Site icon Vistara News

ವಿಸ್ತಾರ TOP 10 NEWS | ಮಡಿಕೇರಿ ಚಲೋ ರದ್ದಿನಿಂದ ಬೇನಾಮಿ ಕಾಯ್ದೆಗೆ ಗುದ್ದಿನವರೆಗೆ ಪ್ರಮುಖ ಸುದ್ದಿಗಳಿವು

ACB, agama temple, benami act, Benami Transactions, DK Shivakumar, election hava, election hawa, Ganesh Chaturthi, Ganeshothsav, indira gandhi, ISIS terror, latest, madikeri chalo, Prophet muhammad, Prophet remarks row, russia detains isis terrorist, Savarkar, savarkar issue, Siddaramaiah, Supreme Court

ಬೆಂಗಳೂರು: ರಾಜ್ಯದಲ್ಲಿ ಈಗಾಗಲೆ ನಡೆದಿರುವ ವಿವಿಧ ವಿವಾದಗಳ ಜತೆಗೆ ಕೊಡಗಿನಲ್ಲಿ ಕಾಂಗ್ರೆಸ್‌-ಬಿಜೆಪಿ ಹಗ್ಗ ಜಗ್ಗಾಟವೂ ಸೇರ್ಪಡೆಯಾಗುವ ಆತಂಕ ದೂರವಾಗಿದೆ. ರಾಜ್ಯ ಸರ್ಕಾರ ಕೊಡಗಿನಲ್ಲಿ ನಿಷೇಧಾಜ್ಞೆ ಜಾರಿ ಮಾಡಿದ ನಂತರ ಯಾತ್ರೆಯನ್ನು ಕಾಂಗ್ರೆಸ್‌ ರದ್ದುಪಡಿಸಿದೆ. ಇದಕ್ಕೆ ರಾಜಕೀಯ ಕಾರಣಗಳೂ ಇವೆ. ಐಸಿಸ್‌ ಭಯೋತ್ಪಾದಕನ ವಿಚಾರಣೆಗೆ ಭಾರತದ ತನಿಖಾಧಿಕಾರಿಗಳು ಶೀಘ್ರದಲ್ಲಿಯೇ ರಷ್ಯಾಕ್ಕೆ ಪ್ರಯಾಣಿಸಲಿದ್ದಾರೆ, ಪ್ರವಾದಿ ಮೊಹಮ್ಮದ್‌ ಕುರಿತು ಅವಹೇಳನಕಾರಿ ಹೇಳಿಕೆ ನೀಡಿದ್ದ ತೆಲಂಗಾಣ ಬಿಜೆಪಿ ನಾಯಕನನ್ನು ಪಕ್ಷದಿಂದ ಅಮಾನತು ಮಾಡಲಾಗಿದೆ ಎನ್ನುವುದು ಸೇರಿದಂತೆ ದಿನದ ಪ್ರಮುಖ ಸುದ್ದಿಗಳ ಗುಚ್ಛ ವಿಸ್ತಾರ TOP 10 NEWS.

1️⃣ಸೆಕ್ಷನ್‌ 144: ಮಡಿಕೇರಿ ಚಲೋ ರದ್ದು ಎಂದು ಘೋಷಿಸಿದ ಸಿದ್ದರಾಮಯ್ಯ
ಅತಿವೃಷ್ಟಿ ಪ್ರದೇಶ ವೀಕ್ಷಣೆಗೆ ತೆರಳಿದ್ದಾಗ ತಮ್ಮ ಕಾರಿನ ಮೇಲೆ ಕೊಡಗಿನಲ್ಲಿ ಮೊಟ್ಟೆ ಎಸೆದದ್ದನ್ನು ವಿರೋಧಿಸಿ ಕಾಂಗ್ರೆಸ್‌ ವತಿಯಿಂದ ಕರೆ ನೀಡಿದ್ದ ಕೊಡಗು ಚಲೋ ಕಾರ್ಯಕ್ರಮವನ್ನು ಸದ್ಯಕ್ಕೆ ರದ್ದುಪಡಿಸಲಾಗಿದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ. ಬೆಂಗಳೂರಿನ ಕುಮಾರಕೃಪಾ ಅತಿಥಿಗೃಹದಲ್ಲಿ ತುರ್ತು ಸುದ್ದಿಗೋಷ್ಠಿ ನಡೆಸಿದ ಸಿದ್ದರಾಮಯ್ಯ, ಈ ಹಿಂದೆ ಗಣಿ ಬ್ರದರ್ಸ್‌ಗೆ ಸವಾಲು ಹಾಕಿ ಬಳ್ಳಾರಿಗೆ ಭೇಟಿ ನೀಡಿದ್ದೆ. ಆದರೆ ಇದೀಗ ಕೊಡಗಿಗೆ ಭೇಟಿ ನೀಡದಂತೆ ಡಿಸಿ ಆದೇಶ ಮಾಡಿದ್ದಾರೆ. ಡಿಸಿ, ಎಸ್‌ಪಿ ಎಲ್ಲ ಸೇರಿ 144 ಸೆಕ್ಷನ್ ಹಾಕಿದ್ದಾರೆ. ವಿರೋಧ ಪಕ್ಷದ ನಾಯಕನಾಗಿ ನಾನು ಇದನ್ನು ಉಲ್ಲಂಘನೆ ಮಾಡಬಾರದು ಎಂದು ಯಾತ್ರೆಯನ್ನು ಮುಂದೂಡಿದ್ದೇವೆ ಎಂದು ತಿಳಿಸಿದರು. ಸಂಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

2️⃣ ಕಾಂಗ್ರೆಸ್‌ ಮಡಿಕೇರಿ ಚಲೋ ರದ್ದಾಗಿದ್ದು ಏಕೆ? ಇದರಲ್ಲಿ ಡಿ.ಕೆ. ಶಿವಕುಮಾರ್‌ ಪಾತ್ರವೇನು?
ಕೊಡಗಿನಲ್ಲಿ ಮಳೆ ಹಾನಿಯಿಂದಾದ ಪ್ರದೇಶ ವೀಕ್ಷಣೆಗೆ ತೆರಳಿದ ಸಿದ್ದರಾಮಯ್ಯ ಅವರ ವಿರುದ್ಧ ಪ್ರತಿಭಟನೆ ನಡೆಸಿದ್ದಕ್ಕೆ ಪ್ರತಿಯಾಗಿ ಕರೆ ನೀಡಿದ್ದ ಮಡಿಕೇರಿ ಚಲೋ ಕಾರ್ಯಕ್ರಮವನ್ನು ರದ್ದುಪಡಿಸಲಾಗಿದೆ. ಆದರೆ ಇದರ ಹಿಂದೆ ಸ್ಥಳೀಯ ಹಾಗೂ ರಾಜ್ಯ ಮಟ್ಟದ ಕಾಂಗ್ರೆಸ್‌ನಲ್ಲಿ ಭಾರಿ ಚರ್ಚೆ ನಡೆದು, ಅಂತಿಮವಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಮಧ್ಯಪ್ರವೇಶಿಸಿ ನಿರ್ಧಾರ ಮಾಡಲಾಗಿದೆ. ಈ ಕುರಿತು ಸಂಪೂರ್ಣ ವಿಶ್ಲೇಷಣೆಗಾಗಿ ಇಲ್ಲಿ ಕ್ಲಿಕ್‌ ಮಾಡಿ.

3️⃣ ISIS Terror | ನೂಪುರ್‌ ಶರ್ಮಾ ಹತ್ಯೆಗೆ ಸ್ಕೆಚ್‌ ಹಾಕಿದ್ದವನಿಗಾಗಿ ರಷ್ಯಾಗೆ ತೆರಳಲಿವೆ ಐಬಿ, ಎನ್‌ಐಎ ತಂಡಗಳು!
ರಷ್ಯಾದಲ್ಲಿ ಸೆರೆ ಸಿಕ್ಕಿರುವ ಐಸಿಸ್‌ ಉಗ್ರನ (ISIS Terror) ಕುರಿತು ಹೆಚ್ಚಿನ ತನಿಖೆ ನಡೆಸಲು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಹಾಗೂ ಆಂತರಿಕ ಗುಪ್ತಚರ ಇಲಾಖೆ (ಐಬಿ)ಯ ತಂಡಗಳು ಶೀಘ್ರದಲ್ಲಿಯೇ ರಷ್ಯಾಗೆ ತೆರಳಲಿವೆ ಎಂದು ತಿಳಿದು ಬಂದಿದೆ. ಆತ್ಮಾಹುತಿ ಬಾಂಬ್‌ ದಾಳಿ ಮೂಲಕ ಬಿಜೆಪಿಯ ಉಚ್ಚಾಟಿತ ವಕ್ತಾರೆ ನೂಪುರ್‌ ಶರ್ಮಾರನ್ನು ಹತ್ಯೆಗೈಯಲು ಉಗ್ರನೊಬ್ಬ ಸಂಚು ರೂಪಿಸಿದ್ದ ಎಂದು ತಿಳಿದು ಬಂದಿರುವ ಹಿನ್ನೆಲೆಯಲ್ಲಿ ರಷ್ಯಾಗೆ ತೆರಳಲಿವೆ ಎಂದು ಮೂಲಗಳು ತಿಳಿಸಿವೆ. ಪ್ರವಾದಿ ಮೊಹಮ್ಮದ್‌ ಕುರಿತು ವಿವಾದಾತ್ಮಕ ಹೇಳಿಕೆ ನೀಡಿದ ನೂಪುರ್‌ ಶರ್ಮಾ ಅವರನ್ನು ಹತ್ಯೆಗೈಯಬೇಕು ಎಂಬ ಏಕೈಕ ಕಾರಣಕ್ಕೆ ಐಸಿಸ್‌ ಉಗ್ರ ಅಜಮೋವ್‌, ಭಾರತದ ಕಡೆ ಹೊರಟಿದ್ದ ಎಂದು ತಿಳಿದುಬಂದಿದೆ. ಸಂಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

4️⃣ ಪ್ರವಾದಿ ಮೊಹಮ್ಮದ್​ಗೆ ಅವಹೇಳನ; ತೆಲಂಗಾಣ ಬಿಜೆಪಿ ಶಾಸಕ ರಾಜಾ ಸಿಂಗ್ ಪಕ್ಷದಿಂದಲೇ ಅಮಾನತು
ಪ್ರವಾದಿ ಮೊಹಮ್ಮದ್​ ಬಗ್ಗೆ ಅವಹೇಳನಕಾರಿ ಮಾತುಗಳನ್ನಾಡಿದ ತೆಲಂಗಾಣ ಬಿಜೆಪಿ ಶಾಸಕ ಟಿ.ರಾಜಾ ಸಿಂಗ್ (T Raja Singh)​​ರನ್ನು ಪಕ್ಷದಿಂದ ಅಮಾನತುಗೊಳಿಸಲಾಗಿದೆ. ಇದೀಗ ಕೊಟ್ಟಿರುವ ಶೋಕಾಸ್​ ನೋಟಿಸ್​​ಗೆ 10 ದಿನಗಳ ಒಳಗೆ ಉತ್ತರ ನೀಡದೆ ಇದ್ದಲ್ಲಿ, ಪಕ್ಷದಿಂದ ಉಚ್ಚಾಟನೆಗೊಳಿಸುವುದಾಗಿಯೂ ಎಚ್ಚರಿಕೆ ನೀಡಲಾಗಿದೆ. ಟಿ. ರಾಜಾ ಅವರು ಪ್ರವಾದಿ ಮೊಹಮ್ಮದ್​ ವಿರುದ್ಧ ಮಾತನಾಡಿದ ವಿಡಿಯೋ ಮಾಡಿ ಸೋಷಿಯಲ್​ ಮೀಡಿಯಾಗಳಲ್ಲಿ ಹರಿಬಿಟ್ಟಿದ್ದರು. ಅದನ್ನು ನೋಡಿದ ಮುಸ್ಲಿಂ ಸಮುದಾಯದವರು ಹೈದರಾಬಾದ್​ನ ಅನೇಕ ಕಡೆಗಳಲ್ಲಿ ತೀವ್ರ ಪ್ರತಿಭಟನೆ ನಡೆಸಿದ್ದರು. ಟಿ. ರಾಜಾ ವಿರುದ್ಧ ಎಫ್​ಐಆರ್​ ದಾಖಲಾಗಿ, ಮಂಗಳವಾರ (ಆಗಸ್ಟ್​ 23) ಬೆಳಗ್ಗೆ ಅವರು ಅರೆಸ್ಟ್ ಕೂಡ ಆಗಿದ್ದಾರೆ. ಸಂಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

5️⃣ Supreme Court | ಬೇನಾಮಿ ಕಾಯಿದೆ ಅಸಾಂವಿಧಾನಿಕ, ಜೈಲು ಶಿಕ್ಷೆ ಇಲ್ಲ! ಸುಪ್ರೀಂ ಕೋರ್ಟ್ ಹೇಳಿದ್ದೇನು?
1988ರ ಬೇನಾಮಿ ವ್ಯವಹಾರಗಳು(ನಿಷೇಧ) ಕಾಯ್ದೆಯ 3(2) ಸೆಕ್ಷನ್ ಅಸಾಂವಿಧಾನಿಕವಾಗಿದೆ ಎಂದು ಸುಪ್ರೀಂ ಕೋರ್ಟ್ (Supreme Court) ಮಂಗಳವಾರ ಮಹತ್ವದ ತೀರ್ಪು ನೀಡಿದೆ. ಜತೆಗೆ ಇದೇ ಕಾಯಿದೆಗೆ 2016ರಲ್ಲಿ ತಿದ್ದುಪಡಿ ತರಲಾಗಿದ್ದು, ಆ ತಿದ್ದಪಡಿಗಳು ಪೂರ್ವಾನ್ವಯವಾಗುವುದಿಲ್ಲ ಎಂದು ಸ್ಪಷ್ಟಪಡಿಸಿದೆ.
2016ರ ಬೇನಾಮಿ ವ್ಯವಹಾರಗಳ ತಿದ್ದುಪಡಿಯ ಕಾಯಿದೆಯ 3(2) ಸೆಕ್ಷನ್ ಕೂಡ ಅಸಾಂವಿಧಾನಿಕವಾಗಿದೆ. ಇದು ಸಂವಿಧಾನದ ಆರ್ಟಿಕಲ್ 20(1) ಅನ್ನು ಸಂಪೂರ್ಣವಾಗಿ ಉಲ್ಲಂಘಿಸುತ್ತದೆ ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿದೆ. ಸಂಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

6️⃣ Ganesh Chaturthi 2022 | ಈ ಬಾರಿ ಗೌರಿ-ಗಣೇಶ ಹಬ್ಬದಂದು ಎಷ್ಟು ಹೊತ್ತಿಗೆ ಪೂಜೆ ಮಾಡಬೇಕು?
ಗೌರಿ ಗಣೇಶ ಹಬ್ಬಕ್ಕೆ ದಿನಗಣನೆ ಆರಂಭವಾಗಿದೆ. ಭಾದ್ರಪದ ಮಾಸದ ಶುಕ್ಲಪಕ್ಷದ ತದಿಗೆಯಂದು ಸ್ವರ್ಣಗೌರೀ ವ್ರತ (Gowri Habba) ಹಾಗೂ ಚತುರ್ಥಿಯಂದು ಗಣೇಶ ಹಬ್ಬ (ಶ್ರೀ ವಿನಾಯಕ ಚತುರ್ಥಿ ವ್ರತ) (Ganesh Chaturthi 2022) ಆಚರಿಸಲಾಗುತ್ತದೆ. ಇದೇ ತಿಂಗಳ ಅಂದರೆ ಅಗಸ್ಟ್‌ 28 ರಿಂದ ಭಾದ್ರಪದಮಾಸ ಆರಂಭವಾಗಲಿದ್ದು, ಆಗಸ್ಟ್‌ 30 ಮಂಗಳವಾರದಂದು ತದಿಗೆ ತಿಥಿ ಇದೆ. ಅಂದು ಸ್ವರ್ಣಗೌರೀ ವ್ರತಾಚರಣೆ ನಡೆಯಲಿದೆ. ಆಗಸ್ಟ್‌ 31ರ ಬುಧವಾರದಂದು ಚತುರ್ಥಿ ತಿಥಿ ಇದ್ದು, ಅಂದು ಶ್ರೀ ವಿನಾಯಕ ಚತುರ್ಥಿ ವ್ರತಾಚರಣೆ ಮಾಡಲಾಗುತ್ತದೆ. ವ್ರತದ ಆಚರಣೆ ಕುರಿತು ಪೂರ್ಣ ವಿವರಣೆಗಾಗಿ ಇಲ್ಲಿ ಕ್ಲಿಕ್‌ ಮಾಡಿ.

7️⃣ ಎಲೆಕ್ಷನ್‌ ಹವಾ | ಶಿವಮೊಗ್ಗ ನಗರ | ಈಶ್ವರಪ್ಪ ಉತ್ತರಾಧಿಕಾರಿಯಾಗಲು ಅರ್ಧ ಡಜನ್‌ಗೂ ಹೆಚ್ಚು ಜನರ ಪೈಪೋಟಿ
ಭಾರತೀಯ ಜನತಾ ಪಾರ್ಟಿಯ ಶಕ್ತಿಕೇಂದ್ರವಾದ ಶಿವಮೊಗ್ಗ ಜಿಲ್ಲೆಯ ಪ್ರಮುಖ ಕ್ಷೇತ್ರಗಳಲ್ಲಿ ಶಿವಮೊಗ್ಗ ನಗರ ಒಂದು. ರಾಜಕೀಯವಾಗಿ ಶಿವಮೊಗ್ಗ ನಗರ ಮಾಜಿ ಸಚಿವ ಕೆ.ಎಸ್​. ಈಶ್ವರಪ್ಪ ಅವರ ಕ್ಷೇತ್ರ. 1957ರಿಂದ 14 ಚುನಾವಣೆಗಳನ್ನು ಕಂಡಿರುವ ಈ ಕ್ಷೇತ್ರದಲ್ಲಿ ಬಿಜೆಪಿ ಆರು ಬಾರಿ ಗೆದ್ದಿದೆ. ಆರಂಭದ ಐದು ಚುನಾವಣೆಗಳಲ್ಲಿ ಕಾಂಗ್ರೆಸ್​ ಗೆಲುವು ಪಡೆದಿದ್ದ ಈ ಕ್ಷೇತ್ರದಲ್ಲಿ 1983ರಲ್ಲಿ ಎಂ. ಆನಂದರಾವ್​ ಗೆಲುವಿನ ನಗೆ ಬೀರುವ ಮೂಲಕ ಬಿಜೆಪಿ ಖಾತೆ ತೆರೆದಿತ್ತು. ಇದಾದ ನಂತರ ನಡೆದ ಎಂಟು ಚುನಾವಣೆಗಳಲ್ಲಿ ಕಾಂಗ್ರೆಸ್​ ಮೂರು ಬಾರಿ ಗೆದ್ದಿದ್ದರೆ, ಬಿಜೆಪಿಗೆ ಐದು ಗೆಲುವು ಲಭಿಸಿದೆ. ʻಎಲೆಕ್ಷನ್‌ ಹವಾʼ ಸರಣಿಯಲ್ಲಿ ಶಿವಮೊಗ್ಗ ನಗರ ಕ್ಷೇತ್ರದ ಸ್ಥಿತಿಗತಿ ತಿಳಿಯಲು ಇಲ್ಲಿ ಕ್ಲಿಕ್‌ ಮಾಡಿ.

8️⃣ ಸಾವರ್ಕರ್‌ ರಥಯಾತ್ರೆ: ಇಂದಿರಾ ಗಾಂಧಿ ಮಾತಿನ ಮೂಲಕವೇ ಸಿದ್ದರಾಮಯ್ಯಗೆ ತಿವಿದ ಯಡಿಯೂರಪ್ಪ
ಸ್ವಾತಂತ್ರ್ಯ ವೀರ ಸಾವರ್ಕರ್‌ ಕುರಿತು ಮಾಜಿ ಸಿದ್ದರಾಮಯ್ಯ ಅವರ ಮಾತಿಗೆ, ಕಾಂಗ್ರೆಸ್‌ ನಾಯಕಿ ಇಂದಿರಾ ಗಾಂಧಿ ಅವರ ಮಾತಿನ ಮೂಲಕವೇ ಪ್ರತಿಕ್ರಿಯೆಯನ್ನು ಬಿಜೆಪಿ ರಾಷ್ಟ್ರೀಯ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್‌. ಯಡಿಯೂರಪ್ಪ ನೀಡಿದ್ದಾರೆ. ಮೈಸೂರಿನ ಸಾವರ್ಕರ್‌ ಪ್ರತಿಷ್ಠಾನದ ವತಿಯಿಂದ ಆಯೋಜಿಸಲಾಗಿರುವ ಎಂಟು ದಿನಗಳ ಸಾವರ್ಕರ್‌ ರಥಯಾತ್ರೆಗೆ ಕೋಟೆ ಆಂಜನೇಯ ದೇವಸ್ಥಾನದ ಮುಂಭಾಗದಲ್ಲಿ ಚಾಲನೆ ನೀಡಿ ಬಿ.ಎಸ್‌. ಯಡಿಯೂರಪ್ಪ ಮಾತನಾಡಿದರು. ಸಾವರ್ಕರ್‌ ಅವರನ್ನು ರಿಮಾರ್ಕೆಬಲ್‌ ಸನ್‌ ಆಫ್‌ ಇಂಡಿಯಾ ಎಂದಿದ್ದ ಇಂದಿರಾ ಗಾಂಧಿ, ಸಾವರ್ಕರ್‌ ಸ್ಮಾರಕಕ್ಕೆ ಸ್ವಂತ ಹಣವನ್ನೂ ನೀಡಿದ್ದರು, ಅಂಚೆ ಚೀಟಿಯನ್ನೂ ಬಿಡುಗಡೆ ಮಾಡಿದ್ದರು ಎಂದರು. ಸಂಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

9️⃣ ಎಸಿಬಿ ವಿಚಾರದಲ್ಲಿ ಸುಪ್ರೀಂ ಮೊರೆ ಹೋಗಿದ್ದು ರಾಜ್ಯ ಸರ್ಕಾರವಲ್ಲ: ಲೋಕಾಯಕ್ತಕ್ಕೆ ಬಲ ತುಂಬಲು ಸಿಎಂ ಸಭೆ
ಎಸಿಬಿಯನ್ನು ರದ್ದು ಮಾಡಬೇಕು, ಅಲ್ಲಿರುವ ಎಲ್ಲ ಪ್ರಕರಣಗಳನ್ನೂ ಲೋಕಾಯುಕ್ತಕ್ಕೆ ಹಸ್ತಾಂತರಿಸಬೇಕು ಮತ್ತು ಲೋಕಾಯುಕ್ಕ್ಕೆ ಬಲ ತುಂಬಬೇಕು ಎಂಬ ರಾಜ್ಯ ಹೈಕೋರ್ಟ್‌ನ ತೀರ್ಪಿನ ವಿರುದ್ಧ ಸುಪ್ರೀಂಕೋರ್ಟ್‌ ಮೆಟ್ಟಿಲೇರಿದ್ದು ರಾಜ್ಯ ಸರ್ಕಾರವಲ್ಲ, ಬದಲಾಗಿ ಖಾಸಗಿ ವ್ಯಕ್ತಿಯೊಬ್ಬರು ಸಲ್ಲಿಸಿದ ಅರ್ಜಿ ಇದಾಗಿದೆ ಎಂದು ತಿಳಿದುಬಂದಿದೆ. ರಾಜ್ಯ ಸರಕಾರ ಲೋಕಾಯುಕ್ತಕ್ಕೆ ಬಲ ತುಂಬಲು ಸಮಾಲೋಚನೆಗಳನ್ನು ಆರಂಭಿಸಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ, ಈ ಕುರಿತು ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದಾರೆ. ಸಂಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

🔟 Agama Temple | ಆಗಮ ದೇಗುಲಗಳಿಗೆ ಎಲ್ಲರೂ ಅರ್ಚಕರಾಗಬಹುದೇ? ಮದ್ರಾಸ್ ಹೈಕೋರ್ಟ್ ಹೇಳಿದ್ದೇನು?
ತಮಿಳುನಾಡಿನ ದೇವಾಲಯಗಳಲ್ಲಿ ಅರ್ಚಕರನ್ನು ನೇಮಿಸುವ ಬಗ್ಗೆ ಅಲ್ಲಿ ಸರ್ಕಾರ ಜಾರಿಗೆ ತಂದಿದ್ದ ಹೊಸ ನಿಯಮಾವಳಿ ಮಾನ್ಯತೆಯನ್ನು ಪ್ರಶ್ನಿಸಿ ಹಲವರು ಮದ್ರಾಸ್ ಹೈಕೋರ್ಟ್ ಮೊರೆ ಹೋಗಿದ್ದರು. ಡಿಎಂಕೆ ಸರ್ಕಾರದ ಈ ನಿಯಮಾವಳಿಯನ್ನು ಎತ್ತಿ ಹಿಡಿದಿರುವ ಮದ್ರಾಸ್ ಹೈಕೋರ್ಟ್ (Madras High Court), ಆಗಮ ದೇವಾಲಯ(Agama Temple)ಗಳನ್ನು ಈ ಕಾಯಿದೆಯಿಂದ ಹೊರಗಿಟ್ಟಿದೆ. ಅಷ್ಟು ಮಾತ್ರವಲ್ಲದೇ, ಆಗಮ ಆಧರಿತ ದೇವಾಲಯಗಳನ್ನು ಗುರುತಿಸಲು ಐವರ ಸಮಿತಿಯನ್ನು ರಚಿಸುವಂತೆ ಸರ್ಕಾರಕ್ಕೆ ಸೂಚಿಸಿದೆ. ಹಾಗಾದರೆ, ಏನಿದು ಅರ್ಚಕರ ವಿವಾದ? ಆಗಮ ಆಧರಿತ ದೇವಾಲಯಗಳೆಂದರೇನು? ಇಲ್ಲಿದೆ ಮಾಹಿತಿ.

ದಿನದ ಇನ್ನಷ್ಟು ಮುಖ್ಯ ಸುದ್ದಿಗಳು

Fitch report | ಸಾಲದ ದುಡ್ಡಿನಲ್ಲಿ ಅದಾನಿ ಸಮೂಹ ಭಾರಿ ಹೂಡಿಕೆ: ಫಿಚ್‌ ವರದಿ ಎಚ್ಚರಿಕೆ
ವಿಸ್ತಾರ Explainer | population of India: ಭಾರತದಲ್ಲಿ ಮುಂದಿನ ನೂರು ಮಕ್ಕಳು ಹುಟ್ಟೋದೆಲ್ಲಿ? ಅದರಿಂದೇನು?
ICC ODI Ranking | ಜಿಂಬಾಬ್ವೆ ಸರಣಿ ಕ್ಲೀನ್‌ ಸ್ವೀಪ್‌ ಬಳಿಕ ಭಾರತದ ಒಡಿಐ Rank ಎಷ್ಟು?
Adani | ಎನ್‌ಡಿಟಿವಿ ಚಾನೆಲ್‌ನ 29.18% ಷೇರುಗಳನ್ನು ಖರೀದಿಸಿದ ಅದಾನಿ ಗ್ರೂಪ್
ಗಣೇಶ ಪ್ರತಿಷ್ಠಾಪನೆಗೆ ಮುನ್ನ ಕೋಮು ಸೌಹಾರ್ದ ಸಭೆ ನಡೆಸುವುದು ಕಡ್ಡಾಯ: ರಾಜ್ಯ ಸರಕಾರ ಸೂಚನೆ

Exit mobile version