Site icon Vistara News

Chaitra Kundapura : ಚೈತ್ರಾ ಡೀಲ್‌ ಮಧ್ಯೆ ವಿನಯ್‌ ಗುರೂಜಿ ಎಂಟ್ರಿ? ಗೋವಿಂದ ಪೂಜಾರಿ ಕೊಟ್ಟ ಎಚ್ಚರಿಕೆ ಏನು?

Govinda Poojari warns Vinay guruji

ಉಡುಪಿ: ವಿನಯ ಗುರೂಜಿಯವರೇ (Vinay Guruji) ನಿಮಗೆ ಅವಳ ವಿಷಯ ಗೊತ್ತಿಲ್ಲ. ಅವಳು ನಿಮ್ಮ ಹೆಸರು ಹೇಳಿಕೊಂಡು ಮೋಸ ಮಾಡಬಹುದು: ಹೀಗೊಂದು ಎಚ್ಚರಿಕೆಯನ್ನು ನೀಡಿದ್ದರು ಗೋವಿಂದ ಬಾಬು ಪೂಜಾರಿ (Govinda poojari). ಅವರು ಹೇಳುತ್ತಿರುವುದು ತನಗೆ ಬೈಂದೂರಿನ ಬಿಜೆಪಿ ಟಿಕೆಟ್‌ ಕೊಡಿಸುತ್ತೇನೆ ಎಂದು ಹೇಳಿ 5 ಕೋಟಿ ರೂ. ವಂಚನೆ ಮಾಡಿರುವ ಚೈತ್ರಾ ಕುಂದಾಪುರ (Chaitra Kundapura) ಬಗ್ಗೆ.

ಗೋವಿಂದ ಪೂಜಾರಿ ಅವರು ಮೊದಲಿನಿಂದಲೂ ಸಮಾಜಸೇವೆಯಲ್ಲಿ ಇದ್ದವರು. ಅವರು ಕಷ್ಟದಲ್ಲಿರುವ ಹಿಂದೂ ಕಾರ್ಯಕರ್ತರಿಗೆ, ಸಂಕಷ್ಟದಲ್ಲಿರುವವರಿಗೆ ಮನೆ ಕಟ್ಟಿ ಕೊಡುತ್ತಿದ್ದರು. ಹಾಗೆ ನಿರ್ಮಿಸಿದ ಹನ್ನೊಂದನೇ ಮನೆಯ ಗೃಹಪ್ರವೇಶ ಕಳೆದ ಜನವರಿ ತಿಂಗಳಲ್ಲಿ ಮರವಂತೆಯಲ್ಲಿ ನಡೆದಿತ್ತು.

ಹಿಂದು ಕಾರ್ಯಕರ್ತನಿಗೆ ಮನೆ ಹಸ್ತಾಂತರ ಮಾಡುವ ಕಾರ್ಯಕ್ರಮದಲ್ಲಿ ಗೋವಿಂದ ಬಾಬು ಪೂಜಾರಿ ಅವರ ಜತೆಗೆ ಗೌರಿಗದ್ದೆ ಮಠದ ವಿನಯ ಗುರೂಜಿ, ಚೈತ್ರಾ ಕುಂದಾಪುರ ಮತ್ತು ವಂಚನೆ ಪ್ರಕರಣದ ಮೂರನೇ ಆರೋಪಿ ಹಾಲಶ್ರೀ ಸ್ವಾಮೀಜಿ ಕೂಡಾ ಇದ್ದರು.

ಆವತ್ತು ಭಾಷಣ ಮಾಡಿದ ವಿನಯ ಗುರೂಜಿ ಅವರು ಚೈತ್ರಾ ಕುಂದಾಪುರಳನ್ನು ವಿಪರೀತವಾಗಿ ಹೊಗಳಿದ್ದರು. ಅವಳು ದೇವಿ, ದುರ್ಗೆ ಅಂತೆಲ್ಲ ಹೇಳಿದ್ದರು. ಇದೆಲ್ಲವೂ ಗೋವಿಂದ ಪೂಜಾರಿ ಅವರಿಗೆ ತಾನು ಮೋಸ ಹೋದ ಬಳಿಕ ಅರಿವಾಗಿದೆ.

ಆಗ ಅವರು ವಿನಯ ಗುರೂಜಿ ಅವರ ಆಪ್ತರಿಗೆ ಕರೆ ಮಾಡಿ ಚೈತ್ರಾ ಕುಂದಾಪುರ ಬಗ್ಗೆ ಎಚ್ಚರಿಕೆಯಿಂದ ಇರುವಂತೆ ತಿಳಿಸಲು ಹೇಳುತ್ತಾರೆ. ʻʻನಾನು ಜೀವನದಲ್ಲಿ ಅತಿ ದೊಡ್ಡ ಮೋಸಕ್ಕೆ ಒಳಗಾದೆ, ಚೈತ್ರಾ ಕುಂದಾಪುರಳಿಂದʼʼ ಎನ್ನುವ ಅವರು, ವಿನಯ ಗುರೂಜಿ ಅವರು ಅವಳನ್ನು ಸಿಕ್ಕಾಪಟ್ಟೆ ಹೊಗಳುತ್ತಾರೆ. ಅವಳ ಬಗ್ಗೆ ಎಚ್ಚರಿಕೆ ಇರಲಿ, ಅವರ ಹೆಸರು ಬಳಸಿಕೊಂಡು ಮೋಸ ಮಾಡುವ ಅಪಾಯವಿದೆ ಎಂದು ಅವರು ಹೇಳಿದ್ದಾರೆ. ಈ ಆಡಿಯೋ ಈಗ ವೈರಲ್‌ ಆಗಿದೆ.

ಇದನ್ನೂ ಓದಿ: Chaitra Kundapura : ಚೈತ್ರಾ ಕುಂದಾಪುರ; ಯಾರಿವಳು ಫೈರ್‌ಬ್ರಾಂಡ್‌ ಹುಡುಗಿ?, ಆಕೆ ಟಿವಿ ನಿರೂಪಕಿ, ಉಪನ್ಯಾಸಕಿ ಆಗಿದ್ದಳು!

ಡೀಲ್‌ನ ನಡುವೆ ಬಂದಿದೆ ಕರಾವಳಿಯ ಪ್ರಭಾವಿ ಮಾಜಿ ಸಚಿವರ ಹೆಸರು!

ಈ ನಡುವೆ ಪ್ರಕರಣದ ಒಂದು ಮಹತ್ವದ ತಿರುವಿನಲ್ಲಿ ಕರಾವಳಿಯ ಪ್ರಭಾವಿ ಬಿಜೆಪಿ ಶಾಸಕರು ಹಾಗೂ ಮಾಜಿ ಸಚಿವರ ಹೆಸರು ಕೂಡಾ ಕೇಳಿಬಂದಿದೆ.

ಅಂದು ಬೆಳಗ್ಗೆ 6.22ಕ್ಕೆ ಗೋವಿಂದ ಪೂಜಾರಿ ಆಪ್ತ ಪ್ರಸಾದ್‌ (ಪ್ರಕರಣದ ಏಳನೇ ಆರೋಪಿ) ಚೈತ್ರಾ ಕುಂದಾಪುರಗೆ ಕಾಲ್‌ ಮಾಡುತ್ತಾನೆ. ಅಕ್ಕಾ.. ತಲುಪಿಸಿದ್ದೀವಿ ಅಂತಾನೆ. ಅಂದರೆ ಗೋವಿಂದ ಪೂಜಾರಿ ಚೈತ್ರಾ ಗ್ಯಾಂಗ್‌ಗೆ ಕೊಡಲು ಒಪ್ಪಿದ ಮೊತ್ತವನ್ನು ತಲುಪಿಸಿದ್ದಾಗಿ ಹೇಳುತ್ತಾನೆ.

ಇಬ್ಬರು ಹಿಂದೂ ಸಂಘಟನೆ ಕಾರ್ಯಕರ್ತರು ಮಾತ್ರ ಇದ್ದರು. ಎಲ್ಲವೂ ಸರಿಯಾಗಿ ನಡೆಯಿತು. ನಾನು ಗಗನ್‌ ಕಡೂರ್‌ಗೆ ಫೋನ್‌ ಮಾಡಿದೆ, ಗೋವಿಂದ ಪೂಜಾರಿ ಅವರಿಗೂ ಹೇಳಿದ್ದೇನೆ. ನೀವೂ ಒಮ್ಮೆ ದುಡ್ಡು ಸಿಕ್ಕಿತು ಎಂದು ಹೇಳಿ ಎನ್ನುತ್ತಾನೆ. ಅದರ ನಡುವೆ ನಾವು ನಿಂತಿದ್ದಾಗ ಪ್ರಭಾವಿ ಮಾಜಿ ಸಚಿವರ ಕಾರು ಹೋಗಿದ್ದನ್ನು ಪ್ರಸಾದ್‌ ಉಲ್ಲೇಖ ಮಾಡುತ್ತಾನೆ. ಈ ಡೀಲ್‌ನಲ್ಲಿ ಅವರಿಗೆ ಸಂಬಂಧ ಇಲ್ಲವಾದರೂ ಅವರ ಹೆಸರು ಕೂಡಾ ಕಾರಿನಂತೆ ಪಾಸಾಗಿ ಹೋಗುತ್ತದೆ!

Exit mobile version