Site icon Vistara News

Jagadish Shettar : ಶೆಟ್ಟರ್‌ ಕ್ರಾಂತಿ ಎಫೆಕ್ಟ್; ಬಿಜೆಪಿಗೇನು ಲಾಭ? ಕಾಂಗ್ರೆಸ್‌ಗೆ ನಷ್ಟವೇನು?

Jagadish Shettar Congress and BJp

ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ನಡೆದ ಹಠಾತ್‌ ಬೆಳವಣಿಗೆಯಲ್ಲಿ ಮಾಜಿ ಮುಖ್ಯಮಂತ್ರಿ ಜಗದೀಶ್‌ ಶೆಟ್ಟರ್‌ (Former CM Jagadish Shettar) ಮರಳಿ ಬಿಜೆಪಿ ಸೇರಿದ್ದಾರೆ. ಈ ಕ್ಷಿಪ್ರ ಕ್ರಾಂತಿಯಿಂದ ರಾಜ್ಯ ರಾಜಕೀಯದ ಮೇಲೆ ಏನೆಲ್ಲಾ ಪರಿಣಾಮ ಬೀರಬಹುದು (Effect of Ghar wapsi) ಎಂಬ ಚರ್ಚೆ ಈಗ ಶುರುವಾಗಿದೆ.

ಕಳೆದ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಬಿಜೆಪಿಯು ಟಿಕೆಟ್‌ ನೀಡಿಲ್ಲ ಎಂಬ ಕಾರಣಕ್ಕೆ ಬಿಜೆಪಿ ತೊರೆದು ಕಾಂಗ್ರೆಸ್‌ ಸೇರಿದ್ದರು. ಪಕ್ಷ ತಮ್ಮ ಹಿರಿತನವನ್ನು ಗೌರವಿಸಲಿಲ್ಲ ಎಂದು ಅವರು ದೂರಿದ್ದರು. ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರನ್ನು ಅಧಿಕಾರದಿಂದ ಕೆಳಗಿಳಿಸಿ, ಲಿಂಗಾಯಿತರ ಅಸಮಾಧಾನಕ್ಕೆ ಕಾರಣವಾಗಿದ್ದ ಬಿಜೆಪಿಯನ್ನು ಜಗದೀಶ್‌ ಶೆಟ್ಟರ್‌ ಕೂಡ ಬಿಟ್ಟಿದ್ದು, ಪಕ್ಷದ ಭಾರಿ ಹಿನ್ನಡೆಗೆ ಕಾರಣವಾಗಿತ್ತು. ಈ ಬೆಳವಣಿಗೆಯನ್ನು ಸಮರ್ಥವಾಗಿಯೇ ಬಳಸಿಕೊಂಡಿದ್ದ ಕಾಂಗ್ರೆಸ್‌ ರಾಜ್ಯದಲ್ಲಿ ಅಧಿಕಾರ ಹಿಡಿದಿತ್ತು.

ಕಾಂಗ್ರೆಸ್‌ ಸೇರಿದ್ದರೂ ಅಲ್ಲಿಯ ಸಂಸ್ಕೃತಿಗೆ ಹೊಂದಿಕೊಳ್ಳಲು ಹರಸಾಹಸ ಪಡುತ್ತಿದ್ದ ಜಗದೀಶ್‌ ಶೆಟ್ಟರ್‌ ತೀರಾ ಇತ್ತೀಚೆಗೆ ಅಯೋಧ್ಯೆಯ ರಾಮಮಂದಿರ ಉದ್ಘಾಟನೆಗೆ ತಮ್ಮನ್ನು ಆಹ್ವಾನಿಸಲಿಲ್ಲ ಎಂದು ಬಿಜೆಪಿಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ಅಲ್ಲದೆ, ಮುಖ್ಯಮಂತ್ರಿ ಸಿದ್ದರಾಮಯ್ಯರನ್ನು ಉತ್ತರ ಕನ್ನಡದ ಸಂಸದ ಅನಂತ್‌ಕುಮಾರ್‌ ಹೆಗಡೆ ನಿಂದಿಸಿದಾಗ, ಅವರನ್ನು ತರಾಟೆಗೆ ತೆಗೆದುಕೊಂಡಿದ್ದರು. ಆದರೂ ಅವರು ಸದ್ದಿಲ್ಲದೆ ಬಿಜೆಪಿಯ ಆಪರೇಷನ್‌ ಕಮಲಕ್ಕೆ ಬಲಿಯಾಗಿದ್ದಾರೆ. ಬಿಜೆಪಿಯನ್ನು ಅಧಿಕೃತವಾಗಿಯೇ ಸೇರಿದ್ದಾರೆ. ಇದು ರಾಜ್ಯ ರಾಜಕೀಯದ ಮೇಲೆ ಅದರಲ್ಲೂ ಬಿಜೆಪಿ ಮತ್ತು ಕಾಂಗ್ರೆಸ್‌ ಮೇಲೆ ಯಾವೆಲ್ಲಾ ಪರಿಣಾಮ ಬೀರಲಿದೆ ಎಂಬ ವಿಶ್ಲೇಷಣೆ ಇಲ್ಲಿದೆ.

ಜಗದೀಶ್‌ ಶೆಟ್ಟರ್‌ ಆಗಮನದಿಂದ ಬಿಜೆಪಿಗೇನು ಲಾಭ?

1.ಬಿಜೆಪಿಯು ಲಿಂಗಾಯಿತ ನಾಯಕರನ್ನು ಮೂಲೆಗುಂಪು ಮಾಡುತ್ತಿದೆ ಎಂದು ಕಾಂಗ್ರೆಸ್‌ ಮಾಡುತ್ತಾ ಬಂದಿರುವ ಆರೋಪದಲ್ಲಿ ಹುರುಳಿಲ್ಲ ಎಂದು ತೋರಿಸಿದಂತಾಗುತ್ತದೆ.

2.ಧಾರವಾಡ, ಬೆಳಗಾವಿ ಲೋಕಸಭಾ ಕ್ಷೇತ್ರ ಸೇರಿದಂತೆ ಉತ್ತರ ಕರ್ನಾಟಕದ ಬಹುತೇಕ ಕ್ಷೇತ್ರಗಳಲ್ಲಿ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್‌‌ ಅವರ ಪ್ರಭಾವ ಬಳಸಿಕೊಳ್ಳಬಹುದು.

3.ಹಿರಿಯ ನಾಯಕರನ್ನು ಬಿಜೆಪಿ ಮೂಲೆಗುಂಪು ಮಾಡುತ್ತದೆ ಎಂಬ ಅಪವಾದ ತಪ್ಪಲಿದೆ.

4.ಸಮರ್ಥ ಹಿರಿಯ ನಾಯಕರ ಕೊರತೆಯನ್ನು ಎದುರಿಸುತ್ತಿರುವ ರಾಜ್ಯ ಬಿಜೆಪಿಗೆ ಕಟ್ಟಾಳು ಮಾರ್ಗದರ್ಶಕರೊಬ್ಬರು ಸಿಕ್ಕಂತಾಗಲಿದೆ.5. ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಆಗಿದ್ದ ತಪ್ಪುಗಳನ್ನು ಸರಿಪಡಿಸಿಕೊಳ್ಳಲಿದೆ ಎಂಬ ಸಂದೇಶವನ್ನು ಕಾರ್ಯಕರ್ತರಿಗೆ ಮತ್ತು ಇತರ ನಾಯಕರಿಗೆ ನೀಡಿದಂತಾಗಿದೆ.

ಇದನ್ನೂ ಓದಿ : Jagadish Shetter: ಬಿಜೆಪಿ ಹೈಕಮಾಂಡ್ ಜಗದೀಶ್ ಶೆಟ್ಟರ್‌ಗೆ ನೀಡಿದ ಆ 3 ಆಫರ್‌ ಏನು?

ಶೆಟ್ಟರ್‌ ನಿರ್ಗಮನದಿಂದ ಕಾಂಗ್ರೆಸ್‌ಗೆ ನಷ್ಟಗಳೇನು?

1. ಬಿಜೆಪಿಯಿಂದ ಬಂದ ಹಿರಿಯ ಲಿಂಗಾಯಿತ ನಾಯಕರೊಬ್ಬರನ್ನು ಸರಿಯಾಗಿ ಸಂಬಾಳಿಸದ ಅಪವಾದ ಹೊತ್ತುಕೊಳ್ಳಬೇಕಾಗುತ್ತದೆ.

2. ಕಾಂಗ್ರೆಸ್‌ನತ್ತ ಹೊರಟಿದ್ದ ಬಿಜೆಪಿ ನಾಯಕರು ಈ ಬೆಳವಣಿಗೆಯಿಂದ ಪಕ್ಷ ಸೇರ್ಪಡೆಯಾಗಲು ಹಿಂದೆ-ಮುಂದೆ ನೋಡಬಹುದು.

3. ಉತ್ತರ ಕರ್ನಾಟಕದ ಭಾಗದಲ್ಲಿ ಲಿಂಗಾಯಿತ ಮತದಾರರನ್ನು ಸೆಳೆಯಲು ಮತ್ತೆ ಕಷ್ಟಪಡಬೇಕಾಗುತ್ತದೆ.

4. ಬಿಜೆಪಿಯ ತಂತ್ರಗಾರಿಕೆಯನ್ನು ಬಲ್ಲ ಓರ್ವ ಹಿರಿಯ ನಾಯಕರ ಅನುಭವವನ್ನು ಕಳೆದುಕೊಂಡಂತಾಗಲಿದೆ.

5. ವಿಧಾನಸಭಾ ಚುನಾವಣೆಯಲ್ಲಿ ಜಗದೀಶ್‌ ಶೆಟ್ಟರ್‌ ಸೇರ್ಪಡೆ ಕಾಂಗ್ರೆಸ್‌ ಪಕ್ಷದ ಪರವಾಗಿ ಉಂಟು ಮಾಡಿದ್ದ ಪಾಸಿಟಿವ್‌ ಅಲೆಯು, ನೆಗೆಟಿವ್‌ ಆಗಿ ಮಾರ್ಪಡಬಹುದು.

Exit mobile version