Site icon Vistara News

ವಿಸ್ತಾರ TOP 10 NEWS | ತೀಸ್ತಾ ಪಿತೂರಿಯಿಂದ ರೂಪಾಯಿ ದುರ್ಬಲದವರೆಗೆ ಪ್ರಮುಖ ಸುದ್ದಿಗಳಿವು

vistara top 10 16 07 2022

ಬೆಂಗಳೂರು: ನರೇಂದ್ರ ಮೋದಿ ಗುಜರಾತ್‌ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ನಡೆದ ಗಲಭೆಯ ಸಂದರ್ಭದಲ್ಲಿ ಸಾಮಾಜಿಕ ಕಾರ್ಯಕರ್ತೆ ತೀಸ್ತಾ ಸೆಟಲ್ವಾಡ್‌ ಪಾತ್ರದ ಕುರಿತು ಎಸ್‌ಐಟಿ ಸಲ್ಲಿಸಿರುವ ಅಫಿಡವಿಟ್‌ನಲ್ಲಿ ಅನೇಕ ಅಚ್ಚರಿಯ ಅಂಶಗಳನ್ನು ವಿವರಿಸಲಾಗಿದೆ. ರಾಜ್ಯದ ಸರ್ಕಾರಿ ಕಚೇರಿಗಳಲ್ಲಿ ಫೋಟೊ, ವಿಡಿಯೊ ಚಿತ್ರೀಕರಣ ನಡೆಸಬಾರದು ಎಂಬ ಆದೇಶವನ್ನು ಸಿಎಂ ಬೊಮ್ಮಾಯಿ ಸರ್ಕಾರ 12 ಗಂಟೆಯೊಳಗೆ ಹಿಂಪಡೆದಿದೆ. ಸರ್ಕಾರ ನೀಡುವ ಹಾಲನ್ನು ಕುಡಿಯುವುದಿಲ್ಲ ಎನ್ನುವ ಅನೇಕ ಮಕ್ಕಳ ಕಾರಣ ವಿಚಿತ್ರವಾಗಿದೆ, ಡಾಲರ್‌ ಎದುರು ರೂಪಾಯಿ ದುರ್ಬಲವಾಗುತ್ತಿದೆ ಎನ್ನುವುದು ಸೇರಿ ದಿನದ ಪ್ರಮುಖ ಸುದ್ದಿಗಳ ಗುಚ್ಛ ವಿಸ್ತಾರ TOP 10 NEWS.

1. ಗುಜರಾತ್‌ ಗಲಭೆ: ತೀಸ್ತಾ ಸೆಟಲ್ವಾಡ್‌ ಪಿತೂರಿಗೆ ಬೆಂಬಲಿಸಿದ್ದು ಕಾಂಗ್ರೆಸ್‌ ನಾಯಕ ಅಹ್ಮದ್‌ ಪಟೇಲ್‌ !
2002ರ ಗುಜರಾತ್‌ ಗಲಭೆಯಲ್ಲಿ ನರೇಂದ್ರ ಮೋದಿ ಪಾತ್ರವೇನೂ ಇಲ್ಲ ಎಂದು ಎಸ್‌ಐಟಿ ನೀಡಿದ್ದ ಕ್ಲೀನ್‌ಚಿಟ್‌ ಅನ್ನು ಸುಪ್ರೀಂಕೋರ್ಟ್‌ ಎತ್ತಿಹಿಡಿದು, ಜೂನ್‌ ತಿಂಗಳಲ್ಲಿ ತೀರ್ಪು ನೀಡಿದ ಬೆನ್ನಲ್ಲೇ ಸಾಮಾಜಿಕ ಕಾರ್ಯಕರ್ತೆ ತೀಸ್ತಾ ಸೆಟಲ್ವಾಡ್‌ ವಿರುದ್ಧ ಕಾನೂನು ಕ್ರಮ ಶುರುವಾಗಿದೆ. ತೀಸ್ತಾ ಮತ್ತು ಟೀಮ್‌ ವಿಚಾರಣೆ ನಡೆಸಲು ಗುಜರಾತ್‌ ಸರ್ಕಾರ ರಚಿಸಿರುವ ವಿಶೇಷ ತನಿಖಾ ದಳ (SIT) ಇಲ್ಲಿಯವರೆಗಿನ ತನಿಖಾ ವರದಿಯನ್ನು ಅಹಮದಾಬಾದ್‌ ಸೆಷನ್ಸ್‌ ಕೋರ್ಟ್‌ ಎದುರು ಅಫಿಡಿವಿಟ್‌ ರೂಪದಲ್ಲಿ ಇಟ್ಟಿದೆ. ʻಗಲಭೆ ಸಮಯದಲ್ಲಿ ಗುಜರಾತ್‌ನಲ್ಲಿ ಇದ್ದ ಚುನಾಯಿತ ಸರ್ಕಾರವನ್ನು ಅಸ್ಥಿರಗೊಳಿಸಲು ಅಥವಾ ಪತನಗೊಳಿಸಲು ತೀಸ್ತಾ ಸೆಟಲ್ವಾಡ್‌ ಪಿತೂರಿ ಮಾಡಿದ್ದರು. ಹಾಗೆಯೇ ದಂಗೆಯಲ್ಲಿ ಅಮಾಯಕರನ್ನು ಸಿಲುಕಿಸಲು ಕ್ರಿಮಿನಲ್‌ ಕೆಲಸಗಳನ್ನು ಮಾಡಿದ್ದಾರೆ. ಇದಕ್ಕಾಗಿ ತೀಸ್ತಾ ಅಲ್ಲಿನ ಪ್ರತಿಪಕ್ಷದಿಂದ ಅಕ್ರಮವಾಗಿ ಹಣಕಾಸು ನೆರವು, ಹಲವು ಸೌಲಭ್ಯಗಳು ಮತ್ತು ಸಂಭಾವನೆ ಪಡೆದಿದ್ದರುʼ ಎಂದು ತಿಳಿಸಿದೆ. (ಸಂಪೂರ್ಣ ಸುದ್ದಿಗಾಗಿ ಇಲ್ಲಿ ಕ್ಲಿಕ್‌ ಮಾಡಿ)
ಗುಜರಾತ್‌ ಗಲಭೆ: ನರೇಂದ್ರ ಮೋದಿ ವಿರುದ್ಧದ ಪಿತೂರಿಯ ಶಿಲ್ಪಿ ಸೋನಿಯಾ ಗಾಂಧಿ ಎಂದ ಬಿಜೆಪಿ

2. ಸರ್ಕಾರಿ ಕಚೇರಿಗಳಲ್ಲಿ ವಿಡಿಯೊ, ಫೋಟೊ ನಿಷೇಧದ ವಿವಾದಾತ್ಮಕ ಆದೇಶ ವಾಪಸ್
ಸರ್ಕಾರಿ ಇಲಾಖೆಗಳ ಕಚೇರಿಗಳಲ್ಲಿ ಖಾಸಗಿ ವ್ಯಕ್ತಿಗಳು ವಿಡಿಯೊ, ಫೋಟೊ ತೆಗೆಯಬಾರದು ಎಂಬ ವಿವಾದಾತ್ಮಕ ಆದೇಶವನ್ನು ರಾಜ್ಯ ಸರ್ಕಾರ ರಾತ್ರೋರಾತ್ರಿ ಹಿಂತೆಗೆದುಕೊಂಡಿದೆ. ಜುಲೈ ೧೫ರ ತಡರಾತ್ರಿಯಲ್ಲಿ ತಕ್ಷಣದಿಂದ ಅನ್ವಯಿಸುವಂತೆ ವಿವಾದಾತ್ಮಕ ಆದೇಶವನ್ನು ವಾಪಸ್‌ ಪಡೆಯಲಾಗಿದೆ. ಈ ಸಂಬಂಧ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಪ್ರಕಟಣೆ ಹೊರಡಿಸಿದೆ. ಈ ಆದೇಶಕ್ಕೆ ಸಾರ್ವಜನಿಕರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು. (ಸಂಪೂರ್ಣ ಸುದ್ದಿಗಾಗಿ ಇಲ್ಲಿ ಕ್ಲಿಕ್‌ ಮಾಡಿ)
ಫೋಟೊ, ವಿಡಿಯೊ ನಿಷೇಧ ಕುರಿತು ಮಧ್ಯರಾತ್ರಿ ಹೊರಡಿಸಿದ ಆದೇಶದಲ್ಲಿ ಏಳು ತಪ್ಪುಗಳು

3. `8.5% Blr min’ ಎಂದರೆ ಸಚಿವ ಮುನಿರತ್ನಗೆ ಲಂಚ: ಹನಿ ನೀರಾವರಿ ವಿತರಕರ ಆರೋಪ
ರಾಜ್ಯ ಸರ್ಕಾರದ ಮೇಲೆ ಈಗಾಗಲೆ 40% ಲಂಚ ಆರೋಪ ಹಾಗೂ ಇದರ ಹಿನ್ನೆಲೆಯಲ್ಲಿ ಹಿರಿಯ ಸಚಿವ ಕೆ.ಎಸ್‌. ಈಶ್ವರಪ್ಪ ರಾಜೀನಾಮೆ ಅಧ್ಯಾಯ ನೆನಪಿನಲ್ಲಿರುವಾಗಲೇ ತೋಟಗಾರಿಕೆ ಸಚಿವ ಮುನಿರತ್ನ ವಿರುದ್ಧ 8.5% ಲಂಚ ಆರೋಪ ಕೇಳಿಬಂದಿದೆ. ಈ ಕುರಿತು ಚಾಮರಾಜನಗರ ಹನಿ ನೀರಾವರಿ ವಿತರಕರ ಸಂಘದಿಂದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆಯಲಾಗಿದೆ. ಸಚಿವರಿಗೆ ನೀರಾವರಿ ಕಂಪನಿಗಳು ನೀಡಿದ್ದು ಎನ್ನಲಾದ ಬ್ಯಾಂಕ್‌ ಸ್ಟೇಟ್‌ಮೆಂಟ್‌ ಅನ್ನೂ ರವಾನೆ ಮಾಡಿದ್ದಾರೆ. (ಸಂಪೂರ್ಣ ಸುದ್ದಿಗಾಗಿ ಇಲ್ಲಿ ಕ್ಲಿಕ್‌ ಮಾಡಿ)

4. Ksheera Bhagya | ಶಾಲೆಯಲ್ಲಿ ಹಾಲು ಬಿಟ್ಟ ಒಂದೂವರೆ ಲಕ್ಷ ಮಕ್ಕಳು, ದಪ್ಪ ಆಗುವ ಭಯ ಕಾರಣವೇ?
ಮಕ್ಕಳಿಗೆ ಪೌಷ್ಟಿಕ ಆಹಾರ ಲಭ್ಯವಾಗಬೇಕು ಎಂಬ ದೃಷ್ಟಿಯಿಂದ ಪ್ರಾರಂಭಿಸಲಾಗಿದ್ದ ಮಹತ್ವಾಕಾಂಕ್ಷೆಯ ಕ್ಷೀರ ಭಾಗ್ಯ (Ksheera Bhagya) ಯೋಜನೆಗೆ ಹಿನ್ನಡೆಯಾಗುತ್ತಿದೆಯೇ ಎಂಬ ಅನುಮಾನ ವ್ಯಕ್ತವಾಗಿದೆ. ಬೆಳಗಾವಿ ಜಿಲ್ಲೆಯೊಂದರಲ್ಲೇ ಬರೋಬ್ಬರಿ ೧.೩೫ ಲಕ್ಷ ಹೆಣ್ಣು ಮಕ್ಕಳು ಶಾಲೆಯಲ್ಲಿ ಹಾಲು ಕುಡಿಯಲು ನಿರಾಕರಿಸಿದ್ದಾರೆ ಎಂಬ ಆತಂಕಕಾರಿ ಅಂಶ ಬೆಳಕಿಗೆ ಬಂದಿದೆ. ಇದಕ್ಕೆ ದಪ್ಪ ಆಗುವ ಕಾರಣವನ್ನು ಹೆಣ್ಣು ಮಕ್ಕಳು ಮುಂದಿಟ್ಟಿದ್ದಾರೆ. (ಸಂಪೂರ್ಣ ಸುದ್ದಿಗಾಗಿ ಇಲ್ಲಿ ಕ್ಲಿಕ್‌ ಮಾಡಿ)

೫. ಎನ್‌ಇಪಿ ಸಮಿತಿ ವರದಿ ತಿರಸ್ಕರಿಸಿದ ಸರ್ಕಾರ?: ರಾಜ್ಯಾದ್ಯಂತ ಶಾಲೆಗಳಲ್ಲಿ ಮೊಟ್ಟೆ ವಿತರಣೆಗೆ ನಿರ್ಧಾರ
ಶಾಲೆಗಳಲ್ಲಿ ಮಧ್ಯಾಹ್ನ ಬಿಸಿಯೂಟದ ಜತೆಗೆ ಮಕ್ಕಳಿಗೆ ಮೊಟ್ಟೆ ನೀಡುವುದು ಬೇಡ ಎಂದು ರಾಷ್ಟ್ರೀಯ ಶಿಕ್ಷಣ ನೀತಿ ಅನುಷ್ಠಾನದ ಕುರಿತು ಸಮಿತಿ ವರದಿಗೆ ವ್ಯತಿರಿಕ್ತವಾದ ನಿರ್ಧಾರವನ್ನು ರಾಜ್ಯ ಸರ್ಕಾರ ಕೈಗೊಳ್ಳುತ್ತಿದ್ದು, ರಾಜ್ಯಾದ್ಯಂತ ಶಾಲೆಗಳಲ್ಲಿ ಮೊಟ್ಟೆ ನೀಡಲು ಮುಂದಾಗಿದೆ. ಮೊಟ್ಟೆ ತಿನ್ನದ ಮಕ್ಕಳಿಗೆ ಬಾಳೆಹಣ್ಣು ಅಥವಾ ಶೇಂಗಾ ಚಿಕ್ಕಿಯನ್ನು ನೀಡಲಾಗುತ್ತದೆ. ಈ ಯೋಜನೆಗೆ ಸುಮಾರು 350 ಕೋಟಿ ರೂ. ವೆಚ್ಚವಾಗಲಿದೆ. (ಸಂಪೂರ್ಣ ಸುದ್ದಿಗಾಗಿ ಇಲ್ಲಿ ಕ್ಲಿಕ್‌ ಮಾಡಿ)

6. Rupee falls| ಡಾಲರ್‌ ಅಬ್ಬರಕ್ಕೆ ರೂಪಾಯಿ ತತ್ತರ, 80 ರೂ. ಸನಿಹಕ್ಕೆ ಕುಸಿದ ಕರೆನ್ಸಿ
ವಿದೇಶಿ ವಿನಿಮಯ ಮಾರುಕಟ್ಟೆಯಲ್ಲಿ ಡಾಲರ್‌ ಅಬ್ಬರಕ್ಕೆ ರೂಪಾಯಿ ತತ್ತರಿಸಿದ್ದು, ಸತತ ೬ ದಿನಗಳಿಂದ ಕುಸಿದಿದೆ. ಶುಕ್ರವಾರ ಮಧ್ಯಂತರ ವಹಿವಾಟಿನಲ್ಲಿ ಮತ್ತೊಂದು ದಾಖಲೆಯ ೭೯.೯೨ಕ್ಕೆ ಪತನವಾಯಿತು. ಅಂತಿಮವಾಗಿ ದಿನದ ಅಂತ್ಯಕ್ಕೆ ೭೯.೮೭ಕ್ಕೆ ಸ್ಥಿರವಾಯಿತು. ಗುರುವಾರ ಮಧ್ಯಂತರದಲ್ಲಿ ರೂಪಾಯಿ ೮೦.೧೮ ರೂ. ತನಕ ಕುಸಿದಿತ್ತು. ಡಾಲರ್‌ ಎದುರು ರೂಪಾಯಿ ಶೀಘ್ರದಲ್ಲಿ ೮೨-೮೩ ರೂ. ತನಕ ಕುಸಿಯುವ ನಿರೀಕ್ಷೆ ಇದೆ ಎಂದು ತಜ್ಞರು ತಿಳಿಸಿದ್ದಾರೆ. ಈ ವರ್ಷ ಡಾಲರ್‌ ಎದುರು ರೂಪಾಯಿ ೭% ಕುಸಿದಿದೆ. (ಸಂಪೂರ್ಣ ಸುದ್ದಿಗಾಗಿ ಇಲ್ಲಿ ಕ್ಲಿಕ್‌ ಮಾಡಿ)

7. ಇದು ಅಮೃತಕಾಲವೆಂದ ರಾಹುಲ್‌ ಗಾಂಧಿ; ರೂಪಾಯಿ ಮೌಲ್ಯ ಕುಸಿದಿದ್ದಕ್ಕೆ ಪ್ರಧಾನಿ ಮೋದಿ ವಿರುದ್ಧ ಟೀಕೆ
ಯುಎಸ್‌ ಡಾಲರ್‌ ಎದುರು ರೂಪಾಯಿ ಮೌಲ್ಯ 80ಕ್ಕೆ ಕುಸಿದ ಬೆನ್ನಲ್ಲೇ ಕಾಂಗ್ರೆಸ್‌, ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದೆ. ಕಳೆದ ಕೆಲವು ದಿನಗಳಿಂದಲೂ ಡಾಲರ್‌ ಎದುರು ಕರೆನ್ಸಿ ಮೌಲ್ಯ ಕಡಿಮೆಯಾಗುತ್ತಿದೆ. ಹೀಗೆ ರೂಪಾಯಿ ಮುಕ್ತ ಪತನಗೊಳ್ಳುತ್ತಿದ್ದರೂ ಸರ್ಕಾರ ಮೌನವಾಗಿದೆ. ಆದರೆ ಈ ರೂಪಾಯಿ ಕುಸಿತ ಸಾಮಾನ್ಯ ಜನರ ಮೇಲೆ ಕೆಟ್ಟ ಪರಿಣಾಮ ಬೀರುತ್ತಿದೆ ಎಂದು ಹೇಳಿದೆ. ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ ಕಾಂಗ್ರೆಸ್‌, ʼಪ್ರಧಾನಮಂತ್ರಿ ನರೇಂದ್ರ ಮೋದಿಯವರಿಂದ ರೂಪಾಯಿಗೆ ಕೆಡುಕಾಗುತ್ತಿದೆʼ ಎಂದು ಹೇಳಿದೆ. (ಸಂಪೂರ್ಣ ಸುದ್ದಿಗಾಗಿ ಇಲ್ಲಿ ಕ್ಲಿಕ್‌ ಮಾಡಿ)

೮. ವಿಸ್ತಾರ Explainer | ʻಗೋಡ್ಸೆʼ ಪದ ಸಂಸದೀಯ, ಅಸಂಸದೀಯ! ಇಲ್ಲಿದೆ unparliamentary words ಇತಿಹಾಸ
ಅಸಂಸದೀಯ ಪದಗಳ ಪಟ್ಟಿಗೆ ಪದಗಳನ್ನು ಸೇರಿಸಲಾಗುತ್ತದೆ ಹೊರತು ಕೈಬಿಡುವುದು ಅಪರೂಪ. ಅಂಥ ಒಂದು ವಿಶಿಷ್ಟ ನಿದರ್ಶನ ಇಲ್ಲಿದೆ. ʻಗೋಡ್ಸೆʼ ಎಂಬ ಪದವನ್ನು 1958ರಲ್ಲಿ ಸಂಸದೀಯ ಬಳಕೆಯಿಂದ ಕೈಬಿಡಲಾಗಿತ್ತು. ಅದಕ್ಕೆ ಕಾರಣ, ಒಬ್ಬ ಸಂಸದರು ಆಗಿನ ಪ್ರಧಾನಿ ಜವಾಹರಲಾಲ್‌ ನೆಹರೂ ಅವರನ್ನು ಗಾಂಧಿ ಹಂತಕ ನಾಥೂರಾಮ್‌ ಗೋಡ್ಸೆಗೆ ಸಮೀಕರಿಸಿ ಮಾತನಾಡಿದ್ದು. 1962ರಲ್ಲಿ ಇನ್ನೊಮ್ಮೆ ಈ ಪದವನ್ನು ಅಸಂಸದೀಯ ಪಟ್ಟಿಯಲ್ಲಿ ಸೇರಿಸಿದೆ ಎಂದು ಸ್ಪಷ್ಟಪಡಿಸಲಾಯಿತು- ಆ ವರ್ಷ ಸಂಸದನೊಬ್ಬ ಸ್ವಾಮಿ ವಿವೇಕಾನಂದರನ್ನು ಗೋಡ್ಸೆಗೆ ಹೋಲಿಸಿದ್ದ. ಆದರೆ 2015ರಲ್ಲಿ ಬಿಕ್ಕಟ್ಟು ಎದುರಾಯಿತು. ನಾಸಿಕ್‌ನಿಂದ ಹೇಮಂತ್‌ ತುಕಾರಾಮ್‌ ಗೋಡ್ಸೆ ಎಂಬವರು ಶಿವಸೇನೆ ಸಂಸದರಾಗಿ ಆರಿಸಿ ಬಂದರು. ಸಂಸತ್ತಿನಲ್ಲಿ ಬಳಸುವ ಹಾಗೂ ಬಳಸಬಾರದ ಪದಗಳ ಕುರಿತ ಕುತೂಹಲಕಾರಿ ವಿವರಗಳಿಗಾಗಿ ಇಲ್ಲಿ ಕ್ಲಿಕ್‌ ಮಾಡಿ

9. Job News | ಸರ್ಕಾರಿ ಹುದ್ದೆಗೆ ಪರೀಕ್ಷೆ; 15 ಸಾವಿರ ಅಭ್ಯರ್ಥಿಗಳಿಗೆ ಸರ್ಕಾರದಿಂದ ಉಚಿತ ತರಬೇತಿ
ಕಳೆದ ಬಜೆಟ್‌ನಲ್ಲಿ ಪ್ರಕಟಿಸಿದಂತೆ ರಾಜ್ಯ ಸರ್ಕಾರವು ಸರ್ಕಾರಿ ಉದ್ಯೋಗದ (Job News) ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧತೆ ನಡೆಸುತ್ತಿರುವ ೫೦ ಸಾವಿರ ಅಭ್ಯರ್ಥಿಗಳಿಗೆ ತರಬೇತಿ ಒದಗಿಸಲು ಕ್ರಮ ತೆಗೆದುಕೊಂಡಿದೆ. ಸಮಾಜ ಕಲ್ಯಾಣ, ಪರಿಶಿಷ್ಟ ಪಂಗಡ ಕಲ್ಯಾಣ, ಹಿಂದುಳಿದ ವರ್ಗಗಳ ಕಲ್ಯಾಣ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಗಳ ಮೂಲಕ ಆಯ್ಕೆಯಾದ ಅಭ್ಯರ್ಥಿಗಳಿಗೆ ಈ ತರಬೇತಿ ನೀಡಲಾಗುತ್ತದೆ. ಮುಂದಿನ 18 ತಿಂಗಳಿನಲ್ಲಿ ಕೇಂದ್ರ ಸರ್ಕಾರದ 10 ಲಕ್ಷ ಹುದ್ದೆಗಳಿಗೆ ನೇಮಕ ಮಾಡಿಕೊಳ್ಳಲಾಗುವುದು ಎಂದು ಪ್ರಧಾನಿ ಮೋದಿ ಇತ್ತೀಚೆಗೆ ಪ್ರಕಟಿಸಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರದ ಈ ಕ್ರಮ ಬಹಳ ಮಹತ್ವ ಪಡೆದಿದೆ. (ಸಂಪೂರ್ಣ ಸುದ್ದಿಗಾಗಿ ಇಲ್ಲಿ ಕ್ಲಿಕ್‌ ಮಾಡಿ)

೧೦. GOOD NEWS| IDBI, DBS, ಕೆನರಾ ಬ್ಯಾಂಕ್‌ ಎಫ್ ಡಿ ಬಡ್ಡಿ ದರ ಏರಿಕೆ
ಖಾಸಗಿ ವಲಯದ ಐಡಿಬಿಐ ಬ್ಯಾಂಕ್‌, ಡಿಬಿಎಸ್‌ ಬ್ಯಾಂಕ್ ತಮ್ಮ ನಿಶ್ಚಿತ ಠೇವಣಿಗಳ ಬಡ್ಡಿ ದರಗಳನ್ನು ಏರಿಸಿವೆ. ಸಾರ್ವಜನಿಕ ವಲಯದ ಕೆನರಾ ಬ್ಯಾಂಕ್‌ ಕೂಡ ಬಡ್ಡಿ ದರವನ್ನು ವೃದ್ಧಿಸಿದೆ. ಉಳಿತಾಯಗಾರರಿಗೆ ಇದರಿಂದ ಅನುಕೂಲವಾಗಲಿದೆ. (ಸಂಪೂರ್ಣ ಸುದ್ದಿಗಾಗಿ ಇಲ್ಲಿ ಕ್ಲಿಕ್‌ ಮಾಡಿ)

Exit mobile version