Site icon Vistara News

Voter data | ಬೊಮ್ಮಾಯಿ ಅವರೇ ನಿಮ್ಮ ವಿರುದ್ಧ ಯಾಕೆ FIR ಆಗಿಲ್ಲ? 11 ಪ್ರಶ್ನೆ ಕೇಳಿದ ರಣದೀಪ್‌ ಸುರ್ಜೇವಾಲಾ

Randeep surjewala

ಬೆಂಗಳೂರು: ಮತದಾರರ ಮಾಹಿತಿ ಅಕ್ರಮ ಸಂಗ್ರಹ (Voter data) ವಿರುದ್ಧದ ಹೋರಾಟ ತೀವ್ರಗೊಳಿಸಿರುವ ಕಾಂಗ್ರೆಸ್‌ ಬಿಜೆಪಿ ಸರಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಎಲ್ಲ ಕಸರತ್ತುಗಳನ್ನು ನಡೆಸಿದೆ. ಇದರ ಭಾಗವಾಗಿ ಕಾಂಗ್ರೆಸ್‌ನ ರಾಜ್ಯ ಉಸ್ತುವಾರಿ ರಣದೀಪ್‌ ಸುರ್ಜೇವಾಲಾ ಅವರು ಸಿಎಂ ಬೊಮ್ಮಾಯಿ ಅವರಿಗೆ ೧೧ ಪ್ರಶ್ನೆಗಳನ್ನು ಕೇಳಿದ್ದಾರೆ. ಅದರಲ್ಲಿ ಮುಖ್ಯವಾದ ಪ್ರಶ್ನೆ ಎಂದರೆ, ಬೊಮ್ಮಾಯಿ ಅವರೇ ನಿಮ್ಮ ವಿರುದ್ಧ ಇನ್ನೂ ಯಾಕೆ ಎಫ್‌ಐಆರ್‌ ಆಗಿಲ್ಲ.

ಹನ್ನೊಂದು ಪ್ರಶ್ನೆಗಳು ಇಲ್ಲಿವೆ...

1 . ಮತಪಟ್ಟಿ ಅಕ್ರಮಕ್ಕೆ ಸಂಬಂಧಿಸಿದಂತೆ ಸಿಎಂ ಬಸವರಾಜ ಬೊಮ್ಮಾಯಿ‌ ಹಾಗೂ ಬಿಬಿಎಂಪಿ ಆಯುಕ್ತರ ವಿರುದ್ಧ ಎಫ್ಐ‌ಆರ್ ಏಕೆ ದಾಖಲಾಗಿಲ್ಲ? ಕೇವಲ ಲೋಕೇಶ್ ವಿರುದ್ಧ ಮಾತ್ರ ಏಕೆ?

2. ಸಿಎಂ ಬೊಮ್ಮಾಯಿ ಈ ಆರೋಪ ನಿರಾಧಾರ ಎಂದು ಹೇಳಿದ್ದಾರೆ? ಏನು ಸಾಕ್ಷಿ ಇದೆ ಎಂದು ಪ್ರಶ್ನೆ ಮಾಡಿದ್ದಾರೆ? ಮತ್ತೊಂದು ಕಡೆಯಲ್ಲಿ ಎಫ್ಐಆರ್ ಮಾಡಿಸಿದ್ದಾರೆ? ಸಿಎಂ ಅವರೇ ಆರೋಪ‌ ನಿರಾಧಾರ ಅಂದರೆ ತನಿಖೆಗೆ ‌ಹೇಗೆ ಕೊಟ್ರಿ?

3. ಚಿಲುಮೆ ಹಾಗೂ ಡಿಎಪಿ ಹೊಂಬಾಳೆ ವಿರುದ್ಧ ಏಕೆ ಈವರೆಗೆ ಎಫ್‌ಐಆರ್ ದಾಖಲು ಮಾಡಿಲ್ಲ? ಅದರ ಮಾಲೀಕರ ವಿರುದ್ಧ ಏಕೆ ಎಫ್‌ಐಆರ್ ಆಗಿಲ್ಲ?

4. ಸಿಎಂ‌, ಬಿಎಂಎಂಪಿ ಅಧಿಕಾರಿಗಳು ಸಂಗ್ರಹವಾದ ಡೇಟಾದ ಬಗ್ಗೆ ಏಕೆ ಮಾತನಾಡುತ್ತಿಲ್ಲ?

5. ಸಿಎಂ ಬಸವರಾಜ ಬೊಮ್ಮಾಯಿ ಅವರು ಪ್ರೈವೇಟ್ ಆಪ್ ಡಿಜಿಟಲ್ ಸಮೀಕ್ಷೆಯನ್ನು ಏಕೆ ಸೀಜ್ ಮಾಡಿಲ್ಲ?

6. ಚಿಲುಮೆಗೆ ಯಾರು ಫಂಡಿಂಗ್ ಮಾಡುತ್ತಿದ್ದಾರೆ? ಇದಕ್ಕೆ ಸಿಎಂ‌ ಏಕೆ ಉತ್ತರ ಕೊಡುತ್ತಿಲ್ಲ?

7. ಚಿಲುಮೆ 50,000 ನೌಕರರನ್ನು ಗುತ್ತಿಗೆಗೆ ಪಡೆದುಕೊಂಡಿದೆ ಇದು ನಿಜವೇ? 25,000ರಿಂದ 40,000 ವೇತನವನ್ನು ಅವರಿಗೆ ನೀಡಿದ್ದಾರೆ? 28 ವಿಧಾನಸಭೆ ಕ್ಷೇತ್ರದಲ್ಲಿ ಚಿಲುಮೆ ಮತದಾನ ಮಾಹಿತಿ ಸಂಗ್ರಹಕ್ಕೆ ಸಿಬ್ಬಂದಿಗೆ ಹಣದ ಆಮಿಷಗಳನ್ನು ನೀಡಿದ್ದಾರೆ. ಈ ಬಗ್ಗೆ ಇಡಿ ಸಿಬಿಐ ಏಕೆ ತನಿಖೆ ನಡೆಸುತ್ತಿಲ್ಲ?

8. ಸಿಎಂ ಹಾಗೂ ಬಿಬಿಎಂಪಿ ಆಯುಕ್ತರು ಪ್ರೈವೇಟ್ ಏಜೆನ್ಸಿಗೆ ಆಧಾರ್ ನಂಬರ್ ಹಾಗೂ ಮತದಾರರ ಖಾಸಗಿ ಮಾಹಿತಿ ಸಂಗ್ರಹ ಮಾಡಬಹುದು ಎಂದು ಅನುಮತಿ‌ ನೀಡಿದೆ. ಇದು ಹೇಗೆ ಸಾಧ್ಯ?

9. ಬಿಎಲ್‌ಒಗಳು ಮುಂದೆ ಬಂದು ಬಿಬಿಎಂಪಿ ಬಿಎಲ್ ಓ ಕಾರ್ಡ್ ಕೊಟ್ಟಿದ್ದಾರೆ ಹಾಗೂ ಮಾಹಿತಿ ಸಂಗ್ರಹ ಮಾಡುವಂತೆ ಸೂಚಿಸಿದ್ದಾರೆ. ಇದಕ್ಕೆ ಏನು ಹೇಳುತ್ತೀರಿ?

10. ಚುನಾವಣಾ ಪ್ರಮಾಣಪತ್ರದಲ್ಲಿ ಮಾಜಿ ಎಂಎಲ್‌ಎ ನಂದೀಶ್ ರೆಡ್ಡಿ ಅವರು ಚಿಲುಮೆಗೆ 17.5 ಲಕ್ಷ ರೂ. ನೀಡಿದ್ದಾರೆ ಎಂದು ಉಲ್ಲೇಖ ಮಾಡಿದ್ದಾರೆ. ಇದಕ್ಕೆ ಏನು ಹೇಳುತ್ತೀರಿ?

11. ಬಸವರಾಜ ಬೊಮ್ಮಾಯಿ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಏಕೆ ರಾಜೀನಾಮೆ ಕೊಡಬಾರದು? ಅವರ ವಿರುದ್ಧ ಏಕೆ ಎಫ್ಐಆರ್‌ ದಾಖಲು ಮಾಡಬಾರದು ಹಾಗೂ ಬಂಧನ ಆಗಬಾರದು?

ಇದನ್ನೂ ಓದಿ | Voter data | ಚುನಾವಣೆ ಆಯೋಗಕ್ಕೆ ಕಾಂಗ್ರೆಸ್‌ ದೂರು, ಯಾರನ್ನೂ ಬಂಧಿಸಿಲ್ಲ ಎಂದು ಆಕ್ರೋಶ, ಬಾಗಿಲಲ್ಲೇ ಧರಣಿ

Exit mobile version