ಚಿತ್ರಿಸಿದ ಲೇಖಕ ಸಲ್ಮಾನ್‌ ರಶ್ದಿ ಅವರಿಗೆ ರಿಯಾಲಿಟಿಯೇ ಶತ್ರುವಾಗಿದೆ. ಏಷ್ಯಾದ ಬಹು ದೊಡ್ಡ ಕಾದಂಬರಿಕಾರರಲ್ಲಿ ಒಬ್ಬರೆಂದು ಖ್ಯಾತರಾಗಿರುವ ಸಲ್ಮಾನ್‌ ರಶ್ದಿ, ಮ್ಯಾನ್‌ ಬೂಕರ್‌ ಪ್ರಶಸ್ತಿ ಸೇರಿದಂತೆ ಹಲವಾರು ಅಂತಾರಾಷ್ಟ್ರೀಯ ಪ್ರಶಸ್ತಿ ಪುರಸ್ಕಾರ ಪಡೆದವರು. ಬಹು ಬೇಡಿಕೆಯ ಲೇಖಕ. ಆದರೆ ತಮ್ಮ ಮುಸ್ಲಿಂ ಸಮುದಾಯದ ಒಂದು ವರ್ಗದಿಂದಲೇ ಜೀವಬೆದರಿಕೆ ಎದುರಿಸಿ, ಇಂದು ಚೂರಿ ಇರಿತಕ್ಕೂ ತುತ್ತಾಗಿ ಗಂಭೀರ ಸ್ಥಿತಿಯಲ್ಲಿ ವೆಂಟಿಲೇಟರ್‌ನಲ್ಲಿ ಇದ್ದಾರೆ. ಸಲ್ಮಾನ್‌ ರಶ್ದಿ ಅವರ ಜೀವನ, ಹಿಂದಿನ ಬೆದರಿಕೆ ಘಟನೆಗಳು ಸೇರಿ ಸಂಪೂರ್ಣ ಮಾಹಿತಿಗಾಗಿ ಇಲ್ಲಿ ಕ್ಲಿಕ್‌ ಮಾಡಿ.

5. ಜನೋತ್ಸವ | ವಿವಿಧೆಡೆ ರ‍್ಯಾಲಿ ಮಾಡಲು ಒಪ್ಪದ ದೊಡ್ಡಬಳ್ಳಾಪುರ ಜನ; ಆಗಸ್ಟ್‌ 28ರಂದು ಕಾರ್ಯಕ್ರಮ
ಸಿಎಂ ಬಸವರಾಜ ಬೊಮ್ಮಾಯಿ ಅವರ ನೇತೃತ್ವದ ಸರ್ಕಾರಕ್ಕೆ ಒಂದು ವರ್ಷ ಹಾಗೂ ಬಿಜೆಪಿ ಸರ್ಕಾರಕ್ಕೆ ಮೂರು ವರ್ಷ ತುಂಬಿದ ಹಿನ್ನೆಲೆಯಲ್ಲಿ ಕಳೆದ ತಿಂಗಳು ಆಯೋಜನೆಯಾಗಿದ್ದ ಜನೋತ್ಸವ ಕಾರ್ಯಕ್ರಮವನ್ನು ಆಗಸ್ಟ್‌ 28ರಂದು ನಡೆಸಲು ತೀರ್ಮಾನಿಸಲಾಗಿದೆ. ಈ ಕುರಿತು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಜುಲೈ 28ರಂದು ದೊಡ್ಡಬಳ್ಳಾಪುರದಲ್ಲಿ ಬೃಹತ್‌ ಕಾರ್ಯಕ್ರಮ ಆಯೋಜನೆ ಆಗಿತ್ತು. ಆದರೆ ಯುವಮೋರ್ಚಾ ಕಾರ್ಯಕರ್ತ ಪ್ರವೀಣ್‌ ನೆಟ್ಟಾರು ಹತ್ಯೆ ಹಿನ್ನೆಲೆಯಲ್ಲಿ, ಅಂತಿಮ ಕ್ಷಣದಲ್ಲಿ ಕಾರ್ಯಕ್ರಮವನ್ನು ರದ್ದು ಮಾಡಲಾಗಿತ್ತು. ಕಾರ್ಯಕ್ರಮವನ್ನು ಮತ್ತೆ ಆರಂಭಿಸುವುದಕ್ಕೂ ಮುನ್ನ ವಿವಿಧೆಡೆ ರ‍್ಯಾಲಿಗಳನ್ನು ನಡೆಸಲು ಯೋಚನೆ ನಡೆದಿತ್ತಾದರೂ, ದೊಡ್ಡಬಳ್ಳಾಪುರದ ಜನರು ಅದಕ್ಕೆ ಅವಕಾಶ ನೀಡಿಲ್ಲ ಎಂದು ಸಿಎಂ ಬೊಮ್ಮಾಯಿ ತಿಳಿಸಿದ್ದಾರೆ. ಸಂಪೂರ್ಣ ಸುದ್ದಿಗಾಗಿ ಇಲ್ಲಿ ಕ್ಲಿಕ್‌ ಮಾಡಿ.

6. ವಿಸ್ತಾರ 5G Info | ನಿಮ್ಮ ನೆಚ್ಚಿನ ಸಿನಿಮಾ ಡೌನ್‌ಲೋಡ್‌ಗೆ 4ಜಿಗೆ 40 ನಿಮಿಷವಾದರೆ, 5ಜಿಗೆ 35 ಸೆಕೆಂಡ್‌ ಸಾಕು!
ಈಗ ಸಮಯದ ಬೆಲೆಯನ್ನು ಎಲ್ಲರೂ ಅರಿತಿದ್ದಾರೆ. ಯಾರನ್ನು ಬೇಕಾದರೂ,ಕೇಳಿ ಬಿಡುವಿಲ್ಲದ ಕೆಲಸ, ಅದು ನಗರವಿರಲಿ, ಹಳ್ಳಿಯೇ ಆಗಿರಲಿ, ಎಲ್ಲರಿಗೂ ಸಮಯ ಎನ್ನುವುದು ಅತ್ಯಂತ ಅಮೂಲ್ಯ. ದುಡ್ಡಿಗೆ ಇರುವಷ್ಟೇ ಬೆಲೆ ಸಮಯಕ್ಕೂ ಇದೆ. ಒಂದು ಸಲ ಕಳೆದ ಸಮಯವನ್ನು ಮತ್ತೆ ಪಡೆಯಲು ಅಸಾಧ್ಯ. ಹೀಗಾಗಿ ವೇಗವಾಗಿ ಯಾವುದಾದರೂ ಕೆಲಸ ಮಾಡಲು ಸಹಕರಿಸುವ ತಂತ್ರಜ್ಞಾನಕ್ಕೆ ಬೆಲೆ ಇದ್ದೇ ಇರುತ್ತದೆ. ೫ಜಿ ಕೂಡ ಅಷ್ಟೇ. (ವಿಸ್ತಾರ 5G Info) ೪ಜಿಗಿಂತ ಹತ್ತು ಪಟ್ಟು ವೇಗದಲ್ಲಿ ಕೆಲಸ ಮಾಡಿಕೊಡುತ್ತದೆ! ಇದೇ ಎಲ್ಲರಿಗೂ ಆಕರ್ಷಣೆ. ಅಂದಹಾಗೆ ಇಲ್ಲಿ ಸಣ್ಣ ಉದಾಹರಣೆಯನ್ನು ನೋಡೋಣ. ವಾಸ್ತವವಾಗಿ ಸಿನಿಮಾ ಒಂದೇ ಅಲ್ಲ, ನಾನಾ ಕ್ಷೇತ್ರಗಳಲ್ಲಿ ಡೌನ್‌ಲೋಡ್‌ ಸ್ಪೀಡ್‌ ಬಹಳ ಪ್ರಯೋಜನಕಾರಿ. 5ಜಿ ಸ್ಪೀಡ್‌ ಕುರಿತು ಸಂಪೂರ್ಣ ಮಾಹಿತಿಗಾಗಿ ಇಲ್ಲಿ ಕ್ಲಿಕ್‌ ಮಾಡಿ.

7. Nupur Sharma | ನೂಪುರ್‌ ಶರ್ಮಾ ಹತ್ಯೆಗೆ ಸಂಚು ರೂಪಿಸಿದ್ದ ಶಂಕಿತ ಉಗ್ರನ ಬಂಧನ
ಪ್ರವಾದಿ ಮೊಹಮ್ಮದರ ಕುರಿತು ವಿವಾದಾತ್ಮಕ ಹೇಳಿಕೆ ನೀಡಿ ಬಿಜೆಪಿಯಿಂದ ಉಚ್ಚಾಟನೆಗೊಂಡಿರುವ ವಕ್ತಾರೆ ನೂಪುರ್‌ ಶರ್ಮಾ (Nupur Sharma) ಅವರ ಹತ್ಯೆಗೆ ಸಂಚು ರೂಪಿಸಿದ ಪ್ರಕರಣಕ್ಕೆ ಸಂಬಂಧಿಸಿ ಉತ್ತರ ಪ್ರದೇಶ ಪೊಲೀಸರು ಜೈಷ್‌ ಎ ಮೊಹಮ್ಮದ್‌ನ ಶಂಕಿತ ಉಗ್ರನೊಬ್ಬನನ್ನು ಬಂಧಿಸಿದ್ದಾರೆ. “ಬಂಧಿತ ಉಗ್ರನನ್ನು ಮೊಹಮ್ಮದ್‌ ನದೀಮ್‌ ಎಂದು ಗುರುತಿಸಲಾಗಿದ್ದು, ಈತ ಜಿಲ್ಲೆ ಕುಂಡಾ ಕಾಲಾ ಗ್ರಾಮದ ನಿವಾಸಿಯಾಗಿದ್ದಾನೆ. ಇತ್ತೀಚೆಗೆ ಈತ ಪಾಕಿಸ್ತಾನ ಹಾಗೂ ಅಫಘಾನಿಸ್ತಾನದವರ ಜತೆ ಚಾಟ್‌ ಮಾಡಿದ್ದು, ವಾಯ್ಸ್‌ ನೋಟ್‌ಗಳನ್ನೂ ಕಳುಹಿಸಿದ್ದಾನೆ. ಹಾಗಾಗಿ, ಹೆಚ್ಚಿನ ವಿಚಾರಣೆ ನಡೆಸಲಾಗುತ್ತಿದೆ,ʼʼ ಎಂದು ಉತ್ತರ ಪ್ರದೇಶ ಎಡಿಜಿಪಿ (ಕಾನೂನು ಮತ್ತು ಸುವ್ಯವಸ್ಥೆ) ಪ್ರಶಾಂತ್‌ ಕುಮಾರ್‌ ಮಾಹಿತಿ ನೀಡಿದ್ದಾರೆ. ಸಂಪೂರ್ಣ ಸುದ್ದಿಗಾಗಿ ಇಲ್ಲಿ ಕ್ಲಿಕ್‌ ಮಾಡಿ.

8. Monkeypox | ನೈಜೀರಿಯಾದಿಂದ ದೆಹಲಿಗೆ ಬಂದಿದ್ದ ಮಹಿಳೆಗೆ ಮಂಕಿಪಾಕ್ಸ್​; ಸೋಂಕಿತರ ಸಂಖ್ಯೆಯೀಗ 10
ದೆಹಲಿಯಲ್ಲಿ ಐದನೇ ಮಂಕಿಪಾಕ್ಸ್​ ಪ್ರಕರಣ (Monkeypox Case) ದಾಖಲಾಗಿದ್ದು, ಸೋಂಕಿತ ಮಹಿಳೆ ಲೋಕ ನಾಯಕ ಜೈ ಪ್ರಕಾಶ್​ ನಾರಾಯಣ್​ (ಎಲ್​​​ಎನ್​​ಜೆಪಿ) ಆಸ್ಪತ್ರೆಗೆ ದಾಖಲಾಗಿದ್ದಾರೆ. ದೇಶದಲ್ಲಿ ಒಟ್ಟಾರೆ ಮಂಕಿಪಾಕ್ಸ್​ ರೋಗಿಗಳ ಸಂಖ್ಯೆ 10ಕ್ಕೆ ಏರಿಕೆಯಾಗಿದೆ. ದೆಹಲಿಯಲ್ಲಿ ಕಾಣಿಸಿಕೊಂಡ ಐದು ಕೇಸ್​​ಗಳಲ್ಲಿ, ನಾಲ್ವರು ಚಿಕಿತ್ಸೆ ಪಡೆಯುತ್ತಿದ್ದರೆ, ಒಬ್ಬರು ಗುಣಮುಖರಾಗಿ ಡಿಸ್​ಚಾರ್ಜ್​ ಆಗಿದ್ದಾರೆ. ಈ ಬಾರಿ ಕೊರೊನಾ ಪತ್ತೆಯಾಗಿದ್ದು, ನೈಜೀರಿಯಾದಿಂದ ಬಂದ ಆಫ್ರಿಕಾ ಮೂಲದ 22ವರ್ಷದ ಯುವತಿಯಲ್ಲಿ ಎಂದು ವರದಿಯಾಗಿದೆ. ಸಂಪೂರ್ಣ ಸುದ್ದಿಗಾಗಿ ಇಲ್ಲಿ ಕ್ಲಿಕ್‌ ಮಾಡಿ.

9. ಟ್ವೀಟ್‌ನಿಂದ ಕಾಂಗ್ರೆಸ್‌ಗೆ ಉಂಟಾದ ಲಾಭ; ಸಿಎಂ ಬೊಮ್ಮಾಯಿಗೆ ಆದ ಅನುಕೂಲ ಏನು?
ಬೆಂಗಳೂರು: ರಾಜ್ಯದಲ್ಲಿ ವಿಧಾನಸಭೆ ಚುನಾವಣೆಗಳೂ ಹತ್ತಿರ ಆಗುತ್ತಿರುವಂತೆ ರಾಜಕೀಯ ಚಟುವಟಿಕೆಗಳು ಹೆಚ್ಚಾಗಿವೆ. ಪಕ್ಷಗಳು ತಮ್ಮ ಸಂಘಟನೆಯನ್ನು ಗಟ್ಟಿಗೊಳಿಸಿಕೊಳ್ಳುವುದಕ್ಕಿಂತಲೂ ಎದುರಾಳಿಗಳ ಕೊರತೆಗಳ ಮೇಲೆ ಹೆಚ್ಚು ಗಮನ ಹರಿಸಿವೆ. ಇದೇ ಪ್ರಯತ್ನದ ಮುಂದುವರಿದ ಭಾಗವೇ ಕರ್ನಾಟಕ ಕಾಂಗ್ರೆಸ್‌ ಟ್ವಿಟರ್‌ ಖಾತೆಯಿಂದ ಮಾಡಲಾದ ಟ್ವೀಟ್‌, ನಂತರದ ವಿವಾದ. ಆಗಸ್ಟ್‌ 3ರಂದು ಮಾಜಿ ಸಿದ್ದರಾಮಯ್ಯ ಅವರ ಜನ್ಮದಿನದ ಕಾರ್ಯಕ್ರಮದ ಸಂದರ್ಭದಲ್ಲಿ ಉಂಟಾದ ಗೊಂದಲವನ್ನು ಪರಿಹರಿಸಿಕೊಳ್ಳಲು ಕಾಂಗ್ರೆಸ್‌ ಆಯ್ಕೆ ಮಾಡಿಕೊಂಡ ಮಾರ್ಗವೇ ಈ ಟ್ವೀಟ್‌. ಈ ಕುರಿತು ಸಂಪೂರ್ಣ ವಿಶ್ಲೇಷಣೆಗಾಗಿ ಇಲ್ಲಿ ಕ್ಲಿಕ್‌ ಮಾಡಿ.

10. IND vs ZIM ODI | ಜಿಂಬಾಬ್ವೆಗೆ ಹಾರಿದ ರಾಹುಲ್ ಬಳಗ
ಜಿಂಬಾಬ್ವೆ ವಿರುದ್ಧದ ಏಕದಿನ (IND vs ZIM ODI) ಸರಣಿಯಲ್ಲಿ ಆಡಲಿರುವ ಭಾರತ ತಂಡ ಶನಿವಾರ ಬೆಳಗ್ಗೆ ಜಿಂಬಾಬ್ವೆಗೆ ಪ್ರಯಾಣ ಬೆಳೆಸಿತು. ಕನ್ನಡಿಗ ಕೆ.ಎಲ್‌ ರಾಹುಲ್‌ ನೇತೃತ್ವದಲ್ಲಿ ೧೭ ಆಟಗಾರರು ಸರಣಿಗೆ ಆಯ್ಕೆಯಾಗಿದ್ದು, ಕೋಚ್‌ ಲಕ್ಷ್ಮಣ್‌ ಅವರೊಂದಿಗೆ ಏಕದಿನ ಸರಣಿಗಾಗಿ ಪ್ರಯಾಣ ಆರಂಭಿಸಿತು. ಸರಣಿಯ ಮೊದಲ ಪಂದ್ಯ ಆಗಸ್ಟ್‌ ೧೮ರಂದು ನಡೆದರೆ, ೨೦ ಹಾಗೂ ೨೨ರಂದು ಉಳಿದೆರಡು ಪಂದ್ಯಗಳು ನಡೆಯಲಿವೆ. ಬಿಸಿಸಿಐ ಸಾಮಾಜಿಕ ಜಾಲತಾಣಗಳಲ್ಲಿ ಆಟಗಾರರು ಜಿಂಬಾಬ್ವೆಗೆ ತೆರಳಿದ ಚಿತ್ರವನ್ನು ಪೋಸ್ಟ್‌ ಮಾಡಲಾಗಿದೆ. ಪ್ರಸಿದ್ಧ್‌ ಕೃಷ್ಣ, ದೀಪಕ್‌ ಚಾಹರ್‌, ಶಿಖರ್‌ ಧವನ್‌, ಶಾರ್ದುಲ್‌ ಠಾಕೂರ್‌, ಮೊಹಮ್ಮದ್ ಸಿರಾಜ್‌, ರುತುರಾಜ್‌ ಗಾಯಕ್ವಾಡ್‌ ಹಾಗೂ ರಾಹುಲ್‌ ತ್ರಿಪಾಠಿ ಚಿತ್ರದಲ್ಲಿದ್ದಾರೆ. ಸಂಪೂರ್ಣ ಸುದ್ದಿಗಾಗಿ ಇಲ್ಲಿ ಕ್ಲಿಕ್‌ ಮಾಡಿ.

Exit mobile version