Site icon Vistara News

ವಿಸ್ತಾರ TOP 10 NEWS | ರಾಜಕಾಲುವೆ ಒತ್ತುವರಿ ತೆರವಿನಿಂದ SCO ಶೃಂಗಸಭೆವರೆಗಿನ ಪ್ರಮುಖ ಸುದ್ದಿಗಳಿವು

TOP 10 NEWS 16092022

ಬೆಂಗಳೂರು: ಮಳೆಯಿಂದ ವಿಪರೀತವಾಗಿ ಹಾನಿಯುಂಟಾದ ನಂತರ ಬೆಂಗಳೂರಿನಲ್ಲಿ ರಾಜಕಾಲುವೆ ಒತ್ತುವರಿ ತೆರವು ಮುಂದುವರಿದಿದೆಯಾದರೂ, ಬಡವರ ಮನೆ ಮೇಲಷ್ಟೇ ಅಸ್ತ್ರ ಪ್ರಯೋಗವಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ. ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ಮತಾಂತರ ನಿಷೇಧ ಕಾಯಿದೆಯನ್ನು ಹಿಂಪಡೆಯುವುದಾಗಿ ಪ್ರಿಯಾಂಕ್‌ ಖರ್ಗೆ ಹೇಳಿದ್ದಾರೆ, ಮುರುಘಾ ಶ್ರೀಗಳಿಗೆ ಜಾಮೀನು ನಿರಾಕರಣೆಯಾಗಿದೆ, ದೆಹಲಿ ಅಬಕಾರಿ ಪ್ರಕರಣದಲ್ಲಿ ದೇಶಾದ್ಯಂತ ಇಡಿ ದಾಳಿ ನಡೆದಿದೆ, ಗೌತಮ್‌ ಅದಾನಿ ಅವರನ್ನು ದೇಶದ ಎರಡನೇ ಶ್ರೀಮಂತ ವ್ಯಕ್ತಿ ಎಂದು ಫೋರ್ಬ್ಸ್‌ ಪ್ರಕಟಿಸಿದೆ ಹಾಗೂ ಎಸ್‌ಸಿಒ ಶೃಂಗದಲ್ಲಿ ಮೋದಿ ಹೇಳಿಕೆವರೆಗಿನ ದಿನದ ಪ್ರಮುಖ ಸುದ್ದಿಗಳ ಗುಚ್ಛ ವಿಸ್ತಾರ TOP 10 NEWS.

1. Rajakaluve Encroachment | ಬಡವರ ಮನೆಗಳ ಮೇಲಷ್ಟೇ ಬಿಬಿಎಂಪಿ ಬುಲ್ಡೋಜರ್ ಬ್ರಹ್ಮಾಸ್ತ್ರ!
ರಾಜಧಾನಿಯಲ್ಲಿ ಬಿಬಿಎಂಪಿ ಆಪರೇಷನ್ ಒತ್ತುವರಿ (Rajakaluve Encroachment) ಕಾರ್ಯಾಚರಣೆ ಶುಕ್ರವಾರಕ್ಕೆ ಐದು ದಿನ ಪೂರೈಸಿದೆ. ಬೆಳಗ್ಗೆ 10 ಗಂಟೆಯಿಂದ ಒತ್ತುವರಿ ತೆರವು ಕಾರ್ಯ ನಡೆಯಿತು. ಆದರೆ ಬಡವರ ಆಸ್ತಿ ಒತ್ತುವರಿ ತೆರವು ಮಾಡುತ್ತಿರುವ ಬಿಬಿಎಂಪಿ, ಉಳ್ಳವರ ಆಸ್ತಪಾಸ್ತಿ ಒತ್ತುವರಿ ಮಾಡುವಲ್ಲಿ ಹಿಂದೇಟು ಹಾಕುವ ಮೂಲಕ ತಾರತಮ್ಯ ಧೋರಣೆ ಅನುಸರಿಸುತ್ತಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ. ದುಡ್ಡಿದ್ದವರ ಮನೆ ಮುಟ್ಟಲು, ಐಟಿ ಬಿಟಿ ಕಂಪನಿಗಳ ಒತ್ತುವರಿ ಜಾಗದತ್ತ ಬಿಬಿಎಂಪಿ ಅಧಿಕಾರಿಗಳು ಸುಳಿಯುತ್ತಿಲ್ಲ. ಬಾಗ್ಮನೆ, ವಿಪ್ರೋ, ಎಪ್ಸಿಲಾನ್‌ ಸೇರಿ ಹಲವು ಪ್ರತಿಷ್ಠಿತ ಕಂಪನಿಗಳು ಇರುವ ಪ್ರದೇಶಗಳಲ್ಲಿ ಒತ್ತುವರಿ ತೆರವು ಮಾಡಲು ಬಿಬಿಎಂಪಿ ಅಧಿಕಾರಿಗಳು ಹಿಂದೇಟು ಹಾಕುತ್ತಿದ್ದಾರೆ ಎನ್ನಲಾಗಿದೆ. ಪೂರ್ಣ ಸುದ್ದಿ ಓದಲು ಇಲ್ಲಿ ಕ್ಲಿಕ್‌ ಮಾಡಿ.
ಹೆಚ್ಚಿನ ಓದಿಗಾಗಿ: ರಾಜಕಾಲುವೆ ಹೆಸರನ್ನು ಬದಲಾಯಿಸಿ: ಸದನದಲ್ಲಿ ಹೊಸ ಹೆಸರು ಸೂಚಿಸಿದ ಎ.ಟಿ. ರಾಮಸ್ವಾಮಿ

2. ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ಮತಾಂತರ ನಿಷೇಧ ಕಾಯ್ದೆ ವಾಪಸ್‌: ಇನ್ನೊಂದು ಕಾಯ್ದೆಯೂ ರದ್ದು ಎಂದ ಪ್ರಿಯಾಂಕ್‌ ಖರ್ಗೆ
ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ಮತಾಂತರ ನಿಷೇಧ ಕಾಯ್ದೆಯನ್ನು ಹಿಂಪಡೆಯಲಾಗುತ್ತದೆ ಎಂದು ಕಾಂಗ್ರೆಸ್‌ ಶಾಸಕ ಹಾಗೂ ಮಾಜಿ ಸಚಿವ ಪ್ರಿಯಾಂಕ್‌ ಖರ್ಗೆ ಹೇಳಿದ್ದಾರೆ. ಈ ಕುರಿತು ವಿಧಾನಸೌಧದಲ್ಲಿ ಸುದ್ದಿಗಾರರ ಜತೆಗೆ ಮಾತನಾಡಿದ ಪ್ರಿಯಾಂಕ್‌ ಖರ್ಗೆ, ಬಿಜೆಪಿಯವರು ಸಾರ್ವಜನಿಕರ ಅಭಿಪ್ರಾಯಕ್ಕೆ ವಿರುದ್ಧವಾಗಿ ಜಾರಿಗೆ ತಂದಿರುವ ಎಲ್ಲ ಕಾಯ್ದೆಗಳನ್ನೂ ವಾಪಸ್ ಪಡೆಯುತ್ತೇವೆ. ಹಣಕಾಸು ಮಸೂದೆಯ ನಡುವೆಯೇ ಗೋಹತ್ಯೆ ಕಾಯ್ದೆ ಜಾರಿ‌ ಮಾಡಿದ್ದರು. ಗೋಹತ್ಯೆ ಕಾಯ್ದೆಯನ್ನೂ ವಾಪಸ್‌ ಪಡೆಯುತ್ತೇವೆ ಎಂದಿದ್ದಾರೆ. ಪೂರ್ಣ ಸುದ್ದಿಗಾಗಿ ಇಲ್ಲಿ ಕ್ಲಿಕ್‌ ಮಾಡಿ.

3. ಮುರುಘಾಶ್ರೀ ಪ್ರಕರಣ | ಮುರುಘಾ ಶರಣರಿಗೆ ಸಿಗದ ಜಾಮೀನು; ನಾಳೆಗೆ ಅರ್ಜಿ ಮುಂದೂಡಿಕೆ
ಶ್ರೀಮಠದ ಹಾಸ್ಟೆಲ್‌ನಲ್ಲಿದ್ದ ವಿದ್ಯಾರ್ಥಿನಿಯರಿಬ್ಬರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಆರೋಪವನ್ನು ಎದುರಿಸುತ್ತಿರುವ ಚಿತ್ರದುರ್ಗ ಮುರುಘಾ ಮಠದ ಶ್ರೀ ಶಿವಮೂರ್ತಿ ಮುರುಘಾಶರಣರ ಜಾಮೀನು ಅರ್ಜಿ ವಿಚಾರಣೆಯು ಶನಿವಾರಕ್ಕೆ (ಸೆ.೧೭) ಮುಂದೂಡಿಕೆಯಾಗಿದೆ.
ಚಿತ್ರದುರ್ಗ ಮುರುಘಾಶ್ರೀ ವಿರುದ್ಧ ಪೋಕ್ಸೊ ಪ್ರಕರಣ ದಾಖಲಾಗಿತ್ತು. ಚಿತ್ರದುರ್ಗ ಜಿಲ್ಲಾ ಅಪರ ಮತ್ತು ಸತ್ರ ನ್ಯಾಯಾಲಯದಲ್ಲಿ ಜಾಮೀನು ಅರ್ಜಿ ವಿಚಾರಣೆಯು ಶುಕ್ರವಾರ ಇತ್ತು. ಈ ವೇಳೆ ಈ ಪ್ರಕರಣದ ವಿಚಾರಣೆಯನ್ನು ಸೆ.೧೭ರ ಶನಿವಾರಕ್ಕೆ ಮುಂದೂಡಿ ನ್ಯಾಯಾಲಯ ಆದೇಶಿಸಿದೆ. ಪೂರ್ಣ ಸುದ್ದಿಗಾಗಿ ಇಲ್ಲಿ ಕ್ಲಿಕ್‌ ಮಾಡಿ.
ಹೆಚ್ಚಿನ ಓದಿಗಾಗಿ: ಮುರುಘಾಶ್ರೀ ಪ್ರಕರಣ | ನಕ್ಸಲರ ಅಡ್ಡೆಯಾಗಿತ್ತು ಮಠ ಎಂದ ಯತ್ನಾಳ್‌: ಹೈಕೋರ್ಟ್‌ CJಗೆ ಪತ್ರ

4. Delhi Excise Policy Case | ಮಂಗಳೂರು, ಬೆಂಗಳೂರು ಸೇರಿ ದೇಶದ 40 ಕಡೆ ಇ.ಡಿ ದಾಳಿ
ದಿಲ್ಲಿ ಲಿಕ್ಕರ್ ಪಾಲಿಸಿ ಹಗರಣಕ್ಕೆ (Delhi Excise Policy Case) ಸಂಬಂಧಿಸಿದಂತೆ ಬೆಂಗಳೂರು, ಮಂಗಳೂರು ಮತ್ತು ಹೈದ್ರಾಬಾದ್ ಸೇರಿದಂತೆ ದೇಶಾದ್ಯಂತ 40 ಕಡೆ ಶುಕ್ರವಾರ ಜಾರಿ ನಿರ್ದೇಶನಾಲಯ(ಇ.ಡಿ)ವು ಶೋಧ ಕಾರ್ಯಾಚರಣೆಯನ್ನು ಕೈಗೊಂಡಿದೆ. ಇದೇ ಹಗರಣಕ್ಕೆ ಸಂಬಂಧಿಸಿದಂತೆ ಸೆಪ್ಟೆಂಬರ್ 6ರಂದು ಇ.ಡಿ, ದಿಲ್ಲಿ ಸೇರಿದಂತೆ 53ಕ್ಕೂ ಹೆಚ್ಚು ಕಡೆ ದಾಳಿ ನಡೆಸಿತ್ತು. ಇದೀಗ ಎರಡನೇ ಬಾರಿಗೆ ಶೋಧ ಕಾರ್ಯಾಚರಣೆಯನ್ನು ಕೈಗೊಂಡಿದೆ. ದಿಲ್ಲಿಯಲ್ಲಿ ಆಪ್ ಸರ್ಕಾರ ಜಾರಿಗೆ ತಂದಿದ್ದ ಲಿಕ್ಕರ್ ನೀತಿ ರಚನೆಯಲ್ಲಿ ನೆರವಾಗಿದ್ದ ಮದ್ಯ ಉತ್ಪಾದಕರು ಸೇರಿದಂತೆ ಮಾರಾಟಗಾರ ಸ್ಥಗಳ ಮೇಲೆ ಜಾರಿ ನಿರ್ದೇಶನಾಲಯವು ದಾಳಿ ನಡೆಸಿ, ದಾಖಲೆಗಳನ್ನು ವಶಪಡಿಸಿಕೊಂಡಿತ್ತು. ಅದರ ಮುದುವರಿದ ಭಾಗವಾಗಿಯೇ, ಇ.ಡಿ ಮತ್ತೆ ದಾಳಿಯನ್ನು ಕೈಗೊಂಡಿದೆ. ಪೂರ್ಣ ಸುದ್ದಿಗಾಗಿ ಇಲ್ಲಿ ಕ್ಲಿಕ್‌ ಮಾಡಿ.

5. ಕೆಪಿಸಿಸಿಗೆ ಹೊಸ ಅಧ್ಯಕ್ಷರನ್ನು ಆಯ್ಕೆ ಮಾಡಲಿದ್ದಾರೆ ಸೋನಿಯಾ ಗಾಂಧಿ: ನಿರ್ಣಯಕ್ಕೆ ಸರ್ವಾನುಮತದ ಒಪ್ಪಿಗೆ
ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಅನೇಕ ವರ್ಷಗಳ ನಂತರ ಸಾಂಸ್ಥಿಕ ಚುನಾವಣಾ ಪ್ರಕ್ರಿಯೆಯನ್ನು ನಡೆಸಲಾಯಿತು. ಅಂಬೇಡ್ಕರ್‌ ಭವನದಲ್ಲಿ ನಡೆದ ಚುನಾವಣಾ ಪ್ರಕ್ರಿಯೆಯಲ್ಲಿ, ಕೆಪಿಸಿಸಿಗೆ ಹೊಸ ಅಧ್ಯಕ್ಷರನ್ನು ಆಯ್ಕೆ ಮಾಡುವ ಸಂಪೂರ್ಣ ಅಧಿಕಾರವನ್ನು ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿಯವರಿಗೆ ನೀಡಲಾಯಿತು.
ಡಿ.ಕೆ. ಶಿವಕುಮಾರ್‌ ಅವರು ಎರಡೂವರೆ ವರ್ಷದಿಂದ ಕೆಪಿಸಿಸಿ ಅಧ್ಯಕ್ಷರಾಗಿದ್ದಾರೆ. ಕಾಂಗ್ರೆಸ್‌ನಲ್ಲಿ ಸಾಂಸ್ಥಿಕ ಚುನಾವಣೆಗಳು ನಡೆದು ಅನೇಕ ವರ್ಷಗಳೇ ಕಳೆದಿದ್ದವು. ಈ ಹಿನ್ನೆಲೆಯಲ್ಲಿ ದೇಶಾದ್ಯಂತ ಪ್ರಕ್ರಿಯೆ ನಡೆಸಲಾಗುತ್ತಿದೆ. ಇದೀಗ ಸೋನಿಯಾ ಗಾಂಧಿಯವರು ಹೊಸ ಅಧ್ಯಕ್ಷರನ್ನು ಆಯ್ಕೆ ಮಾಡುತ್ತಾರೆ. ಆದರೆ ಚುನಾವಣೆಗೆ ಇನ್ನು ಒಂದು ವರ್ಷ ಮಾತ್ರ ಬಾಕಿಯಿರುವ ಸಂದರ್ಭದಲ್ಲಿ ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಬಹುತೇಕ ಅಸಾಧ್ಯ. ಡಿ.ಕೆ. ಶಿವಕುಮಾರ್‌ ಅವರ ಹೆಸರನ್ನೇ ಆಯ್ಕೆ ಮಾಡಿ ಸೋನಿಯಾ ಗಾಂಧಿಯವರು ಔಪಚಾರಿಕತೆಯನ್ನಷ್ಟೆ ಪೂರೈಸುತ್ತಾರೆ ಎನ್ನಲಾಗುತ್ತಿದೆ. ಪೂರ್ಣ ಸುದ್ದಿಗಾಗಿ ಇಲ್ಲಿ ಕ್ಲಿಕ್‌ ಮಾಡಿ.

6. ಸರ್ಕಾರಿ ನೌಕರರ ಸುದ್ದಿ | ಏಳನೇ ವೇತನ ಆಯೋಗ ರಚನೆಗೆ ಸರ್ಕಾರದ ಹಿಂದೇಟು?
ರಾಜ್ಯ ಸರ್ಕಾರಿ ನೌಕರರಿಗೆ ವೇತನ ಮತ್ತಿತರ ಭತ್ಯೆಗಳನ್ನು ಪರಿಷ್ಕರಿಸಲು ಬರುವ ಅಕ್ಟೋಬರ್‌ನಲ್ಲಿ ಏಳನೇ ವೇತನ ಆಯೋಗವನ್ನು ರಚಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೀಡಿದ್ದ ಭರವಸೆ, ಭರವಸೆಯಾಗಿಯೇ ಉಳಿಯಲಿದೆಯೇ?
ಈ ಅನುಮಾನ ಈಗ ರಾಜ್ಯ ಸರ್ಕಾರಿ ನೌಕರರನ್ನು ಕಾಡುತ್ತಿದೆ. ವಿಧಾನಸಭೆಯಲ್ಲಿ ಶಾಸಕ ಐಹೋಳೆ ಡಿ. ಮಹಾಲಿಂಗಪ್ಪ ಕೇಳಿದ ಲಿಖಿತ ಪ್ರಶ್ನೆಗೆ ಉತ್ತರಿಸಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, “ರಾಜ್ಯ ಸರ್ಕಾರಿ ನೌಕರರ ವೇತನ ಮತ್ತು ಭತ್ಯೆಗಳ ಪರಿಷ್ಕರಣೆಯ ವಿಷಯವು ಸರ್ಕಾರದ ನೀತಿ ನಿರ್ಣಯಕ್ಕೆ ಸಂಬಂಧಿಸಿದ ವಿಷಯವಾಗಿದ್ದು, ರಾಜ್ಯದ ಆರ್ಥಿಕ ಸ್ಥಿತಿಗತಿಗಳನ್ನು ಗಮನದಲ್ಲಿರಿಸಿ ಸಂದರ್ಭಾನುಸಾರ ಕ್ರಮ ತೆಗೆದುಕೊಳ್ಳಲಾಗುವುದುʼʼ ಎಂದಷ್ಟೇ ಹೇಳಿದ್ದಾರೆ. ಪೂರ್ಣ ಸುದ್ದಿಗಾಗಿ ಇಲ್ಲಿ ಕ್ಲಿಕ್‌ ಮಾಡಿ.

7. Vims Bellary | ರೋಗಿಗಳ ಸಾವು ಪ್ರಕರಣ; ವಿಮ್ಸ್‌ಗೆ ಡಾ. ಸ್ಮಿತಾ ನೇತೃತ್ವದ ತನಿಖಾ ತಂಡ ಆಗಮನ
ವಿಮ್ಸ್‌ನಲ್ಲಿ ಕೇಬಲ್ ಬ್ಲಾಸ್ಟ್ ಆಗಿರುವ ಹಿನ್ನೆಲೆಯಲ್ಲಿ (Vims Bellary) ಐಸಿಯುನಲ್ಲಿರುವ ರೋಗಿಗಳು ಮೃತಪಟ್ಟಿರುವ ಘಟನೆಗೆ ಸಂಬಂಧಿಸಿದಂತೆ ತನಿಖೆ ನಡೆಸಲು ಡಾ. ಸ್ಮಿತಾ ನೇತೃತ್ವದಲ್ಲಿ ನೇಮಿಸಿರುವ ತನಿಖಾ ಸಮಿತಿಯು ವಿಮ್ಸ್‌ಗೆ ಆಗಮಿಸಿದ್ದು, ಪ್ರಕರಣದ ಸಂಪೂರ್ಣ ಮಾಹಿತಿಯನ್ನು ಕಲೆಹಾಕುತ್ತಿದೆ.
೧೧.೪೫ಕ್ಕೆ ವಿಮ್ಸ್‌ಗೆ ಆಗಮಿಸಿರುವ ತಂಡವು ನೇರವಾಗಿ ವಿಮ್ಸ್ ನಿರ್ದೇಶಕರ ಚೇಂಬರ್‌ಗೆ ತೆರಳಿದ್ದು, ದಾಖಲೆ ಸಮೇತ ಮಾಹಿತಿಯನ್ನು ಸಂಗ್ರಹಿಸುತ್ತಿದೆ. ವಿದ್ಯುತ್ ಸಮಸ್ಯೆಯಿಂದಾಗಿ ಐವರು ರೋಗಿಗಳು ಮೃತಪಟ್ಟಿದ್ದಾರೆಂಬ ಆರೋಪ ಇರುವುದರಿಂದ ರೋಗಿಗಳು ವೈದ್ಯಕೀಯ ಪರೀಕ್ಷೆ ವರದಿಯನ್ನು ಪರಿಶೀಲಿಸಲಾಗುತ್ತಿದೆ. ಸಾಧ್ಯವಾದರೆ ರೋಗಿಗಳ ಸಂಬಂಧಿಗಳನ್ನು ಭೇಟಿಯಾಗಿ ವರದಿ ಸಂಗ್ರಹಿಸುವ ಸಾಧ್ಯತೆ ಇದೆ ಎಂಬ ಮಾಹಿತಿಯು ವಿಸ್ತಾರ ನ್ಯೂಸ್‌ಗೆ ಲಭ್ಯವಾಗಿದೆ. ಪೂರ್ಣ ಸುದ್ದಿಗಾಗಿ ಇಲ್ಲಿ ಕ್ಲಿಕ್‌ ಮಾಡಿ.

8. Gautam Adani | ಗೌತಮ್‌ ಅದಾನಿ ಈಗ ಜಗತ್ತಿನ ಎರಡನೇ ಶ್ರೀಮಂತ, ಫೋರ್ಬ್ಸ್‌ ಘೋಷಣೆ
ಭಾರತದ ಬಿಲಿಯನೇರ್‌ ಉದ್ಯಮಿ ಗೌತಮ್‌ ಅದಾನಿ (Gautam Adani) ಈಗ ವಿಶ್ವದ ಎರಡನೇ ಅತ್ಯಂತ ಶ್ರೀಮಂತ ಉದ್ಯಮಿಯಾಗಿ ಹೊರಹೊಮ್ಮಿದ್ದಾರೆ ಎಂದು ಫೋರ್ಬ್ಸ್‌ ನಿಯತಕಾಲಿಕೆ ಘೋಷಿಸಿದೆ. ಅಮೆಜಾನ್‌ ಮುಖ್ಯಸ್ಥ ಜೆಫ್‌ ಬಿಜೋಸ್‌ ಮತ್ತು ಫ್ರಾನ್ಸ್‌ನ ಉದ್ಯಮಿ ಬೆನಾರ್ಡ್‌ ಅರ್ನಲ್ಟ್‌ ಅವರನ್ನು ಹಿಂದಿಕ್ಕಿರುವ ಗೌತಮ್‌ ಅದಾನಿ ಅವರು, ಇದೀಗ ವಿಶ್ವದ ಎರಡನೇ ಅತ್ಯಂತ ಶ್ರೀಮಂತ ವ್ಯಕ್ತಿ ಎಂದು ಫೋರ್ಬ್ಸ್‌ ವರದಿ ಪ್ರಕಟಿಸಿದೆ. ಪೂರ್ಣ ಸುದ್ದಿಗಾಗಿ ಇಲ್ಲಿ ಕ್ಲಿಕ್‌ ಮಾಡಿ.

9. SCO Summit | ಶೇ.7.5 ದರದಲ್ಲಿ ಭಾರತದ ಅಭಿವೃದ್ಧಿ: ಎಸ್‌ಸಿಒ ಶೃಂಗದಲ್ಲಿ ಮೋದಿ ಹೇಳಿಕೆ
ಭಾರತದ ಆರ್ಥಿಕಾಭಿವೃದ್ಧಿಯು ಶೇ.7.5 ದರದಲ್ಲಿ ಬೆಳವಣಿಗೆಯಾಗಲಿದೆ. ಇದು ಜಗತ್ತಿನಲ್ಲೇ ಅತಿ ಹೆಚ್ಚು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದ್ದಾರೆ. ಉಜ್ಬೇಕಿಸ್ತಾನದ ಸಮರಕಂಡದಲ್ಲಿ ಆಯೋಜಿಸಲಾಗಿರುವ ಶಾಂಘೈ ಸಹಕಾರ(CSO Summit) ಶೃಂಗದಲ್ಲಿ ಪಾಲ್ಗೊಂಡು ಮಾತನಾಡುತ್ತಿದ್ದರು. ಎರಡು ದಿನಗಳ ಕಾಲ ನಡೆಯುತ್ತಿರುವ ಈ ಶೃಂಗದಲ್ಲಿ ಭಾರತ, ಚೀನಾ, ಪಾಕಿಸ್ತಾನ, ರಷ್ಯಾ ಸೇರಿದಂತೆ ಸೆಂಟ್ರಲ್ ಏಷ್ಯಾ ವ್ಯಾಪ್ತಿಯ ರಾಷ್ಟ್ರಗಳು ಪಾಲ್ಗೊಂಡಿವೆ.
ಭಾರತದಲ್ಲಿ ಈಗ 70 ಸಾವಿರಕ್ಕೂ ಅಧಿಕ ಸ್ಟಾರ್ಟ್‌ಅಪ್‌ಗಳಿವೆ, 100ಕ್ಕೂ ಅಧಿಕ ಯೂನಿಕಾರ್ನ್ ಕಂಪನಿಗಳಿವೆ. ನಾವು ಜನ ಕೇಂದ್ರೀತ ಅಭಿವೃದ್ಧಿ ಮಾದರಿಯನ್ನು ಅಭಿವೃದ್ಧಿಪಡಿಸುತ್ತಿದ್ದೇವೆ. ನಾವು ಎಲ್ಲ ಕ್ಷೇತ್ರಗಳಲ್ಲೂ ನಾವೀನ್ಯತೆಯನ್ನು ಪ್ರೋತ್ಸಾಹಿಸುತ್ತಿದ್ದೇವೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಇದೇ ವೇಳೆ ತಿಳಿಸಿದರು. ಪೂರ್ಣ ಸುದ್ದಿಗಾಗಿ ಇಲ್ಲಿ ಕ್ಲಿಕ್‌ ಮಾಡಿ.
ಹೆಚ್ಚಿನ ಓದಿಗಾಗಿ: SCO Summit | ಪಾಕಿಸ್ತಾನ ಪ್ರಧಾನಿಗೆ ಹೆಡ್‌ಫೋನ್ ಪೇಚು, ವಿಡಿಯೋ ವೈರಲ್

10. ರಾಜಮಾರ್ಗ ಅಂಕಣ | ನೇತಾಜಿ ಪ್ರಾಣ ಉಳಿಸಲು ತನ್ನ ಗಂಡನನ್ನೇ ಕೊಂದು ಹಾಕಿದ ನೀರಾ ಆರ್ಯ!
ಭಾರತ ಸ್ವಾತಂತ್ರ್ಯ ಹೋರಾಟದಲ್ಲಿ ಪ್ರಚಾರ ಪಡೆಯದ ಯಶೋಗಾಥೆ! ಸೆರೆಮನೆಯಲ್ಲಿ ಆಕೆಯ ಮೊಲೆಯನ್ನೇ ಕತ್ತರಿಸಿ ಹಾಕಿದ ಬ್ರಿಟಿಷ್ ಜೈಲರ್! ಈ ಕಥೆಯನ್ನು ಈ ದೇಶದ ಪ್ರತಿಯೊಬ್ಬರೂ ಕೇಳಬೇಕು. ದೇಶದ ಸ್ವಾತಂತ್ರ್ಯ ಸಮರ ಕಥನದಲ್ಲಿ ಹೆಚ್ಚಾಗಿ ಬೆಳಕು ಕಾಣದ ಈ ಕಥೆಯ ಪ್ರತಿ ಅಕ್ಷರವೂ ಕಣ್ಣೀರಿನಲ್ಲಿ ಅದ್ದಿ ತೆಗೆದಂತಿದೆ. ಪೂರ್ಣ ಲೇಖನ ಓದಲು ಇಲ್ಲಿ ಕ್ಲಿಕ್‌ ಮಾಡಿ.

Exit mobile version