Site icon Vistara News

Viral News: ರೋಡಲ್ಲಿ ನಿಂತು ಮಾತಾಡಕ್ಕಿಲ್ವಾ ಎಂದು ಚುಡಾಯಿಸಿದ; ನನ್‌ ಚಪ್ಪಲಿ ಮಾತಾಡತ್ತೆ ಅಂತ ಮೆಟ್ಟಲ್ಲಿ ಚಚ್ಚಿದಳು!

Molestation Case in udupi

ಉಡುಪಿ: ಈಚೆಗೆ ರೋಡ್‌ ರೋಮಿಯೊಗಳ ಕಾಟ ವಿಪರೀತವಾಗಿದೆ. ಹೆಣ್ಣು ಮಕ್ಕಳು ಮನೆಯಿಂದಲೋ, ಹಾಸ್ಟೆಲ್‌ನಿಂದಲೋ, ಕಾಲೇಜಿನಿಂದಲೋ ಹೊರಗೆ ಕಾಲಿಟ್ಟರೆ ಸಾಕು ಕೆಲವು ದುರುಳರು ಬಂದು ಚುಡಾಯಿಸುವ ಕೆಲಸವನ್ನು ಮಾಡುತ್ತಿದ್ದಾರೆ. ಇನ್ನು ಬಸ್‌ಗಳಲ್ಲೂ ಸಹ ದೌರ್ಜನ್ಯಗಳು ನಡೆಯುತ್ತಿರುವ ವರದಿಗಳು ಆಗಾಗ ಕೇಳಿಬರುತ್ತಿವೆ. ಈಗ ಕುಂದಾಪುರ ತಾಲೂಕಿನ ವಕ್ವಾಡಿಯ ರಸ್ತೆಯಲ್ಲಿ ಹೋಗುತ್ತಿದ್ದ ಯುವತಿಯನ್ನು ವ್ಯಕ್ತಿಯೊಬ್ಬ ಚೇಡಿಸಿ ಕಿರುಕುಳ ಕೊಟ್ಟಿದ್ದು, ಆತನನ್ನು ಹಿಡಿದು ಆಕೆ ಚಪ್ಪಲಿ ಏಟು ನೀಡಿದ್ದಾಳೆ. ಈ ವಿಡಿಯೊ ಈಗ ವೈರಲ್‌ (Viral News) ಆಗಿದೆ.

ಬಾರ್ಕೂರು ಮೂಲದ ನಜೀರ್ (35) ವಿದ್ಯಾರ್ಥಿನಿಗೆ ಕಿರುಕುಳ ಕೊಟ್ಟ ರೋಡ್ ರೋಮಿಯೊ. ಕುಂದಾಪುರ ತಾಲೂಕಿನ ವಕ್ವಾಡಿ ರಸ್ತೆಯಲ್ಲಿ ಹಾಸ್ಟೆಲ್‌ನಿಂದ ಕಾಲೇಜಿಗೆ ತೆರಳುತ್ತಿದ್ದ ವಿದ್ಯಾರ್ಥಿನಿಯ ಜತೆ ಈತ ಅಸಭ್ಯವಾಗಿ ವರ್ತನೆ ಮಾಡಿದ್ದಾನೆ.

ಆರೋಪಿ ನಜೀರ್

ತಾಳ್ಮೆಗೆಟ್ಟು ಬಾರಿಸಿದ ಯುವತಿ

ಆದರೂ ಆಕೆ ಮುಂದಕ್ಕೆ ಮುಂದಕ್ಕೆ ಹೋಗಿದ್ದಾಳೆ. ಆದರೆ, ನಜೀರ್‌ನ ಉಪಟಳ ಕಡಿಮೆಯಾಗಲೇ ಇಲ್ಲ. ಅಸಭ್ಯವಾಗಿ ವರ್ತನೆ ಮಾಡಲು ಶುರು ಮಾಡಿದ್ದಾನೆ. ಒಂದು ಹಂತದಲ್ಲಿ ತಾಳ್ಮೆ ಕಳೆದುಕೊಂಡ ಯುವತಿಯು ಸೀದಾ ತನ್ನ ಚಪ್ಪಲಿಯನ್ನು ತೆಗೆದು ಏಟು ಕೊಟ್ಟಿದ್ದಾಳೆ. ಅಲ್ಲೇ ಗಲಾಟೆಯನ್ನೂ ಮಾಡಿದ್ದಾಳೆ.

ಇದನ್ನೂ ಓದಿ: RSS: ʼಆರ್‌ಎಸ್‌ಎಸ್‌ʼಗೆ ನೀಡಿದ್ದ ಭೂಮಿ ಹಿಂಪಡೆಯಲಿದೆಯೇ ಸರ್ಕಾರ?: ಮಾಹಿತಿ ಕೇಳಿದ ಸಿಎಂ ಸಿದ್ದರಾಮಯ್ಯ

“ಹೆಣ್ಣು ಮಕ್ಕಳು ಎಂದರೆ ಏನೆಂದು ತಿಳಿದುಕೊಂಡಿದ್ದೀಯ? ನಿನಗೆ ಮನೆಯಲ್ಲಿ ಅಮ್ಮ, ಅಕ್ಕ – ತಂಗಿ ಯಾರೂ ಇಲ್ಲವೇ? ನಿನ್ನ ಮನೆಯವರ ಜತೆಯೂ ಹೀಗೇ ಮಾಡುತ್ತೀಯಾ? ನಿನಗೆ ಹೆಂಡತಿ, ಮಗಳು ಇಲ್ಲವೇ?” ಎಂದು ಪ್ರಶ್ನಿಸಿ ಚಪ್ಪಲಿಯಲ್ಲಿ ಹಿಗ್ಗಾಮುಗ್ಗ ಹೊಡೆದಿದ್ದಾಳೆ.

ಪ್ರಕರಣ ದಾಖಲು

ಗಲಾಟೆ ಜೋರಾಗುತ್ತಿದ್ದಂತೆ ಕೂಡಲೇ ಸ್ಥಳಕ್ಕೆ ಸ್ಥಳೀಯರು ಬಂದಿದ್ದು, ಹಲವರು ಜಮಾಯಿಸಿದ್ದಾರೆ. ಅವರೂ ಸಹ ರೋಡ್ ರೋಮಿಯೊ ನಜೀರ್‌ನನ್ನು ವಿಚಾರಿಸಿದ್ದಾರೆ. ಅವರೂ ಒಂದೆರಡು ಪೆಟ್ಟು ಕೊಟ್ಟಿದ್ದಾರೆ. ಬಳಿಕ ಆತನನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ. ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕದ್ದುಮುಚ್ಚಿ ಮೈ, ಕೈ ಮುಟ್ಟಿದವ್ನಿಗೆ ಗ್ರಹಚಾರ ಬಿಡಿಸಿದ ಯುವತಿ

ಮಂಡ್ಯ: ಕದ್ದು ಮುಚ್ಚಿ ಮೈ, ಕೈ ಮುಟ್ಟಿ ಅನುಚಿತ ವರ್ತನೆ (Molestation) ಮಾಡಿದವನಿಗೆ ರೊಚ್ಚಿಗೆದ್ದ ಯುವತಿಯೊಬ್ಬಳು ಗ್ರಹಚಾರ ಬಿಡಿಸಿದ ಪ್ರಕರಣ ಮಂಡ್ಯದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಈಚೆಗೆ ನಡೆದಿತ್ತು.

ಮಂಡ್ಯದಿಂದ ಪಾಂಡವಪುರಕ್ಕೆ ತೆರಳುವ ಬಸ್‌ನಲ್ಲಿ ಯುವತಿಯೊಬ್ಬಳು ಸಂಚಾರ ಮಾಡುತ್ತಿದ್ದಳು. ಆಕೆ ಸೀಟ್‌ನಲ್ಲಿ ಒಬ್ಬಳೇ ಕುಳಿತುಕೊಂಡಿದ್ದಳು. ಇದನ್ನು ಗಮನಿಸಿದ ದುರುಳನೊಬ್ಬನು ಆಕೆ ಕುಳಿತಿದ್ದ ಸೀಟಿನ ಹಿಂಬದಿ ಹೋಗಿ ಮೆಲ್ಲಗೆ ಕುಳಿತುಕೊಂಡಿದ್ದಾನೆ. ಇಷ್ಟಕ್ಕೆ ಸುಮ್ಮನಾಗದ ಆತ ಹಿಂದಿನಿಂದ ಆಕೆಗೆ ಕೀಟಲೆ ಕೊಡಲು ಶುರು ಮಾಡಿದ್ದಾನೆ. ಮೊದ ಮೊದಲಿಗೆ ಆಕೆಗೆ ಏನಾಗುತ್ತಿದೆ ಎಂದು ಗೊತ್ತಾಗಿಲ್ಲ. ಆದರೆ, ಹಿಂದಿನಿಂದ ಏನೋ ಚಟುವಟಿಕೆ ನಡೆಯುತ್ತಿದೆ ಎಂಬುದು ಗೊತ್ತಾಗಿ ಒಮ್ಮೆ ಹಿಂದೆ ತಿರುಗಿ ನೋಡಿದ್ದಾಳೆ. ಆಗ ಈತ ಮಂಗಾಟ ಮಾಡುತ್ತಿರುವುದು ಗೊತ್ತಾಗಿದೆ. ಆದರೂ, ಒಮ್ಮೆಲೆಗೆ ಆತನಿಗೆ ಏನೂ ಹೇಳಲು ಹೋಗದೆ ಸ್ವಲ್ಪ ಸರಿದು ಕುಳಿತಿದ್ದಾಳೆ. ಅಷ್ಟಕ್ಕೆ ಆತ ಸಮ್ಮನಾಗಬಹುದು ಎಂದು ಭಾವಿಸಿದ್ದಾಳೆ. ಒಮ್ಮೆ ಕಣ್ಣು ಬಿಟ್ಟೂ ಹೆದರಿಸಿದ್ದಾಳೆ.

ಇಷ್ಟಾದರೂ ಆ ಯುವಕ ಮಂಗಾಟವನ್ನು ಮಾತ್ರ ಬಿಟ್ಟಿಲ್ಲ. ಆಕೆಯನ್ನು ಕದ್ದು ಮುಚ್ಚಿ ಆಗಾಗ ಮುಟ್ಟುವುದನ್ನು ಮಾಡುತ್ತಲೇ ಹೋದ. ಆಕೆಗೂ ನೋಡಿ ನೋಡಿ ಸಾಕಾಗಿ ಒಂದು ಬಾರಿ ಆತ ಕೈ ಹತ್ತಿರ ತಂದಾಗ ಗಟ್ಟಿಯಾಗಿಯೇ ಹಿಡಿದುಕೊಂಡಿದ್ದಾಳೆ. ಮೊದಲೇ ಆತನ ಉಪಟಳದಿಂದ ರೋಸಿ ಹೋಗಿದ್ದ ಯುವತಿಗೆ ಸಿಟ್ಟು ಅದೆಲ್ಲಿತ್ತೋ ಏನೋ? ಆತನ ಕೈಯನ್ನು ಹಿಡಿದುಕೊಳ್ಳುತ್ತಿದ್ದಂತೆಯೇ ಜೋರಾಗಿ ಕಿರುಚಾಡಿದ್ದಲ್ಲದೆ, ಮುಖ ಮುಸುಡಿ ನೋಡದೆ ಚಚ್ಚಲು ಶುರು ಮಾಡಿದ್ದಾಳೆ. ರೆಡ್‌ ಹ್ಯಾಂಡ್‌ ಆಗಿ ಸಿಕ್ಕಿಬಿದ್ದಿದ್ದರಿಂದ ಯುವಕನಿಗೂ ಏನು ಮಾಡಬೇಕೆಂದು ಗೊತ್ತಾಗದೆ, ಬಿಟ್ಟುಬಿಡುವಂತೆ ಗೋಗರೆಯಲು ಶುರು ಮಾಡಿದ್ದಾನೆ. ಆದರೆ, ಮೈ ಮುಟ್ಟುವುದಕ್ಕಿಂತ ಮೊದಲೇ ನಿನಗೆ ಮೈ ಮೇಲೆ ಪ್ರಜ್ಞೆ ಇರಬೇಕಿತ್ತು ಎಂದು ಹೇಳುತ್ತಲೇ ಯುವಕನಿಗೆ ಮತ್ತಷ್ಟು ಬಾರಿಸಿದ್ದಳು.

ಇದನ್ನೂ ಓದಿ: BJP Karnataka: ಬಿಜೆಪಿಯಲ್ಲಿ ಅಡ್ಜಸ್ಟ್‌ಮೆಂಟ್‌ ರಾಜಕಾರಣ ಇದೆ: ಖುಲ್ಲಂ ಖುಲ್ಲಾ ಒಪ್ಪಿಕೊಂಡ ರಾಷ್ಟ್ರೀಯ ಮುಖಂಡ!

ನಿನ್ನ ಅಕ್ಕ-ತಂಗಿಯರಿಗೆ, ನಿನ್ನ ಅಮ್ಮನಿಗಾದರೆ ಹೀಗೇ ಕೈ ಹಾಕುತ್ತಿದ್ದೆಯಾ? ಎಂದು ಹೇಳುತ್ತಲೇ ಮತ್ತೂ ನಾಲ್ಕು ಏಟನ್ನು ಕೆನ್ನೆಗೆ ಹೊಡೆದಿದ್ದಾಳೆ. ಎಲ್ಲರೂ ಈತನನ್ನು ಹಿಡಿದುಕೊಳ್ಳಿ ಎಂದು ಯುವತಿ ಹೇಳುತ್ತಿದ್ದಂತೆ, ಯುವಕ, “ಸಾರಿ… ನನ್ನನ್ನು ಬಿಡಿ..” ಎಂದು ಕೇಳಿದ್ದಾನೆ. ಅದಕ್ಕೆ ಯುವತಿ, “ಏನ್‌ ಸಾರಿ? ಎಂದು ಪ್ರಶ್ನಿಸುತ್ತಾಳೆ. ಅದಕ್ಕೆ ಯುವಕ, “ನನ್ನ ಕಾಲು ಸರಿ ಇಲ್ಲ” ಎಂದು ಹೇಳುತ್ತಾನೆ. ಆಗ ಮತ್ತಷ್ಟು ಸಿಟ್ಟಾಗುವ ಯುವತಿ, “ಏಕೆ ಸುಳ್ಳು ಹೇಳುತ್ತೀಯಾ, ಈಡಿಯಟ್” ಎಂದು ಬೈದಿದ್ದಾಳೆ. ಅಷ್ಟರಲ್ಲಿ ಆತ ತಪ್ಪಿಸಿಕೊಂಡು ಓಡಿ ಹೋಗಿದ್ದಾನೆ. ಸಾರ್ವಜನಿಕರು ಹಿಡಿದುಕೊಳ್ಳಲು ಪ್ರಯತ್ನಿಸಿದರೂ ತಪ್ಪಿಸಿಕೊಂಡಿದ್ದಾನೆ. ಯುವತಿಯು ಬಸ್ಸಿನಲ್ಲೇ ಹಿಡಿದು ಹಿಗ್ಗಾಮುಗ್ಗ ಕೆನ್ನೆಗೆ ಬಾರಿಸುತ್ತಿರುವ ದೃಶ್ಯವನ್ನು ಸಹ ಪ್ರಯಾಣಿಕರು ತಮ್ಮ ಮೊಬೈಲ್‌ಗಳಲ್ಲಿ ಚಿತ್ರೀಕರಿಸಿದ್ದರು.

Exit mobile version