Site icon Vistara News

Killer wife | ಪ್ರಿಯಕರನ ಜತೆ ಸೇರಿ ಪತಿಯನ್ನೇ ಕೊಂದಿದ್ದ ಪತ್ನಿ: 6 ತಿಂಗಳ ಬಳಿಕ ಸತ್ಯ ಬಾಯಿಬಿಟ್ಟ ಮಕ್ಕಳು!

Killer wife

ಬೆಂಗಳೂರು: ಬೆಂಗಳೂರಿನ ನಂದಿನಿ ಲೇಔಟ್‌ನಲ್ಲಿ ಕಳೆದ ವರ್ಷದ ಜೂನ್‌ ೧೮ರಂದು ವ್ಯಕ್ತಿಯೊಬ್ಬರು ಮೃತಪಟ್ಟಿದ್ದರು. ಹೃದಯಾಘಾತದಿಂದ ಸಾವು ಎಂದು ಪ್ರಕರಣ ದಾಖಲಾಗಿತ್ತು. ಆದರೆ, ಆರು ತಿಂಗಳ ಬಳಿಕ ಅದರ ನಿಜ ಕಥೆ ಬಯಲಾಗಿದೆ. ಆವತ್ತು ಅವನು ಪ್ರಾಣ ಕಳೆದುಕೊಂಡಿದ್ದು ಹೃದಯಾಘಾತದಿಂದಲ್ಲ, ಬದಲಾಗಿ ಹೆಂಡತಿಯೇ ತನ್ನ ಪ್ರಿಯಕರನ ಜತೆ ಸೇರಿ ಕೊಲೆ ಮಾಡಿದ್ದಳು (Killer wife) ಎಂಬ ಸತ್ಯ ಹೊರಬಿದ್ದಿದೆ. ಹಾಗಿದ್ದರೆ ಈ ಸತ್ಯ ಹೊರಬಂದಿದ್ದು ಹೇಗೆ ಎನ್ನುವುದು ಕುತೂಹಲಕಾರಿ ಕಥೆ.

ನಂದಿನಿ ಲೇಔಟ್ ಪೊಲೀಸ್ ಠಾಣಾ ವ್ಯಾಪ್ತಿಯ ನಂದಿನಿ ಲೇಔಟ್ ಸಂಜಯ್ ಗಾಂಧಿ ನಗರದ ಸ್ಲಂನಲ್ಲಿ ಈ ಘಟನೆ ನಡೆದಿತ್ತು. ಆರು‌ ತಿಂಗಳ ಹಿಂದೆ ಮೃತಪಟ್ಟವನ ಹೆಸರು ಆಂಜನೇಯ(35). ಅವನ ಪತ್ನಿ ಅನಿತಾ (೩೧) ಮತ್ತು ಇಬ್ಬರು ಮಕ್ಕಳ ಸಂಸಾರ ಅದಾಗಿತ್ತು. ಈ ನಡುವೆ ಜೂನ್‌ ೧೮ರಂದು ಆಂಜನೇಯ ಸತ್ತು ಹೋಗುತ್ತಾನೆ.

ಮರುದಿನ ಬೆಳಗ್ಗೆ ಎದ್ದ ಅನಿತಾ ಅಯ್ಯಯ್ಯೋ ಗಂಡನಿಗೆ ಹೃದಯಾಘಾತವಾಯಿತು ಅಂತ ಗೋಳಾಡುತ್ತಾಳೆ. ಜನರು ಕೂಡಾ ಆಕೆಯ ಮರುಳು ಮಾತುಗಳನ್ನು ನಂಬುತ್ತಾರೆ. ಅಂತ್ಯಕ್ರಿಯೆ ಎಲ್ಲವೂ ನಡೆದು ಮುಗಿದು ಹೋಗುತ್ತದೆ.

ನಿಜವೆಂದರೆ ಆವತ್ತು ಆಂಜನೇಯ ಸತ್ತಿದ್ದಲ್ಲ, ಕೊಲೆ ಮಾಡಿದ್ದು. ಅನಿತಾಳಿಗೆ ರಾಕೇಶ್‌ ಎಂಬ ಒಬ್ಬ ಪ್ರಿಯಕರನಿದ್ದ. ತಮ್ಮ ಪ್ರೇಮದಾಟಕ್ಕೆ ಆಂಜನೇಯ ಅಡ್ಡಿಯಾಗುತ್ತಾನೆ ಎಂಬ ಕಾರಣಕ್ಕೆ ಅವರಿಬ್ಬರೂ ಸೇರಿ ಕೊಲೆಗೆ ಪ್ಲ್ಯಾನ್‌ ಮಾಡುತ್ತಾರೆ. ಅದೊಂದು ದಿನ ಆಂಜನೇಯ ಚೆನ್ನಾಗಿ ಕುಡಿದು ಬಂದು ಮಲಗಿದ್ದ. ಆಗಲೇ ಕೊಲೆಯ ಪ್ಲ್ಯಾನ್‌ ಅನ್ನು ಎಕ್ಸಿಕ್ಯೂಟ್‌ ಮಾಡಲು ಮುಂದಾಗುತ್ತಾರೆ ಅನಿತಾ ಮತ್ತು ರಾಕೇಶ್‌. ಆಂಜನೇಯನ ಮುಖದ ಮೇಲೆ ದಿಂಬಿಟ್ಟು ಇಬ್ಬರು ಉಸಿರುಗಟ್ಟಿಸಿ ಕೊಲೆ ಮಾಡುತ್ತಾರೆ!

ಮಕ್ಕಳು ಕಣ್ಣಾರೆ ಕಂಡಿದ್ದರು!
ನಿಜವೆಂದರೆ, ಅನಿತಾ ಮತ್ತು ರಾಕೇಶ್‌ ಸೇರಿ ತಂದೆಯನ್ನು ಕೊಲೆ ಮಾಡಿದ್ದನ್ನು ಇಬ್ಬರೂ ಮಕ್ಕಳು ಕಣ್ಣಾರೆ ಕಂಡಿದ್ದರು. ಆಗ ಚೆನ್ನಾಗಿ ನಾಟಕ ಮಾಡಿದ್ದ ಅನಿತಾ ʻಅಪ್ಪ ತುಂಬಾ ಕೆಟ್ಟವರು. ನಮಗೆ ತುಂಬಾ ಹಿಂಸೆ ಕೊಡುತ್ತಾರೆ.. ಹೀಗಾಗಿ ಅವರು ಸತ್ತಿದ್ದಾರೆʼʼ ಎಂದೆಲ್ಲ ಬ್ರೇನ್‌ ವಾಷ್‌ ಮಾಡಿದ್ದರು. ಅಮ್ಮನ ಮಾತಿಗೆ ಒಪ್ಪಿದ್ದ ಮಕ್ಕಳು ಈ ವಿಚಾರವನ್ನು ಯಾರ ಮುಂದೆಯೂ ಹೇಳಲಿಲ್ಲ. ಹೀಗಾಗಿ ಅನಿತಾಳ ಹೃದಯಾಘಾತದ ಕಥೆಯೇ ಹಿಟ್‌ ಆಗಿತ್ತು!

ಹಾಗಿದ್ದರೆ ಹೊರಗೆ ಬಂದಿದ್ದು ಹೇಗೆ?
ಅನಿತಾ ಮತ್ತು ರಾಕೇಶ್‌ ಹಿಂದಿನಿಂದಲೇ ಅಕ್ರಮ ಸಂಬಂಧ ಹೊಂದಿದ್ದರು. ಅದಕ್ಕೆ ಅಡ್ಡಿಯಾಗಬಾರದು ಎಂಬ ಕಾರಣಕ್ಕೇ ಆಂಜನೇಯನನ್ನು ನಿವಾರಿಸಿದ್ದರು. ಆಂಜನೇಯ ಸತ್ತ ಬಳಿಕ ಇವರ ಆಟ ಇನ್ನಷ್ಟು ಜೋರಾಗಿತ್ತು. ಇಷ್ಟೂ ಸಾಲದು ಎಂಬಂತೆ ಅನಿತಾ ಮತ್ತು ರಾಕೇಶ್‌ ಇತ್ತೀಚೆಗೆ ಊರು ಬಿಟ್ಟೇ ಪರಾರಿಯಾದರು! ಆಗ ಹೊರಬಂತು ಸತ್ಯ!

ಅನಿತಾ ಮತ್ತು ರಾಕೇಶ್‌ ಓಡಿಹೋದ ಬಳಿಕ ಆಕೆಯ ಮಕ್ಕಳನ್ನು ಆಂಜನೇಯನ ಅಜ್ಜಿ ನೋಡಿಕೊಳ್ಳಲು ಶುರು ಮಾಡಿದ್ದರು. ಈ ನಡುವೆ ಮಕ್ಕಳಿಗೆ ತಮ್ಮ ಅಮ್ಮ ಎಷ್ಟು ಕೆಟ್ಟವಳು ಎನ್ನುವುದು ಅರಿವಿಗೆ ಬಂದಿತ್ತು. ಆಗ ಆಕೆ ಅಪ್ಪನನ್ನು ಕೊಂದ ಕಥೆಯನ್ನು ಹೇಳಿಬಿಡೋಣ ಅನಿಸಿತು. ಹಾಗೇ ಅವರು ಅಜ್ಜಿಯ ಮುಂದೆ ಅಂದು ನಡೆದಿದ್ದ ಘಟನೆಯನ್ನು ವಿವರಿಸಿದರು.

ಮೃತ ಆಂಜನೇಯ ಅವರ ತಾಯಿ ಈಗ ಅನಿತಾ ಮತ್ತು ರಾಕೇಶ್‌ ವಿರುದ್ಧ ನಂದಿನಿಲೇಔಟ್ ಠಾಣೆಗೆ ದೂರು ನೀಡಿದ್ದಾರೆ. ಪೊಲೀಸರು ಸದ್ಯ ಪ್ರಿಯತಮೆ ಅನಿತಾ ಮತ್ತು ಪ್ರಿಯಕರ ರಾಕೇಶ್‌ನನ್ನು ಬಂಧಿಸಿದ್ದಾರೆ.

ಇದನ್ನೂ ಓದಿ | Woman kidnap | ವಿವಾಹಿತೆ ಕಿಡ್‌ನ್ಯಾಪ್ ಪ್ರಕರಣಕ್ಕೆ ಟ್ವಿಸ್ಟ್‌, ಪ್ರಿಯಕರನಿಂದಲೇ ಅಪಹರಣ !

Exit mobile version